Immigrants; ಪಾಕ್ ನಿಂದ ಅಫ್ಘಾನ್ ವಲಸಿಗರ ಗಡಿಪಾರು: ಏನಿದು ಸಮಸ್ಯೆ?

ಪಾಕ್‌ನ ದಿಢೀರ್‌ ನಿರ್ಧಾರದ ಹಿಂದಿನ ಹಕೀಕತ್‌ ಏನು?

Team Udayavani, Dec 3, 2023, 6:15 AM IST

1-sadsads

ಭಾರತದೊಂದಿಗೆ ಕಾಶ್ಮೀರ ಗಡಿ ವಿಚಾರವಾಗಿ ಸದಾ ಕ್ಯಾತೆ ತೆಗೆಯುವ ಪಾಕಿಸ್ಥಾನ ಇದೀಗ ಹೊಸ ಸಮಸ್ಯೆಯಲ್ಲಿ ಸಿಲುಕಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವ ಪಾಕ್‌ಗೆ ಈಗ ಅಕ್ರಮ ವಲಸಿಗರ ಸಮಸ್ಯೆ ಕಾಡುತ್ತಿದೆ. ಅಫ್ಘಾನಿಸ್ಥಾನ ಸೇರಿದಂತೆ ವಿವಿಧ ದೇಶಗಳಿಂದ ಅಕ್ರಮವಾಗಿ ಬಂದು ನೆಲೆಸುತ್ತಿರುವ ಜನರನ್ನು ಪಾಕ್‌ ಸರಕಾರ ದೇಶ ಬಿಟ್ಟು ತೊಲಗುವಂತೆ ಆದೇಶ ನೀಡಿದೆ. ಪಾಕ್‌-ಅಫ್ಘಾನ್‌ ಗಡಿಯಲ್ಲೀಗ ಸ್ವದೇಶಕ್ಕೆ ತೆರಳಲು ಸಜ್ಜಾಗಿರುವ ಅಫ್ಘಾನಿಗರ ದಂಡೇ ಕಾಣಸಿಗುತ್ತಿದೆ. ಏನಿದು ಸಮಸ್ಯೆ?, ಪಾಕ್‌ನ ದಿಢೀರ್‌ ನಿರ್ಧಾರದ ಹಿಂದಿನ ಹಕೀಕತ್‌ ಏನು? ಎನ್ನುವುದರ ವಿವರ ಇಲ್ಲಿದೆ.

4 ಮಿಲಿಯನ್‌ ಅಫ್ಘಾನ್‌ ನಾಗರಿಕರು!
ಪಾಕಿಸ್ಥಾನದಲ್ಲಿ ವಿವಿಧ ರಾಷ್ಟ್ರಗಳಿಂದ ವಲಸೆ ಬಂದ ನಾಗರಿಕರು ಅಕ್ರಮ ವಾಗಿ ನೆಲೆಸುತ್ತಿದ್ದಾರೆ. ಇವರೆಲ್ಲರನ್ನು ಅ.31ರ ಒಳಗೆ ದೇಶ ಬಿಟ್ಟು ತೊಲಗು ವಂತೆ ಪಾಕ್‌ ಸರಕಾರ ಆದೇಶ ನೀಡಿತ್ತು. ನಿಗದಿತ ಸಮಯ ಮೀರಿದರೂ ದೇಶದಲ್ಲೇ ನೆಲೆಸಿರುವ ಅಕ್ರಮ ವಲಸಿಗರನ್ನು ಪಾಕ್‌ನ ಅಧಿಕಾರಿಗಳು ಬಂಧಿಸುತ್ತಿದ್ದಾರೆ. ಸರಕಾರದ ಪ್ರಕಾರ ದೇಶದಲ್ಲಿ ಅಂದಾಜು 4 ಮಿಲಿಯನ್‌ ಅಫ್ಘಾನಿಸ್ಥಾನ ಪ್ರಜೆಗಳು ವಾಸಿಸುತ್ತಿದ್ದಾರೆ. ಇದರಲ್ಲಿ 1.7 ಮಿಲಿಯನ್‌ ನಾಗರಿಕರು ಅಕ್ರಮವಾಗಿ ನೆಲೆಯೂರಿದ್ದಾರೆ. ಪಾಕ್‌ ಸರಕಾರ ಆದೇಶ ನೀಡುತ್ತಿದ್ದಂತೆ ಅಂದಾಜು 