ಮಹರ್ಷಿ ವಾಲ್ಮೀಕಿ ಭವನ ಕಾಮಗಾರಿ ನನೆಗುದಿಗೆ
Team Udayavani, Apr 4, 2022, 2:30 PM IST
ಬೀದರ: ಜಿಲ್ಲಾ ಕೇಂದ್ರ ಬೀದರನಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಾಲ್ಕು ವರ್ಷ ಕಳೆದರೂ ಈವರೆಗೆ ಒಂದು ಕಲ್ಲು ಸಹ ಹಾಕಿಲ್ಲ. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ-ಅಧಿಕಾರಿಗಳ ನಿರ್ಲಕ್ಷ್ಯದಿಂದ ಭವನ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಇದರಿಂದ ಟೋಕರಿ ಕೋಲಿ ಸಮಾಜದ ಬಹುದಿನಗಳ ಕನಸು ನನಸಾಗದೇ ಉಳಿದಿದೆ.
ಕೋಲಿ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ 2010-11ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೊಂದು ವಾಲ್ಮೀಕಿ ಭವನ ನಿರ್ಮಿಸಲು ತಲಾ 1 ಕೋಟಿ ರೂ. ಮಂಜೂರು ಮಾಡಿತ್ತಲ್ಲದೇ ಮೊದಲ ಕಂತಿನ ರೂಪದಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಿತ್ತು. ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭವನಗಳು ತಲೆ ಎತ್ತಿವೆ. ಆದರೆ ಧರಿನಾಡು ಬೀದರನಲ್ಲಿ ಮಾತ್ರ ನನೆಗುದಿಗೆ ಬಿದ್ದಿದೆ.
ಸರ್ಕಾರ ಅನುದಾನ ಬಿಡುಗಡೆ ಮಾಡಿ ದಶಕ ಕಳೆದಿದೆ. ಬೀದರನಲ್ಲಿ ಭವನಕ್ಕೆ ಸೂಕ್ತ ನಿವೇಶನಕ್ಕೆ ಆರಂಭದಲ್ಲಿ ವಿಳಂಬವಾಗಿದ್ದರೂ 2018ರಲ್ಲಿ ಗುರುದ್ವಾರ ಪರಿಸರದಲ್ಲಿ (ಬಂಜಾರಾ ಭವನ ಹಿಂದುಗಡೆ) ವಾಲ್ಮೀಕಿ ಸಮುದಾಯ ಭವನಕ್ಕಾಗಿ ಜಿಲ್ಲಾಡಳಿತ 20 ಗುಂಟೆ ಭೂಮಿ ಮಂಜೂರು ಮಾಡಲಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪುರ್ ಅವರು ಕಾಮಗಾರಿಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು. ಇದಾಗಿ ಈಗ ನಾಲ್ಕು ವರ್ಷ ಕಳೆದರೂ ಕಟ್ಟಡವಲ್ಲ ಒಂದು ಕಲ್ಲು ಸಹ ಹಾಕಿಲ್ಲ. ಸಮಾಜದವರು ನಿಗದಿತ ಜಾಗದಲ್ಲಿ ವಾಲ್ಮೀಕಿ ಭಾವಚಿತ್ರವಿರುವ ಬೋರ್ಡ್ ಹಾಕಿದ್ದಾರೆ.
ಕಾಮಗಾರಿ ಆರಂಭಕ್ಕೆ ಗಡುವು
ಭವನಕ್ಕಾಗಿ ಅನುದಾನ ಮತ್ತು ಜಾಗಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದ ಟೋಕರಿ ಕೋಳಿ ಸಮಾಜದ ಈಗ ನನೆಗುದಿಗೆ ಬಿದ್ದಿರುವ ಕೆಲಸ ಆರಂಭವಿಸುವಂತೆ ಹೋರಾಟ ಮಾಡುವ ಸ್ಥಿತಿ ಬಂದಿದೆ. ಬೀದರಗೆ ಇತ್ತೀಚೆಗೆ ಆಗಮಿಸಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿ ಒತ್ತಡ ಹಾಕಿದ್ದರು. ಆದರೂ ಪ್ರಯೋಜನವಾಗಿಲ್ಲ. ಕಳೆದೊಂದು ದಶಕದಿಂದ ಜನಪ್ರತಿನಿಧಿಗಳ ಭರವಸೆಗಳಿಂದ ಬೇಸತ್ತಿರುವ ಸಮಾಜದವರು ತಿಂಗಳೊಳಗೆ ಕಾಮಗಾರಿ ಆರಂಭಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ರೂಪಿಸಲು ನಿರ್ಣಯಿಸಿದ್ದಾರೆ.
ದಶಕದ ಹೋರಾಟ ಫಲವಾಗಿ ಬೀದರನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಸೂಕ್ತ ಅನುದಾನವೂ ಲಭ್ಯವಿದೆ. ಆದರೆ ಇದಾಗಿ ನಾಲ್ಕು ವರ್ಷ ಕಳೆದರೂ ಕಾಮಗಾರಿ ಆರಂಭವಿಸಿಲ್ಲ. ಈಗ ಜಾಗ ವಿವಾದದಲ್ಲಿದೆ ಎಂದು ಜಿಲ್ಲಾಡಳಿತ ಹಾರಿಕೆ ಉತ್ತರ ನೀಡುತ್ತಿದೆ. ಆ ಮೂಲಕ ಹಿಂದುಳಿದ ಸಮಾಜದವರನ್ನು ಕಡೆಗಣಿಸಲಾಗುತ್ತಿದೆ. ತಿಂಗಳೊಳಗೆ ಕೆಲಸ ಆರಂಭಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಅನಿವಾರ್ಯ ಆಗಲಿದೆ. –ಸುನೀಲ ಭಾವಿಕಟ್ಟಿ, ಯುವ ಮುಖಂಡ, ಟೋಕಲಿ ಕೋಲಿ ಸಮಾಜ, ಬೀದರ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet Meeting: ಬೀದರ್, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
Anubhava Mantapa ಡಿಸೆಂಬರ್ಗೆ ಲೋಕಾರ್ಪಣೆ: ಸಚಿವ ಈಶ್ವರ ಖಂಡ್ರೆ
CM Siddaramaiah ಗೋರ್ಟಾ ಗ್ರಾಮಕ್ಕೆ ಭೇಟಿ ನೀಡಲು ಆಗ್ರಹ: ಶಾಸಕ ಪ್ರಭು ಚವ್ಹಾಣ್
Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ
Basavakalyan ಡಾ| ಭೈರಪ್ಪಗೆ ಶ್ರೀ ಚನ್ನರೇಣುಕ ಬಸವ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.