ಹೊಸಳ್ಳಿಯಲ್ಲಿ ಹೊಸ ವೀರಗಲ್ಲು ಪತ್ತೆ
1401ನೇ ಇಸವಿಯಲ್ಲಿ ನೆಬ್ಬೂರಿನ ತಾಳೆಯ ನಾಯಕನ ಸ್ಮರಣಾರ್ಥ ನಿರ್ಮಿಸಿದ ವೀರಗಲ್ಲು
Team Udayavani, Apr 20, 2022, 5:10 PM IST
ಶಿರಸಿ: ತಾಲೂಕಿನ ನೆಗ್ಗು ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯಲ್ಲಿ 1401ನೇ ಇಸವಿಯ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಅಪ್ರಕಟಿತ ಈ ಶಾಸನದ ಮೇಲೆ ಬೆಳಕು ಚೆಲ್ಲಿದೆ. ಇದರಿಂದಾಗಿ ನೆಗ್ಗು ಪಂಚಾಯಿತಿ ವ್ಯಾಪ್ತಿಯ ಇತಿಹಾಸದ ಬಗ್ಗೆ ಇದೇ ಮೊದಲ ಬಾರಿ ಹೆಚ್ಚಿನ ಮಾಹಿತಿ ಲಭ್ಯವಾದಂತಾಗಿದೆ.
ಇಲ್ಲಿಯ ಹೊಸಳ್ಳಿ ಗ್ರಾಮದಲ್ಲಿ ಈ ವೀರಗಲ್ಲು ಮಣ್ಣು ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸಕಾರ ಲಕ್ಷ್ಮೀಶ್ ಸೋಂದಾ, ಈ ಕುರಿತು ಅಭ್ಯಸಿಸಿದಾಗ ಇದೊಂದು ವೀರಗಲ್ಲು ಶಾಸನವಾಗಿದ್ದು ಕ್ರಿ.ಶ. 1401 ರ ಕಾಲಮಾನದ್ದಾಗಿದೆ. ವಿಶೇಷವೆಂದರೆ ಆರುನೂರು ವರ್ಷಗಳ ಹಿಂದೆಯೇ ನೆಬ್ಬೂರು ಪ್ರದೇಶ ಅದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಅಪೂರ್ವ ಸಂಗತಿ ಈ ಶಾಸನದಿಂದ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.
ಆಸವರಸ ಒಡೆಯರು ಸತ್ತಗೋವೆಯ (ಸಪ್ತಕೊಂಕಣ)ರಾಜ್ಯವನ್ನಾಳುವ ಸಂದರ್ಭದಲ್ಲಿ ಬಳ್ಳಿಗಾವಿಯ ಅರಸು ಶಷ್ಠಿರಾಯನಿಗೂ ಮತ್ತು ನಾರಣಪ್ಪ ದಂಡನಾಯಕರಿಗೂ ನಡೆದ ಯುದ್ಧದಲ್ಲಿ ನೆಬ್ಬೂರಿನ ತಾಳೆಯ ನಾಯಕನು ರಣರಂಗದಲ್ಲಿ ಕಾದಾಡಿ ಎದುರಾದ ವೈರಿಗಳನ್ನು ಗೆದ್ದು ರಣದೊಳಗೆ ಮಡಿದು ವೀರ ಸ್ವರ್ಗವ ಸಂಗತಿಯನ್ನು ಈ ವೀರಗಲ್ಲು ಶಾಸನ ತಿಳಿಸುತ್ತದೆ ಎಂದಿದ್ದಾರೆ.
ಶಾಸನದ ಸುತ್ತ ಮಹಾಸತಿ ಕಲ್ಲುಗಳೂ ಪತ್ತೆಯಾಗಿವೆ. ಸಾಮಾನ್ಯವಾಗಿ ವೀರಗಲ್ಲುಗಳು ಗಾಳಿ, ಮಳೆಯ ಅಬ್ಬರಕ್ಕೆ ಶತ ಶತಮಾನಗಳಿಂದ ಸಿಲುಕಿ ಉಲ್ಲೇಖೀಸಲಾದ ಅಕ್ಷರಗಳು ಸವಕಳಿ ಹೊಂದಿರುತ್ತವೆ. ಆದರೆ, ಹೊಸಳ್ಳಿಯಲ್ಲಿ ಈ ವೀರಗಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಹೆಚ್ಚಿನ ಸವಕಳಿ ಹೊಂದಿಲ್ಲ. ವೀರಗಲ್ಲಿನ ಮೊದಲ ಸಾಲಿನಲ್ಲಿ ಯುದ್ಧದ ಚಿತ್ರವಿದೆ. ಈ ಕುರಿತಂತೆ ಶಾಸನದಲ್ಲಿ ಎರಡು ಸಾಲಿನಲ್ಲಿ ಹಿರಿಯ ಶಾಸನ ತಜ್ಞ ಬರಹವಿದೆ. ಎರಡನೇ ಸಾಲಿನಲ್ಲಿ ವೀರ ಯೋಧನನ್ನು ವೈರಿಗಳು ಖಡ್ಗದಿಂದ ಇರಿಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹಗಳಿವೆ.
