![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 7, 2021, 10:32 AM IST
ಬೆಂಗಳೂರು: ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಹನ್ನೊಂದು ವರ್ಷಗಳ ಬಳಿಕ ವಿಶ್ವೇಶ್ವರಪುರಂ(ವಿ.ವಿ.ಪುರಂ) ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಧರ್ಮಸಿಂಗ್ ಯಾದವ್(53) ಬಂಧಿತ.
ಆರೋಪಿಯು ಎರಡನೇ ಮದುವೆಯಾಗಲು ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲಿನಲ್ಲಿ ದ್ದಾಗ ಅನಾರೋಗ್ಯ ಕಾರಣ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಬಂದಾಗ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ. ಪಿಯುಸಿ ವ್ಯಾಸಂಗ ಮಾಡಿದ್ದ ಈತ ಇದೇ ಆಧಾರದ ಮೇಲೆ 1987ರಲ್ಲಿ ಏರ್ ಪೋರ್ಸ್ನಲ್ಲಿ ಜವಾನ್ ಆಗಿ ಕೆಲಸಕ್ಕೆ ನೇಮಕಗೊಂಡಿದ್ದ.
ನಂತರ ಕೊಲ್ಕತ್ತಾ, ದೆಹಲಿ, ತೇಜ್ಪುರ್, ವಡೋದರದಲ್ಲಿ ಕರ್ತವ್ಯ ನಿರ್ವಹಿಸಿದ್ದು, 1999ರಿಂದ 2007ರವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡು ತ್ತಿದ್ದು, 2007ರಲ್ಲಿ ನಿವೃತ್ತಿಯಾಗಿದ್ದ ಆರೋಪಿ, ದೆಹಲಿಯ ನಿವಾಸಿ ಅನುಯಾದವ್ ಅವರನ್ನು ಮದುವೆಯಾಗಿದ್ದು, ದಂಪತಿಗೆ 14 ವರ್ಷದ ಗಂಡು ಹಾಗೂ 8 ವರ್ಷದ ಹೆಣ್ಣು ಮಕ್ಕಳಿದ್ದರು.
ಇದನ್ನೂ ಓದಿ;- ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕ
ವಿದ್ಯಾರಣ್ಯಪುರದ ಸಿಂಗಾಪುರ ಲೇಔಟ್ನಲ್ಲಿ ಸ್ವಂತ ಮನೆಯಲ್ಲಿ ಪತ್ನಿ, ಮಕ್ಕಳ ಜತೆ ವಾಸವಾಗಿದ್ದ. ನಿವೃತ್ತಿ ಬಳಿಕ ಸಂಜಯನಗರದ ಖಾಸಗಿ ಕಂಪನಿಯಲ್ಲಿ ಪರ್ಚೇಸಿಂಗ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಯುವತಿ ವ್ಯಾಮೋಹಕ್ಕೊಳಗಾಗಿದ್ದ ಆರೋಪಿ, ಜೀವನ್ ಸಾಥಿ ಡಾಟ್ ಕಾಮ್ನಲ್ಲಿ ಮದುವೆಯಾಗಿಲ್ಲ ಎಂದು ಪ್ರೊಫೈಲ್ ಅಪ್ಡೇಟ್ ಮಾಡಿ, ಆಸ್ತಿ, ಕೆಲಸದ ವಿವರಗಳನ್ನು ಹಾಕಿ ಎರಡನೇ ಮದುವೆಯಾಗಲು ಸಿದ್ಧವಾಗಿದ್ದ ಎಂದು ಪೊಲೀಸರು ಹೇಳಿದರು.
ಹೆಂಡತಿ, ಮಕ್ಕಳ ಕೊಂದು ಠಾಣೆಗೆ ಹೋಗಿದ್ದ: ಈ ಮಧ್ಯೆ ಪತ್ನಿ, ಮಕ್ಕಳು ಇದ್ದರೆ ಮತ್ತೂಂದು ಮದುವೆ ಸಾಧ್ಯವಿಲ್ಲ ಎಂದು ಭಾವಿಸಿ, 2008ರ ಅಕ್ಟೋಬರ್ 19ರಂದು ಮನೆಯಲ್ಲಿ ಮರದ ಕಟ್ಟಿಗೆಯಿಂದ ಹೆಂಡತಿ-ಮಕ್ಕಳನ್ನು ಹೊಡೆದು, ಪೊಲೀಸರಿಗೆ ಅನುಮಾನ ಬಾರದಿರಲು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದ.
