ಎರಡೂ ಕೈ ಇಲ್ಲದವನ ಬದುಕಿನಲ್ಲೂ ಬಂಗಾರದ ಬೆಳಕು!


Team Udayavani, Nov 27, 2022, 6:00 AM IST

ಎರಡೂ ಕೈ ಇಲ್ಲದವನ ಬದುಕಿನಲ್ಲೂ ಬಂಗಾರದ ಬೆಳಕು!

ಬೆಂಗಳೂರಿನವರಾದ ವಿಶ್ವಾಸ್‌ ಈಜಿನಲ್ಲಿ ದೇಶವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿದ್ದಾರೆ. ಜತೆಗೆ ಕುಂಗ್‌ ಫ‌ುನಲ್ಲಿ ರೆಡ್‌ ಬೆಲ್ಟ್ ಪಡೆದಿದ್ದಾರೆ. ಡ್ಯಾನ್ಸರ್‌ ಆಗಿ ಹೆಸರು ಮಾಡಿದ್ದಾರೆ. ವ್ಯಕ್ತಿತ್ವ ವಿಕಸನ ಸ್ಪೀಕರ್‌ ಆಗಿ ನೂರಾರು ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ! ಇವರದೇನು ಹೆಚ್ಚುಗಾರಿಕೆ ಎಂದರೆ ವಿಶ್ವಾಸ್‌ಗೆ ಎರಡೂ ಕೈಗಳಿಲ್ಲ!

ಈ ಅಂಕಣದಲ್ಲಿ ಪ್ರಕಟವಾಗುವ ಸಾಧಕರ ಕಥೆಗಳನ್ನು ಓದಿದವರು ಅವನ್ನು ಮೆಚ್ಚಿಕೊಳ್ಳುತ್ತಲೇ- “ನೀವು ದೇಶಾದ್ಯಂತ ಇರುವ ಸಾಧಕರ ಕಥೆಗಳನ್ನೆಲ್ಲ ಬರೀತೀರಿ. ಆದರೆ ಕರ್ನಾಟಕದಲ್ಲೇ ಇರುವ ಸಾಧಕರ ಬಗ್ಗೆ ಜಾಸ್ತಿ ಬರೆಯೋದಿಲ್ವಲ್ಲ… ನಮ್ಮವರ ಬಗ್ಗೆ ಜಾಸ್ತಿ ಬರೆಯಿರಿ’ ಅನ್ನುತ್ತಿದ್ದರು. ನಿಜ ಹೇಳಬೇಕೆಂದರೆ ನಮ್ಮ ನಡುವೆಯೇ ಇರುವ ಸಾಧಕರಲ್ಲಿ ಹೆಚ್ಚಿನವರು ತಮ್ಮ ಕಥೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. “ಈಗ ಸೆಲೆಬ್ರಿಟಿ ಅನ್ನಿಸಿಕೊಂಡಿರುವುದರಿಂದ ಸಮಾಜದಲ್ಲಿ ನಮಗೊಂದು ಐಡೆಂಟಿಟಿ, ಗೌರವ ಸಿಕ್ಕಿದೆ. ಹಳೆಯ ದಿನಗಳ ಕುರಿತು ಹೇಳಿಕೊಂಡರೆ ಜನ ನಮ್ಮನ್ನು ವಿಚಿತ್ರವಾಗಿ ನೋಡಬಹುದು. ಹಾಗಾಗಿ ಅದೇನನ್ನೂ ಬರೆಯಬೇಡಿ. ಗೆಲುವಿನ ಬಗ್ಗೆ ಮಾತ್ರ ಬರೆಯಿರಿ’ ಎಂದು ಷರತ್ತು ಹಾಕುತ್ತಾರೆ. ಕನ್ನಡದ ಸಾಧಕರ ಕಥೆಗಳು ಹೆಚ್ಚಾಗಿ ಪ್ರಕಟವಾಗದಿರಲು ಇದಿಷ್ಟೇ ಮುಖ್ಯ ಕಾರಣ.

