Autism: ಸ್ವಲೀನತೆ: ಹಾಗೆಂದರೇನು?


Team Udayavani, Apr 21, 2024, 3:46 PM IST

14-health-1

ಎಪ್ರಿಲ್‌ 2: ಸ್ವಲೀನತೆ ಅರಿವು ದಿನ; ಎಪ್ರಿಲ್‌: ಸ್ವಲೀನತೆ ಸ್ವೀಕಾರ ಮಾಸ

“”ಒಗಟನ್ನು ಬಿಡಿಸಲು ನೀಲ ತುಣುಕುಗಳ ಸುಳಿವು”

ಜಾಗತಿಕವಾಗಿ ಎಪ್ರಿಲ್‌ 2 ದಿನಾಂಕವನ್ನು ಸ್ವಲೀನತೆಯ ಅರಿವು ದಿನ (ಆಟಿಸಂ ಅವೇರ್‌ನೆಸ್‌ ಡೇ)ವನ್ನಾಗಿ ಆಚರಿಸುತ್ತಿದ್ದು, ಎಪ್ರಿಲ್‌ ತಿಂಗಳನ್ನು ಸ್ವಲೀನತೆಯ ಸ್ವೀಕಾರ ಮಾಸ (ಆಟಿಸಂ ಆಕ್ಸೆಪ್ಟೆನ್ಸ್‌ ಮಂತ್‌)ವನ್ನಾಗಿ ಪರಿಗಣಿಸಲಾಗುತ್ತದೆ. ಆಟಿಸಂ ಅಥವಾ ಸ್ವಲೀನತೆಯ ಬಗ್ಗೆ ಜನಸಾಮಾನ್ಯರನ್ನು ಸೂಕ್ಷ್ಮ ಸಂವೇದಿಗಳನ್ನಾಗಿಸುವ, ಅವರ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ಪ್ರತೀ ವರ್ಷವೂ ಇದಕ್ಕೆ ನಿರ್ದಿಷ್ಟ ಧ್ಯೇಯವಾಕ್ಯವನ್ನು ಆರಿಸಿಕೊಳ್ಳಲಾಗುತ್ತದೆ. 2023ರಲ್ಲಿ, “ಮನೆ, ಉದ್ಯೋಗ ಸ್ಥಳ, ಕಲಾ ವಿಭಾಗ ಮತ್ತು ನೀತಿ ರೂಪಣೆಯಲ್ಲಿ ವ್ಯಾಖ್ಯಾನವನ್ನು ಬದಲಾಯಿಸುವುದು’ ಎಂಬುದು ಧ್ಯೇಯವಾಕ್ಯವಾಗಿತ್ತು. ಪ್ರಸ್ತುತ ವರ್ಷಕ್ಕಾಗಿ, “ಸ್ವಲೀನತೆಯ ಕುರಿತಾದ ಅರಿವು: ಎಸ್‌ಡಿಜಿ (ಸಸ್ಟೆನೇಬಲ್‌ ಡೆವಲೆಪ್‌ ಮೆಂಟ್‌ ಗೋಲ್ಸ್‌ – ಸುಸ್ಥಿರ ಅಭಿವೃದ್ಧಿ ಗುರಿಗಳು) ಗಳ ಸರಿಹೊಂದಾಣಿಕೆಯಲ್ಲಿ ಸಶಕ್ತೀಕರಣದ ಯಶೋಗಾಥೆಗಳು, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ವಿಜಯಗಳು’ ಎಂಬುದು ಸ್ವಲೀನತೆ ಅರಿವು ದಿನದ ಧ್ಯೇಯವಾಕ್ಯವಾಗಿದೆ. ಸ್ವಲೀನತೆಯ ಬಗ್ಗೆ ಜನರು ಹೊಂದಿರುವ ಅರಿವು, ಜ್ಞಾನದ ಮಟ್ಟವನ್ನು ಎತ್ತರಿಸುವುದು, ಸ್ವಲೀನತೆಯನ್ನು ಹೊಂದಿರುವ ಮಗು ಮತ್ತು ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವಲ್ಲಿ ಹಾಗೂ ಅಂತಹ ಮಕ್ಕಳಿಗೆ ಕಾರ್ಯಯೋಗ್ಯ ಅವಕಾಶಗಳನ್ನು ಒದಗಿಸುವಲ್ಲಿ ನಮ್ಮನ್ನು ನಾವು ಸೂಕ್ಷ್ಮ ಸಂವೇದಿಗಳನ್ನಾಗಿಸುವುದು ಈ ಲೇಖನದ ಉದ್ದೇಶವಾಗಿದೆ.

ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ (ಎಎಸ್‌ಡಿ) ಎಂಬುದು ಬಾಲ್ಯಕಾಲದಲ್ಲಿ ಮಕ್ಕಳನ್ನು ಬಾಧಿಸುವ ಒಂದು ಅನಾರೋಗ್ಯವಾಗಿದೆ. ಇದರಿಂದಾಗಿ ಸಾಮಾಜಿಕ ಸಂವಹನ, ಸಾಮಾಜಿಕವಾಗಿ ಬೆರೆಯುವುದರಲ್ಲಿ ಸತತ ತೊಂದರೆಗಳು ಮಗುವಿಗೆ ಉಂಟಾಗಬಹುದು ಹಾಗೂ ಇದು ಮಗುವಿನ ವರ್ತನೆ, ಚಟುವಟಿಕೆ ಅಥವಾ ಆಸಕ್ತಿಗಳು ತಡೆಯುಕ್ತ ಮತ್ತು ಪುನರಾವರ್ತಿತ ಸ್ವರೂಪದಲ್ಲಿರುವುದಕ್ಕೆ ಕಾರಣವಾಗಬಹುದು.

ಸ್ವಲೀನತೆಯ ಬಗ್ಗೆ ಸಾಮಾನ್ಯವಾಗಿ ಇರುವ ಕೆಲವು ತಪ್ಪು ಕಲ್ಪನೆಗಳು ಎಂದರೆ: ­

ಆಟಿಸಂ ಎಂಬುದು ಒಂದು ಮಾನಸಿಕ ಅನಾರೋಗ್ಯವಾಗಿದ್ದು, ಆಟಿಸಂ ಹೊಂದಿರುವ ಎಲ್ಲರೂ ಮನೋವೈಕಲ್ಯಗಳನ್ನು ಹೊಂದಿರುತ್ತಾರೆ. ­

ಮಗು ಆಟಿಸಂಗೆ ತುತ್ತಾಗಿರುವುದಕ್ಕೆ ತಾಯಿ ಕಾರಣ, ಕಳಪೆ ಪೋಷಕತ್ವದಿಂದ ಆಟಿಸಂ ಉಂಟಾಗುತ್ತದೆ. ­

ಆಟಿಸಂ ಹೊಂದಿರುವ ವ್ಯಕ್ತಿಗಳು ಪ್ರೀತಿಯನ್ನು ಅನುಭವಿಸಲಾರರು, ಅಂಥವರಿಗೆ ಅರ್ಥಪೂರ್ಣ ಸಾಮಾಜಿಕ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ ಮತ್ತು ಸಹಾನುಭೂತಿಯ ಭಾವನೆಗಳ ಕೊರತೆಯನ್ನು ಹೊಂದಿರುತ್ತಾರೆ.

ಆಟಿಸಂ ಪೀಡಿತರು ಬುದ್ಧಿವಂತಿಕೆಯ ಕೊರತೆ ಹೊಂದಿರುತ್ತಾರೆ, ಅವರು ಬುದ್ಧಿಮಾಂದ್ಯರಾಗಿರುತ್ತಾರೆ.

ಆಟಿಸಂ ಅಥವಾ ಸ್ವಲೀನತೆಯನ್ನು ನೀಲಿ ಬಣ್ಣದಿಂದ ಗುರುತಿಸುತ್ತಾರೆ. ಈ ವರ್ಣವು ಪ್ರಶಾಂತತೆ ಮತ್ತು ಅನಂತವನ್ನು ಪ್ರತಿನಿಧಿಸುತ್ತಿದ್ದು, ಸ್ವಲೀನತೆಯನ್ನು ಹೊಂದಿರುವ ಮಕ್ಕಳಿಗೆ ಅನಂತ ಅವಕಾಶಗಳು, ಪ್ರೀತಿ ಮತ್ತು ಬೆಂಬಲ ಸಿಗಬೇಕು ಎನ್ನುವುದನ್ನು ಪ್ರತಿಪಾದಿಸುತ್ತದೆ. ಸ್ವಲೀನತೆ ಹೊಂದಿರುವವರು ವಿಭಿನ್ನ ವ್ಯಕ್ತಿಗಳಾಗಿದ್ದು, ಯಾವುದೇ ಪೂರ್ವಸಿದ್ಧ ಚೌಕಟ್ಟಿಗೆ ಸಿಗುವುದಿಲ್ಲ. ಹೀಗಾಗಿಯೇ ಸ್ವಲೀನತೆಯನ್ನು ಪಝಲ್‌ ತುಣುಕುಗಳಿಗೆ ಹೋಲಿಸಲಾಗುತ್ತಿದ್ದು, ನಾವು ಅವುಗಳನ್ನು ಸರಿಹೊಂದಿಸಿ ಜೋಡಿಸಬೇಕು ಎನ್ನುವುದನ್ನು ಪ್ರತಿನಿಧಿಸುತ್ತದೆ; ಆ ಮೂಲಕ ಈ ಅನಾರೋಗ್ಯದ ಸಂಕೀರ್ಣತೆ ಮತ್ತು ನಿಗೂಢತೆಯನ್ನು ಪ್ರತಿಪಾದಿಸುತ್ತದೆ.

ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ನ ಲಕ್ಷಣಗಳನ್ನು ಹೊಂದಿರುವ ಮಕ್ಕಳು ದಿನೇ ದಿನೆ ಹೆಚ್ಚು ಸಾಮಾನ್ಯವಾಗುತ್ತಿದ್ದಾರೆ. ಸ್ವಲೀನತೆಯನ್ನು ಒಂದು “ವೈಕಲ್ಯ’ವಾಗಿ ಕಾಣಲಾಗುತ್ತಿದ್ದರೂ ನಿಜವಾಗಿಯೂ ಅದು ಒಂದು “ವಿಶೇಷ ಸಾಮರ್ಥ್ಯ’ವಾಗಿದ್ದು, ಈ ಅರಿವು ಜನರ ಮನಸ್ಸಿನಲ್ಲಿ ಹೆಚ್ಚಾಗಿ ಬೇರೂರಬೇಕಿದೆ. ತಮ್ಮ ಜೀವನದಲ್ಲಿ ಸಾಧನೆಯ ಶಕ್ತಿಯಿಂದ ಗುಣ ಹೊಂದುವ ಅಪೂರ್ವ ಅನುಭವ ಗಳಿಸಿರುವ ಆಟಿಸಂ ಹೊಂದಿರುವ ಇಬ್ಬರು ವ್ಯಕ್ತಿಗಳ ಯಶೋಗಾಥೆಯನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಆಟಿಸಂ ಹೊಂದಿರುವ ತಮ್ಮ ಮಕ್ಕಳಿಗೆ ಅವರ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗುವ ಅವಕಾಶವನ್ನು ಒದಗಿಸುವ ಮೂಲಕ ತಮ್ಮಲ್ಲಿ ಮತ್ತು ತಮ್ಮ ಆಟಿಸಂ ಪೀಡಿತ ಮಕ್ಕಳಲ್ಲಿ ಹೊಸ ಆತ್ಮವಿಶ್ವಾಸ, ಹೊಸ ಆಶಾಕಿರಣವನ್ನು ಬೆಳಗುವುದಕ್ಕೆ ಅನೇಕ ಯುವ ಹೆತ್ತವರಿಗೆ ಈ ಯಶೋಗಾಥೆಗಳು ಪ್ರೇರಣೆಯಾಗಬಲ್ಲವು.

ಯಶೋಗಾಥೆ 1 ಪ್ಯಾರಾಲಿಂಪಿಕ್ಸ್‌ ಈಜು ಚಾಂಪಿಯನ್‌ ಮಾರ್ಕ್‌ ಎವರ್: “ನಾನು ಸಾಧ್ಯತೆಗಳ ಮೂಲಕ ತೊಡಗುತ್ತೇನೆ, ಮಿತಿಗಳಿಂದ ಅಲ್ಲ

‘ ಮಾರ್ಕ್‌ ಬಾಲಕನಾಗಿದ್ದಾಗ ಅಂದರೆ 2 ವರ್ಷ ವಯಸ್ಸಿನಲ್ಲಿಯೇ ಆಟಿಸಂ ಮತ್ತು ಬುದ್ದಿಮತ್ತೆಯ ಸಮಸ್ಯೆಗಳನ್ನು ಹೊಂದಿರುವುದು ಪತ್ತೆಯಾಯಿತು. ಅವರು 1991ರಲ್ಲಿ ನೆದರ್‌ಲ್ಯಾಂಡ್ಸ್‌ನ ಹಿಲೆಗೋಮ್‌ನಲ್ಲಿ ಜನಿಸಿದರು. ಮಾರ್ಕ್‌ ಸ್ವತಃ ಓದಲಾರ, ಬರೆಯಲಾರ ಅಥವಾ ಮಾತನಾಡಲಾರ; ಸಾಮಾಜಿಕವಾಗಿಯೂ ತಾನಾಗಿಯೇ ಸೇರಿಕೊಳ್ಳಲಾರ ಎಂಬುದನ್ನು ಅವನ ಹೆತ್ತವರು ಬಹಳ ಕಷ್ಟದಿಂದ ಅರಗಿಸಿಕೊಳ್ಳಬೇಕಾಯಿತು. ಮಾರ್ಕ್‌ ಅಸಂಖ್ಯಾಕ ಪ್ರಚೋದನೆಗಳನ್ನು ಗ್ರಹಿಸಿಕೊಳ್ಳಲು ಹೋರಾಡುತ್ತಿದ್ದರೆ ಅವನ ಹೆತ್ತವರು ಅವನನ್ನು “ಬರೇ’ ಕೌಟುಂಬಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮುಂದೆ ತಳ್ಳುತ್ತಿದ್ದರು. ಎಲ್ಲವನ್ನೂ ಸಾಧಿಸುವ ಅತ್ಯುತ್ಸಾಹ ಇದ್ದ ಒಬ್ಬ ಬಾಲಕ ಅವನಾಗಿದ್ದ. ಈಜಿನಲ್ಲಿ ಡಿಪ್ಲೊಮಾ ಪಡೆಯುವುದಕ್ಕಾಗಿ ಅವನಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು.

