ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿಗೆ ನಾಗರಿಕರ ಆಗ್ರಹ
ಕುಂದಾಪುರ-ತಲಪಾಡಿ ಟೋಲ್ ಗುತ್ತಿಗೆ ಬದಲಾವಣೆ ಸಂಭವ
Team Udayavani, Aug 31, 2023, 7:30 AM IST
ಕೋಟ: ಕುಂದಾಪುರದಿಂದ-ತಲಪಾಡಿ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ, ರಸ್ತೆ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ನವಯುಗ ಕಂಪೆನಿ ಹೊಸದೊಂದು ವಿದೇಶಿ ಮೂಲದ ಕಂಪೆನಿಗೆ ವರ್ಗಾಯಿಸಲು ನಿರ್ಧರಿಸಿದೆ.
ಈ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭ ವಾಗಿ ಪ್ರಸ್ತಾವನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಬಳಿ ಸಲ್ಲಿಸಲಾಗಿದೆ. ಪ್ರಾಧಿಕಾರವು ಈ ಸಂಬಂಧ ಅಂತಿಮ ಮೊಹರು ಒತ್ತಬೇಕಿದೆ. ಬಹುತೇಕ ಸೆಪ್ಟಂಬರ್ ಅಂತ್ಯ ಅಥವಾ ಅಕ್ಟೋಬರ್ನಲ್ಲಿ ಪ್ರಕ್ರಿಯೆ ಮುಗಿದು, ಹೊಸ ಕಂಪೆನಿ ಕೆ.ಕೆ.ಆರ್. ಕಾರ್ಯಾ ಚರಣೆ ಆರಂಭಿಸುವ ಸಾಧ್ಯತೆ ಇದೆ.
ಕುಂದಾಪುರ-ತಲಪಾಡಿ ನಡುವೆ 90.1 ಕಿ.ಮೀ. ರಸ್ತೆ ನಿರ್ಮಿಸಿದ್ದ ನವಯುಗ ಕಂಪೆನಿ 2017ರಲ್ಲಿ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಸಂಗ್ರಹ ಆರಂಭಿಸಿತ್ತು. ಈ ಮಾರ್ಗದಲ್ಲಿ 2035ರ ತನಕ ಟೋಲ್ ಸಂಗ್ರಹಣೆಯ ಗುತ್ತಿಗೆ ಹೊಂದಿದೆ. ಕೆ.ಕೆ.ಆರ್. ಎನ್ನುವ ವಿದೇಶಿ ಮೂಲದ ಹೈವೇ ಕನ್ಸ್ಟ್ರಕ್ಷನ್ ಕಂಪೆನಿ ಮುಂಬಯಿಯಲ್ಲಿ ಕಚೇರಿಯನ್ನು ಹೊಂದಿದೆ. ಮೂಲ ಒಪ್ಪಂದದ ಪ್ರಕಾರ ರಸ್ತೆಯ ನಿರ್ವಹಣೆ, ಮೂಲಸೌಲಭ್ಯಗಳ ನೀಡಿಕೆಯನ್ನು ಗುತ್ತಿಗೆ ವಹಿಸಿಕೊಳ್ಳುವ ಹೊಸ ಕಂಪೆನಿಯೂ ಮುಂದುವರಿಸಬೇಕಿದೆ.