ಈ ಸಂಗತಿಯ ಕುರಿತು ಚರ್ಚಿಸುತ್ತಿದ್ದಾಗಲೇ ಯುವಕ ನೊಬ್ಬನ ಸಾಧನೆಯ ಪಟ್ಟಿ ಕಾಣಿಸಿತು. ಅದರಲ್ಲಿದ್ದ ವಿವರಗಳಿವು: ಹೆಸರು: ಕೆ.ಎಸ್‌. ವಿಶ್ವಾಸ್‌, ವಾಸ: ಬೆಂಗಳೂರು, ಸಾಧನೆ: ಈಜಿನಲ್ಲಿ ದೇಶವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿದ್ದಾರೆ. ಜತೆಗೆ ಕುಂಗ್‌ ಫ‌ುನಲ್ಲಿ ರೆಡ್‌ ಬೆಲ್ಟ್ ಪಡೆದಿದ್ದಾರೆ. ಡ್ಯಾನ್ಸರ್‌ ಆಗಿ ಹೆಸರು ಮಾಡಿದ್ದಾರೆ. ವ್ಯಕ್ತಿತ್ವ ವಿಕಸನ ಸ್ಪೀಕರ್‌ ಆಗಿ ನೂರಾರು ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ!

-ಇಷ್ಟೂ ವಿವರ ಓದಿದವರು-ಅರೆ, ಇದರಲ್ಲಿ ವಿಶೇಷ ಏನಿದೆ? ಈಜಿನಲ್ಲಿ ದೇಶವನ್ನು ಪ್ರತಿನಿಧಿಸಿದ, ಕುಂಗ್‌ ಫ‌ು ನಲ್ಲಿ ರೆಡ್‌ ಬೆಲ್ಟ್ ಪಡೆದ, ಬೆಲ್ಟ್ ಡ್ಯಾನ್ಸರ್‌ ಅನ್ನಿಸಿಕೊಂಡ ಸಾವಿರಾರು ಜನ ನಮ್ಮ ನಡುವೆ ಇದ್ದಾರಲ್ಲ; ಇವರದೇನು ಹೆಚ್ಚುಗಾರಿಕೆ? ಎಂದು ಖಂಡಿತ ಪ್ರಶ್ನೆ ಹಾಕುತ್ತಾರೆ. ಸ್ವಾರಸ್ಯ ಇರುವುದೇ ಇಲ್ಲಿ. ಏನೆಂದರೆ ವಿಶ್ವಾಸ್‌ಗೆ ಎರಡೂ ಕೈಗಳಿಲ್ಲ! ಹಾಗಿದ್ದರೂ ಆತ ಜಗತ್ತು ಬೆರಗಾಗುವಂತೆ ಡ್ಯಾನ್ಸ್ ಮಾಡುತ್ತಾನೆ. ಮೀನಿಗಿಂತ ವೇಗವಾಗಿ ಈಜುತ್ತಾನೆ. ಎದುರಿಗಿದ್ದವರು ತಲ್ಲಣಿಸುವಂತೆ ಕುಂಗ್‌ ಫ‌ು ಪಟ್ಟುಗಳನ್ನು ತೋರಿಸುತ್ತಾನೆ. ಕಾಲಿನ ಬೆರಳಿಗೆ ಪೆನ್‌ ಸಿಕ್ಕಿಸಿಕೊಂಡು ಆಟೋಗ್ರಾಫ್ ಹಾಕುತ್ತಾನೆ, ವೇಗವಾಗಿ ಬರೆಯುತ್ತಾನೆ!

