![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 22, 2021, 3:00 PM IST
ಮನುಷ್ಯರಿಗೆ ಭಾಷಿಕ ಸಂವಹನ ಬಹಳ ಮುಖ್ಯವಾದದ್ದು. ಸಂವಹನ ಸಂದರ್ಭದಲ್ಲಿ ಮಾತನಾಡುವ ವಿಧಾನವು ಸಂಭಾಷಣೆಯ ಅಲಿಖಿತ, ಅವಿಭಾಜ್ಯ ನಿಯಮಗಳಿಂದ ಮಾರ್ಗದರ್ಶಿತವಾಗಿರುತ್ತದೆ. ಜನರು ಸಾಂಸ್ಕೃತಿಕವಾಗಿ ಸ್ಥಾಪಿತವಾದ ಮಾರ್ಗದರ್ಶಿ ಸೂತ್ರಗಳು ಅಥವಾ ಸಂಪ್ರದಾಯಗಳಿಗೆ ಬದ್ಧರಾಗಿರುತ್ತಾರೆ. ಸಂವಹನದ ಕೆಲವು ನಿಯಮಗಳೆಂದರೆ,
ಸಂಭಾಷಣೆ ನಡೆಯುತ್ತಿರುವಲ್ಲಿ ಯಾವನೇ ಒಬ್ಬನಿಗೆ ಶ್ರವಣ ಶಕ್ತಿ ದೋಷ ವಿದ್ದರೆ ಸಂಭಾಷಣೆಯ ಕೆಲವು ನಿಯಮ ಗಳು ಬದಲಾಗಬೇಕಾಗುತ್ತದೆ ಅಥವಾ ಪರಿವರ್ತನೆಯಾಗಬೇಕಾಗುತ್ತದೆ. ಸಂಭಾಷಣೆ ಯಲ್ಲಿ ಒಬ್ಬ ಪಾಲುದಾರ ಶ್ರವಣಶಕ್ತಿ ದೋಷವನ್ನು ಹೊಂದಿದ್ದರೆ ಸಂಭಾಷಣೆಯಲ್ಲಿ ಆಗಾಗ ಅಡಚಣೆಗಳು ಉಂಟಾಗುತ್ತವೆ. ಶ್ರವಣಶಕ್ತಿ ದೋಷವುಳ್ಳ ವ್ಯಕ್ತಿಯು ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಾತುಕತೆಯ ವಿಷಯ ಬೆಳವಣಿಗೆಯಲ್ಲಿ ಪಾತ್ರ ವಹಿಸುವಂತೆ ಮಾಡಲು ಇತರರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಶ್ರವಣ ಶಕ್ತಿ ದೋಷವುಳ್ಳ ವ್ಯಕ್ತಿಯು ಪ್ರಸ್ತುತ ಮಾತನಾಡುತ್ತಿರುವ ವಿಷಯಕ್ಕೆ ಸಂಬಂಧಿಸಿರದ ಪ್ರತಿಕ್ರಿಯೆಗಳನ್ನು ನೀಡಬಹುದು ಸಾಧ್ಯ. ಶ್ರವಣಶಕ್ತಿ ದೋಷವಿರುವವರಿಗೆ ಸಂಭಾಷಣೆಯ ಅನುಭವಕ್ಕೆ ಬರುವುದರ ಗುಣಮಟ್ಟ ಇತರ ಸಹಜ ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತದೆ. ಶ್ರವಣ ಶಕ್ತಿ ನಷ್ಟವಾಗಿರುವವರು ಮಾತುಕತೆಯಲ್ಲಿ ಸಹಜವಾಗಿ ಅಂತರ್ಗತವಾಗಿರುವ ಲಯ, ಧ್ವನಿಯ ಏರಿಳಿತ, ಸಣ್ಣ ಸಣ್ಣ ವಿರಾಮಗಳು, ಘಟನೆ, ಕತೆಯನ್ನು ವಿವರಿಸುವಾಗ ವ್ಯಕ್ತವಾಗುವ ಸಂಗೀತಾತ್ಮಕ ಮಾತುಗಾರಿಕೆ, ಭಾವನಾತ್ಮಕ ಅಂಶಗಳು, ವಾತ್ಸಲ್ಯ ಅಥವಾ ವ್ಯಂಗ್ಯದಂತಹ ಒಳಾರ್ಥಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.
