Congress -BJP: ಮೈತ್ರಿ: ಕೈ-ಕಮಲ ಮಧ್ಯೆ ನೇರ ಪೈಪೋಟಿ


Team Udayavani, Sep 24, 2023, 4:06 PM IST

TDY-15

ಮೈಸೂರು: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸಯುಗದ ಆರಂಭವಾಗಿದೆ. ಈ ಹಿಂದೆಯೂ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರ ರಚಿಸಿದ್ದರೂ ಅದಕ್ಕೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಒಪ್ಪಿಗೆ ಇರಲಿಲ್ಲ.

ಆಗಿನ ಮೈತ್ರಿಗೆ ದೇವೇಗೌಡರ ಸಮ್ಮತಿ ತೆರೆಮರೆಯಲ್ಲಿ ಇತ್ತು ಎಂದು ಹೇಳಲಾಗಿದ್ದರೂ ದೇವೇಗೌಡರು ಮಾತ್ರ ಅಧಿಕೃತವಾಗಿ ಈ ಸಖ್ಯ ಬೆಂಬಲಿಸಿರಲಿಲ್ಲ. ಆದರೆ, ಈಗ ಆಗಿರುವ ಮೈತ್ರಿ ಸಂಪೂರ್ಣ ಭಿನ್ನ.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರೇ ಮುಂದೆ ನಿಂತು ಬಿಜೆಪಿ ಜೊತೆ ಮೈತ್ರಿಗೆ ಅಸ್ತು ಎಂದಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಒಂದೇ ವೇದಿಕೆಯಲ್ಲಿ ನಿಂತು ಮತಯಾಚಿಸುವ ಸಂದರ್ಭವಿದು. ಅಲ್ಲಿಗೆ ಕರ್ನಾಟಕ ರಾಜಕಾರಣ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಜಿದ್ದಾಜಿದ್ದಿಯ ಕಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ರಾಜಕೀಯ ಸ್ನೇಹ ಹೊಸ ಭಾಷ್ಯ ಬರೆಯಲಿದೆ.

ಹಾಗಿದ್ದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವಿನ ನೇರ ಈ ಜಂಗೀಕುಸ್ತಿ ಯಾರಿಗೆ ಲಾಭ? ಯಾರಿಗೆ ನಷ್ಟ? ಬಿಜೆಪಿ-ಜೆಡಿಎಸ್‌ ನಡುವಿನ ಮೈತ್ರಿಯಿಂದ ಪರಸ್ಪರರಿಗೆ ಲಾಭವಿದೆ? ಯಾವ ಪಕ್ಷಕ್ಕೆ ಹೆಚ್ಚು ನಷ್ಟ? ಈ ಪ್ರಶ್ನೆಗಳೂ ಮುನ್ನೆಲೆಗೆ ಬಂದಿವೆ.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ನೇರ ಹಣಾಹಣಿ. ಹೀಗಾಗಿ, ಜೆಡಿಎಸ್‌ ಮೈತ್ರಿ ಬಿಜೆಪಿ ಹೆಚ್ಚು ಸ್ಥಾನ ದಕ್ಕಿಸಿಕೊಳ್ಳಲು ಅನುಕೂಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ವರ್ಚಸ್ಸು, ಸಂಘಟನೆ ಶಕ್ತಿ ಜೆಡಿಎಸ್‌ ಅಭ್ಯರ್ಥಿಗಳಿಗೆ ವರವಾಗಲಿದೆ.