ಅಂದ ಹಾಗೆ ಈತ ಅಪ್ಪಟ ಕನ್ನಡಿಗ. ಕೋಲಾರದ ಹುಡುಗ! ಎರಡೂ ಕೈಗಳಿಲ್ಲ ಎಂದು ತಿಳಿದ ಅನಂತರವೂ ಸಾಧಕನಾಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವಾಗಿ, ತಮ್ಮ ಬದುಕಿನ ಕಥೆ ಹೇಳಿಕೊಂಡರು ವಿಶ್ವಾಸ್‌. ಅದನ್ನು ಅವರ ಮಾತುಗಳಲ್ಲೇ ಹೇಳುವುದಾದರೆ-“ನಮ್ಮದು ಕೋಲಾರ. ನಮ್ಮ ತಂದೆ ಸತ್ಯನಾರಾಯಣ ಮೂರ್ತಿ, ಕೃಷಿ ಇಲಾಖೆಯಲ್ಲಿ ಕ್ಲರ್ಕ್‌ ಆಗಿದ್ದರು. ನಾನು ಜನ್ಮತಃ ಅಂಗವಿಕಲನಲ್ಲ. 10ನೇ ವಯಸ್ಸಿನವರೆಗೂ ನಾನು ಉಳಿದವರೆಲ್ಲರಂತೆಯೇ ಇದ್ದೆ . 7ನೇ ತರಗತಿಯಲ್ಲಿದ್ದಾಗ ಒಂದು ದುರ್ಘ‌ಟನೆ ನಡೆಯಿತು. ಅಪ್ಪ ಹೊಸ ಮನೆ ಕಟ್ಟಿಸುತ್ತಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆಗಳಿಗೆ ನೀರು ಹಾಕಲು ಹೋದ ನಾನು ಆಯತಪ್ಪಿ ಎಲೆಕ್ಟ್ರಿಕ್‌ ವಯರ್‌ಗಳ ಮೇಲೆ ಬಿದ್ದು ಬಿಟ್ಟೆ. ಶಾಕ್‌ನ ತೀವ್ರತೆಗೆ ದೇಹದ ಅರ್ಧ ಭಾಗ ಸುಟ್ಟು ಹೋಯಿತು. ಎರಡು ತಿಂಗಳು ಕೋಮಾದಲ್ಲಿದ್ದೆ . ಪ್ರಜ್ಞೆ ಬರುವವರೆಗೂ ಬೆಂಗಳೂರಿನ ಸೆಂಟ್‌ ಜಾ®Õ…ನಲ್ಲಿ, ಅನಂತರ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿಯೇ ಶಾಕ್‌ನಿಂದ ಅಸ್ತಿತ್ವ ಕಳೆದುಕೊಂಡಂತೆ ಆಗಿದ್ದ ನನ್ನ ಎರಡೂ ಕೈಗಳನ್ನು ಭುಜದ ವರೆಗೂ ಕತ್ತರಿಸಿ ಹಾಕಿದ್ದರು! ನನ್ನನ್ನು ನೋಡಲೆಂದು ಆಸ್ಪತ್ರೆಗೆ ಬಂದ ಗೆಳೆಯರ ಪೈಕಿ ಒಬ್ಬ ಹೇಳಿದ: “ನಿನ್ನನ್ನು ಉಳಿಸಲು ಹೋಗಿ ನಿಮ್ಮ ಅಪ್ಪ ಸತ್ತೋದ್ರಂತೆ ಕಣೋ…’