ಹೊಸ ಕಾಮಗಾರಿ ಎನ್ಎಚ್ಎಐ ಹೊಣೆ
2010ರಲ್ಲಿ ನವಯುಗ ಕಂಪೆನಿ ಹಾಗೂ ಎನ್ಎಚ್ಎಐ ನಡುವೆ ಆದ ಮೂಲ ಒಪ್ಪಂದದಲ್ಲಿನ ಕಾಮಗಾರಿಗಳಿಗೆ ಮಾತ್ರ ನವ ಯುಗ ಹೊಣೆ. ಹೆಚ್ಚುವರಿಯಾಗಿ ಬ್ಲಾಕ್ಸ್ಪಾಟ್ಗಳಲ್ಲಿ ಪರಿಹಾರ ಕಾಮಗಾರಿ, ಹೊಸ ಬೇಡಿಕೆ ಮೇಲಿನ ಕಾಮಗಾರಿಯನ್ನು ನಿರ್ವಹಿಸಬೇಕಿದ್ದರೆ ಪ್ರಾಧಿಕಾರವೇ ತನ್ನ ಅನುದಾನದಲ್ಲಿ ನಿರ್ವಹಿಸಬೇಕು. ಇದರ ಗುತ್ತಿಗೆಯನ್ನು ಟೋಲ್ ನಿರ್ವಹಿಸುವ ಕಂಪೆನಿಗೇ ನೀಡಬೇಕೆಂದಿಲ್ಲ. ಉದಾಹರಣೆಗೆ ಕಲ್ಯಾಣಪುರ ಸೇರಿದಂತೆ ಕೆಲವು ಕಾಮಗಾರಿಗಳ ಗುತ್ತಿಗೆಯನ್ನು ಬೇರೆ ಕಂಪೆನಿಗಳಿಗೆ ಹಂಚಿಕೆ ಮಾಡಲಾಗಿದೆ.
ಟೋಲ್ ಏರಿಕೆ ಇಲ್ಲ, ರಿಯಾಯಿತಿ ಖಚಿತವಿಲ್ಲ !
ಹೊಸ ಕಂಪೆನಿ ಕಾರ್ಯಾರಂಭಗೊಳಿಸಿದ ತತ್ಕ್ಷಣ ಟೋಲ್ ದರ ಏರಿಕೆಯಾಗಬಹುದೇ ಎಂಬ ಹೆದ್ದಾರಿ ಬಳಕೆದಾರರ ಆತಂಕಕ್ಕೆ “ಏರಿಕೆಯಾಗದು’ ಎಂಬ ಉತ್ತರ ಸಿಕ್ಕಿದೆ. ಪ್ರತೀ ವರ್ಷ ಮಾರ್ಚ್
– ಎಪ್ರಿಲ್ನಲ್ಲಿ ಪ್ರಾಧಿಕಾರದ ಮಾರ್ಗಸೂಚಿಯಂತೆ ಟೋಲ್ ದರ ಏರಿಕೆಯಾಗಲಿದೆ. ಅದನ್ನು ಹೊರತುಪಡಿಸಿ ಬೇರೆ ಏರಿಕೆ ಇರದು. ಆದರೆ ಪ್ರಸ್ತುತ ನೀಡಿರುವ ರಿಯಾಯಿತಿ (ಸ್ಥಳೀಯರು ಇತ್ಯಾದಿ), ದರ ಕಡಿತದಂಥ ವಿನಾಯಿತಿಗಳು ಹೊಸ ಕಂಪೆನಿಯ ನೀತಿ ಅನುಸಾರ ಪರಿಷ್ಕರಣೆಗೊಳ್ಳಲೂ ಬಹುದು ಎನ್ನುತ್ತವೆ ಮೂಲಗಳು.
ನವಯುಗ ಕಂಪೆನಿ ಹಲವು ಸೌಲಭ್ಯ ಗಳನ್ನು ಸಮರ್ಪಕವಾಗಿ ಒದಗಿಸಬೇಕಿದ್ದು, ನಿರ್ವಹಣೆಯಲ್ಲೂ ಗುಣಮಟ್ಟ ಸುಧಾರಿಸಬೇಕಿದೆ. ಹಾಗಾಗಿ ಹೊಸ ಕಂಪೆನಿಗೆ ಈ ಕುರಿತು ಆರಂಭದಲ್ಲೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜನರ ಅಗತ್ಯವನ್ನು ಮನವರಿಕೆ ಮಾಡಿ ಈಡೇರಿಸಲು ಬದ್ಧರಾಗುವಂತೆ ಮಾಡಬೇಕಿದೆ ಎಂಬುದು ನಾಗರಿಕರ ಆಗ್ರಹ.