1,28,000 ಅಫ್ಘಾನ್ನರು ತೋಖರಾಮ್‌ ಗಡಿಯ ಮೂಲಕ ದೇಶವನ್ನು ತೊರೆದಿದ್ದಾರೆ. ಅದಲ್ಲದೇ ಪಾಕಿಸ್ಥಾನದ ಪೇಶಾವರ ಹಾಗೂ ಅಫ್ಘಾನಿಸ್ಥಾನದ ಜಲಾಲ್‌ಬಾದ್‌ ಗಡಿ ಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಬಸ್‌, ಟ್ರಕ್‌ಗಳಲ್ಲಿ ನೂರಾರು ಮಂದಿ ಸ್ವದೇಶಕ್ಕೆ ವಾಪಸಾಗಲು ಸನ್ನದ್ಧ ರಾಗಿದ್ದಾರೆ. ಆದರೆ ಉಭಯ ದೇಶಗಳ ನಡುವೆ ಪದೇಪದೆ ಗಡಿಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಗಡಿ ಯನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಅಫ್ಘಾನ್‌ ವಲಸಿಗರು ಇತ್ತ ಪಾಕಿ ಸ್ಥಾನದಲ್ಲೂ ಉಳಿಯಲಾರದೆ, ಅತ್ತ ಸ್ವದೇಶಕ್ಕೆ ಮರಳಲೂ ಸಾಧ್ಯವಾಗದೆ ಗಡಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.

 ಗಡೀಪಾರಿಗೆ ಕಾರಣ?
ವಿಶ್ವಸಂಸ್ಥೆ ಹಾಗೂ ಮಾನವ ಹಕ್ಕುಗಳ ಸಂಸ್ಥೆಗಳು ವಲಸಿಗರನ್ನು ಗಡೀಪಾರು ಮಾಡದಂತೆ ಕಿವಿಮಾತು ಹೇಳಿದರೂ ಪಾಕಿಸ್ಥಾನ ಸರಕಾರ, ದೇಶದಲ್ಲಿನ ಎಲ್ಲ ಅಕ್ರಮ ವಲಸಿಗರನ್ನು ದೇಶ ತೊರೆಯುವಂತೆ ಕಟ್ಟಪ್ಪಣೆ ಮಾಡಿದೆ. 1970ರಲ್ಲಿ ಸೋವಿಯತ್‌ ಯುದ್ಧವಾದಾಗ ಹಲವಾರು ಮಂದಿ ಅಫ್ಘಾನಿಸ್ಥಾನದಿಂದ ಪಲಾಯನ ಮಾಡಿ ಇಲ್ಲಿ ಬಂದು ನೆಲೆಸಿದ್ದರು. ಈಗ ಪಾಕಿಸ್ಥಾನ ಸರಕಾರ ವಲಸಿಗರು ಎಂದು ಗುರುತಿಸಿರುವವರಲ್ಲಿ ಹೆಚ್ಚಿನವರು ಪಾಕಿಸ್ಥಾನದಲ್ಲಿ ಜನಿಸಿದ್ದವರಾಗಿದ್ದಾರೆ. ದಾಖಲೆಗಳನ್ನು ನೀಡುವ ಪ್ರಕ್ರಿಯೆ ಸುದೀರ್ಘ‌ವಾದುದರಿಂದ ಇವರಲ್ಲಿ ಅನೇಕರಿಗೆ ಅಗತ್ಯ ದಾಖಲೆಪತ್ರಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇವರೆಲ್ಲರೂ ಗಡೀಪಾರಿನ ಭೀತಿಯನ್ನು ಎದುರಿಸುತ್ತಿದ್ದಾರೆ.