ಆ ಮಾತು ಕೇಳುತ್ತಿದ್ದಂತೆಯೇ ತತ್ತರಿಸಿ ಹೋದೆ. ಆಸ್ಪತ್ರೆಯಲ್ಲಿ ಕುಟುಂಬದ ಜನರೆಲ್ಲ ಇದ್ದರೂ ಅಪ್ಪ ಇಲ್ಲದಿರುವು
ದನ್ನು ಗಮನಿಸಿದ್ದೆ “ಅಪ್ಪ ಎಲ್ಲಿ ಹೋದರು? ಆಸ್ಪತ್ರೆಗೆ ಅಪ್ಪ ಬರೋದೇ ಇಲ್ವಾ? ಎಂದೆಲ್ಲ ಕೇಳಿದ್ದೆ . ಆಗ ಕುಟುಂಬದ ಜನರೆಲ್ಲ-“ಅಪ್ಪ ಕಾಶಿಗೆ ಹೋಗಿದ್ದಾರೆ. ಹರಕೆ ಕಟ್ಟಿಕೊಂಡಿದ್ರು, ಹಾಗಾಗಿ ದೇವರ ಹತ್ರ ಹೋಗಿದ್ದಾರೆ…’ ಎಂದು ತೇಲಿಸಿ ಮಾತಾಡಿದ್ದರು. ಆ ಮೂಲಕ ಅಪ್ಪ ಸತ್ತು ಹೋಗಿರುವ ವಿಷಯ ವನ್ನು ನನ್ನಿಂದ ಮುಚ್ಚಿಟ್ಟಿದ್ದರು!
ಅಪ್ಪನನ್ನು ಕಳೆದುಕೊಂಡು ನಮ್ಮ ಕುಟುಂಬ ಬಡವಾಯಿತು. ಇಂಥ ಸಂದರ್ಭದಲ್ಲಿ ನಮ್ಮ ಅಜ್ಜಿ ಮತ್ತು ಬಂಧುಗಳು ನೆರವಿಗೆ ನಿಂತರು. ನಮ್ಮ ಕುಟುಂಬ ಕೋಲಾರದಿಂದ ಬೆಂಗಳೂರಿಗೆ ಬಂತು. ನನ್ನನ್ನು ಕೊಲಂಬಿ ಯಾ ಇಂಟರ್‌ ನ್ಯಾಶನಲ್‌ ಸ್ಕೂಲ್‌ಗೆ ಸೇರಿಸಿದರು. ಆರೆಂಟು ತಿಂಗಳ ಹಿಂದೆ ಕೈಬೀಸಿಕೊಂಡು ಹೋಗು ತ್ತಿದ್ದವನು ಈಗ ಕೈಗಳಿಲ್ಲದೆ ಬದುಕ ಬೇಕಿತ್ತು. ಕಾಲಲ್ಲಿ ಬರೆಯಲು ಕಲಿಯಬೇಕಾಯಿತು. ಊಟ ಮಾಡುವಾಗ, ಶೌಚಾಲಯಕ್ಕೆ ಹೋದಾಗ ಬಹಳ ಹಿಂಸೆಯಾಗುತ್ತಿತ್ತು. ಅದರ ಜತೆಗೆ ಎದುರು ಸಿಕ್ಕವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು.
ಈ ಮಧ್ಯೆ ಅನಾರೋಗ್ಯದ ಕಾರಣಕ್ಕೆ ಅಮ್ಮ ಕೂಡ ಹೋಗಿಬಿಟ್ಟರು. ಪರಿಣಾಮ; ಮತ್ತೆ ಮತ್ತೆ ಡಿಪ್ರಶನ್‌ಗೆ ಹೋಗಿಬಿಡ್ತಾ ಇದ್ದೆ . ಇಂಥ ಹಲವು ಕಷ್ಟಗಳ ಮಧ್ಯೆಯೇ 2013ರಲ್ಲಿ ಬಿ.ಕಾಂ. ಮುಗಿಸಿದೆ. (ಪರೀಕ್ಷೆಯಲ್ಲಿ ಉತ್ತರ ಬರೆಯಲು ಗೆಳೆಯರ ಸಹಾಯ ಪಡೆದೆ) ಅನಂತರ ಕೆಲಸದ ಹುಡುಕಾಟಕ್ಕೆ ನಿಂತೆ. “ಅಯ್ಯೋ, ನಿನಗೇನು ಬಿಡಪ್ಪಾ, ಅಂಗ ವಿಕಲರ ಕೋಟಾದಲ್ಲಿ ಸರಕಾರಿ ಕೆಲಸವೇ ಸಿಕ್ಕಿಬಿಡುತ್ತೆ ಎಂದೆಲ್ಲ ಜನ ಹೇಳುತ್ತಿದ್ದರು. ಆದರೆ ಆ ಥರದ ಯಾವ ಮ್ಯಾಜಿಕ್ಕೂ ನಡೆಯಲಿಲ್ಲ.

