![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 16, 2021, 7:10 AM IST
ಬೆಂಗಳೂರು/ಹೊಸದಿಲ್ಲಿ : ಕೊರೊನಾ ಹೆಚ್ಚಳದ ನಡುವೆಯೇ ಕಪ್ಪು ಶಿಲೀಂಧ್ರದ ಕಾಟ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಈ ರೋಗದಿಂದ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಯಲ್ಲಿ 45 ವರ್ಷದ ಕಾನ್ಸ್ಟೆಬಲ್ ಒಬ್ಬರು, ಕಲಬುರಗಿಯ ಕಾಲೇಜು ಪ್ರಾಧ್ಯಾಪಕರೊಬ್ಬರು ಇದೇ ತೊಂದರೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೀದರ್ನಲ್ಲಿ 12 ಮಂದಿಗೆ ಬ್ಲ್ಯಾಕ್ ಫಂಗಸ್ ತಗುಲಿರುವ ಆತಂಕ ಎದುರಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಕಣ್ಣು, ಮೂಗು, ಹಲ್ಲಿನ ಸಮಸ್ಯೆ ಎಂದು ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ತೆರಳಿದ್ದ ಸುಮಾರು 10ಕ್ಕೂ ಹೆಚ್ಚು ಜನರಲ್ಲಿ ಈ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಇಲ್ಲಿನ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಬಂದಿದ್ದವರ ಪೈಕಿ 6-7 ಜನರಲ್ಲಿ ಈ ರೋಗ ಇರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಆದರೆ ಆರೋಗ್ಯ ಇಲಾಖೆ ಈ ಬಗ್ಗೆ ಇನ್ನೂ ದೃಢೀಕರಿಸಬೇಕಿದೆ. ಜತೆಗೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ವ್ಯಕ್ತಿಯೊಬ್ಬರಿಗೆ ಕಪ್ಪು ಶಿಲೀಂದ್ರ ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸ್ಟಿರಾಯ್ಡ ಕಾರಣ: ಗುಲೇರಿಯಾ
ಕೊರೊನಾ ಸೋಂಕುಪೀಡಿತರಲ್ಲಿ ಕಪ್ಪು ಶಿಲೀಂಧ್ರ ಕಾಣಿಸುತ್ತಿರುವುದು ಹೆಚ್ಚಾಗಿದೆ ಎಂದು ಏಮ್ಸ್ ಮುಖ್ಯಸ್ಥ ರಣ್ದೀಪ್ ಗುಲೇರಿಯಾ ಹೇಳಿದ್ದಾರೆ. ಆಸ್ಪತ್ರೆ ಗಳಲ್ಲಿ ಇದರ ನಿಯಂತ್ರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸ್ಟಿರಾಯ್ಡಗಳನ್ನು ಅತಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ರೋಗ ಪತ್ತೆಯಾಗುತ್ತಿದೆ. ಅದರಲ್ಲೂ ಮಧುಮೇಹ ಇರುವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಸ್ಟಿರಾಯ್ಡನ ದುರ್ಬಳಕೆಯನ್ನು ನಿಲ್ಲಿಸಬೇಕಾಗಿದೇ ಎಂದಿದ್ದಾರೆ.
ಈ ಮಧ್ಯೆ ಹರಿಯಾಣ ಸರಕಾರವು ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚಾಗುತ್ತಿರುವುದನ್ನು ಮನಗಂಡಿದ್ದು, ಇದನ್ನು ಅಧಿಸೂಚಿತ ರೋಗವೆಂದು ಗುರುತಿಸಿದೆ. ಒಂದು ವೇಳೆ ಈ ರೋಗವೇನಾದರೂ ಕಂಡುಬಂದರೆ ಮುಖ್ಯ ವೈದ್ಯಕೀಯ ಅಧಿಕಾರಿಗೆ ವರದಿ ಮಾಡ ಬೇಕು ಎಂದು ಸೂಚಿಸಿದೆ.
You seem to have an Ad Blocker on.
To continue reading, please turn it off or whitelist Udayavani.