Udayavani ವರದಿ ಫಲಶೃತಿ: ಕೊನೆಗೂ ಶ್ರೀಧರ ಭಟ್ಟರ ಮನೆಬಾಗಿಲಿಗೆ ಬಂತು ಶೂನ್ಯ ಬಿಲ್!
Team Udayavani, Aug 11, 2023, 6:39 PM IST
ಸಾಗರ: ಉಚಿತ ಬಿಲ್ನ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ 80 ಸಾವಿರ ರೂ. ಬಿಲ್ ಕೊಟ್ಟು ಗಾಬರಿಗೊಳಪಡಿಸಿದ್ದ ಮೆಸ್ಕಾಂ ‘ಉದಯವಾಣಿ’ಯಲ್ಲಿ ಮಂಗಳವಾರ ವರದಿ ಬರುತ್ತಿದ್ದಂತೆ ತಡಬಡಿಸಿ, ಪರಿಷ್ಕೃತ ಶೂನ್ಯ ಬಿಲ್ ಸಿದ್ಧಪಡಿಸಿ ಮನೆಬಾಗಿಲಿಗೆ ತಂದುಕೊಟ್ಟ ಘಟನೆ ನಡೆದಿರುವುದನ್ನು ಶುಕ್ರವಾರ ಪತ್ರಿಕೆಯ ಗಮನಕ್ಕೆ ತರಲಾಗಿದೆ.
ತಾಲೂಕಿನ ಖಂಡಿಕಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಿರಿವಂತೆ ಸಮೀಪದ ಕೋಗೋಡಿನ ಶ್ರೀಧರ ಭಟ್ರಿಗೆ ಆಗಸ್ಟ್ ಮೊದಲ ವಾರ 80,784 ರೂ. ವಿದ್ಯುತ್ ಬಿಲ್ ಬಂದಿತ್ತು. ತಿಂಗಳಿಗೆ ಕೇವಲ 32 ಯೂನಿಟ್ ಸರಾಸರಿ ವೆಚ್ಚ ಮಾಡುತ್ತಾರೆ ಎಂದು ಮೆಸ್ಕಾಂ ಖುದ್ದು ದಾಖಲೆಯಲ್ಲಿ ಹೇಳಿದ್ದರೂ ಮೀಟರ್ ರೀಡರ್ನ ಅಲಕ್ಷ್ಯದ ಕಾರಣದಿಂದ 9982 ಯೂನಿಟ್ ಬಳಕೆಯನ್ನು ಲೆಕ್ಕಿಸಿ 80,784 ರೂ. ಬಿಲ್ ಜನರೇಟ್ ಆಗಿತ್ತು.
ಈ ವಿಷಯ ಪತ್ರಿಕೆಯ ಗಮನಕ್ಕೆ ಬರುತ್ತಿದ್ದಂತೆ ಮಂಗಳವಾರ ‘ಉಚಿತ ವಿದ್ಯುತ್ ಇದ್ದರೂ 80 ಸಾವಿರ ರೂ. ಬಿಲ್’ ಸುದ್ದಿ ಪ್ರಕಟವಾಗಿತ್ತು. ಉದಯವಾಣಿ ಆನ್ಲೈನ್ ವೆಬ್ ಹಾಗೂ ಪತ್ರಿಕೆಯಲ್ಲಿ ಸುದ್ದಿ ಬರುತ್ತಿದ್ದಂತೆ ಮೆಸ್ಕಾಂ ಎಚ್ಚೆತ್ತುಕೊಂಡಿದೆ. ಬಿಲ್ ದೋಷವನ್ನು ಸರಿಪಡಿಸಿ ಶೂನ್ಯ ಬಿಲ್ ಸಿದ್ಧಗೊಳಿಸಿ ಶ್ರೀಧರಭಟ್ರ ಮನೆಗೆ ಮೆಸ್ಕಾಂ ಎಇಇ ಮೊದಲಾದ ಅಧಿಕಾರಿಗಳೇ ಬಂದು ಕೊಟ್ಟು ಹೋಗಿದ್ದಾರೆ.
‘ನಮಗೆ ಬಿಲ್ ಹೆಚ್ಚುವರಿಯಾಗಿರುವುದು ಗಮನಕ್ಕೆ ಬಂದಿತ್ತು. ಆ ಕಾರಣದಿಂದಲೇ ಗ್ರಾಹಕರಿಗೆ ಬಿಲ್ ಕೊಟ್ಟಿರಲಿಲ್ಲ’ ಎಂಬ ಸಮಜಾಯಿಷಿ ಮೆಸ್ಕಾಂ ಅಧಿಕಾರಿಗಳಿಂದ ಸಿಕ್ಕಿದೆ. ಮೆಸ್ಕಾಂ ಅಧಿಕಾರಿಗಳು ವಿಷಯ ಗೊತ್ತಾಗುತ್ತಿದ್ದಂತೆ ತಡಮಾಡದೆ ಬಿಲ್ ವ್ಯತ್ಯಯವನ್ನು ಸರಿಪಡಿಸಿದ್ದಾರೆ. ಅವರು ಬಿಲ್ ಜನರೇಟ್ ಆಗುತ್ತಿದ್ದಂತೆ ಬಿಲ್ನ ದೋಷದ ಕುರಿತು ಮನೆಯಲ್ಲಿ ಅಥವಾ ಫೋನ್ ಮೂಲಕ ತಿಳಿಸಿದ್ದರೆ ನಮಗೆ ಶಾಕ್ ಆಗುತ್ತಿರಲಿಲ್ಲ.