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಕದನದಲ್ಲಿ ಬಿಜೆಪಿಯು ಜೆಡಿಎಸ್‌ ಬೆನ್ನಿಗೆ ನಿಂತರೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವಿನ ಸಮರದಲ್ಲಿ ಜೆಡಿಎಸ್‌ ಬಿಜೆಪಿಗೆ ಒತ್ತಾಸೆಯಾಗಿ ನಿಲ್ಲಲಿದೆ. ಅಂದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪರಸ್ಪರರಿಗೆ ಲಾಭವಿದೆ. ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾವೇರಿ ಕಣಿವೆ ಪ್ರದೇಶಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಹೂಡಿ ಪರೋಕ್ಷವಾಗಿ ಜೆಡಿಎಸ್‌ಗೆ ಲಾಭ ಮಾಡಿಕೊಟ್ಟಿದ್ದನ್ನು ಇಲ್ಲಿ ಪ್ರಸ್ತಾಪಿಸಬಹುದು. ಹಾಗೇ ನೋಡಿದರೆ, ರಾಜ್ಯ ರಾಜಕಾರಣದಲ್ಲಿ ತಳಮಟ್ಟದಲ್ಲಿ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಅಷ್ಟಾಗಿ ಪರಸ್ಪರ ಜಿಲ್ಲಾಜಿದ್ದಿ ವಿರೋಧಗಳಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಸಹಕಾರ ಸಂಘಗಳ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆ ಹಂತದವರೆಗೂ ಜಿದ್ದಾಜಿದ್ದಿ ವಾತಾವರಣವಿದೆ.

ಜೆಡಿಎಸ್‌-ಬಿಜೆಪಿ ಈ ಹಿಂದೆ ಮೈತ್ರಿ ಸರ್ಕಾರ ರಚಿಸಿದಾಗ ಎರಡೂ ಪಕ್ಷಗಳ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, 2018ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚಿಸಿದಾಗ ಈ ಎರಡೂ ಪಕ್ಷಗಳಲ್ಲಿ ಮಂಕು ಆವರಿಸಿತ್ತು. ಅಂದರೆ, ಜೆಡಿಎಸ್‌ ಅಥವಾ ಕಾಂಗ್ರೆಸ್‌ ಕಾರ್ಯಕರ್ತರಿಗಾಗಲಿ ಪರಸ್ಪರ ಮೈತ್ರಿಗೆ ಸಿದ್ಧವಿಲ್ಲ. ನಾಯಕರು ಹಸ್ತ ಕುಲುಕಿದರೂ ಕಾರ್ಯಕರ್ತರು ಮುಖ ತಿರುಗಿಸಿದ್ದೇ ಜಾಸ್ತಿ. ಆದರೆ, ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಒಂದು ರೀತಿ ಸಹಜ ಎಂಬ ಭಾವ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿದೆ. ಏಕೆಂದರೆ, ಮೂಲಭೂತವಾಗಿ ಈ ಎರಡೂ ಪಕ್ಷಗಳ ಕಾರ್ಯಕರ್ತರದ್ದು ಕಾಂಗ್ರೆಸ್‌ ವಿರೋಧಿ ಮನೋಭಾವ.

ಉದಾಹರಣೆಯನ್ನು ಕೊಡಬಹುದಾದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸಾಧಿಸಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತ್ತು. ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಕಣಕ್ಕೆ ಇಳಿದರೆ ತುಮಕೂರಿನಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರೇ ಸ್ಪರ್ಧಿಸಿದ್ದರು.