ಪ್ರೈವೇಟ್‌ ಕಂಪೆನಿಗಳಲ್ಲಿ ಸಂದರ್ಶ ನಕ್ಕೆ ಹೋದರೆ- ನನ್ನ ದೇಹಾಕೃತಿ ನೋಡಿ, ನನ್ನ ಕಥೆಯನ್ನೆಲ್ಲ ಕೇಳಿ, ಅಯ್ಯೋ ಪಾಪ ಎಂದು ಲೊಚಗುಟ್ಟಿ, ಸಾರಿ ಕಣಪ್ಪಾ. ನಿನಗೆ ಕೆಲಸ ಕೊಡಲು ಆಗಲ್ಲ, ಅಂದು ಬಿಡುತ್ತಿದ್ದರು. ನಾನು ಹಲವರ ಬಳಿ-“ಸಾರ್‌, ಒಂದು ಕೆಲಸ ಕೊಡಿ, ನನಗೊಂದು ಅವಕಾಶ ಕೊಡಿ ಸಾರ್‌’ ಎಂದು ಬೇಡುತ್ತಿದ್ದೆ . ಅವರು, ಕೈಗಳಿಲ್ಲದವನು ಹೇಗೆ ಕೆಲಸ ಮಾಡ್ತಾನೆ ಎಂದಷ್ಟೇ ಯೋಚಿಸಿ ನಿರಾಕರಿಸುತ್ತಿದ್ದರು.

ನಿರಂತರ ಸೋಲುಗಳ ಪರ್ವ ಅದು. ಆ ದಿನಗಳಲ್ಲಿ ನನ್ನ ಮನಸ್ಸು ಹೇಗೆಲ್ಲ ಯೋಚಿಸುತ್ತಿತ್ತು ಅಂದರೆ ವಿಶ್ವಾಸ್‌ ಎಂದು ಅಪ್ಪ ಹೆಸರಿಟ್ಟಿದ್ದಾರೆ. ಆದರೆ ನನಗೆ ಬದುಕಿನ ಬಗ್ಗೆ ವಿಶ್ವಾಸವೇ ಇಲ್ಲವಲ್ಲ ಅನ್ನಿಸುತ್ತಿತ್ತು. ನನ್ನ ಬದುಕು ಹೀಗಾಗಿ ಹೋಯ್ತಲ್ಲ ಅನ್ನಿಸಿ ದುಃಖವಾಗೋದು. ಮನೆಯಲ್ಲಿರೋಕೆ ಬೋರ್‌ ಅನ್ನಿಸಿ ದಾಗ ಶಾಲು ಹೊದ್ದುಕೊಂಡು ಹೊರಗೆ ಹೋಗುತ್ತಿದ್ದೆ. ನೋಡಿದ ವರು ಪಾಪ, ಇವನಿಗೆ ಹುಷಾರಿಲ್ಲವೇನೋ ಅಂದುಕೊಂಡು, ಮಾತಾಡಿಸದೆ ಸುಮ್ಮನಿರಲಿ ಅಂತಾನೇ ಶಾಲು ಹೊದ್ದಿರುತ್ತಿದ್ದೆ !

