Rain: ಇದು ಮುಂಬರುವ ದಿನಗಳ ಮುನ್ಸೂಚನೆ ಮಾತ್ರ…
Team Udayavani, Oct 6, 2023, 12:14 AM IST
ಈ ವರ್ಷದ ಮಳೆಗಾಲ ಹೆಚ್ಚು ಕಡಿಮೆ ಮುಗಿದಿದೆ. ಇನ್ನೇನಿದ್ದರೂ ಹಿಂಗಾರು ಮಳೆ.
ಕೆಲವು ವರ್ಷಗಳಿಂದ ಮುಂಗಾರು ಮಳೆಯ ಜಾಯಮಾನದಲ್ಲಿ ಆಗುತ್ತ ಬರುತ್ತಿರುವ ಬದಲಾವಣೆ ಈ ವರ್ಷ ಹೆಚ್ಚು ಸ್ಪಷ್ಟವಾಗಿ ಬಹುತೇಕ ಎಲ್ಲರಿಗೂ ಅನುಭವಕ್ಕೆ ಬಂದಿದೆ. ಹಿಮಾಚಲ ಪ್ರದೇಶದಿಂದ ತೊಡಗಿ ದಕ್ಷಿಣದ ಕರ್ನಾಟಕ, ಕೇರಳದ ವರೆಗೂ ಮಳೆ ಈ ವರ್ಷ ಅಪರಿಚಿತನಂತೆ ವರ್ತಿಸಿದೆ. ಸಿಕ್ಕಿಂನಲ್ಲಿ ಮೊನ್ನೆಯಷ್ಟೇ ಸಂಭವಿಸಿದ ಮೇಘಸ್ಫೋಟ ಈ ವರ್ಷದ ಮಳೆಗಾಲದ ಬೇಕಾಬಿಟ್ಟಿ ವರ್ತನೆಗೆ ಪ್ರಖರ ಸಾಕ್ಷಿ. ಅಲ್ಲಿ ಉಂಟಾದ ಪ್ರವಾಹದಿಂದ ನಾಶ-ನಷ್ಟ ಇನ್ನೂ ಅಂದಾಜಿಗೆ ನಿಲುಕಿಲ್ಲ.
ಇದಕ್ಕಿಂತ ಸ್ವಲ್ಪ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇಂತಹುದೇ ಪರಿಸ್ಥಿತಿ ಉದ್ಭವವಾಗಿತ್ತು. ಹಿಮಾಚಲ ಪ್ರದೇಶವೊಂದರಲ್ಲಿಯೇ ಜೂನ್ನಿಂದ ಈಚೆಗೆ ಮಳೆಯಿಂದಾಗಿ 428 ಮಂದಿ ಮೃತಪಟ್ಟಿದ್ದರೆ ಆಗಿರುವ ನಷ್ಟ 142 ಕೋಟಿ ರೂ.ಗಳಿಗೂ ಅಧಿಕ.
ಇದು ಹಿಮಾಚಲ ಪ್ರದೇಶದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಆ ಭಾಗಕ್ಕೆ ಹೆಚ್ಚು ಪರಿಚಿತವಲ್ಲದ ಅತಿವೃಷ್ಟಿ, ಮೇಘಸ್ಫೋಟ, ಪ್ರವಾಹಗಳಿಂದ ಉಂಟಾದ ಅನಾಹುತದ ತತ್ಕ್ಷಣದ ಪರಿಣಾಮ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಕೃಷಿಯ ಮೇಲೆ ಉಂಟಾಗಿರುವ ಪರಿಣಾಮ, ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ, ಜನಜೀವನಕ್ಕೆ ಆಗಿರುವ ತೊಂದರೆಯನ್ನು ಇಂತಿಷ್ಟೇ ಎಂದು ಕೂಡಲೇ ಮೌಲ್ಯರೂಪದಲ್ಲಿ ಪ್ರಸ್ತುತಪಡಿಸುವುದು ಕಷ್ಟ. ಬಾಧೆಯಂತೂ ಅಗಾಧವಾದುದೇ.
ಇನ್ನು ದಕ್ಷಿಣದತ್ತ ನೋಡಿದರೆ ಜೂನ್ನಿಂದ ಸೆಪ್ಟಂಬರ್ವರೆಗಿನ ಮಳೆಗಾಲದಲ್ಲಿ ಬೇಕಾದಷ್ಟು ಮಳೆ ಸುರಿದು ಥಂಡಿ ಹಿಡಿಸುವ ಮಲೆನಾಡು, ಕರಾವಳಿ ಸಹಿತ ಕರ್ನಾಟಕ ಈ ವರ್ಷ ಬರಗಾಲದ ಕಪಿಮುಷ್ಟಿಯಲ್ಲಿ ಸಿಲುಕಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು, 642 ಮಿ.ಮೀ. ಮಾತ್ರ ಸುರಿದಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿಯೂ ಮಳೆ ಕೊರತೆ ಕಂಡುಬಂದಿದೆ. ಮಲೆನಾಡು ಶೇ. 39, ದಕ್ಷಿಣ ಒಳನಾಡು ಶೇ. 27, ಕರಾವಳಿ ಮತ್ತು ಉತ್ತರ ಒಳನಾಡು ಒಟ್ಟಾಗಿ ಶೇ. 19ರಷ್ಟು ಮಳೆ ಕೊರತೆ ಅನುಭವಿಸಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಒಟ್ಟು ಶೇ. 25ರಷ್ಟು ಮಳೆ ಕೊರತೆಯಾಗಿದೆ.
