ಗದಗ: ವಿಶ್ವಮಾನವತೆಯ ಶ್ರೇಷ್ಠ ಸಂತ ಡಾ|ಸಿದ್ಧಲಿಂಗ ಶ್ರೀ
ಶುದ್ಧ ಗಾಳಿ ನೀಡುವ ಕಪ್ಪತಗುಡ್ಡದ ಉಳಿವಿಗೆ ಶ್ರೀಗಳು ಅವಿರತ ಹೋರಾಟ ಮಾಡಿದ್ದರು
Team Udayavani, Feb 22, 2023, 6:36 PM IST
ಗದಗ: ಸಮಾಜದಲ್ಲಿ ಅಶಾಂತಿಯನ್ನೆಬ್ಬಿಸುವ, ಜನರಲ್ಲಿ ವೈಮನಸ್ಸು ಮೂಡಿಸುವ ಭಿನ್ನತೆಯ ಗೋಡೆಗಳನ್ನು ಕೆಡವಿ ಹಾಕಿದ ಲಿಂಗೈಕ್ಯ ಡಾ| ತೋಂಟದ ಸಿದ್ಧಲಿಂಗ ಶ್ರೀಗಳು ವಿಶ್ವಮಾನವ ತತ್ವ ಸಾರಿದ ಶ್ರೇಷ್ಠ ಸಂತರಾಗಿದ್ದರು ಎಂದು ಖ್ಯಾತ ವಿಮರ್ಶಕಿ ಎಂ.ಎಸ್. ಆಶಾದೇವಿ
ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 74ನೇ ಜಯಂತಿ ಅಂಗವಾಗಿ ಮಂಗಳವಾರ ಜರುಗಿದ
ಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ತೋಂಟದ ಶ್ರೀಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಲಿಂ|ಡಾ| ತೋಂಟದ ಸಿದ್ಧಲಿಂಗ ಶ್ರೀಗಳನ್ನು ನಾನು ಒಂದೇ ಬಾರಿ ಭೇಟಿಯಾಗಿದ್ದರೂ ಅವರ ಸರಳ ವ್ಯಕ್ತಿತ್ವದಿಂದ ಪ್ರಭಾವಕ್ಕೆ ಒಳಗಾಗಿದ್ದೆ. ನೇರ ಮಾತುಗಳಿಗೆ ಅವರು ಹೆಸರಾಗಿದ್ದರೂ, ಅವರ ವ್ಯಕ್ತಿತ್ವದ ಮೂಲ ಧಾತು ತಾಯ್ತನವಾಗಿತ್ತು. ಧರ್ಮಗಳ ಆಧಾರದಲ್ಲಿ ಅಲ್ಲ, ಭಾರತೀಯತೆಯ ಆಧಾರದಲ್ಲಿ ಒಗ್ಗೂಡಬೇಕೆಂದು ಕರೆ ನೀಡಿದ್ದ ಅವರು, ಸಹಿಷ್ಣುತೆ-ಸಮಾನತೆ ತತ್ವಗಳ ಪ್ರಬ ಪ್ರತಿಪಾದಕರಾಗಿದ್ದರು. ಅವರ ಜೀವನವೇ ಅವರ ಸಂದೇಶವಾಗಿದ್ದು, ತಮ್ಮ ಕಾಲದ ಅಗತ್ಯತೆಗಳನ್ನು-ಬಿ ಕ್ಕಟ್ಟುಗಳನ್ನು ಅರ್ಥ ಮಾಡಿಕೊಂಡು ಸುಧಾರಣೆಗೆ ಶ್ರಮಿಸಿದ್ದ ಅಪರೂಪದ ಸ್ವಾಮೀಜಿಗಳಾಗಿದ್ದರು ಎಂದು ಸ್ಮರಿಸಿದರು.
ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ಸರ್ವಧರ್ಮ ಸಮನ್ವಯತೆಯ ಸೂತ್ರ ಅಳವಡಿಸಿಕೊಂಡಿದ್ದ ತೋಂಟದ ಶ್ರೀಗಳು ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳಬಲ್ಲ ಸೂಕ್ಷ್ಮ ಮತಿಗಳಾಗಿದ್ದರು. ಪುಸ್ತಕದಿಂದ ಆತ್ಮಾನಂದವಾಗುತ್ತದೆ ಎನ್ನುತ್ತಿದ್ದ ಅವರು, ಹಾರ-ತುರಾಯಿಗಳ ಜೊತೆಗೆ ಗ್ರಂಥ ನೀಡುವ ಪರಂಪರೆಗೆ ನಾಂದಿ ಹಾಡಿದರು. ಸದ್ಯ ಬಿಡುಗಡೆಗೊಂಡಿರುವ ಪುಸ್ತಕಗಳು ಪುಷ್ಪಗಳಾಗಿದ್ದು, ಅದರ ಸುಗಂಧವನ್ನು ಪಸರಿಸುವ ಹೊಣೆ ಓದುಗರದ್ದಾಗಿದೆ ಎಂದರು.
ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯ, ನಿಷ್ಠುರಿ ದಾಕ್ಷಿಣ್ಯಪರನಲ್ಲ ಎಂಬ ವಚನಕ್ಕೆ ವ್ಯಾಖ್ಯಾನರಂತಿದ್ದ ಸಿದ್ಧಲಿಂಗ ಶ್ರೀಗಳು ತಪ್ಪನ್ನು ತಪ್ಪೆಂದು ಖಂಡಿಸುವ ಎದೆಗಾರಿಕೆ ಉಳ್ಳವರಾಗಿದ್ದರು. 12ನೇ ಶತಮಾನದ ಮೋಳಿಗೆ ಮಾರಯ್ಯ, ಅಂಬಿಗರ ಚೌಡಯ್ಯನವರಂತೆ ದಿಟ್ಟ ವ್ಯಕ್ತಿತ್ವ ಹೊಂದಿದ್ದ ಶ್ರೀಗಳು, ನಾಡಿನ ಭಾವೈಕ್ಯತೆಯ ಬೇರಿಗೆ ವಿಶ್ವಾಸದ ನೀರೆರೆದವರಾಗಿದ್ದರು ಎಂದರು.
ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನ ಆಶಯಗಳು ನೇಪಥ್ಯಕ್ಕೆ ಸರಿದಿದ್ದ ಸಮಯ ದಲ್ಲಿ ಪೀಠವನ್ನೇರಿದ ಸಿದ್ಧಲಿಂಗ ಶ್ರೀಗಳು ತಮ್ಮ ಸತತ ಪರಿಶ್ರಮದಿಂದ ಬಸವಣ್ಣನ ಆಶಯಗಳಿಗೆ ಸರ್ವವ್ಯಾಪಿ ಆಯಾಮ ನೀಡಿದರು. ಸದ್ಯ ದೇಶದಲ್ಲೇ ಗುಣಮಟ್ಟದ ಶುದ್ಧ ಗಾಳಿ ನೀಡುವ ಕಪ್ಪತಗುಡ್ಡದ ಉಳಿವಿಗೆ ಶ್ರೀಗಳು ಅವಿರತ ಹೋರಾಟ ಮಾಡಿದ್ದರು. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಹೇಳಿಕೆ ನೀಡಿ ಹಲವರ ವಿರೋಧಕ್ಕೂ ಗುರಿಯಾಗಿದ್ದರು. ಸರ್ವತೋಮುಖ ವ್ಯಕ್ತಿತ್ವ ಹೊಂದಿದ್ದ ಅವರು ಇತರೆ ಸ್ವಾಮೀಜಿಗಳಿಗೆ ಸ್ಫೂರ್ತಿ ಹಾಗೂ ಶಕ್ತಿಯಾಗಿದ್ದರು ಎಂದರು.
ಗ್ರಂಥಗಳ ಲೋಕಾರ್ಪಣೆ: ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖೀ ಸಂಪುಟ-2, ಡಿ. ರಾಮನಮಲಿ ಸಂಪಾದಿಸಿದ ಮೌನಸಾಧಕ, ಡಾ| ಪಾರ್ವತಿ ಹಾಲಭಾವಿ ಬರೆದ ಡಿ.ವ್ಹಿ. ಹಾಲಭಾವಿ, ಡಾ| ವೀರಣ್ಣ ದಂಡೆ ರಚಿಸಿದ ಸ್ಥಾವರ ಜಂಗಮ, ಡಾ| ಮಹೇಶ ಗುರುನಗೌಡರ ಬರೆದ ಸಿದ್ಧಣ್ಣ ಮಸಳಿ, ಡಾ|ಎಸ್.ಎ. ಪಾಲೇಕರ ವಿರಚಿತ ಬಸವೇಶ್ವರಾಸ್ ಕಾನ್ಸೆಪ್ಟ್ ಆಫ್ ಹ್ಯುಮಾನಿಜಮ್ ಆಂಡ್ ಹ್ಯುಮನ್ ರೈಟ್ಸ್ ಗ್ರಂಥಗಳು ಲೋಕಾರ್ಪಣೆಗೊಂಡವು.
ಡಾ| ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಶಿರೋಳದ ಗುರುಬಸವ ಶ್ರೀಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಅಮರೇಶ ಅಂಗಡಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೂ ಭಾವೈಕ್ಯತಾ ಯಾತ್ರೆ ನೆರವೇರಿತು. ತೋಂಟದಾರ್ಯ ಮಠದ ಆಡಳಿತಾಧಿ ಕಾರಿ ಎಸ್. ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕರಾದ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಕೊಟ್ರೇಶ ಮೆಣಸಿನಕಾಯಿ ಹಾಗೂ ವೀರನಗೌಡ ಮರಿಗೌಡ್ರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ
Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ
ಜನರಿಗೆ ಪ್ರಜಾಪ್ರಭುತ್ವ ಅರಿವು ಮೂಡಿಸಿ, ಬಲ ತುಂಬುವ ಕಾರ್ಯಕ್ರಮ ಪ್ರಜಾಪ್ರಭುತ್ವ ದಿನಾಚರಣೆ
Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್
ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.