ಹೀಗಿರುವಾಗಲೇ ಆಕಸ್ಮಿಕವಾಗಿ ಎಸ್‌.ಆರ್‌. ಸಿಂಧಿಯಾ ಎಂಬ ಹೃದಯವಂತರ ಪರಿಚಯವಾಯಿತು. ಪ್ಯಾರಾ ಸ್ವಿಮ್ಮಿಂಗ್‌ ಅಸೋಸಿಯೇಶನ್‌ನ ಸೆಕ್ರೆಟರಿ ಆಗಿದ್ದ ಅವರು, ನನ್ನನ್ನು ನೋಡಿದವರೇ- “ನೀನು ಸ್ವಿಮ್ಮಿಂಗ್‌ ಕಲಿ’ ಅಂದರು. ಅವರ ಸಲಹೆಯ ಮೇರೆಗೆ ಮೊದಲು ಕಂಠೀರವ ಸ್ಟೇಡಿಯಂನ ಈಜುಕೊಳದಲ್ಲಿ ಅನಂತರ ನಾಗರಭಾವಿಯ ಕೆಎಲ್‌ಇ ಈಜುಕೊಳದಲ್ಲಿ ನೀರಿಗಿಳಿದೆ. 4 ಬಗೆಯ ಸ್ಟ್ರೋಕ್‌ ಕಲಿಯಲು ಒಂದೂವರೆ ವರ್ಷ ಬೇಕಾಯಿತು. ಕೈಗಳಿಲ್ಲದೆಯೂ ಈಜುವವರು ನೂರಾರು ಜನ ಇದ್ದಾರೆ. ಅಂಥವರಿಗಾಗಿ ಪ್ಯಾರಾ ಸ್ವಿಮ್ಮಿಂಗ್‌ ಸ್ಪರ್ಧೆಗಳೂ ನಡೆಯುತ್ತವೆ ಎಂಬ ಸಂಗತಿಯೂ ಆಗಲೇ ಗೊತ್ತಾಯಿತು. ನನಗಿಂತ ನೊಂದವರು, ನನಗಿಂತ ಬಲಹೀನರು ತುಂಬಾ ಜನ ಇದ್ದಾರೆ ಅನ್ನಿಸಿದಾಗ, ಪದೇಪದೆ ನಾನು ಡಿಪ್ರಶನ್‌ಗೆ ಹೋಗುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಶ್ರದ್ಧೆಯಿಂದ ಈಜು ಕಲಿತೆ. ಮುಂದೆ, ವಿಜಯನಗರದ ಅಕ್ವಾಟೆಕ್‌ ಸ್ವಿಮ್ಮಿಂಗ್‌ ಸೆಂಟರ್‌ನವರು ಉಚಿತವಾಗಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟರು. 2014ರಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಪದಕಗಳಿಗೆ ಕೊರಳೊಡ್ಡಿದೆ. 2016ರಲ್ಲಿ ಕೆನಡಾ ದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಅಲ್ಲಿಯೂ ಮೂರು ಪದಕ ಗೆದ್ದೆ!