ಈ ಕುರಿತು
ಪ್ರಕ್ರಿಯೆ ಚಾಲನೆಯಲ್ಲಿದ್ದು, ಎರಡು ಕಂಪೆನಿಗಳ ನಡುವೆ ಮಾತುಕತೆ ನಡೆದು ಪ್ರಾಧಿಕಾರದ ಎದುರು ಬಂದಿದೆ. ಪ್ರಕ್ರಿಯೆ ಪೂರ್ಣವಾದ ಅನಂತರ ಸಮಗ್ರ ಮಾಹಿತಿ ನೀಡಲಾಗುವುದು.
– ಮಹಮ್ಮದ್ ಜಾವಿದ್ ಅಜ್ಮಿ, ಯೋಜನಾ ನಿರ್ದೇಶಕರು,
ಎನ್ಎಚ್ಎಐ, ಮಂಗಳೂರು
ಏನೆಲ್ಲಾ ಬಾಕಿ ಇದೆ?
– ಪ್ರಸ್ತುತ ನವಯುಗ ಕಂಪೆನಿ ನಿರ್ವಹಣೆಯಲ್ಲಿರುವ ಸಾಸ್ತಾನ, ಹೆಜಮಾಡಿ, ತಲಪಾಡಿ ಟೋಲ್ ಪ್ಲಾಜಾದಲ್ಲಿ ಶೌಚಾಲಯ, ಆ್ಯಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರು, ಟ್ರಕ್ ನಿಲುಗಡೆ ಮುಂತಾದ ಮೂಲ ಸೌಕರ್ಯಗಳ ಸಮಸ್ಯೆ ಸಮರ್ಪಕವಾಗಿ ಇನ್ನೂ ಬಗೆಹರಿದಿಲ್ಲ.
– ಕುಂದಾಪುರದಿಂದ-ಉಡುಪಿ ತನಕ ಟೋಲ್ ಪ್ಲಾಜಾದ ಒಂದೇ ಆ್ಯಂಬುಲೆನ್ಸ್ ವಾಹನ ಸೇವೆಯಲ್ಲಿದ್ದು, ಇತರ ಕಡೆಗಳಲ್ಲೂ ಇದೇ ಸಮಸ್ಯೆ ಇದೆ. ಹೆಚ್ಚುವರಿ ವಾಹನಗಳು ಅಗತ್ಯವಿವೆ.
– ರಸ್ತೆ ನಿರ್ವಹಣೆ ಸಮರ್ಪಕವಾಗಿಲ್ಲ. ಹಲವು ಕಡೆ ಗುಂಡಿ ಬಿದ್ದಿದ್ದು, ಇನ್ನು ಕೆಲವೆಡೆ ಟಾರು ಎದ್ದು ಬಂದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದು ಸರಿಯಾಗಬೇಕಿದೆ.
– ಬೀದಿ ದೀಪದ ನಿರ್ವಹಣೆಯಂತೂ ಕಳಪೆ ಎನ್ನುವ ದೂರಿದೆ. ಹಲವೆಡೆ ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ, ಇನ್ನು ಕೆಲವೆಡೆ ಕಂಬಗಳು ಬಂದರೂ ವ್ಯವಸ್ಥೆ ಅಳವಡಿಸಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೂಚನೆ ನೀಡಿದರೂ ಕಂಪೆನಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ.
– ಆಡಳಿತ ವ್ಯವಸ್ಥೆ ಆಯೋಜಿಸುವ ಸಭೆಗಳಿಗೆ ಕಂಪೆನಿ ಪ್ರತಿನಿಧಿಗಳು ಸತತವಾಗಿ ಭಾಗವಹಿಸುತ್ತಿಲ್ಲ ಎನ್ನುವ ದೂರುಗಳೂ ಇವೆ. ಹಾಗಾಗಿ ಜನರ ಸಮಸ್ಯೆಗಳು ಅವರಿಗೆ ತಿಳಿಯುತ್ತಿಲ್ಲ. ಇದೂ ಸರಿಯಾಗಬೇಕಿದೆ.
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.