ಮೂರನೇ ಸಾಲಿನಲ್ಲಿ ದೇವತೆಗಳು ವೀರನನ್ನು ಸ್ವರ್ಗಕ್ಕೆ ಒಯ್ಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹ ಕೆತ್ತನೆ ಮಾಡಲಾಗಿದೆ. ನಾಲ್ಕನೇ ಸಾಲಿನಲ್ಲಿ ವೀರ ಸ್ವರ್ಗಸ್ಥನಾದ ಚಿತ್ರವಿದ್ದರೆ ಇನ್ನೂ ಮೇಲ್ಗಡೆ ಸೂರ್ಯ, ಚಂದ್ರರ ಚಿತ್ರವಿದೆ. ಸೂರ್ಯ ಚಂದ್ರ ಇರುವವರೆಗೂ ಈ ಯೋಧನ ಕೀರ್ತಿ ಅಮರವಾಗಿರುತ್ತದೆ ಎಂಬುದರ ಸಂಕೇತವಾಗಿದೆ. ಇದರ ಅಧ್ಯಯನಕ್ಕೆ ಎಂ.ನಾಗರಾಜ್ರಾವ್ ಸಹಕರಿಸಿದ್ದಾರೆ ಎನ್ನುತ್ತಾರೆ. ಕ್ಷೇತ್ರಾನ್ವೇಷಣೆ ಸಂದರ್ಭದಲ್ಲಿ ವಿ.ಎನ್. ಹೆಗಡೆ ಗೌಡನಮನೆ, ಮಂಜುನಾಥ ಸಾಯಿಮನೆ, ಎಂ.ಡಿ. ಹೆಗಡೆ ಹೊಸಳ್ಳಿ, ಎಸ್.ವಿ. ಹೆಗಡೆ ಹಳ್ಳದಕೈ ಮುಂತಾದವರು ಇದ್ದರು.
ಇತಿಹಾಸ ಅರಿವು ಮುಖ್ಯ: ಈಗಿನ ನೆಬ್ಬೂರು ಸಂಪಖಂಡ ಹೋಬಳಿ ಜಾನ್ಮನೆ ಪಂಚಾಯತದ ಕೇವಲ 15 ಮನೆಗಳಿರುವ ಒಂದು ಪುಟ್ಟ ಹಳ್ಳಿ. ಕೃಷಿಕರು, ಕೂಲಿ ಕಾರ್ಮಿಕರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಕಾಲ ಚಕ್ರದ ತಿರುಗುವಿಕೆಯ ನಡುವೆ 600 ವರ್ಷಗಳಲ್ಲಿ ಪ್ರಾಂತ್ಯವೊಂದು ಹಳ್ಳಿಯಾಗಿ ಬದಲಾವಣೆಯಾಗಿರುವ ಸೋಜಿಗವನ್ನು ಈ ವೀರಗಲ್ಲು ತೆರೆದಿಟ್ಟಿದೆ. ಇತಿಹಾಸದ ಪುಟಗಳಲ್ಲಿ ಎಲ್ಲೆಲ್ಲಿಯದೋ ಇತಿಹಾಸಗಳನ್ನು, ಯುದ್ಧಗಳನ್ನು ಉರು ಹಾಕುವ ನಮ್ಮ ಮಕ್ಕಳಿಗೆ ನಮ್ಮದೇ ಊರಿನ ಇತಿಹಾಸದ ಬಗ್ಗೆ ತಿಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಅಧ್ಯಯನಗಳಿಗೆ ಉತ್ತೇಜನ ನೀಡಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತಗೊಂಡಿದೆ.
ಇತ್ತೀಚೆಗೆ ಸಿಕ್ಕ ವೀರಗಲ್ಲುಗಳ ಪೈಕಿ ಹೊಸಳ್ಳಿಯಲ್ಲಿ ಸಿಕ್ಕಿದ್ದು ಯಾವುದೇ ಹಾನಿ ಆಗದ ಸ್ಥಿತಿಯಲ್ಲಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಈ ವೀರಗಲ್ಲು ಪ್ರಮುಖ ಮೆಟ್ಟಿಲಾಗಲಿದೆ. -ಲಕ್ಷ್ಮೀಶ ಸೋಂದಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.