ಅನಂತರದಲ್ಲಿ ಒಂದೊಂದೇ ಸಂಭ್ರಮಗಳು ಜತೆಯಾಗುತ್ತಾ ಹೋದವು. ಡ್ಯಾನ್ಸ್ ಕಲಿಯಬೇಕು ಅನ್ನಿಸಿತು. ಆನಂದ್‌ ಮತ್ತು ಭೂಷಣ್‌ ಎಂಬ ಗುರುಗಳು ಸಿಕ್ಕರು. ಕನ್ನಡಿಯ ಎದುರು ನಿಂತು ಕುಣಿಯಲು ಕಲಿತೆ. ಕನ್ನಡ, ತೆಲುಗಿನ ರಿಯಾಲಿಟಿ ಶೋಗಳಲ್ಲಿ ನನ್ನ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಅನಂತರದ ದಿನಗಳಲ್ಲಿ ಡ್ಯಾನ್ಸ್ ಪ್ರೋಗ್ರಾಮ್‌ ನೀಡುವಂತೆ ಆಫ‌ರ್‌ಗಳೂ ಬಂದವು. ನನ್ನದೇ ಸಂಪಾದನೆಯ ಹಣವನ್ನು ನಾನು ನೋಡಿದ್ದೇ ಡ್ಯಾನ್ಸ್ ಕಾರ್ಯಕ್ರಮದ ಮೂಲಕ. ಈ ಮಧ್ಯೆ ಕುಂಗ್‌ ಫ‌ು ಅಭ್ಯಾಸ ಮಾಡಿದರೆ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳಬಹುದು ಅನ್ನಿಸಿ ಅದಕ್ಕೂ ಸೇರಿಕೊಂಡೆ. ಶ್ರದ್ಧೆಯಿಂದ ಕಲಿತು ರೆಡ್‌ ಬೆಲ್ಟ್ ಪಡೆದೆ. ಅನಂತರದ ದಿನಗಳಲ್ಲಿ ಈಜಿನಿಂದ ಪದಕಗಳು-ಖ್ಯಾತಿ, ಡ್ಯಾನ್ಸ್ ನಿಂದ ಹಣ-ಹೆಸರು, ಕುಂಗ್‌ ಫ‌ು ಕಸರತ್ತಿನಿಂದ ಆರೋಗ್ಯ ಜತೆ ಯಾಯಿತು. ಈ ಮಧ್ಯೆ ನನ್ನದೇ ಬದುಕಿನ ಕಥೆ ಹೇಳುತ್ತಾ ಮೋಟಿ ವೇಶನಲ್‌ ಸ್ಪೀಕರ್‌ ಆಗಿಬಿಟ್ಟೆ! ಶಾಲೆ-ಕಾಲೇಜುಗಳಿಂದ ಭಾಷಣಕ್ಕೆ ಆಹ್ವಾನ ಬರತೊಡಗಿತು. ಒಂದು ಕಾಲದಲ್ಲಿ ಕೆಲಸವಿಲ್ಲದೇ ಮನೆಯೊಳಗೇ ಇರುತ್ತಿದ್ದವನು, ಬದಲಾದ ಪರಿಸ್ಥಿತಿಯಲ್ಲಿ, ಅರ್ಧ ಗಂಟೆ ಬಿಡುವು ಸಿಕ್ಕಿದ್ರೆ ಸಾಕಪ್ಪ ಅನ್ನುವ ಸ್ಟೇಜ್‌ ತಲುಪಿಕೊಂಡಿದ್ದೆ. ನನಗೇ ಗೊತ್ತಿಲ್ಲದೇ ಸೆಲೆಬ್ರಿಟಿ ಆಗಿಬಿಟ್ಟಿದ್ದೆ!

2020ರಲ್ಲಿ ಕಾವೇರಿ ವಿದ್ಯಾಕ್ಷೇತ್ರಂ ಎಂಬ ಶಾಲೆಗೆ ಭಾಷಣ ಮಾಡಲು ಹೋದಾಗ ಅಲ್ಲಿ ಲಕ್ಷ್ಮೀ ಅನ್ನುವವರ ಪರಿಚಯವಾ ಯಿತು. ಮುಂದೆ ಅದು ಗೆಳೆತನವಾಗಿ, ಪ್ರೇಮವಾಗಿ, ಮದುವೆಯಲ್ಲಿ ಕೊನೆಗೊಂಡಿತು. ನಮಗೀಗ ಮುದ್ದಿನ ಮಗಳಿದ್ದಾಳೆ. ಅವಳು ಮುಂದೆ ಕ್ರೀಡಾಪಟುವಾಗಿ ಹೆಚ್ಚು ಗೌರವಕ್ಕೆ ಪಾತ್ರಳಾಗಲಿ ಎಂಬ ಉದ್ದೇಶದಿಂದಲೇ ಆಕೆಗೆ “ಪ್ರಶಸ್ತಿ’ ಎಂದು ಹೆಸರಿಟ್ಟಿದ್ದೇನೆ. ಚೇತನ್‌-ಅನಿತಾ ಎಂಬ ನಿರ್ಮಾಪಕರು ಹಾಗೂ ರಾಜ್‌ಕುಮಾರ್‌ ಎಂಬ ನಿರ್ದೇಶಕರು, ನನ್ನ ಬದುಕಿನ ಕಥೆಯನ್ನೇ ಇಟ್ಟುಕೊಂಡು ಅರಬ್ಬೀ ಎಂಬ ಸಿನೆಮಾ ನಿರ್ಮಿಸಿದ್ದಾರೆ! ಹೀರೋ ಪಾತ್ರವನ್ನು ನನ್ನಿಂದಲೇ ಮಾಡಿಸಿದ್ದಾರೆ! ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ನನ್ನ ಕೋಚ್‌ ಆಗಿ ನಟಿಸಿರುವುದು ಮತ್ತೊಂದು ವಿಶೇಷ. ಇಷ್ಟು ಮಾತ್ರವಲ್ಲದೆ, ನನ್ನ ಹೋರಾಟದ ಬದುಕಿನ ಕಥೆಯನ್ನು ಹೊಂದಿರುವ GRIT ಎಂಬ ಇಂಗ್ಲಿಷ್‌ ಕೃತಿಯೂ ಹೊರಬಂದಿದೆ.