ಶ್ರವಣಶಕ್ತಿ ದೋಷವಿರುವವರು ಸಂಭಾಷಣೆಯಲ್ಲಿ ಪಾಲುದಾರರಾಗಿದ್ದಾಗ ಮಾತುಕತೆಯಲ್ಲಿ ಭಾಗವಹಿಸುವ ಪಾಳಿಗಳಿಗೆ ಅಡಚಣೆ ಎದುರಾಗುತ್ತದೆ. ಸಾಮಾನ್ಯವಾಗಿ ಮಾತುಕತೆಯ ಕೊನೆಯಲ್ಲಿ ವ್ಯಕ್ತಿಯ ಮಾತಿನ ಧ್ವನಿ ತಗ್ಗುತ್ತದೆ. ಆದರೆ ಶ್ರವಣಶಕ್ತಿ ದೋಷವಿರುವವರಿಗೆ ಈ ಕೊನೆಯ ಮಾತು ಕೇಳದೆ ಇರುವುದರಿಂದ ಮುಂದಿನ ಪಾಳಿಯಲ್ಲಿ ಸಂಭಾಷಣೆಯನ್ನು ಎತ್ತಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಶ್ರವಣಶಕ್ತಿ ದೋಷವಿರುವ ವ್ಯಕ್ತಿ ಅದುವರೆಗಿನ ಮಾತುಕತೆಯ ಸಂದೇಶವನ್ನು ಅರ್ಥ ಮಾಡಿಕೊಂಡಿರುವುದಿಲ್ಲ ಮತ್ತು ಇದರಿಂದಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ಮೌನ ನೆಲಸುತ್ತದೆ, ಸಂಭಾಷಣೆ ಕಡಿತವಾಗುತ್ತದೆ. ಶ್ರವಣಶಕ್ತಿ ದೋಷ ಇರುವವರು ತನಗಿಂತ ಹಿಂದಿನವರು ಮಾತನಾಡಿದ್ದನ್ನು ಕೇಳಿಸಿಕೊಳ್ಳದೆ ಇರುವುದರಿಂದ ಮಾತುಕತೆಯ ವಿಷಯವೂ ಬದಲಾಗುವುದು ಸಾಧ್ಯ. ಸಂಭಾಷಣೆಯ ಈ ತೊಡಕುಗಳಿಂದಾಗಿ ಸಂಭಾಷಣೆಯ ಪಾಲುದಾರನಲ್ಲಿ – “ನೀನು ಏನನ್ನೋ ಮುಚ್ಚಿಡುತ್ತಿದ್ದೀ’, “ನೀನೇನನ್ನೋ ಅಡಗಿಸುತ್ತಿದ್ದೀ’, “ಮನಸ್ಸು ಬಿಚ್ಚಿ ಮಾತನಾಡುತ್ತಿಲ್ಲ’, “ನಿನ್ನ ಮನಸ್ಸಿನಲ್ಲಿ ಏನೋ ಇದೆ’ ಇತ್ಯಾದಿ ಭಾವನೆಗಳನ್ನು ಉಂಟುಮಾಡುವುದು ಸಾಧ್ಯ. ಸಹಜವಲ್ಲದ, ಬಳಕೆಯಲ್ಲಿಲ್ಲದ ಪದಗಳನ್ನು ಆಡಲು ಹಿಂಜರಿದು ನಾಟಕೀಯವಾಗಿ, ಸಹಜವಲ್ಲದ ವಿಷಯಗಳನ್ನು ಎತ್ತಿಕೊಂಡು ಸಂಭಾಷಿಸುವಂತಾಗುತ್ತದೆ. ಶ್ರವಣಶಕ್ತಿ ದೋಷವಿರುವವರ ಸಂಭಾಷಣೆಯ ಪಾಲುದಾರರು ಯಾವುದೇ ವಿಷಯವನ್ನಾದರೂ ಆಡುವುದಕ್ಕೆ ಹಿಂದೆಮುಂದೆ ನೋಡುವಂತಾಗುತ್ತದೆ. ಸಂಭಾಷಣೆಯಲ್ಲಿ ಪದೇ ಪದೆ ಮಾತನ್ನು ಪುನರುಚ್ಚರಿಸುವಂತೆ ಕೇಳುವುದು, ವಿವರಣೆಗಳನ್ನು ಬಯಸುವುದರಿಂದ ಮಾತುಕತೆಯಲ್ಲಿ ಆಗಾಗ ವಿಷಯಾಂತರವಾಗುತ್ತದೆ. ಇವುಗಳೆಲ್ಲದರಿಂದಾಗಿ ಗಟ್ಟಿಯಾಗಿ ಮಾತನಾಡುವುದು, ಕೇಳದಂತೆ ನಟಿಸುವುದು, ಹೇಳಿದ್ದರ ಬಗ್ಗೆ ಗಮನ ಕೊಡದಿರುವಂತಹ ಕೆಲವು ಅಲಿಖೀತ ಸಾಮಾಜಿಕ ನಿಯಮಗಳನ್ನು ಮುರಿಯುವಂತಾಗುತ್ತದೆ. ಸಂಭಾಷಣೆ ಮುರಿದುಬೀಳುವುದು ಮಾತುಕತೆಯ ಪಾಲುದಾರನಲ್ಲಿ ಹತಾಶೆಯನ್ನು ಉಂಟು ಮಾಡುತ್ತದೆ, ಸಿಟ್ಟು ಬರಿಸುತ್ತದೆ, ಮಾತುಕತೆಯ ಸನ್ನಿವೇಶದಿಂದ ದೂರವಾಗುವ ಸ್ಥಿತಿಯನ್ನು ಸೃಷ್ಟಿಸುತ್ತದೆ. ಇಂತಹ ಸನ್ನಿವೇಶಗಳನ್ನು ಮಾತನಾಡುವ ಮತ್ತು ಕೇಳುವ ಶೈಲಿಗಳಲ್ಲಿ, ಸಂಭಾಷಣೆಯ ಕಾರ್ಯತಂತ್ರಗಳಲ್ಲಿ ಬದಲಾವಣೆಗಳನ್ನು ತರುವ ಮೂಲಕ ಉತ್ತಮಪಡಿಸಬಹುದಾಗಿದೆ.
ಸಂಭಾಷಣೆಯ ಕಾರ್ಯತಂತ್ರವೆಂದರೆ ಸಂಭಾಷಣೆಯನ್ನು ಉತ್ತಮಪಡಿಸಲು ತೆಗೆದುಕೊಳ್ಳುವ ಕ್ರಿಯೆಗಳ ಸರಣಿ. ಸಂಭಾಷಣೆಯ ಕಾರ್ಯತಂತ್ರಗಳು ಸಂಭಾಷಣಾತ್ಮಕ ಪ್ರತಿಸ್ಪಂದನೆಯನ್ನು ಉತ್ತಮಪಡಿಸಲು ಅಥವಾ ಸಂಭಾಷಣೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತವೆ. ಸಂಭಾಷಣೆ ಮುರಿಯುವುದಕ್ಕಿಂತ ಮುನ್ನ ಬಳಕೆ ಮಾಡಬಹುದಾದ ಕೆಲವು ಸಂಭಾಷಣೆಯ ಕಾರ್ಯತಂತ್ರ (ಸಂವಹನಪೂರಕ ಕಾರ್ಯತಂತ್ರಗಳು)ಗಳಿವೆ. ಸಂಭಾಷಣೆ ಮುರಿದುಬಿದ್ದ ಬಳಿಕ ಬಳಸಬಹುದಾದ ಕೆಲವು ಕಾರ್ಯತಂತ್ರ (ಸಂವಹನ ಮರುನಿರ್ಮಾಣ ಕಾರ್ಯತಂತ್ರಗಳು) ಗಳೂ ಇವೆ.
ಸಂವಹನ ಪೂರಕ ಕಾರ್ಯತಂತ್ರಗಳು:
ಮಾತುಗಾರ, ಸಂದೇಶ, ಪರಿಸರ ಮತ್ತು ಕೇಳುಗನ ಮೇಲೆ ಪ್ರಭಾವ-ಪರಿಣಾಮ ಬೀರಲು ಉಪಯೋಗಿಸುವವು ಸಂವಹನ ಪೂರಕ ಕಾರ್ಯತಂತ್ರಗಳು.
