![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 11, 2022, 12:38 PM IST
ಪಡುಬಿದ್ರಿ: ಅಬ್ಟಾಸ್ ಗುಡ್ಡೆ ನಿವಾಸಿಯೊಬ್ಬರ ಮೇಲೆ ಈಗಾಗಲೇ ಪಡುಬಿದ್ರಿ, ಕಾರ್ಕಳ ಠಾಣೆಗಳಲ್ಲಿ ದನಗಳ್ಳತನದ ಕೇಸು ಗಳಿದ್ದರೂ ಒಂದು ವರ್ಷಕ್ಕಾಗಿ ದನ ಸಾಕಾಣಿಕೆ ಹಾಗೂ ಮಾರಾಟದ ಉದ್ಯಮ ಪರವಾನಿಗೆಯನ್ನು ಪಡುಬಿದ್ರಿ ಗ್ರಾ.ಪಂ. ಪಿಡಿಒ ನೀಡಿರುವುದನ್ನು ಆಕ್ಷೇಪಿಸಿ ಹಿಂಜಾವೇ, ಬಜರಂಗದಳ ನಾಯಕರು ಮೇ 10ರಂದು ಪಡುಬಿದ್ರಿ ಗ್ರಾ.ಪಂ. ಮುಂದೆ ಪ್ರತಿಭಟಿಸಿದರು.
ಈ ಹಿಂದೆ ಕಳೆದ ಮಾರ್ಚ್ನಲ್ಲೇ ಈ ಸಂಘಟನೆಗಳು ಮಾಡಿರುವ ಮನವಿಯನ್ನು ಲೆಕ್ಕಿಸಿದೇ ಇರುವುದಕ್ಕೆ ಮಂಗಳವಾರದಂದು ಪಿಡಿಒ ಪಂಚಾಕ್ಷರೀ ಸ್ವಾಮಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಸಂಘಟನೆಯ ನಾಯಕರು ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರಿಗೆ ಈ ಕುರಿತಾಗಿ ಮನವಿಯನ್ನು ನೀಡಿ, ಈಗಾಗಲೇ ಗ್ರಾ. ಪಂ. ಜಾರಿ ಮಾಡಿ ರುವ ಪರವಾನಿಗೆಯನ್ನು ಅಮಾನತಿನಲ್ಲಿರಿ ಸುವಂತೆ ಪಿಡಿಒ ಅವರನ್ನು ಆಗ್ರಹಿಸಿದ್ದಾರೆ.
ಪಡುಬಿದ್ರಿ ಗ್ರಾ.ಪಂ. ಆವರಣದಲ್ಲಿ ಬಂದು ಸೇರಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ, ತಾ| ಪ್ರಮುಖರಿದ್ದ ಗುಂಪು ನೇರವಾಗಿ ಪಿಡಿಒ ಅವರನ್ನೇ ತರಾಟೆಗೆ ತೆಗೆದುಕೊಂಡಿತು. ಪಂಚಾಯತ್ ನಿರ್ಣಯದಲ್ಲಿ ಈ ಉದ್ಯಮ ಪರವಾನಿಗೆಯನ್ನು ನೀಡ ಬಾರದೆಂದು ಸಾಮಾನ್ಯ ಸಭೆಯಲ್ಲಿ ದನಿ ಎತ್ತಿರುವ ಸದಸ್ಯರ ಆಕ್ಷೇಪಣೆಗಳನ್ನೇ ದಾಖಲಿಸಲಾಗಿಲ್ಲ. ಹೆಚ್ಚಿನ ಸದಸ್ಯರೆಲ್ಲ ರನ್ನೂ ಕತ್ತಲಲ್ಲಿ ಇಡಲಾಗಿದೆ. ಹಾಗಾಗಿ ಪರವಾನಿಗೆಯನ್ನು ಪಡೆದ ವ್ಯಕ್ತಿ ಕಾನೂನಿನ ಕುಣಿಕೆಗಳಿಂದ ಪಾರಾಗುತ್ತಿದ್ದಾರೆ. ಪಡುಬಿದ್ರಿ ಗ್ರಾ.ಪಂ. ನೀಡಿದ ಪರವಾನಿಗೆಯನ್ನೇ ಅಸ್ತ್ರವಾಗಿಸಿ ದನಗಳ ಕಳ್ಳ ಸಾಗಾಣಿಕೆಯನ್ನೂ ನಿರ್ಭೀತಿಯಿಂದ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ, ಕಾನೂನು ಕಟ್ಟಳೆಗಳಿಂದಲೂ ಸುಲಭ ದಿಂದಲೇ ಪಾರಾಗುತ್ತಿದ್ದಾರೆ. ಕದ್ದಿರುವ ದನಗಳ ಸಕ್ರಮ ಸಾಗಾಟಕ್ಕಾಗಿ ಜುಜುಬಿ ದಂಡವನ್ನು ಇಲಾಖೆಗೆ ಕಟ್ಟಿ ತಪ್ಪಿಸಿಕೊಳ್ಳುತ್ತಿರುತ್ತಾರೆ.