ಅಂಕಿಅಂಶಗಳು ಮುಚ್ಚಿಡುವ ವಾಸ್ತವ
ಇದು ಬರೇ ಅಂಕಿಅಂಶ. ಇಷ್ಟನ್ನು ಮಾತ್ರ ಗಮನಿಸಿದರೆ ವಸ್ತುಸ್ಥಿತಿಯನ್ನು ತಿಳಿದಂತಾಗುವುದಿಲ್ಲ. ರಾಜ್ಯದಲ್ಲಿ ಮಳೆಗಾಲ ಆರಂಭವಾದದ್ದು ವಿಳಂಬವಾಗಿ ಮತ್ತು ದುರ್ಬಲವಾಗಿ. ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ ಇದ್ದ ಮಳೆ ಕೊರತೆ ಶೇ. 56; ಆ ತಿಂಗಳಿನಲ್ಲಿ ವಾಡಿಕೆಯ 199 ಮಿ.ಮೀ. ಮಳೆಯ ಬದಲು ಕೇವಲ 87 ಮಿ.ಮೀ. ಮಾತ್ರ ಮಳೆಯಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ವಾಡಿಕೆಯ 271 ಮಿ.ಮೀ. ಬದಲು 348 ಮಿ.ಮೀ. ಅಂದರೆ ವಾಡಿಕೆಗಿಂತ ಶೇ. 28ರಷ್ಟು ಹೆಚ್ಚುವರಿ ಮಳೆ ಸುರಿಯಿತು. ಇದು ಒಟ್ಟು ಮಳೆಗಾಲದ ಅಂಕಿಅಂಶಗಳ ನಡುವೆ ಇದ್ದ ಅಂತರವನ್ನು ಮುಚ್ಚಿ ಬಿಟ್ಟಿದೆ. ಅಂಕಿಅಂಶಗಳನ್ನು ಮಾತ್ರ ಗಮನಿಸಿದರೆ ಪರವಾಗಿಲ್ಲ ಅನ್ನಿಸುವುದು ಇದೇ ಕಾರಣಕ್ಕೆ. ಆದರೆ ವಸ್ತುಸ್ಥಿತಿ ಹಾಗಿಲ್ಲ, ಇನ್ನೂ ಕೆಟ್ಟದಾಗಿದೆ. ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ, “ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ…’ ಅಂದರೆ ಕಾಲಕ್ಕೆ ಸರಿಯಾಗಿ ಮಳೆಯಾದರೆ ಮಾತ್ರ ಭೂಮಿ ಸಸ್ಯಶಾಲಿನಿಯಾಗುತ್ತಾಳೆ. ಅತಿವೃಷ್ಟಿ, ಅನಾವೃಷ್ಟಿಗಳಾದರೆ ಬಿತ್ತಿದ ಬೆಳೆ ಕೈಗೆ ಹತ್ತುವುದಿಲ್ಲ; ಬೆಳೆದು ನಿಂತದ್ದು ಕಮರುತ್ತದೆ, ಕೊಳೆಯುತ್ತದೆ… ಹೀಗೆ. ದೇಶದ ಇತರ ರಾಜ್ಯಗಳ ಕಥೆಯೂ ಈ ವರ್ಷ ಹೆಚ್ಚು ಕಮ್ಮಿ ಇದೇ ಥರ.
ಭವಿಷ್ಯದಲ್ಲಿ ಇನ್ನಷ್ಟು
ಹಿಮಾಲಯ ಪರ್ವತ ಪ್ರದೇಶ ಮತ್ತು ಆಸುಪಾಸಿನಲ್ಲಿ ಈ ವರ್ಷ ಕಂಡುಬಂದಂತಹ ಅನಿರೀಕ್ಷಿತ ಅತಿವೃಷ್ಟಿಗಳು ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಸಂಭವಿಸಲಿವೆ ಎನ್ನುತ್ತಾರೆ ಹವಾಮಾನ ತಜ್ಞರು. ಹಿಮಾಚಲ ಪ್ರದೇಶದಲ್ಲಿ ಈ ವರ್ಷದ ಮಳೆಗಾಲದಲ್ಲಿ ಉಂಟಾದ ಹಾನಿ ಕಳೆದ ಐದು ವರ್ಷಗಳಲ್ಲಿ ಉಂಟಾಗಿದ್ದ ಒಟ್ಟು ಹಾನಿಗೂ ಹೆಚ್ಚಂತೆ. ಉತ್ತರಾಖಂಡ, ದಿಲ್ಲಿ ಮತ್ತು ಉತ್ತರ ಭಾರತ ಹಾಗೂ ಪೂರ್ವ ಭಾರತದ ಇತರ ರಾಜ್ಯಗಳು ಕೂಡ ಇಂತಹುದೇ ನಾಶ-ನಷ್ಟಗಳನ್ನು ಅನುಭವಿಸಿವೆ.
ಮನುಷ್ಯಕೃತ ಹವಾಮಾನ-ವಾತಾವರಣ ಬದಲಾವಣೆ ಇದಕ್ಕೆಲ್ಲ ಮೂಲ ಕಾರಣ ಎನ್ನುವುದು ಯಾರಿಗೂ ತಿಳಿಯದ್ದೇನಲ್ಲ. ಮಾಡಿರುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತ, ಮುಂದೆಯಾದರೂ ಸರಿಯಾದ ಹೆಜ್ಜೆಗಳನ್ನು ಇರಿಸುತ್ತ ಬದುಕುವುದೊಂದೇ ಉಳಿದಿರುವ ದಾರಿ.
ಸತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.