ವಲಸೆ ತಡೆಗೆ ‘ಕೈ’ಕಮಾಂಡ್ ಸೂಚನೆ; ಆತಂಕ ತಂದ ಕಮಲ ಪಕ್ಷದ ತಂತ್ರ
Team Udayavani, May 14, 2022, 11:42 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ನಿಂದ ವಲಸೆ ಪರ್ವ ಆಗದಂತೆ ನೋಡಿಕೊಳ್ಳಲು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದೆ.
ಬಿಜೆಪಿ ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿರಿಸಿಕೊಂಡಿದ್ದು, ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಹಾಗೂ ಮೈಸೂರು ಭಾಗದವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಪಡೆದಿರುವ ಹೈಕಮಾಂಡ್, ಸ್ವಸಾಮರ್ಥ್ಯ ಹಾಗೂ ಪ್ರಭಾವ ಇರುವವರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳಲು ಸೂಚಿಸಿದೆ.
ಚುನಾವಣೆಗೆ ಇನ್ನೊಂದು ವರ್ಷ ಇರುವಾಗ ನಾಯಕರ ವಲಸೆ ಬೇರೆ ರೀತಿಯ ಪರಿಣಾಮ ಬೀರಬಹುದೆಂಬ ಆತಂಕ ಹೈಕಮಾಂಡ್ ನಾಯಕರದು. ಹೀಗಾಗಿಯೇ, ಪಕ್ಷದ ಆಂತರಿಕ ಸಮಸ್ಯೆಯಿಂದ ಯಾರೂ ಪಕ್ಷ ತ್ಯಜಿಸುವಂತಾಗಬಾರದು. ನಾಯಕರ ನಡುವೆ ವ್ಯತ್ಯಾಸ ಇದ್ದರೆ ಸ್ಥಳೀಯವಾಗಿ ಕರೆದು ಬಗೆಹರಿಸಿ ಎಂದು ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಉಡುಪಿಯ ಪ್ರಮೋದ್ ಮಧ್ವರಾಜ್, ಕೋಲಾರದ ವರ್ತೂರು ಪ್ರಕಾಶ್, ಮೈಸೂರಿನ ಸಂದೇಶ್ ನಾಗರಾಜ್ ಸೇರ್ಪಡೆ ಬೆನ್ನಲ್ಲೇ ಮತ್ತಷ್ಟು ನಾಯಕರಿಗೆ ಬಿಜೆಪಿ ಗಾಳ ಹಾಕಿದೆ. ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ನಲ್ಲೇ ಉಳಿಸಿಕೊಳ್ಳಬಹುದಾಗಿತ್ತು. ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲು ದುಂಬಾಲು ಬಿದ್ದರೂ ಸೇರಿಸಿಕೊಳ್ಳಲಿಲ್ಲ. ಸಂದೇಶ್ ನಾಗರಾಜ್ ಸಹ ಕಾಂಗ್ರೆಸ್ ಸೇರಲು ಒಲವು ಹೊಂದಿದ್ದರು. ಆದರೆ, ನಾಯಕರು ಆಸಕ್ತಿ ತೋರಲಿಲ್ಲ ಎಂದು ಹೇಳಲಾಗಿದೆ.
ಪ್ರಮೋದ್ ಮಧ್ವರಾಜ್ ಅವರು ಕಳೆದ ಮೂರು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತಂದರೂ ಸರಿಪಡಿಸಿಲ್ಲ ಎಂದು ಬಹಿರಂಗವಾಗಿಯೇ ಪತ್ರ ಬರೆದಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಉಡುಪಿ: ಕೊಲ್ಲೂರು, ಶ್ರೀ ಕೃಷ್ಣ ಮಠಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಇತ್ತೀಚಿನ ವಿದ್ಯಮಾನಗಳ ನಂತರ ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಸಹ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕಾಂಗ್ರೆಸ್ಗೆ ಬರಲು ನಾಯಕರು ಉತ್ಸುಕರಾಗಿದ್ದರೆ ಇದೀಗ ಕಾಂಗ್ರೆಸ್ನಿಂದಲೇ ಬಿಜೆಪಿಗೆ ಹೋಗಲು ಒಳಗೊಳಗೆ ತಯಾರಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಕಾರಣ ಏನು ಎಂಬ ಬಗ್ಗೆ ಹೈಕಮಾಂಡ್ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ಹೇಳಲಾಗಿದೆ.
ಅಸಮಾಧಾನ: ಮತ್ತೂಂದೆಡೆ, ಬಣ ರಾಜಕಾರಣದಿಂದ ರಾಜ್ಯ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮಾಡುವಲ್ಲಿಯೂ ಹಿನ್ನಡೆಯಾಗುತ್ತಿದೆ. ಟಾರ್ಗೆಟ್ ಮಾಡಿ ಹೋರಾಟ ಮಾಡುವಂತಾಗಿದೆ. ಒಗ್ಗಟ್ಟಾಗಿ ಹೋರಾಟ ಮಾಡಿ, ಕಾರ್ಯಕ್ರಮ ನಡೆಸಿ ಎಂದರೂ ನಾನೊಂದು ತೀರ, ನೀನೊಂದು ತೀರಾ ಎಂಬಂತಾಗಿದೆ ಎಂಬ ದೂರು ಗಳು ಪದೇಪದೆ ಹೈಕಮಾಂಡ್ ತಲುಪುತ್ತಿವೆ. ಇದು ಸಹ ಕೈ ನಾಯಕರಿಗೆ ತಲೆಬಿಸಿಯಾಗಿದೆ ಎನ್ನಲಾಗಿದೆ
ಹೈಕಮಾಂಡ್ ಅಂಗಳ ತಲುಪಿದ ಟ್ವೀಟ್ವಾರ್: ಎಂ.ಬಿ.ಪಾಟೀಲ್ ಮನೆಗೆ ಸಚಿವ ಅಶ್ವತ್ಥನಾರಾಯಣ ಭೇಟಿ ಹೇಳಿಕೆ ನಂತರದಲ್ಲಿನ ಮಾಜಿ ಸಂಸದೆ ರಮ್ಯಾ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಟ್ವೀಟ್ ವಾರ್ ವಿವಾದ ಸಹ ಹೈಕ ಮಾಂಡ್ ಅಂಗಳ ತಲುಪಿದೆ. ಅಂತಿಮವಾಗಿ ಇದು ಪಕ್ಷಕ್ಕೆ ಡ್ಯಾಮೆಜ್ ಆಗಲಿದೆ ಎಂದು ನಾಯಕರು ಆತಂಕ ವ್ಯಕ್ತಪಡಿಸಿದ್ದು, ಪ್ರಸಕ್ತ ವಿದ್ಯಮಾನ, ರಾಜ್ಯದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಉದಯಪುರದಲ್ಲಿ ನಡೆ ಯುತ್ತಿರುವ ಚಿಂತನ-ಮಂಥನ ಸಭೆಯ ನಡುವೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ನಡುವೆ ಮಾತುಕತೆಗೆ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವೇದಿಕೆ ಸಿದ್ಧಪಡಿಸಿದ್ದಾರೆ. ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಹೋಟೆಲ್ನಲ್ಲಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ನಡುವೆ ರಾಜೀ ಸಂಧಾನ ಮಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ . ಇದಕ್ಕೆ ರಮ್ಯಾ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಗುಡ್ ಜಾಬ್ ಎಂದಿದ್ದಾರೆ.
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್ ವೆಲೋಡ್ರೋಮ್
Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ
Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ
Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು
Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.