ಒಮ್ಮೆ ಹಿಂದಿರುಗಿ ನೋಡಿದರೆ ನಡೆದಿರುವುದೆಲ್ಲ ಕನಸೋ ನಿಜವೋ ಅನ್ನಿಸುತ್ತದೆ. ಒಂದು ಕಾಲದಲ್ಲಿ, “ನನಗೆ ಇಷ್ಟೆಲ್ಲ ಅನ್ಯಾಯ ಮಾಡ್ತಿದ್ದೀಯಲ್ಲ ದೇವ್ರೇ, ನಿನಗೆ ಈಗ ಸಮಾಧಾನ ಆಯ್ತಾ?’ ಎಂದು ರೊಚ್ಚಿನಿಂದ ಕೇಳ್ತಿದ್ದವ ನಾನು. ಇವತ್ತು “ದೇವರೇ, ನಿನ್ನ ಕರುಣೆ ಅಪಾರ’ ಅನ್ನುತ್ತೇನೆ.

ಪ್ರತೀ ಕ್ಷಣವೂ ಜತೆಗಿದ್ದು ಪ್ರೋತ್ಸಾಹಿಸಿದ ನನ್ನ ಗೆಳೆಯರ ಬಳಗವನ್ನು, ಈಜು ಕಲಿಯಲು ಸಲಹೆ ಕೊಟ್ಟ ಸಿಂಧಿಯಾ, ಈಜಿನ ಸ್ಪರ್ಧೆಗೆಂದು ವಿದೇಶಕ್ಕೆ ಹೋಗಲು ಹಣಕಾಸಿನ ನೆರವು ನೀಡಿದ ಸುನಿಲ್‌ ಜೈನ್‌, ಉಚಿತವಾಗಿ ಈಜು ಅಭ್ಯಾಸ ಮಾಡಲು ಅವಕಾಶ ಕೊಟ್ಟ ಅಕ್ವಾಟೆಕ್‌ ಸ್ವಿಮ್ಮಿಂಗ್‌ ಸೆಂಟರ್‌, ಜತೆಗೆ ನಿಂತ ಇಡೀ ಕುಟುಂಬ- ಈ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎನ್ನುವಲ್ಲಿಗೆ ವಿಶ್ವಾಸ್‌ ಅವರ ಯಶೋಗಾಥೆ ಮುಗಿಯುತ್ತದೆ. ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಈವರೆಗೆ ಬೆಳ್ಳಿ, ಕಂಚಿನ ಪದಕ ಗೆದ್ದಿದ್ದೇನೆ. ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಮಹದಾಸೆ ಅನ್ನುವ ವಿಶ್ವಾಸ್‌ಗೆ ಬೆಸ್ಟ್  ಆಫ್ ಲಕ್‌ ಹೇಳಲು- vishwasks 303gmail.com

 

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Hubli; CM-DCM issue not to be debated on sidewalks: RB Thimmapura

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ

INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Hubli; CM-DCM issue not to be debated on sidewalks: RB Thimmapura

Hubli; ಸಿಎಂ-ಡಿಸಿಎಂ ವಿಚಾರ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ: ಆರ್.ಬಿ ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.