![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 18, 2023, 10:40 AM IST
ಗಣೇಶನ ಮುಂಚಿತವಾಗಿ ಹಬ್ಬದ ಸಂಭ್ರಮವನ್ನು ಹೊತ್ತು ತರುವವಳು ಗೌರಿ. ಭಾದ್ರಪದ ಮಾಸದ ಮೊದಲ ಸಡಗರ ಗೌರಿ ಹಬ್ಬ. ಭಾದ್ರಪದ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಸ್ವರ್ಣ ಗೌರಿ
ಹಬ್ಬವೆಂದೂ ಕರೆಯುತ್ತಾರೆ. ಗಣೇಶನ ಹಬ್ಬವೂ ಜತೆಯಾಗಿ ಬರುವುದರಿಂದ ಗೌರಿ -ಗಣೇಶ ಹಬ್ಬವೆಂದೇ ಪ್ರಚಲಿತ.
ಗೌರಿ ಹಬ್ಬ ಮಹಿಳೆಯರಿಗೆ ಅತ್ಯಂತ ಪ್ರಮುಖವಾದ ಮತ್ತು ಅಷ್ಟೇ ಪ್ರಧಾನವಾದ ಹಬ್ಬ. ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಪುಟ್ಟ ಗೌರಿ, ದೊಡ್ಡ ಗೌರಿ ಎಂದು ಸಂಭೋದಿಸುವುದುಂಟು. ಮುಸ್ಸಂಜೆಯ ಹೊತ್ತಲ್ಲಿ ಮನೆಗೆ ಸಣ್ಣ ಹುಡುಗಿಯರು ಬಂದರೆ ಗೌರಿ ಬಂದಿದ್ದಾಳೆ ಎಂದು ಹೂವು, ಕುಂಕುಮ ಕೊಟ್ಟು ಕಳುಹಿಸುವ ಸಂಪ್ರದಾಯವು ಉಂಟು. ಮನೆ ಮಗಳು ಗೌರಿ, ಮನೆ ಬೆಳಗಲು ಬರುವ ಸೊಸೆ ಗೌರಿ- ಹೀಗೆ ಹೆಣ್ಣುಮಕ್ಕಳನ್ನು ಹಿರಿಯರು ಸಂಬೋಧಿಸುವುದು ಗೌರಿ ಎಂದೇ. ಹಾಗಾಗಿ ಗೌರಿ ಹಬ್ಬವೆಂದರೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಸಂಭ್ರಮ, ಸಡಗರ. ಹೆಂಗಳೆಯರು ಸ್ವತಃ ಗೌರಿಯಂತೆ ಸಿಂಗರಿಸಿಕೊಂಡು ಹಬ್ಬದ ತಯಾರಿಯಲ್ಲಿ ಮಗ್ನರಾಗಿ ಬಿಡುತ್ತಾರೆ.
ಗೌರಿಯ ಹಿನ್ನಲೆ
ಗೌರಿಯು ಶಿವನ ಅರ್ಧಾಂಗಿ. ಇದಕ್ಕೆ ಪುರಾಣದ ಕಥೆಯೊಂದಿದೆ. ಶಿವನ ಮಡದಿಯಾಗಿದ್ದ ದಾಕ್ಷಾಯಣೀ ತನ್ನ ಪತಿ ಶಿವನಿಗೆ ಆದ ಅವಮಾನವನ್ನು ತಡೆಯಲಾರದೆ ದೇಹ ತ್ಯಾಗ ಮಾಡುತ್ತಾಳೆ. ಒಮ್ಮೆ ಶಿವನು ತಪಸ್ಸಿನಲ್ಲಿ ಮಗ್ನನಾಗಿದ್ದಾಗ ದೇವತೆಗಳು ಆತನನ್ನು ತಪಸ್ಸಿನಿಂದ ಹೊರತರಲು ಕಾಮದೇವನ ಮೂಲಕ ಪ್ರಯತ್ನಿಸಿದಾಗ, ಸಿಟ್ಟಾದ ಶಿವನು ಕಾಮನನ್ನು ಭಸ್ಮ ಮಾಡುತ್ತಾನೆ. ಆಗ ಹಿಮವಂತನ ಮಗಳಾಗಿ ಜನಿಸಿದ್ದ ಗೌರಿಯು ತನ್ನ ಕಠಿನ ತಪಸ್ಸಿನಿಂದ ಶಿವನನ್ನು ಪ್ರಸನ್ನಗೊಳಿಸಿ ಒಲಿಸಿಕೊಳ್ಳುತ್ತಾಳೆ. ಆಗ ಶಿವನು ಲೋಕಕಲ್ಯಾಣಕ್ಕಾಗಿ ಸ್ವತಃ ಕಾಮನನ್ನು ಬರಮಾಡಿಕೊಂಡು ಗೌರಿಯನ್ನು
ವಿವಾಹವಾಗುತ್ತಾನೆ ಎಂದು ಹೇಳಲಾಗುತ್ತದೆ.