ಸಂಕಷ್ಟದ ಮಡುವಿನಲ್ಲಿ ಮುಳುಗಿರುವ ಪಾಕ್‌
ಸದ್ಯ ಪಾಕ್‌ ತನ್ನದೇ ಆದ ಸಮಸ್ಯೆಗಳಲ್ಲಿ ಮುಳುಗಿದೆ. ಆರ್ಥಿಕ ಅಸ್ಥಿರತೆ, ಹಣದುಬ್ಬರ, ಬಡತನ, ಹಸಿವು, ರಾಜಕೀಯ ಸಮಸ್ಯೆಗಳು ಹಾಗೂ ಸಂಪನ್ಮೂಲ ಕೊರತೆಯನ್ನು ಪಾಕಿಸ್ಥಾನ ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಸಂಪೂರ್ಣ ದಿವಾಳಿಯಾಗಿರುವ ಪಾಕಿಸ್ಥಾನದ ಜನಜೀವನ ಇನ್ನೂ ಸಹಜಸ್ಥಿತಿಗೆ ಮರಳಿಲ್ಲ. ಇವೆಲ್ಲದರ ನಡುವೆ ದೇಶದಲ್ಲಿ ರಾಜಕೀಯ ಅಸ್ಥಿರತೆ ಮೇರೆ ಮೀರಿದ್ದು ಸ್ಥಿರ ಸರಕಾರವೂ ಇಲ್ಲ. ಮುಂದಿನ ವರ್ಷದ ಫೆಬ್ರವರಿ ಆದಿಯಲ್ಲಿ ದೇಶದ ಸಂಸತ್‌ಗೆ ಚುನಾವಣೆ ನಡೆಯಲಿದೆ. ಈ ಎಲ್ಲ ಸಂಕಷ್ಟಗಳ ನಡುವೆ ಅಕ್ರಮ ವಲಸಿಗರ ಸಮಸ್ಯೆ ಇಲ್ಲಿನ ರಾಜಕೀಯ ಪಕ್ಷಗಳಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದೆಡೆಯಿಂದ ಅಕ್ರಮ ಮತದಾನದ ಭೀತಿಯಾದರೆ ಮತ್ತೂಂದೆಡೆಯಿಂದ ಚುನಾವಣೆಗಳು ಶಾಂತಿಯುತವಾಗಿ ನಡೆಯಲು ಅಕ್ರಮ ವಲಸಿಗರು ತೊಡರುಗಾಲಾಗಿ ಪರಿಣಮಿಸಬಹುದು ಎಂಬ ಭೀತಿಯೂ ಇಲ್ಲಿನ ಹಂಗಾಮಿ ಸರಕಾರವನ್ನು ಕಾಡುತ್ತಿದೆ. ಜತೆಗೆ ವಲಸಿಗರು ಯಾವ ತೆರಿಗೆಯನ್ನು ಪಾವತಿಸದೇ ಇರುವುದರಿಂದ ಪಾಕಿಸ್ಥಾನಕ್ಕೆ ವಲಸಿಗರು ಬಲುದೊಡ್ಡ ಹೊರೆಯಾಗಿ ಪರಿಣಮಿಸಿದ್ದಾರೆ. ತನ್ನ ಪ್ರಜೆಗಳಿಗೇ ಆಹಾರ ಪೂರೈಸಲು ಪರದಾಡುತ್ತಿರುವ ಪಾಕ್‌ ಸರಕಾರಕ್ಕೆ ವಲಸಿಗರ ಗೋಳಾದರೂ ಹೇಗೆ ತಾನೆ ಕೇಳಿಸೀತು?