ಪಿಡಿಒ ಆಗಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯಾಗಿ ತಾವೂ ಎರಡು ಕೋಮುಗಳ ಮಂದಿಯನ್ನು ಪರಸ್ಪರ ಎತ್ತಿಕಟ್ಟಿ ಕೋಮು ಸಂಘರ್ಷಕ್ಕೂ ನೇರ ಕಾರಣರಾಗುತ್ತಿರುವಿರಾಗಿ ಹಿಂಜಾವೇ ನಾಯಕರು ಪಿಡಿಒ ಅವರನ್ನು ಎಚ್ಚರಿಸಿದರು.
ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಉಮೇಶ್ ಸೂಡ, ರಿತೇಶ್ ಪಾಲನ್ ಕಡೆಕಾರ್, ತಾ| ಘಟಕಾಧ್ಯಕ್ಷ ದಾಮೋದರ್, ತಾ| ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಸೂಡ, ಶಂಕರ್ ಕಂಚಿನಡ್ಕ, ಮೋಹನ್, ಗ್ರಾ. ಪಂ. ಸದಸ್ಯರಾದ ಸಂದೇಶ್ ಪಾದೆಬೆಟ್ಟು, ಅಶೋಕ್ ಪೂಜಾರಿ, ಲೋಕೇಶ್ ಪಲಿಮಾರು, ಕಾಪು ಪ್ರಕಾಂಡ ಬಿಜೆಪಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಅವರ ನೇತೃತ್ವದಲ್ಲಿ ಪಡುಬಿದ್ರಿ ಠಾಣಾ ಪಿಎಸ್ಐ ಪುರುಷೋತ್ತಮ್ ಕಾಪು ಠಾಣಾ ಪಿಎಸ್ಐ ಶ್ರೀಶೈಲ ಮುರಗೋಡ, ಶಿರ್ವ ಠಾಣಾ ಪಿಎಸ್ಐ ರಾಘವೇಂದ್ರ ಹಾಗೂ ಸಿಬಂದಿ ಸ್ಥಳದಲ್ಲಿದ್ದು ಕಾನೂನು ಸುವವ್ಯಸ್ಥೆಯ ನಿಗಾ ವಹಿಸಿದ್ದರು.
ಮಧ್ಯಾಹ್ನದ ವೇಳೆಗೆ ಉದ್ಯಮ ಪರವಾನಿಗೆ ಅಮಾನತು
ಗ್ರಾ. ಪಂ. ಅಧ್ಯಕ್ಷರಿಗೆ ಈ ಕುರಿತಾದ ಸೂಕ್ತ ಕ್ರಮಕ್ಕಾಗಿ ಹಿಂಜಾವೇ ಮನವಿ ಸಲ್ಲಿಸಿದ ಬಳಿಕ ಎಚ್ಚೆತ್ತುಕೊಂಡ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಅವರು ಅಬ್ಟಾಸ್ ಗುಡ್ಡೆ ನಿವಾಸಿ ಇಬ್ರಾಹಿಂ ಎಂಬವರಿಗೆ ಈ ಹಿಂದೆ ದನ ಸಾಕಾಣಿಕೆ ಹಾಗೂ ಮಾರಾಟದ ಕುರಿತಾಗಿ ನೀಡಿರುವ ವ್ಯಾಪಾರದ ಪರವಾನಿಗೆಯನ್ನು ಅಮಾನತಿನಲ್ಲಿರಿಸಿ ಆದೇಶಿಸಿದ್ದಾರೆ. ಗ್ರಾ. ಪಂ. ಗೆ ಈ ಕುರಿತಾಗಿ ಪರವಾನಿಗೆ ನೀಡುವ ಅಧಿಕಾರ ಇಲ್ಲದಿರು ವುದರಿಂದ ಮತ್ತು ಇಬ್ರಾಹಿಂ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿರುವುದರಿಂದ ನೀಡಿರುವ ಉದ್ಯಮ ಲೈಸನ್ಸ್ ಅನ್ನು ಅಮಾನತು ಮಾಡಲಾಗಿದೆ ಎಂದು ಪಿಡಿಒ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.