ವ್ರತದ ಉದ್ದೇಶ
ಗೌರಿಯನ್ನು ಪಾರ್ವತಿ ದೇವಿಯ ಅವತಾರ ವಾಗಿ, ಶಕ್ತಿಯ ಸಂಕೇತವಾಗಿಯೂ ಪೂಜಿಸಲಾ ಗುತ್ತದೆ. ಸರ್ವಮಂಗಲಗಳನ್ನೂ-ಸತ್ಸಂತಾನವನ್ನೂ-ಸುಖ ಸಮೃದ್ಧಿಗಳನ್ನೂ ಕರು ಣಿಸಬಲ್ಲ ಮಹಾ ತಾಯಿ ಗೌರಿ. ವಿವಾಹವಾದ ಸ್ತ್ರೀಯರು ಮುಖ್ಯವಾಗಿ ಈ ಪೂಜೆಯನ್ನು ವ್ರತದ ರೂಪದಲ್ಲಿ ಮಾಡುತ್ತಾರೆ.
ಕೆಲವೊಂದೆಡೆ ಮದುವೆಯಾದ ಹೆಣ್ಣು ಸ್ವರ್ಣ ಗೌರಿ ವ್ರತವನ್ನು ಆಚರಿಸಲು ತನ್ನ ತವರು ಮನೆಗೆ ಬರುವ ಸಂಪ್ರ ದಾಯವೂ ಇದೆ. ಪುರಾಣದ ಪ್ರಕಾರ ಗೌರಿ ತವರು ಮನೆಗೆ ಬಂದ ಮರುದಿನ ಆಕೆಯನ್ನು ಮರಳಿ ಕೈಲಾಸಕ್ಕೆ ಕರೆ ದೊಯ್ಯಲು ಗಣೇಶ ಬರುತ್ತಾನೆ. ಹಾಗಾಗಿ ಮೊದಲು ಗೌರಿಯನ್ನು ಕೂರಿಸಿ, ಮರುದಿನ ಗಣೇಶನನ್ನು ಬರಮಾಡಿಕೊಳ್ಳಲಾಗುತ್ತದೆ. ಇದರ ಉದ್ದೇಶ ಉತ್ತ ಮ ದಾಂಪತ್ಯದ ಸೌಭಾಗ್ಯಕ್ಕಾಗಿ. ಹಾಗಾಗಿ ಕೆಲವು ಕಡೆ ವಿವಾಹದ ಮುಂಚಿತವಾಗಿ ಮದುಮಗಳ ಕೈಯಿಂದ ಗೌರಿ ಪೂಜೆಯನ್ನು ಮಾಡಿ ಸಲಾ ಗುತ್ತದೆ. ಒಳ್ಳೆಯ ವರನ ಪ್ರಾಪ್ತಿಗಾಗಿ ಅವಿವಾಹಿತರೂ ಗೌರಿಯ ಸ್ವರೂಪವಾದ ಹರಿತಾಲಿಕಾವನ್ನು ಪೂಜಿಸುತ್ತಾರೆ. ಹರಿತಾಲಿಕಾ ಮದುವೆಗೆ ಮುಂಚಿನ ಗೌರಿಯ ರೂಪ.
ಪೂಜಾ ವಿಧಾನ
ಕೆಲವರು ಗೌರಿದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇನ್ನೂ ಕೆಲವರು ಗೌರಿಯ ಮಣ್ಣಿನ ಮೂರ್ತಿಯನ್ನು ಪೂಜೆ
ಮಾಡುತ್ತಾರೆ. ಮಂಟಪದಲ್ಲಿ ಅಥವಾ ಧಾನ್ಯಗಳಿಂದ ತುಂಬಿದ ಪಾತ್ರೆಯ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ.
ಗೌರಿಯ ಚಿನ್ನದ ಮುಖವಾಡಕ್ಕೂ ಪೂಜೆಯನ್ನು ಮಾಡುತ್ತಾರೆ. ಆವಾಹಿತಳಾದ ದೇವಿಯನ್ನು ಷೋಡಶೋಪಚಾರಗಳಿಂದ ಪೂಜಿಸುತ್ತಾರೆ. ಹದಿನಾರು ತರದ ಹೂಗಳು, ಹದಿನಾರು ಎಳೆಯ ದಾರ ಬಂಧನ. ಆ ದಾರಕ್ಕೆ ಹದಿನಾರು ಗಂಟುಗಳು, ಹದಿನಾರೆಳೆ ಗೆಜ್ಜೆ ವಸ್ತ್ರ, ಎರಡು ಗೆಜ್ಜೆವಸ್ತ್ರದ ಕುಪ್ಪಸ, ಹದಿನಾರು ಬಿಲ್ವ ಪತ್ರೆ, ಶಕಾöನುಸಾರ ಸೀರೆಯೋ, ಕುಪ್ಪಸದ ಉಡುಗೆಯನ್ನೋ ಉಡಿಸಿ, ಸರ್ವಾ ಲಂಕಾರ ಭೂಷಿತೆಯಾಗಿ ಸಿಂಗರಿಸಿ, ಹದಿನಾರು ಗ್ರಂಥಿಗಳುಳ್ಳ ದಾರವನ್ನಿಟ್ಟು ಆ ಗ್ರಂಥಿಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಗೆ ಪ್ರಿಯವಾದ ಉಪಚಾರಗಳು, ಮಂತ್ರ- ತಂತ್ರಗಳಿಂದ ಪೂಜಿಸಲಾಗುತ್ತದೆ.ಗೌರಿಯ ಪಕ್ಕದಲ್ಲಿ ಸ್ಥಾಪಿತಳಾಗುವ ಯಮುನಾ ಕೂಡ ಗೌರಿಯಷ್ಟೇ ಮುಖ್ಯಳು. ಯಮುನೆಗೂ ಒಂದು ಕಳಶ ಸಿದ್ಧ ಮಾಡಿ ಪೂಜಿಸಲಾಗುತ್ತದೆ.
ಬಾಗಿನ ನೀಡುವಿಕೆ
ಸ್ವರ್ಣ ಗೌರೀ ಹಬ್ಬದ ಇನ್ನೊಂದು ಆಕರ್ಷಣೆ ಬಾಗಿನ ನೀಡುವುದು. ಬಾಗಿನದಲ್ಲಿ ಅರಿಶಿನ, ಕುಂಕುಮ, ಹಸುರು ಬಳೆಗಳು, ತೆಂಗಿನಕಾಯಿ, ವೀಳ್ಯದೆಲೆ, ಬೆಲ್ಲ ಹಾಗೂ ಇತರ ಸಿಹಿ ತಿಂಡಿಗಳನ್ನು, ಹಣ್ಣು-ಹೂವುಗಳನ್ನು, ಪುಟ್ಟ ಕನ್ನಡಿ, ಪುಟ್ಟ ಕಾಡಿಗೆ ಡಬ್ಬ, ಸಣ್ಣ ಹಣಿಗೆ, ವಾಲೆ ದೌಡು, ಹೀಗೆ ಹದಿನಾರು ಬಗೆಯ ಮಂಗಲ ದ್ರವ್ಯಗಳಿಂದ ಕೂಡಿದ ಮೊರದ ಬಾಗಿನವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. ಬಾಗಿನ ಕೊಟ್ಟು ಬಾಗಿನ ಪಡೆದ ಗೌರಿಯರಿಂದ ಆಶೀರ್ವಾದ ಪಡೆಯುವುದು, ಈ ಬಾಗಿನ ತಯಾರಿಸುವುದರಲ್ಲಿ ಹೆಣ್ಣು ಮಕ್ಕಳು ಖುಷಿಯಿಂದ ತೊಡಗಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ಏನೋ ಎತ್ತಿಕೊಡುವಾಗ ಇರುವ ಸಂತೃಪ್ತಿ ಈ ಬಾಗಿನದ ತುಂಬ ತುಂಬಿ ತುಳುಕುತ್ತಿರುತ್ತದೆ.