ಹೆಚ್ಚುತ್ತಿವೆ ಅಕ್ರಮ, ಅಪರಾಧ ಕೃತ್ಯಗಳು
ಪಾಕಿಸ್ಥಾನದ ಸಂಕಷ್ಟಗಳ ಸರಮಾಲೆ ಇಷ್ಟಕ್ಕೇ ಮುಗಿಯುವುದಿಲ್ಲ. ಸದ್ಯ ಪಾಕಿಸ್ಥಾನದ್ದು “ಮಾಡಿದ್ದುಣ್ಣೋ ಮಹಾರಾಯ’ ಎನ್ನುವ ಸ್ಥಿತಿ. ದಶಕಗಳಿಂದ ಉಗ್ರರು, ಕಳ್ಳಸಾಗಣೆದಾರರು, ಧರ್ಮಾಂಧರನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತ ಬಂದ ಪಾಕಿಸ್ಥಾನ ಈಗ ಇದರ ಪ್ರತಿಫ‌ಲವನ್ನು ಅನುಭವಿಸುತ್ತಿದೆ. ಈ ಹಿಂದೆ ಭಯೋತ್ಪಾದಕರನ್ನು ಪೋಷಿಸಿ, ಪಾಲನೆ ಮಾಡುತ್ತ ಭಾರತ ಸಹಿತ ತನ್ನ ನೆರೆಯ ದೇಶಗಳಲ್ಲಿ ಭಯೋತ್ಪಾದನ ಕೃತ್ಯಗಳಿಗೆ ಪ್ರಚೋದನೆ ನೀಡುತ್ತ ಬಂದಿದ್ದ ಪಾಕ್‌ಗೀಗ ಇದುವೇ ಮುಳ್ಳಾಗಿ ಪರಿಣಮಿಸಿದೆ. ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿ, ಇನ್ನಿತರ ಅಪರಾಧಗಳು ಹಾಗೂ ಮಾದಕದ್ರವ್ಯ ಕಳ್ಳಸಾಗಣೆ ಪಾಕಿಸ್ಥಾನ ಸರಕಾರದ ನಿದ್ದೆಗೆಡಿಸಿದೆ. ಇಲ್ಲೂ ತನ್ನ ನರಿಬುದ್ಧಿ ಬಿಡದ ಪಾಕಿಸ್ಥಾನ ಈ ಎಲ್ಲ ಅಕ್ರಮ, ಅಪರಾಧ ಕೃತ್ಯಗಳನ್ನು ನೆರೆ ದೇಶಗಳ ಅದರಲ್ಲೂ ಮುಖ್ಯವಾಗಿ ಅಫ್ಘಾನಿಸ್ಥಾನದ ಉಗ್ರಗಾಮಿ ಸಂಘಟನೆಗಳ ತಲೆಗೆ ಕಟ್ಟುವ ಕಾರ್ಯ ಮಾಡುತ್ತಿದೆ. ಅಷ್ಟು ಮಾತ್ರವಲ್ಲ ಇವೆಲ್ಲದರಲ್ಲಿ ಅಕ್ರಮ ವಲಸಿಗರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದೆ.
ಪಾಕಿಸ್ಥಾನ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕ, ಉಗ್ರದಾಳಿಗಳನ್ನು ಎದುರಿಸಿದೆ. ಇದರಲ್ಲಿ ಹೆಚ್ಚಿನ ದಾಳಿಗಳು ಅಫ್ಘಾನಿಸ್ಥಾನದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಅಲ್ಲಿನ ಮೂಲಗಳು ಹೇಳುತ್ತವೆ. ಹೆಚ್ಚುತ್ತಿರುವ ಆತ್ಮಾಹುತಿ ದಾಳಿಗಳಿಂದ ಕಂಗೆಟ್ಟಿರುವ ಪಾಕಿಸ್ಥಾನ ಸರಕಾರ ವಲಸಿಗರನ್ನು ಗಡೀಪಾರು ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡಿದೆ. ಅಂಕಿಅಂಶದ ಪ್ರಕಾರ ಪಾಕ್‌ ಈ ವರ್ಷ ಸುಮಾರು 418 ಉಗ್ರದಾಳಿಯನ್ನು ಕಂಡಿದೆ. ಕಳೆದ ವರ್ಷ 365 ದಾಳಿಗಳು ನಡೆದಿದ್ದವು. ಅಲ್ಲದೇ ಈ ಬಾರಿ ನಡೆಸಲಾದ 24 ಆತ್ಮಾಹುತಿ ದಾಳಿಗಳಲ್ಲಿ 14 ದಾಳಿಗಳು ಅಫ್ಘಾನಿಸ್ಥಾನ ಪ್ರೇರಿತ ಎಂಬುದು ಪಾಕ್‌ನ ಭದ್ರತಾ ಪಡೆಗಳ ಆರೋಪ. ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ಸಹಾಯವನ್ನು ನೀಡುತ್ತಿರುವುದಕ್ಕಾಗಿ ಪಾಕಿಸ್ಥಾನ, ಅಫ್ಘಾನಿಸ್ಥಾನದಲ್ಲಿನ ತಾಲಿಬಾನ್‌ ಸರಕಾರವನ್ನು ದೂರುತ್ತಿದೆ.