ಮೈಸೂರಿನಲ್ಲಿ ವಿಜಯಶಂಕರ್‌ ಪರ ಜೆಡಿಎಸ್‌ ಕಾರ್ಯಕರ್ತರು ಕೆಲಸ ಮಾಡಲಿಲ್ಲ. ಬಿಜೆಪಿ ಅಭ್ಯರ್ಥಿ ಸಂಸದ ಪ್ರತಾಪ ಸಿಂಹ ಅವರನ್ನು ಜೆಡಿಎಸ್‌ ಮುಖಂಡರು ಬಹಿರಂಗವಾಗಿ ಬೆಂಬಲಿಸಿ ಅವರ ಗೆಲುವಿಗೆ ನೆರವಾದರು. ತುಮಕೂರಿನಲ್ಲಿ ಕಾಂಗ್ರೆಸ್‌ ಪ್ರಭಾವಿ ಮುಖಂಡರು, ಕಾರ್ಯಕರ್ತರು ದೇವೇಗೌಡರ ಸೋಲಿಗೆ ಟೊಂಕ ಕಟ್ಟಿ ನಿಂತಿದ್ದರು. ಅಲ್ಲಿ ಅವರು ಬಿಜೆಪಿ ಬೆಂಬಲಿಸಿ ದೇವೇಗೌಡರ ಪರಾಭವಕ್ಕೆ ಕಾರಣರಾದರು. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸ್ಥಾನ ಹೊಂದಾಣಿಕೆ ಅಸಹಜ ಎಂಬಂತೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅನಿಸಿದ್ದು ನಿಜ. ಆದರೆ, ಇದೇ ಮಾತು ಬಿಜೆಪಿ-ಜೆಡಿಎಸ್‌ ಸ್ಥಾನ ಹೊಂದಾಣಿಕೆಯಾದರೆ ಅನ್ವಯ ಆಗುವುದಿಲ್ಲ.

ರಾಜ್ಯ ರಾಜಕಾರಣದ ಪರಿಸ್ಥಿತಿ ಈಗ ಹೇಗಿದೆ ಎಂದರೆ ಕಾಂಗ್ರೆಸ್‌ ವಿರೋಧಿ ಮತಗಳು ಬಿಜೆಪಿ – ಜೆಡಿಎಸ್‌ ಮೈತ್ರಿಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಕ್ಕಲಿವೆ. ಅದೇ ರೀತಿ ಬಿಜೆಪಿ ವಿರೋಧಿ ಮತಗಳು ಜೆಡಿಎಸ್‌ಗೆ ದಕ್ಕುತ್ತಿದುದು ತಪ್ಪಿ ಕಾಂಗ್ರೆಸ್‌ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೋಡೀಕರಣವಾಗಲಿದೆ. ರಾಜ್ಯ ರಾಜಕಾರಣವು ಧ್ರುವೀಕರಣದತ್ತ ವಾಲಿದೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ವರ:

ಮೈಸೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ವರವಾಗಲಿದೆ. ಹಾಗೇ ನೋಡಿದರೆ, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿ ಜೆಡಿಎಸ್‌ ಸಾಥ್‌ ನೀಡಿತ್ತು.

ಹೀಗಾಗಿಯೇ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರ ಗೆಲುವಿನ ದಾರಿ ಸುಗಮವಾಗಿತ್ತು. ಆದರೆ, ಆಗ ಬಿಜೆಪಿಗೆ ಜೆಡಿಎಸ್‌ ಬಹಿರಂಗ ಬೆಂಬಲ ನೀಡಿರಲಿಲ್ಲ. ಆದರೆ, ಕಾಂಗ್ರೆಸ್‌ ಪರಾಭವಗೊಳಿಸಲು ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದು ಗುಟ್ಟಾಗಿ ಏನೂ ಉಳಿದಿರಲಿಲ್ಲ. ಆದರೆ, ಈ ಬಾರಿ ಎನ್‌ಡಿಎ ತೆಕ್ಕೆಗೆ ಜೆಡಿಎಸ್‌ ಸೇರ್ಪಡೆಯಿಂದಾಗಿ ಈ ತೆರೆಮರೆಯ ಕಸರತ್ತನ್ನು ಬಹಿರಂಗವಾಗಿಯೇ ಕೈಗೊಳ್ಳಲು ಸಮ್ಮತಿ ದೊರೆತಂತೆ ಆಗಿದೆ.

ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರಗಳ ಮಟ್ಟಿಗೆ ಹೇಳುವುದಾದರೆ ಬಿಜೆಪಿಗಿಂತ ಜೆಡಿಎಸ್‌ ಪ್ರಾಬಲ್ಯ ಹೆಚ್ಚಾಗಿದೆ. ತಳಮಟ್ಟದಲ್ಲಿ ಜೆಡಿಎಸ್‌ ಸಂಘಟನೆ ಬಿಜೆಪಿಗಿಂತ ಶಕ್ತಿಯುತವಾಗಿದೆ. ಆದರೆ, ಲೋಕಸಭಾ ಚುನಾವಣೆ ಪ್ರಶ್ನೆ ಬಂದಾಗ ಮೈಸೂರು ಜಿಲ್ಲೆಯ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿದ್ದಾರೆ. ಜನತಾ ಪರಿವಾರ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಯಾವತ್ತೂ ವಿಜಯದ ನಗೆ ಬೀರಿಲ್ಲ. ಮೈಸೂರು ಲೋಕಸಭಾ ಕ್ಷೇತ್ರವು ಬಿಜೆಪಿ ಇಲ್ಲವೇ ಕಾಂಗ್ರೆಸ್‌ಗೆ ಒಲಿಯುತ್ತಾ ಬಂದಿದೆ.

2019ರ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿತ್ತು. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸ್ಥಾನ ಹೊಂದಾಣಿಕೆಯಲ್ಲಿ ಮೈಸೂರು-ಕೊಡಗು ಕ್ಷೇತ್ರವು ಕಾಂಗ್ರೆಸ್‌ ಪಾಲಾಗಿತ್ತು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಕಣಕ್ಕೆ ಇಳಿದಿದ್ದರು. ಆದರೆ, ಆಗ ಜೆಡಿಎಸ್‌ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದೋಸ್ತಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಇಳಿಯಲಿಲ್ಲ. ತೆರೆಮರೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಹೀಗಾಗಿಯೇ ಬಿಜೆಪಿ ಉಮೇದುವಾರ ಪ್ರತಾಪ ಸಿಂಹ ಅವರ ಗೆಲುವಿನ ದಾರಿ ಸುಗಮವಾಗಿತ್ತು.

ಕಳೆದ ಬಾರಿ ತೆರೆ ಮರೆಯಲ್ಲಿ ಜೆಡಿಎಸ್‌ ಬೆಂಬಲ: ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೆರೆಮರೆಯಲ್ಲಿ ಬೆಂಬಲಿಸಿದ್ದ ಜೆಡಿಎಸ್‌ಗೆ ಈ ಬಾರಿ ಬಹಿರಂಗವಾಗಿಯೇ ಬೆಂಬಲಿಸುವ ಸಂದರ್ಭ ಒದಗಿ ಬಂದಿದೆ.  ಮೈತ್ರಿಯಿಂದಾಗಿ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೇ ಹೆಚ್ಚು ಲಾಭ. ಈ ಮೈತ್ರಿ ಒಂದು ವೇಳೆ ಮುಂದಿನ ಅಸೆಂಬ್ಲಿ ಚುನಾವಣೆಗೂ ಮುಂದುವರಿದರೆ ಇದರ ಲಾಭ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗಿಂತ ಜೆಡಿಎಸ್‌ಗೆ ಹೆಚ್ಚಾಗುತ್ತದೆ.

ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್‌ಗೆ ನೆರವಾಗಲೆಂದು ಮೈಸೂರು ಜಿಲ್ಲೆಯ ಅನೇಕ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಹೂಡಿದಾಗ ಇದರ ಲಾಭ ಜೆಡಿಎಸ್‌ಗೆ ಆಗಿ ಕಾಂಗ್ರೆಸ್‌ ಸೋಲು ಅನುಭವಿಸಿದ ನಿದರ್ಶನವಿದೆ.