ಸಂತೃಪ್ತಿಯಿಂದ ಇರಲು ಹಿರಿಯರು ಬರಮಾಡಿಕೊಂಡ ಗೌರಿ-ಗಣೇಶ ಮನೆಯ ಹೆಣ್ಣುಮಕ್ಕಳ ಹರುಷಕ್ಕೆ, ಚೈತನ್ಯಕ್ಕೆ
ಮೂಲವಾಗುತ್ತಾಳೆ. ಶಕ್ತಿಯ ರೂಪವಾದರೂ ಈಕೆ ಸೌಮ್ಯ ಗೌರಿ. ಮನೆಗೆ ಬರುವ ಗೌರಿ ಪ್ರೀತಿ, ಸೌಜನ್ಯ, ವಾತ್ಸಲ್ಯ, ಕರುಣೆ, ದಯೆ,
ಧರ್ಮ ಹೊತ್ತು ತರಲಿ.
ಕುಟುಂಬದ ಒಳಿತಿಗಾಗಿ ಪುರುಷರೂ ಗೌರಿ ಪೂಜೆಯಲ್ಲಿ ಪಾಲ್ಗೊಳಬಹುದು
ಗೌರಿ ಹಬ್ಬ ಸ್ತ್ರೀಯರಿಗೆ ಮಾತ್ರ ಸೀಮಿತ ಎಂದು ತಿಳಿದುಕೊಳ್ಳಬೇಕಿಲ್ಲ. ಶಿವ-ಶಕ್ತಿಯರ ಸಮಾಯೋಗದಿಂದಲೇ ಸೃಷ್ಟಿಯು ಮುಂದುವರಿದಿರುವುದು. ಆದ್ದರಿಂದ ಇಲ್ಲಿ ಅವರಿಬ್ಬರ ಪಾತ್ರವೂ ಸಮಾನವಾಗಿದೆ. ಲೋಕದಲ್ಲಿ ಪತಿ-ಪತ್ನಿಯರು ಶಿವ-ಶಕ್ತಿಯರ ಪ್ರತಿನಿಧಿಗಳಾಗಿ ವರ್ತಿಸಬೇಕಾಗಿರುವುದರಿಂದ ಇಬ್ಬರೂ ಸೇರಿಯೇ ಪೂಜಿಸುವುದು ಸೂಕ್ತವಾದುದಾಗಿದೆ. ಶಿವ-ಶಕ್ತಿಯರು ಸೇರಿಯೇ ಇರುವವರಾಗಿದ್ದರೆ, ಗೌರಿಯನ್ನು ಮಾತ್ರವೇ ಈ ದಿನದಂದು ಪೂಜಿಸಬಹುದೇ? ಎಂದರೆ, ಅದಕ್ಕೆ ಜ್ಞಾನಿಗಳ ಉತ್ತರ, ಪುರುಷಾರ್ಥಗಳ ಕೆಲವು ವಿಶೇಷ ಭಾಗಗಳ ಪ್ರಾಪ್ತಿಗಾಗಿ ಅವುಗಳನ್ನು ಅನುಗ್ರಹಿಸುವ ದೇವಿಯನ್ನು ಪ್ರತ್ಯೇಕವಾಗಿ ಪೂಜಿಸುವುದು ಸೂಕ್ತವೇ ಆಗಿದೆ. ದೇವಿಯ ಪೂಜೆಯಿಂದ ದೇವನೂ ಸಂತುಷ್ಟನಾಗುತ್ತಾನೆ ಎಂಬ ಅಂಶವನ್ನೂ ನೆನಪಿಡಬೇಕಾಗಿದೆ. ಹಾಗೆ ನೋಡಿದರೆ ಗೌರಿ ಹಬ್ಬ ಒಂದೊಂದು ಪ್ರದೇಶ ದಲ್ಲಿ ಒಂದೊಂದು ರೀತಿ ನಡೆದುಕೊಂಡು ಬಂದಿದೆ. ಎಲ್ಲ ಕ್ಕಿಂತ ವಿಶೇಷ
ಸಂಗತಿಯೆಂದರೆ ಗೌರಿ ಹಬ್ಬಕ್ಕೆ ಅಂಥ ಕಟ್ಟು ನಿಟ್ಟುಗಳಿಲ್ಲ. ಈ ದಿನದಂದು ಮಹಿಳೆಯರು ಮಾಡುವ ಪೂಜೆಗೆ ಪುರುಷರು ಸಹಕಾರ ನೀಡುವುದರೊಂದಿಗೆ ಕುಟುಂಬ ಕ್ಷೇಮಕ್ಕಾಗಿ ಗೌರಿಯನ್ನು ನಮಿಸಿ, ಪ್ರಾರ್ಥಿಸುವುದು ಶ್ರೇಯಸ್ಕರವಾಗಿದೆ.
*ಧಾತ್ರಿ
You seem to have an Ad Blocker on.
To continue reading, please turn it off or whitelist Udayavani.