ಅಫ್ಘಾನ್‌ ನಿರಾಶ್ರಿತರಿಂದ ನಿರ್ಗಮನ ಶುಲ್ಕ ವಸೂಲು!

ಅಫ್ಘಾನ್‌ ನಿರಾಶ್ರಿತರಿಗೆ ಸ್ವದೇಶಕ್ಕೆ ಮರಳಲು ನೀಡಿದ್ದ ಗಡುವು ಮುಕ್ತಾಯಗೊಂಡ ಬಳಿಕ ಈಗ ಪಾಕಿಸ್ಥಾನ ಸರಕಾರ, ಸ್ವದೇಶಕ್ಕೆ ಹಿಂದಿರುಗಲು ಬಯಸಿರುವ ಅಫ್ಘಾನ್‌ ನಿರಾಶ್ರಿತರಿಂದ ನಿರ್ಗಮನ ಶುಲ್ಕವನ್ನು ಸಂಗ್ರಹಿಸಲು ನಿರ್ಧರಿಸಿದೆ. ಅವಶ್ಯ ದಾಖಲೆಗಳಿಲ್ಲದೇ ದೇಶಕ್ಕೆ ಆಗಮಿಸಿ ಈಗ ದೇಶವನ್ನು ತೊರೆಯಲು ಇಚ್ಛಿಸಿರುವ ಅಫ್ಘಾನ್‌ ನಿರಾಶ್ರಿತರಿಗೆ 830 ಯುಎಸ್‌ ಡಾಲರ್‌ ಶುಲ್ಕವನ್ನು ಪಾಕ್‌ ವಿಧಿಸುತ್ತಿದೆ. ವೀಸಾಗಳ ಅವಧಿ ಮುಗಿದರೂ ದೇಶದಲ್ಲಿ ವಾಸಿಸುತ್ತಿರುವವರಿಗೂ ಈ ಶುಲ್ಕವನ್ನು ವಿಧಿಸಲು ಪಾಕ್‌ ಚಿಂತನೆ ನಡೆಸಿದೆ. ಅಫ್ಘಾನಿಸ್ಥಾನದಲ್ಲಿ ಪಾಶ್ಚಾತ್ಯ ಸರಕಾರ ಮತ್ತು ಸಂಘಟನೆಗಳೊಂದಿಗೆ ಕೆಲಸ ಮಾಡಿ, ತಾಲಿಬಾನ್‌ ಆಕ್ರಮಣದ ಅನಂತರ ಪಾಕ್‌ಗೆ ವಲಸೆ ಬಂದು ನೆಲೆಸಿರುವ ನಾಗರಿಕರ ಮೇಲೂ ಪಾಕಿಸ್ಥಾನ ಶುಲ್ಕವನ್ನು ವಿಧಿಸಿದೆ. ಆರ್ಥಿಕವಾಗಿ ಕುಗ್ಗಿರುವ ಪಾಕ್‌ ಈ ಕ್ರಮದಿಂದ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವ ದಾರಿ ಹುಡುಕಿಕೊಂಡಿದೆ. ಆದರೆ ಪಾಕ್‌ ಸರಕಾರದ ಈ ಕ್ರಮವನ್ನು ಅಂತಾರಾಷ್ಟ್ರೀಯ ಸಂಘಟನೆಗಳು, ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳು ತೀವ್ರವಾಗಿ ಖಂಡಿಸಿವೆ. ಅತ್ತ ಅಮೆರಿಕ 25 ಸಾವಿರ ಹಾಗೂ ಯುಕೆ 20 ಸಾವಿರ ಅಫ್ಘಾನ್ನರಿಗೆ ಮಾನವೀಯತೆಯ ನೆಲೆಯಲ್ಲಿ ಪುನರ್ವಸತಿಯನ್ನು ಕಲ್ಪಿಸಲು ಮುಂದಾಗಿದೆ. ಆದರೆ ಪಾಕಿಸ್ಥಾನ ಸರಕಾರ ಅಫ್ಘಾನ್‌ ನಿರಾಶ್ರಿತರಿಗೆ ವಿಧಿಸಿರುವ ಶುಲ್ಕ ಅಮೆರಿಕ ಹಾಗೂ ಯುಕೆಯನ್ನು ಚಿಂತೆಗೀಡುಮಾಡಿದೆ.