ಜೆಡಿಎಸ್‌-ಬಿಜೆಪಿ ಮಧ್ಯೆ ಪೈಪೋಟಿ ಕಡಿಮೆ:

ಮೈಸೂರು ಜಿಲ್ಲೆಯಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌-ಬಿಜೆಪಿ ಮಧ್ಯೆ ಪೈಪೋಟಿಗಳಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಜಿದ್ದಾಜಿದ್ದಿ ಕಣಗಳೇ ಹೆಚ್ಚು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹ ರಾಜ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಕದನವಿದೆ. ಮೈಸೂರು ತಾಲೂಕನ್ನು ಒಳಗೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆ ಸಮರವಿದೆ. ಹೀಗಾಗಿ, ಅಸೆಂಬ್ಲಿ ಕ್ಷೇತ್ರಗಳಲ್ಲೂ ಜೆಡಿಎಸ್‌ ಹಾಗೂ ಬಿಜೆಪಿ ಪರಸ್ಪರ ನೇರ ಎದುರಾಳಿಗಳಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೇ ಎದುರಾಳಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಗರದ ಮೂರು ವಿಧಾನಸಭಾ ಕ್ಷೇತ್ರಗಳು, ವರುಣ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲ. ಜೆಡಿಎಸ್‌ ಮೈಸೂರು ನಗರ ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದೆ.

ಜೆಡಿಎಸ್‌-ಬಿಜೆಪಿ ಮೈತ್ರಿಯು ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಒಳಿತಾಗುತ್ತದೆ. ಉಭಯ ಪಕ್ಷಗಳಿಗೂ ಇದರಿಂದ ಅನುಕೂಲವಿದೆ. ಉಭಯ ಪಕ್ಷಗಳ ಮೈತ್ರಿಯು ಯಶಸ್ವಿಯಾಗಬೇಕಿದ್ದರೆ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮಧ್ಯೆ ತಳಮಟ್ಟದಲ್ಲಿ ಹೊಂದಾಣಿಕೆ ಅತ್ಯಗತ್ಯ. ಈ ಮೈತ್ರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿದು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಈ ಮೈತ್ರಿ ಸದಾ ಸುಭದ್ರವಾಗಿರಬೇಕು. ಈ ಹಿಂದೆ 2006ರಲ್ಲಿ ಬಿಜೆಪಿ ಜೊತೆ ಆಗಿದ್ದ ಮೈತ್ರಿಯು ಮುಂದುವರಿದಿದ್ದರೆ ರಾಜ್ಯ ರಾಜಕಾರಣದ ಚಿತ್ರಣವೇ ಇವತ್ತು ಬೇರೆಯಾಗಿರುತ್ತಿತ್ತು.-ಕೆ.ಮಹದೇವ್‌,  ಜೆಡಿಎಸ್‌ ಮಾಜಿ ಶಾಸಕರು, ಪಿರಿಯಾಪಟ್ಟಣ.

-ಕೂಡ್ಲಿ ಗುರುರಾಜ 

ಟಾಪ್ ನ್ಯೂಸ್

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA CASE: ಇಂದು ಮತ್ತೆ 4 ಮಂದಿ ವಿಚಾರಣೆ

MUDA CASE: ಇಂದು ಮತ್ತೆ 4 ಮಂದಿ ವಿಚಾರಣೆ

MUDA Case: Lokayukta notice to CM Siddaramaiah after Diwali?

MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

 MUDA CASE: 8 ಮಂದಿಗೆ ಇ.ಡಿ. ನೋಟಿಸ್‌ ಜಾರಿ

 MUDA CASE: 8 ಮಂದಿಗೆ ಇ.ಡಿ. ನೋಟಿಸ್‌ ಜಾರಿ

6

Arrested: ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಉಪಾಧ್ಯಕ್ಷೆ ಪತಿಯ ಹತ್ಯೆ: ನಾಲ್ವರ ಬಂಧನ 

Siddaramaiah: ಸ್ವಂತ ಮನೆ ಇಲ್ಲದ ಸಿಎಂ ಇದ್ದರೆಂದರೆ ಅದು ನಾನೇ

Siddaramaiah: ಸ್ವಂತ ಮನೆ ಇಲ್ಲದ ಸಿಎಂ ಇದ್ದರೆಂದರೆ ಅದು ನಾನೇ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Kaup LaxmiJanardhana Temple: Manohar Shetty elected as Management Committee Chairman

Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.