ಅಲ್ಲದೆ, ಪತ್ನಿಯ ಮೈಮೇಲಿದ್ದ ಚಿನ್ನಾಭರಣ ಬೇರೆಡೆ ಇಟ್ಟು, ತಾನೇ ಪೊಲೀಸ್ ಠಾಣೆಗೆ ಹೋಗಿ ಯಾರೋ ಅಪರಿಚಿತರು ಪತ್ನಿ, ಮಕ್ಕಳನ್ನುಕೊಲೆಗೈದಿದ್ದಾರೆ ಎಂದು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರ ತನಿಖೆಯಲ್ಲಿ ಧರ್ಮಸಿಂಗ್ ಕೊಲೆಗೈದಿರುವುದು ಸಾಬೀತಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಖಾರದಪುಡಿ ಎರಚಿ ಎಸ್ಕೇಪ್ ಆಗಿದ್ದ ಆರೋಪಿ: ಎರಡು ವರ್ಷ 2 ತಿಂಗಳು ಜೈಲಿನಲ್ಲಿದ್ದ ಆರೋಪಿಗೆ ಮೂತ್ರಕೋಶದಲ್ಲಿ ಸಮಸ್ಯೆಯಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಯುರಾಲಜಿ ವಿಭಾಗಕ್ಕೆ ದಾಖಲಾಗಿದ್ದ. ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಆಲೋಚಿಸಿದ್ದ ಆರೋಪಿ, ಮೊದಲೇ ಕಾರಾಗೃಹ ಕ್ಯಾಂಟಿನ್ನಲ್ಲಿ ಖಾರದ ಪುಡಿ ಯನ್ನು ಬೇಬಿನಲ್ಲಿರಿಸಿಕೊಂಡಿದ್ದ.
ವೈದ್ಯರ ಸಲಹೆ ಮೇರೆಗೆ ಸಿಎಆರ್ ಸಿಬ್ಬಂದಿ ನಂಜುಂಡೇಗೌಡ ಮತ್ತು ಲಿಂಗರಾಜು ಆರೋಪಿಗೆ ನೀರು ಕುಡಿಸಿ ಆಸ್ಪತ್ರೆ ಆವರಣದಲ್ಲಿ ಅಲೆದಾಡಿಸುತ್ತಿದ್ದರು. ಈ ವೇಳೆ ಆರೋಪಿ ಸಿಬ್ಬಂದಿಗೆ ಖಾರದ ಪುಡಿ ಎರಚಿ, ಲೀಡಿಂಗ್ ಚೈನ್ ಮತ್ತು ಬೇಡಿ ಸಮೇತ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಇತ್ತೀಚೆಗೆ 11 ವರ್ಷವಾದರೂ ಆರೋಪಿಯನ್ನು ಬಂಧಿ ಸದ ಬಗ್ಗೆ ಕೋರ್ಟ್ ಪೊಲೀಸರನ್ನು ಪ್ರಶ್ನಿಸಿತ್ತು.
ಈ ಹಿನ್ನೆಲೆ ಯಲ್ಲಿ ವಿ.ವಿ.ಪುರಂ ಉಪವಿಭಾಗ ಎಸಿಪಿ ಬಿ.ಎಲ್.ಶ್ರೀನಿ ವಾಸಮೂರ್ತಿ ಮತ್ತು ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಎಸ್.ನೀಲಗಾರ್, ಪಿಎಸ್ ಮಂಜುನಾಥ್, ಶ್ರೀನಿವಾಸ್ ಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಮಾಸಿಕ ಪಿಂಚಣಿ ಪಡೆದು ಸಿಕ್ಕಿ ಬಿದ್ದ! ತಾಂತ್ರಿಕ ತನಿಖೆಗೆ ಕೈಹಾಕಿದ ಪೊಲೀಸರು ಆರೋಪಿಯ ಹಿನ್ನೆಲೆ ಶೋಧಿಸಿದಾಗ ಏರ್ಪೋರ್ಸ್ನಲ್ಲಿ ಕೆಲಸ ಮಾಡಿ, ನಿವೃತ್ತಿ ಹೊಂದಿ ಮಾಸಿಕ ಪಿಂಚಣಿಪಡೆಯುತ್ತಿದ್ದ ವಿಚಾರ ಗೊತ್ತಾಗಿತ್ತು.
ಈ ಹಿನ್ನೆಲೆಯಲ್ಲಿ ದೆಹಲಿಯ ಕೇಂದ್ರ ಕಚೇರಿಗೆ ಆರೋಪಿ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆಯಲಾಗಿತ್ತು. ಏರ್ಪೋರ್ಸ್ ಅಧಿಕಾರಿಗಳು ಸ್ಪಂದಿಸಿದ್ದು, ಆರೋಪಿಯ ಹರಿಯಾಣ ವಿಳಾಸ ನೀಡಿದ್ದರು. 25 ದಿನಗಳ ಕಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಹರಿಯಾಣದ ಅತ್ತೇಲಿಮಂಡಿ ಟೌನ್ನಲ್ಲಿ ಬೇರೊಬ್ಬರ ಹೆಸರಿನಲ್ಲಿ ಮದ್ಯ ಮಾರಾಟದ ಪರವಾನಿಗೆ ಪಡೆದು ವೈನ್ ಶಾಪ್ ನಡೆಸುತ್ತಿದ್ದ ಆರೋಪಿ ಬಂಧಿಸಲಾಗಿದೆ. ಈ ಮಧ್ಯೆ ಆರೋಪಿ 2012ರಲ್ಲಿ ಅಸ್ಸಾಂ ಮೂಲದ ಶಿಪ್ರಾ ಎಂಬಾಕೆ ಯನ್ನು ಎರಡನೇ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಎಂದು ಪೊಲೀಸರು ಹೇಳಿದರು
You seem to have an Ad Blocker on.
To continue reading, please turn it off or whitelist Udayavani.