ಪ್ರತಿ ಬಾರಿಯೂ ನಾನು ಆನ್ಲೈನ್ನಲ್ಲಿಯೇ ಮನೆಯ ವಿದ್ಯುತ್ ಬಿಲ್ ಪಾವತಿಸುವ ಕಾರಣ ಅಲ್ಲಿ ಪರೀಕ್ಷಿಸಿದಾಗ ಈ ದುಬಾರಿ ಬಿಲ್ ಕಾಣಿಸಿದೆ. ಮೆಸ್ಕಾಂ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ ಎಂದು ಶ್ರೀಧರ ಭಟ್ರ ಪುತ್ರ, ಬ್ಯಾಂಕ್ ಉದ್ಯೋಗಿ ಪವನ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಗಲ್ ಉಪವಿಭಾಗದ ಮೆಸ್ಕಾಂನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಕಳೆದ ಆ. ಮೂರರಂದು ಬಿಲ್ ಜನರೇಟ್ ಆಗಿದೆ. ಆನಂತರದಲ್ಲಿ ಗ್ರಾಹಕನಿಗೆ ಆ. 4 ರಂದು ಗಮನಕ್ಕೆ ಬಂದಿದೆ. ಜನರೇಟ್ ಆಗಿ ಐದು ದಿನಗಳ ನಂತರ, ಮಂಗಳವಾರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರವೇ ಬಿಲ್ ಸರಿಪಡಿಸಲಾಗಿದೆ ಎಂಬ ಅಂಶದತ್ತ ಅವರು ಗಮನ ಸೆಳೆಯುತ್ತಾರೆ. 80 ಸಾವಿರದಷ್ಟು ದೊಡ್ಡ ಮೊತ್ತವಾದುದರಿಂದ ಪತ್ರಿಕೆಗಳಲ್ಲಿ ಇದು ಸುದ್ದಿಯಾಯಿತು.
ಒಂದೊಮ್ಮೆ ನೂರಿನ್ನೂರು ಬರುವ ಜಾಗದಲ್ಲಿ ಎರಡು ಸಾವಿರ ಬಿಲ್ ಆಗಿದ್ದರೆ ಯಾವ ಅಧಿಕಾರಿಯೂ ಬಂದು ಬಿಲ್ ಸರಿಪಡಿಸಿಕೊಡುತ್ತಿರಲಿಲ್ಲ. ನಾವೇ ಕಾರ್ಗಲ್ಗೆ ದಿನಗಟ್ಟಲೆ ಸಮಯ, ಹಣ ಖರ್ಚು ಮಾಡಿ ಬಿಲ್ ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತಿತ್ತು ಎಂದು ರಾಜೇಂದ್ರ ಹೊಸಳ್ಳಿ ಹೇಳುತ್ತಾರೆ.
ಖಂಡಿಕಾ, ಮರತ್ತೂರು ಮೊದಲಾದ ತಾಳಗುಪ್ಪ ಸುತ್ತಮುತ್ತಲಿನ ನೂರಾರು ಗ್ರಾಮಗಳನ್ನು ಮೆಸ್ಕಾಂ ಆಡಳಿತಾತ್ಮಕ ಕಾರಣದಿಂದ ಕಾರ್ಗಲ್ ಉಪವಿಭಾಗಕ್ಕೆ ಸೇರಿಸಿದೆ. ಇದರಿಂದ ಸಾಗರ ಪಟ್ಟಣದಿಂದ ಐದು ಕಿಮೀ ದೂರದ ಖಂಡಿಕಾ, ದೊಂಬೆ ಮೊದಲಾದ ಭಾಗದ ಜನ ಕೂಡ ಬಿಲ್ನ್ನು ಮೆಸ್ಕಾಂ ಕೌಂಟರ್ನಲ್ಲಿ ಪಾವತಿಸಬೇಕು ಎಂದರೆ 15 ಕಿಮೀ ದೂರದ ತಾಳಗುಪ್ಪಕ್ಕೆ ತೆರಳಬೇಕು. ಈ ಭಾಗದ ಎಲ್ಲ ಜನರು ಸಾಗರ ಪಟ್ಟಣದಲ್ಲಿಯೇ ತಮ್ಮ ಉಳಿದೆಲ್ಲ ವ್ಯವಹಾರ ಮಾಡುತ್ತಾರೆ. ಹೀಗಿರುವಾಗ ಒಂದೊಮ್ಮೆ ಬಿಲ್ನಲ್ಲಿ ಮೀಟರ್ ರೀಡರ್ ಅಥವಾ ಇನ್ನಾವುದೇ ಕಾರಣಕ್ಕೆ ಯಡವಟ್ಟು ಆದರೆ ಸುಮಾರು 35 ಕಿಮೀ ದೂರದ ಕಾರ್ಗಲ್ನ ಮೆಸ್ಕಾಂ ಕಚೇರಿಗೆ ತೆರಳಬೇಕು.
ಕೊನೆಪಕ್ಷ ಈ ಭಾಗದ ಮೆಸ್ಕಾಂ ಗ್ರಾಹಕರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಉಪವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಒಂದು ಕೌಂಟರ್ ಒದಗಿಸಬೇಕು ಎಂದು ಈ ಭಾಗದ ಮೆಸ್ಕಾಂ ಗ್ರಾಹಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Dandeli: ಹತ್ತು ಹಲವು ಚರ್ಚೆಗೆ ಕಾರಣವಾದ ಅಮಿತ್ ಶಾ, ದೇಶಪಾಂಡೆ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.