![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 15, 2023, 3:52 PM IST
ಜೋಕುಮಾರಗೆ ಎಣ್ಣೆ ಬೆನ್ನಿ ಕೋಡಿರಪ್ಪ… ತಾಯವ್ವ…
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ,
ದೊಡ್ಡೆಮ್ಮಿ ಗೊಡ್ಡೆಮ್ಮಿ ಹೈನಾಗಿ
ಮಡಿವಾಳ ಕೇರಿ ಹೊಕ್ಕಾನ, ಮುಡಿತುಂಬ ಹೂ ಮುಡಿದಾನ…
ಆಡುತಾ ಬಂದ ಜೋಕುಮಾರ, ಬೇಡುತಾ ಬಂದ ಜೋಕುಮಾರ..
ಲೋಕವಲ್ಲ ಬೆಳಗಲಿ, ಆಕಳು ಹಾಲು ಕರೆಯಲಿ
ಮನೆಮನೆಗಳಲ್ಲಿ, ನಿಮ್ಮ ಮನೆಗೆ ಜಯ ಜಯ
ಧನ ಧಾನ್ಯ ನೀಡಿದ ಮನೆತನಕ್ಕೆ ಒಳಿತಾಗಲಿ…
ಉತ್ತರ ಕರ್ನಾಟಕದ ಭಾಗದಲ್ಲಿ ಜೋಕುಮಾರ ಹುಣ್ಣಿಮೆಯನ್ನು ಗ್ರಾಮೀಣ ಭಾಗದ ಜನರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ದಿನದಂದು ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. 5 ದಿನಗಳ ಅನಂತರ ಗಣೇಶನನ್ನು ವಿಸರ್ಜನೆ ಮಾಡಿದ ಬಳಿಕ ಜೋಕುಮಾರ ಕುಂಬಾರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೇರೆದಾಡಿ, ಕೇರಿಯಲ್ಲಿ ಜಿಗದಾಡಿ ಕೊನೆಗೆ ದಾಸರ ಮನೆಯಲ್ಲಿ ಮರಣ ಹೊಂದುತ್ತಾನೆ ಎನ್ನುವ ಪ್ರತೀತಿ ಇದೆ. ಪೂರ್ವಜರು ಆಚರಿಸುತ್ತಾ ಬಂದಂತಹ ಧಾರ್ಮಿಕ ಕಾರ್ಯ ಕ್ರಮಗಳು ಇಂದಿಗೂ ನಮ್ಮಲ್ಲಿ ಆಚರಿಸಲಾಗುತ್ತಿದೆ. ಅವು ಗಳಲ್ಲಿ ಒಂದೆಂದರೆ ಜೋಕ್ಯಾನ ಹುಣ್ಣಿಮೆ. ತಳವಾರ ಸಮುದಾಯದ ಜೋಕುಮಾರನನ್ನು ಮಣ್ಣಿನಿಂದ ಗೊಂಬೆಯ ರೂಪದಲ್ಲಿ ಅಗಲವಾದ ಮುಖ, ಹುರಿಮೀಸೆ, ಗಿಡ್ಡ ಕಾಲುಗಳು, ಕೈಯಲ್ಲಿ ಕತ್ತಿ ಹಿಡಿದಿರುವಂತೆ ಮೂರ್ತಿ ತಯಾರಿಸಿ ಬೆಣ್ಣೆ, ಬೇವಿನ ತುಪ್ಪ, ಬೇವಿನ ಎಲೆಯ ಮೂಲಕ ಬುಟ್ಟಿಯಲ್ಲಿ ಇಟ್ಟು ಅಲಂಕರಿಸಿ ಹೆಣ್ಣುಮಕ್ಕಳು ತಲೆಮೇಲೆ ಹೊತ್ತು ಮನೆ ಮನೆಗೆ ಹೊತ್ತುಯ್ಯುತ್ತಾರೆ.