ತಾಲಿಬಾನ್‌ ಸರಕಾರದ ವಾದ ಏನು?
ಅಫ್ಘಾನಿಸ್ಥಾನದ ಪ್ರಸ್ತುತ ಸ್ಥಿತಿಯು ಪಾಕಿಸ್ಥಾನಕ್ಕಿಂತ ಭಿನ್ನವಾಗೇನೂ ಇಲ್ಲ. ದೇಶದ ಆರ್ಥಿಕತೆಯು ಕುಸಿತ ಕಂಡಿದೆ. ಭೂಕಂಪದಿಂದ ಸಂಪೂರ್ಣ ತತ್ತರಿಸಿರುವ ಅಲ್ಲಿನ ಜನತೆ ಇನ್ನೂ ಸುಧಾರಿಸಿಕೊಂಡಿಲ್ಲ. ಇದರ ಜತೆಗೆ ಆಹಾರ ಅಭದ್ರತೆ, ಮಾನವ ಹಕ್ಕುಗಳ ಉಲ್ಲಂಘನೆಯಂಥ ಸಮಸ್ಯೆಯನ್ನು ಅಫ್ಘಾನಿಸ್ಥಾನ ಎದುರಿಸುತ್ತಿದೆ. ಪಾಕ್‌ನಿಂದ ಬರುತ್ತಿರುವ ವಲಸಿಗರಿಗಾಗಿ ಅಲ್ಲಲ್ಲಿ ಕ್ಯಾಂಪ್‌ಗ್ಳನ್ನು ನಿರ್ಮಿಸಿ, ಆಹಾರ, ಸಿಮ್‌, ಮೊಬೈಲ್‌ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಸ್ವದೇಶಕ್ಕೆ ವಾಪಸಾಗಿರುವವರ ಜೀವನ ನಿರ್ವಹಣೆಗೆ ಅತ್ಯವಶ್ಯವಾಗಿರುವ ಉದ್ಯೋಗ ಮತ್ತವರ ಭವಿಷ್ಯದ ಬಗೆಗೆ ತಾಲಿಬಾನ್‌ ಸರಕಾರ ಯಾವುದೇ ಖಾತರಿಯನ್ನು ನೀಡಿಲ್ಲ. ಇನ್ನು ಪಾಕ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಲ್ಲಿ ಅಫ್ಘಾನಿಸ್ಥಾನ ಪ್ರೇರಿತ ಉಗ್ರರ ಕೈವಾಡವಿದೆ ಎಂಬ ಪಾಕ್‌ನ ಆರೋಪವನ್ನು ತಾಲಿಬಾನ್‌ ಸರಕಾರ ತಳ್ಳಿಹಾಕಿದೆ. ಈ ವಿಷಯ ಈಗಾಗಲೇ ಹಳಸಿರುವ ಪಾಕಿಸ್ಥಾನ ಮತ್ತು ಅಫ್ಘಾ ನಿಸ್ಥಾನ ನಡುವಣ ಬಾಂಧವ್ಯವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆ ಇದೆ.

ವಿಶ್ವಸಂಸ್ಥೆ ಖಂಡನೆ
ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ವಲಸಿಗರ ಗಡೀಪಾರನ್ನು ಖಂಡಿಸುವುದರ ಜತೆಯಲ್ಲಿ ವಲಸಿಗರ ಬಗೆಗೆ ಕಳಕಳಿಯನ್ನು ವ್ಯಕ್ತಪಡಿಸಿವೆ. ಅಲ್ಲದೇ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಈ ನಿಲುವು ಮಾನವ ಹಕ್ಕುಗಳ ದುರಂತಕ್ಕೆ ಸಾಕ್ಷಿಯಾಗಬಹುದೆಂದು ಎಚ್ಚರಿಕೆ ನೀಡಿದೆ. ಆದರೆ ಪಾಕ್‌ ಸರಕಾರ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಅಂತಾರಾಷ್ಟ್ರೀಯ ತತ್ತÌಗಳು ಹಾಗೂ ನಿಯಮಗಳೊಂದಿಗೆ ಇದು ಹೊಂದಿಕೆಯಾಗುತ್ತದೆ ಹಾಗೂ ದೇಶೀಯ ಕಾನೂನುಗಳಿಗೂ ಅನುಗುಣವಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಪ್ರತೀದಿನ 10,000 ಅಫ್ಘಾನಿಗರ ಗಡೀಪಾರು ಗುರಿ!
ಪಾಕಿಸ್ಥಾನದ ನೈಋತ್ಯ ಪ್ರಾಂತದಲ್ಲಿ ನೆಲೆಯೂರಿರುವ ಅಫ್ಘಾನಿಸ್ಥಾನ್‌ ನಿರಾಶ್ರಿತರನ್ನು ಗುರುತಿಸಿ, ಪ್ರತೀದಿನ 10,000 ಮಂದಿಯನ್ನು ಬಂಧಿಸಿ ಅವರನ್ನು ಅಫ್ಘಾನಿಸ್ಥಾನಕ್ಕೆ ಗಡೀಪಾರು ಮಾಡುವ ಗುರಿಯನ್ನು ಸ್ಥಳೀಯ ಪೊಲೀಸರಿಗೆ ನೀಡಲಾಗಿದೆ ಎಂದು ಬಲೂಚಿಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ಥಾನ ಸರಕಾರ ಅಕ್ರಮ ವಲಸಿಗರ ವಿರುದ್ಧ ಈಗ ಕೈಗೊಂಡಿರುವ ಬಿಗಿ ಕ್ರಮದಿಂದ ದೇಶದಲ್ಲಿ ಸೂಕ್ತ ದಾಖಲೆಪತ್ರಗಳೊಂದಿಗೆ ನೆಲೆಸಿರುವ ಅಫ್ಘಾನ್‌ ಪ್ರಜೆಗಳಿಗೆ ಯಾವುದೇ ಸಮಸ್ಯೆಯಾಗದು ಎಂದು ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ವಿವಾದ
ಪಾಕಿಸ್ಥಾನದಲ್ಲಿ ದಶಕಗಳಿಂದ ನೆಲೆಸಿರುವ ಅಫ್ಘಾನ್‌ ನಿರಾಶ್ರಿತರನ್ನು ಸ್ವದೇಶಕ್ಕೆ ಗಡೀಪಾರು ಮಾಡುವ ಪಾಕಿಸ್ಥಾನ ಸರಕಾರದ ನಿರ್ಧಾರ ಏಕಪಕ್ಷೀಯ ಮತ್ತು ಅಮಾನವೀಯ ಎಂದು ದೂರಿರುವ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿವೆ. ಸೂಕ್ತ ದಾಖಲೆಪತ್ರಗಳನ್ನು ಹೊಂದಿರದ ಅಫ್ಘಾನ್‌ ನಿರಾಶ್ರಿತರನ್ನು ಗಡೀಪಾರು ಮಾಡುವುದನ್ನು ತತ್‌ಕ್ಷಣ ಸ್ಥಗಿತಗೊಳಿಸುವಂತೆ ಸಂಘಟನೆಗಳು ಸುಪ್ರೀಂಗೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿವೆ.
ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ವಿಚಾರಣೆಯನ್ನು ಆರಂಭಿಸಿದೆ. ಅಫ್ಘಾನ್‌ ನಿರಾಶ್ರಿತರನ್ನು ಸ್ವದೇಶಕ್ಕೆ ಗಡೀಪಾರು ಮಾಡುವ ಪಾಕಿಸ್ಥಾನ ಸರಕಾರದ ನಿರ್ಧಾರದಿಂದ ಪಾಕಿಸ್ಥಾನದಲ್ಲಿ ನೆಲೆಯಾಗಿರುವ ಅಫ್ಘಾನಿಸ್ಥಾನೀಯರೆಲ್ಲರೂ ಆತಂಕದಲ್ಲಿ ದಿನದೂಡುವಂತಾಗಿದೆ. ಅಷ್ಟು ಮಾತ್ರವಲ್ಲದೆ ಅಫ್ಘಾನ್‌ ವಲಸಿಗರಿಗೆ ಸ್ವದೇಶಕ್ಕೆ ಮರಳಲು ಪಾಕ್‌ ಸರಕಾರ ನೀಡಿದ್ದ ಗಡುವು ಅಂತ್ಯಗೊಂಡ ಬಳಿಕ ಸರಕಾರ ಅಫ್ಘಾನಿಸ್ಥಾನಕ್ಕೆ ವಾಪಸಾಗಲು ಸಜ್ಜಾಗುತ್ತಿರುವವರಿಂದ ನಿರ್ಗಮನ ಶುಲ್ಕವನ್ನು ವಸೂಲು ಮಾಡುವ ಅಮಾನವೀಯ ಕ್ರಮಕ್ಕೆ ಮುಂದಾಗಿದೆ. ಸದ್ಯ ಅಫ್ಘಾನಿಸ್ಥಾನದಲ್ಲಿ ತಾಲಿಬಾನಿ ಆಡಳಿತವಿದ್ದು ಒಂದು ವೇಳೆ ಸ್ವದೇಶಕ್ಕೆ ಮರಳಿದರೂ ಅಲ್ಲಿ ಅವರಿಗೆ ಸೂಕ್ತ ರಕ್ಷಣೆ ಲಭಿಸುವ ಖಾತರಿ ಇಲ್ಲವಾಗಿದೆ. ಪಾಕಿಸ್ಥಾನ ಆಡಳಿತ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈಗ ಗಡಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಫ್ಘಾನ್‌ ನಿರಾಶ್ರಿತರಿಗೆ ಕನಿಷ್ಠ ಪ್ರಾಥಮಿಕ ಅಗತ್ಯತೆಗಳೂ ಲಭಿಸುತ್ತಿಲ್ಲ. ಇವೆಲ್ಲದರ ಹಿನ್ನೆಲೆಯಲ್ಲಿ ತತ್‌ಕ್ಷಣ ಗಡೀಪಾರು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಂಘಟನೆಯ ಪರ ವಕೀಲರು ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ಥಾನ ಸರಕಾರದ ಪರ ವಕೀಲರು, ಅಧಿಕೃತ ದಾಖಲೆಪತ್ರಗಳನ್ನು ಹೊಂದಿರದ ಎಲ್ಲ ವಿದೇಶಿ ವಲಸಿಗರನ್ನು ಅವರವರ ಸ್ವದೇಶಕ್ಕೆ ತೆರಳಲು ಸರಕಾರ ತಿಂಗಳುಗಳ ಹಿಂದೆಯೇ ಸೂಚನೆ ನೀಡಿತ್ತು. ಇಂತಹ ಅಕ್ರಮ ವಲಸಿಗರಲ್ಲಿ ಅಫ್ಘಾನಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರಿಂದ ದೇಶದ ಭದ್ರತೆಗೆ ಅಪಾಯವಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರತಿಪಾದಿಸಿದರು. ಇತ್ತಂಡಗಳ ವಾದ-ವಿವಾದ ಆಲಿಸಿದ ಸುಪ್ರೀಂ ನ್ಯಾಯಪೀಠ, ಅರ್ಜಿಯ ಸಂಬಂಧ ಸಮಗ್ರ ವಿವರವನ್ನು ಮುಂದಿಡುವಂತೆ ಪಾಕ್‌ ಸರಕಾರದ ಪರ ವಕೀಲರಿಗೆ ಸೂಚನೆಯನ್ನು ನೀಡಿ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ವಿಧಾತ್ರಿ ಭಟ್‌, ಉಪ್ಪುಂದ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.