![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 10, 2023, 4:52 PM IST
ಹುಬ್ಬಳ್ಳಿ: ಸ್ಯಾಂಟ್ರೋ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವನಿಗೆ 20 ವರ್ಷದ ಇತಿಹಾಸವಿದೆ. ಈ ಹಿಂದೆ ಆತನೊಂದಿಗೆ ಹಲವರು ಸಂಪರ್ಕದಲ್ಲಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ವಿಚಾರದಲ್ಲಿ ಹೆಚ್ಚು ಮಹತ್ವ ಕೊಡುವುದು ಬೇಡ. ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದರು.
ಸ್ಯಾಂಟ್ರೋ ರವಿ ನಡೆದ ಎಲ್ಲ ಅವ್ಯವಾರ ಅವರ ಹಿಂದಿನ ಸರಕಾರಗಳ ಕಾಲದಲ್ಲಿಯೇ ಆಗಿದ್ದರಿಂದ ಇದರಲ್ಲಿ ಯಾರ ಯಾರ ಪಾತ್ರ ಎಷ್ಟೋ ಇದೆ. ಇನ್ನು ಕಾಂಗ್ರೆಸ್ ಪೇ ಸಿಎಂ, ಸ್ಯಾಂಟ್ರೋ ರವಿ ಅಭಿಯಾನವನ್ನು ಜನ ನೋಡುತ್ತಿದ್ದಾರೆ. ಅವರ ಕಾಲದಲ್ಲಿ ಸ್ಯಾಂಟ್ರೋ ಪ್ರಕರಣಗಳು ನಡೆದಿವೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದರು
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದು ಅವರ ವೈಯಕ್ತಿಕ ವಿಚಾರ. ಚುನಾವಣೆ ಸಂದರ್ಭದಲ್ಲಿ ಎಲ್ಲ ನಾಯಕರು ನಿರ್ಣಯ ಕೈಗೊಳ್ಳುತ್ತಾರೆ. ಅದು ಅವರು ಮತ್ತು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕೋಲಾರ ಜನತೆ ನಿರ್ಧಾರ ಮಾಡುತ್ತಾರೆ ಎಂದರು.
ಪರಿಸರ ಇಲಾಖೆ ಮಾಹಿತಿ ಕೇಳಿದೆ: ಮಹಾದಾಯಿ ಯೋಜನೆ ಜಾರಿಯಲ್ಲಿ ಕೇಂದ್ರ ಪರಿಸರ ಇಲಾಖೆ ಸ್ಪಷ್ಟನೆ ಕೇಳಿದ್ದು ಅದನ್ನು ಕೊಡುತ್ತೇವೆ. ಇದರಲ್ಲಿ ಅಂತಹ ಆತಂಕ ಪಡುವ ವಿಚಾರವಿಲ್ಲ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಯಲ್ಲಿ ಈ ರೀತಿ ಕೇಳಿತ್ತು. ಇಲ್ಲಿಯೂ ಅದೇ ರೀತಿ ಕೇಳಿದೆಯಷ್ಟೇ. ಈ ಕುರಿತು ಕೇಂದ್ರ ಪರಿಸರ ಇಲಾಖೆ ಕೇಳಿದ ಮಾಹಿತಿ ಕೊಡುತ್ತೇವೆ ಎಂದರು.
ಇದನ್ನೂ ಓದಿ:ಮುಂಡಗೋಡ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಮತ್ತು ಸಿಬ್ಬಂದಿ ಕೊರತೆ
ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ : ಪಂಚಮಸಾಲಿ ಸಮಾಜ ಮೀಸಲಾತಿ ಬೇಡ ಎಂದು ತಕಾರರು ತೆಗೆದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಈ ಸಮುದಾಯಗಳಿಗೆ ಮೀಸಲಾತಿ ನೀಡಲು ಮೊದಲ ಹೆಜ್ಜೆ ಇಡಲಾಗಿದೆ. ಸಂವಿಧಾನ ಬದ್ಧವಾಗಿ ಮೀಸಲಾತಿ ಕೊಡುವ ಕುರಿತು ಸಹ ಚಿಂತನೆ ನಡೆದಿದೆ ಎಂದರು.
ಮಾನವ ಸಂಪನ್ಮೂಲವೇ ಅಸ್ತ್ರ: ಮಾನವ ಸಂಪನ್ಮೂಲವೇ ಬಹು ದೊಡ್ಡ ಕೊಡುಗೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಯುವ ಜನೋತ್ಸವವನ್ನು ಮಾದರಿ ಕಾರ್ಯಕ್ರಮ ಆಗಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಜ. 12ರಿಂದ 16ರ ವರೆಗೆ ನಡೆಯುವ ರಾಷ್ಟ್ರೀಯ ಯುವ ಜನಮಹೋತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಇದಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ ಎಂದರು.
ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತ ಮತ್ತು ಮಾದರಿ ಕಾರ್ಯಕ್ರಮ ಆಗಬೇಕು. ಕಲೆ, ಸಾಹಿತ್ಯ ಸಂಗೀತ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಯುವಕರಿಗೆ ಸ್ಫೂರ್ತಿ ಆಗಬೇಕು ಮತ್ತು ಅವರ ಕಾರ್ಯಕ್ರಮ ಇನ್ನು ಏನೇನು ಮಾಡಬೇಕು ಎಂಬ ಕುರಿತು ನಿಗದಿ ಮಾಡಲಾಗುವುದು ಎಂದರು
You seem to have an Ad Blocker on.
To continue reading, please turn it off or whitelist Udayavani.