ಜೋಕುಮಾರನನ್ನು ಹೊತ್ತು ತಿರಗುವವರಿಗೆ ಜನ ಗೋಧಿ, ಜೋಳ, ಮೆಣಸಿನಕಾಯಿ ನೀಡುತ್ತಾರೆ. 7 ದಿನ ನಡೆಯುವ ಈ ಆಚರಣೆಯಲ್ಲಿ ಕೊನೆಯ ದಿನ ರಾತ್ರಿ ಊರಿನ ಎಲ್ಲ ಜನರು ಮಲಗಿದ ಅನಂತರ ಹೊಲೆಯರ ಕೇರಿಯಲ್ಲಿ ಇಟ್ಟು ಬರುತ್ತಾರೆ. ಇದಾದ ಬಳಿಕ ಜೋಕುಮಾರನ ಮೂರ್ತಿಯನ್ನು ಕೇರಿಯ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ.
ಸುತ್ತುವಾಗ ಬಾರಿಕಂಟಿಗೆ ಸೀರೆ ಸಿಲುಕಿದರೆ ಜೋಕುಮಾರನೆ ಸೀರೆ ಎಳೆದ ಎಂದು ಒನಕೆಯಿಂದ ಅವನ ತಲೆ ಒಡೆದು ಕಲ್ಲಿನಿಂದ ಹೊಡೆಯುತ್ತಾರೆ. ಆ ರುಂಡವು ಮುಖ ಮೇಲೆ ಮಾಡಿ ಬಿದ್ದರೆ ದೇಶಕ್ಕೆ ಮಳೆ ಬೆಳೆ ಸಮೃದ್ಧಿಯೂ, ಬೋರಲು ಬಿದ್ದರೆ ಅಶುಭವು ಎಂಬ ನಂಬಿಕೆ ಇದೆ. ಆ ಬುಟ್ಟಿಯನ್ನು ನದಿಯ ಬಳಿ ಹೋಗಿ ಬಿಟ್ಟು ಬರುತ್ತಾರೆ. ಮೂರು ದಿನಗಳ ಕಾಲ ನರಳಿ ಸಾಯುತ್ತಾನೆ ಎಂಬ ನಂಬಿಕೆ ಇದೆ. ಅಗಸರು ಆ ಮೂರು ದಿನ ಹೊಳೆಗೆ ಬಟ್ಟೆ ಒಗೆಯಲು ಹೋಗುವುದಿಲ್ಲ. ಜನಪದರು ಇಂದು ಜೋಕುಮಾರನ ಕಥೆಯನ್ನು ಮನೆಯಿಂದ ಮನೆಗೆ ಹಳ್ಳಿಯಿಂದ ಹಳ್ಳಿಗೆ ತಲೆಮಾರಿನಿಂದ ತಲೆಮಾರಿಗೆ ತಲುಪಿಸುತ್ತಿದ್ದಾರೆ.
ಕೆಲವು ನಂಬಿಕೆಯ ಪ್ರಕಾರ ಜೋಕುಮಾರ ಶಿವ ಪಾರ್ವತಿ ಮಗ. ಗಣೇಶನಂತೆ ಪಾರ್ವತಿ ಇವನನ್ನು ಸಹ ತನ್ನ ಮೈಯ ಮಣ್ಣಿನಿಂದ ಮಾಡಿದ್ದಳು. ಆದರೆ, ಅವಳು ಸ್ನಾನಕ್ಕೆ ಹೋದ ಸಮಯದಲ್ಲಿ ಶಿವ ಬಂದಾಗ ಜೋಕುಮಾರ ಅವನ ಸಿಟ್ಟಿಗೆ ಹೆದರಿ ತನ್ನ ಕರ್ತವ್ಯ ಮರೆತು ಓಡಿ ಹೋಗಿ ಪಾರ್ವತಿಯ ಹಿಂದೆ ಅಡಗಿ ಕೊಳ್ಳುತ್ತಾನೆ. ಈತನ ಅಲ್ಪತನಕ್ಕೆ ಅಲ್ಪಾಯುಷಿಯಾಗು ಎಂದು ಪಾರ್ವತಿ ಶಾಪ ಕೊಟ್ಟಳು ಎಂಬ ನಂಬಿಕೆ ಇದೆ. ಆದ್ದರಿಂದ ಭಾದ್ರಪದ ಮಾಸದ ಅಷ್ಟಮಿಯ ದಿನದಲ್ಲಿ ಹುಟ್ಟುವ ಜೋಕುಮಾರನ ಆಯುಷ್ಯ ಏಳು ದಿನ ಮಾತ್ರ.
- ಅಕ್ಷತಾ ನಂದಿಕೇಶ್ವರಮಠ, ವಿಜಯಪುರ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.