ಮಾತುಗಾರನ ಮೇಲೆ ಪರಿಣಾಮ, ಪ್ರಭಾವ ಬೀರುವ ಕಾರ್ಯತಂತ್ರಗಳು :
ಈ ಕಾರ್ಯತಂತ್ರಗಳನ್ನು ಸಂಭಾಷಣೆಯ ಪಾಲುದಾರನ ಮಾತುಕತೆಯ ಸ್ವಭಾವದ ಮೇಲೆ ಪ್ರಭಾವ ಬೀರಲು ಉಪಯೋಗಿಸಲಾಗುತ್ತದೆ. ಸಂದೇಶವನ್ನು ನೀಡುವುದರಲ್ಲಿ ಬದಲಾವಣೆ (ಸ್ಪಷ್ಟವಾಗಿ ಮಾತನಾಡು, ಮುಖವೆತ್ತಿ ಮುಂದೆ ನೋಡಿ ಮಾತನಾಡು)- “ನೀನು ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡು, ಹಾಗೆ ಮಾತನಾಡಿದರೆ ನನಗೆ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ, ದಯವಿಟ್ಟು ನನ್ನ ಮುಖ ನೋಡಿ ಮಾತನಾಡುವೆಯಾ?’ ಅವರ ಮಾತುಕತೆಯನ್ನು ಗುರುತಿಸುವ ಪ್ರಯತ್ನಕ್ಕೆ ಅಡ್ಡಿಯಾಗುವ ವರ್ತನೆಗಳನ್ನು ಗುರುತಿಸಿ ಅವುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸುವುದು.
ಸಂದೇಶದ ಮೇಲೆ ಪ್ರಭಾವ ಬೀರುವ ಕಾರ್ಯತಂತ್ರಗಳು:
ಇವು ವ್ಯಕ್ತಿಯೊಬ್ಬ ಸಂದೇಶವನ್ನು ಸಂರಚಿಸುವ ವಿಧಾನದ ಮೇಲೆ ಪ್ರಭಾವ ಬೀರುವ ಕಾರ್ಯತಂತ್ರಗಳು. ಕಿರು ವಾಕ್ಯಗಳನ್ನು ರರಚಿಸುವುದು, ಮುಚ್ಚಿದ ಕೊನೆಯ ಪ್ರಶ್ನೆಗಳನ್ನು ಇದು ಒಳಗೊಳ್ಳುತ್ತದೆ. “ಕಳೆದ ರಾತ್ರಿ ನೀನೇನು ಮಾಡಿದೆ?’ ಎನ್ನುವುದರ ಬದಲು “ನಿನ್ನೆ ರಾತ್ರಿ ನೀನು ಈಜುವುದು ಅಥವಾ ಬೈಕ್ ಸವಾರಿ ಮಾಡಿದೆಯಾ?’ ಸಂವಹನ ಪಾಲುದಾರನಿಗೆ ಹಿಮ್ಮಾಹಿತಿಯನ್ನು ಒದಗಿಸುವುದು, ಸ್ವೀಕೃತಿ/ ಅರ್ಥ ಮಾಡಿಕೊಂಡ ದೇಹಭಂಗಿಗಳು – ತಲೆದೂಗುವುದು ಅಥವಾ ತಲೆ ಅಲ್ಲಾಡಿಸುವುದು ಮತ್ತು ಅರ್ಥವಾಗದೆ ಇದ್ದಾಗ ನಿಲ್ಲಿಸುವುದು. ಇದರಿಂದ ಸಕಾರಾತ್ಮಕವಾದ ವರ್ತನೆಯಲ್ಲದ ಅರ್ಥವಾಗದಿದ್ದರೂ ಅರ್ಥವಾದಂತೆ ನಟಿಸುವಂತಹ ಅಪಾಯ ತಪ್ಪುತ್ತದೆ.
ಪರಿಸರವನ್ನು ಪ್ರಭಾವಿಸುವ ಕಾರ್ಯತಂತ್ರಗಳು:
ಈ ಕಾರ್ಯತಂತ್ರಗಳನ್ನು ಸಂವಹನ ಪರಿಸರವನ್ನು ಉತ್ತಮಪಡಿಸಲು ಉಪಯೋಗಿಸಲಾಗುತ್ತದೆ. ಪರಿಸರವನ್ನು ವಿಶ್ಲೇಷಿಸಿ ಸಂವಹನವನ್ನು ಉತ್ತಮಪಡಿಸುವಂತಹ ಅಂಶಗಳನ್ನು ಗುರುತಿಸುವುದರ ಮೇಲೆ ಇದರ ಯಶಸ್ಸು ಆಧರಿಸಿರುತ್ತದೆ. ಇವನ್ನು ಗಮನಿಸಿ:
(ಮುಂದಿನ ವಾರಕ್ಕೆ)
ಡಾ| ಉಷಾ ಶಾಸ್ತ್ರಿ
ಅಸೋಸಿಯೇಟ್ ಪ್ರೊಫೆಸರ್, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ,
ಮಂಗಳೂರು
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.