![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 9, 2022, 11:46 AM IST
ವಿಜಯಪುರ: ಮುಖ್ಯಮಂತ್ರಿ ಸ್ಥಾನಕ್ಕಾಗಿ 2500 ಕೋಟಿ ರೂ. ಆಫರ್ ಕೇಳಿದ್ದಾಗಿ ಶಾಸಕ ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ ಮೂಲಕ ದೂರು ದಾಖಲಿಸಿ ತನಿಖೆಗೆ ಮನವಿ ಮಾಡುವುದಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯಾಸಿನ್ ಜವಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ 2500 ಕೋಟಿ ರೂ. ಆಫರ್ ನೀಡಿದವರು ಯಾರು? ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಹೀಗೆ ಯಾರಿಗೆ ಯಾರು ಆಫರ್ ಕೊಟ್ಟಿದ್ದು ಎಂಬುದನ್ನು ಯತ್ನಾಳ್ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರಾಗಿ ಜವಾಬ್ದಾರಿ ರಹಿತವಾಗಿ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾವು ಗೆದ್ದು ಬರುತ್ತಿರುವ ವಿಜಯಪುರ ಕ್ಷೇತ್ರ, ಪಾಕಿಸ್ತಾನದಂತಹ ಪ್ರದೇಶ ಎಂದಿರುವ ಯತ್ನಾಳ್, ಕ್ಷೇತ್ರದ ಜನರ ಮಾನ ಕಳೆದಿದ್ದಾರೆ. ಭಾರತೀಯರ ನಾಲಿಗೆಯಲ್ಲಿ ಪಾಕಿಸ್ತಾನ ಹೆಸರು ಬರಲೇಬಾರದು. ರಾಜಕೀಯ ಸ್ವಾರ್ಥಕ್ಕಾಗಿ ಪದೇ ಪದೇ ಪಾಕಿಸ್ತಾನದ ಬಗ್ಗೆ ಮಾತನಾಡುವ ಯತ್ನಾಳ್ ವಿರುದ್ಧ ಪಕ್ಷವೂ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ:ನಿಗೂಢ ಸಂದರ್ಭದಲ್ಲಿ ಸಾವು : ಭಾರಿ ಚರ್ಚೆಗೆ ಗುರಿಯಾದ ಎಲಾನ್ ಮಸ್ಕ್ ಟ್ವೀಟ್
ತಮ್ಮ ವರ್ತನೆಯಿಂದ ಬಿಜೆಪಿ ಪಕ್ಷ ತಮ್ಮನ್ನು ಹೊರ ಹಾಕುವುದು ಖಚಿತ ಎಂದರಿತ ಶಾಸಕ ಯತ್ನಾಳ್, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಪಕ್ಷದ ಘನತೆಗೆ ಇನ್ನೂ ಹೆಚ್ವಿನ ಹಾನಿಯಾಗುವ ಮುನ್ನ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಮಾನ್ಯ ಮನುಷ್ಯರು ಪಾಕಿಸ್ತಾನ ಎಂದರೆ ದೇಶ ದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಛೋಟಾ ಪಾಕಿಸ್ತಾನ ಎಂದಿದ್ದ ಯುವಕರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಸಲಾಗಿದೆ. ಆದರೆ ಪಾಕಿಸ್ತಾನದಂಥ ಪ್ರದೇಶದಿಂದ ಗೆದ್ದಿದ್ದೇನೆ ಎಂದು ಬಹಿರಂಗ ಸಮಾವೇಶದಲ್ಲಿ ಹೇಳಿದ್ದರೂ, ಪೊಲೀಸರು ಯತ್ನಾಳ ವಿರುದ್ಧ ಕ್ರಮ ಕೈಗೊಂಡಿಲ್ಲ. ದೇಶದಲ್ಲಿ ಜನ ಸಾಮಾನ್ಯರಿಗೆ ಒಂದು, ಶಾಸಕರಿಗೆ ಒಂದು ರೀತಿ ಕಾನೂನು ಇದೆಯೇ, ಯತ್ನಾಳ್ ವಿರುದ್ಧ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಹಿಂದೂ ಹೆಸರಿನಲ್ಲಿ ರಾಜಕೀಯ ಮಾತನಾಡುವ ಯತ್ನಾಳ್ ನಕಲಿ ಹಿಂದೂವಾದಿ. ತಾವು ಪಾಕಿಸ್ತಾನದಂಥ ಪ್ರದೇಶದಿಂದ ಆಯ್ಕೆಯಾಗಿ ಬರುತ್ತೇನೆ. 1 ಲಕ್ಷ ಮುಸ್ಲಿಂ ಜನಸಂಖ್ಯೆ ಇರುವ ಪ್ರದೇಶದಲ್ಲಿ ಗೆದ್ದು ಬರುತ್ತಿರುವುದಾಗಿ ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
You seem to have an Ad Blocker on.
To continue reading, please turn it off or whitelist Udayavani.