ತಾನು ಬಹಳ ಚೆನ್ನಾಗಿ ಈಜುತ್ತೇನೆ ಎಂಬುದು ಸುಮಾರು 11 ವರ್ಷ ವಯಸ್ಸಿನಲ್ಲಿ ಮಾರ್ಕ್‌ಗೆ ತಿಳಿಯಿತು. ಮಾರ್ಕ್‌ ಆರಂಭದಲ್ಲಿ ವೈಕಲ್ಯಗಳನ್ನು ಹೊಂದಿದ್ದ ಈಜುಗಾರರ ಜತೆಗೆ ಸ್ಪರ್ಧಿಸುತ್ತಿದ್ದ. ಆದರೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆನ್ನಿಸಿ ಇತರ ಈಜುಗಾರರ ಜತೆಗೆ ಸ್ಪರ್ಧಿಸಲಾರಂಭಿಸಿದ. ಅನೇಕ ಸಾಮಾನ್ಯ ಈಜು ಕ್ಲಬ್‌ಗಳು ಅವನಿಗೆ ಅವಕಾಶ ಒದಗಿಸಲು ನಿರಾಕರಿಸಿದ ಬಳಿಕ ಝಡ್‌ವಿ ಹಾರ್ಲೆಮ್‌ ಅವರ ಮಾರ್ಗದರ್ಶನದಲ್ಲಿ ಮಾರ್ಕ್‌ ಇತರ ಈಜುಗಾರರ ಜತೆಗೆ ಸ್ಪರ್ಧೆಗಿಳಿಯುವ ಅವಕಾಶ ಲಭಿಸಿತು. ಇದನ್ನು ಸಾಧಿಸುವುದಕ್ಕಾಗಿ ಮಾರ್ಕ್‌ ಹೆಚ್ಚು ಬಾರಿ, ಹೆಚ್ಚು ಕಾಲ ತರಬೇತಿ ಪಡೆಯಬೇಕಾಯಿತು. ತನ್ನ 17ನೇ ವಯಸ್ಸಿನಲ್ಲಿ ಮಾರ್ಕ್‌ ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ “ಎ’ ಶ್ರೇಣಿಯ ಉಚ್ಚ ಶ್ರೇಯಾಂಕವನ್ನು ಗಳಿಸಿದ. “ಜನರಿಗೆ ಪೂರ್ವಾಗ್ರಹಗಳಿರುತ್ತವೆ; ಅದುವೇ ಅವರ ಸಮಸ್ಯೆ ಎಂಬುದು ಆ ಬಳಿಕ ನನಗೆ ಅರಿವಾಯಿತು’ ಎಂಬುದಾಗಿ ಮಾರ್ಕ್‌ ಹೇಳುತ್ತಾನೆ.

ಯಶೋಗಾಥೆ 2 ಸ್ವಲೀನತೆಯನ್ನು ಹೊಂದಿರುವ ಮಗುವೊಂದರ ತಾಯಿ ದಾಖಲಿಸಿರುವ ಹೇಳಿಕೆ

ಈ ಮಗು 2001ರ ನವೆಂಬರ್‌ 5ರಂದು ಅಮೆರಿಕದ ಇಲಿನಾಯ್ಸ ರಾಜ್ಯದಲ್ಲಿ ಜನಿಸಿತು. ಅದು ಫೋರ್ಸೆಪ್ಸ್‌ ಪ್ರಸೂತಿ ಆಗಿತ್ತು, ಪ್ರಸೂತಿ ಅವಧಿಯೂ ದೀರ್ಘ‌ (10-11 ತಾಸುಗಳು) ಮತ್ತು ಜನನ ಕಾಲದಲ್ಲಿ ಶಿಶುವಿನ ದೇಹತೂಕ ಅಧಿಕವಾಗಿತ್ತು (8.81 ಪೌಂಡ್‌ ಗಳು). ಈ ಕಷ್ಟಗಳನ್ನು ಎದುರಿಸಿದರೂ ಮಗು 2 ವರ್ಷಗಳ ವರೆಗೆ ಸಾಮಾನ್ಯವಾದ ಬೆಳವಣಿಗೆಯನ್ನು ಕಂಡಿತು. 2 ವರ್ಷ ವಯಸ್ಸಿನ ಬಳಿಕ ಮಗುವಿನ ಬೆಳವಣಿಗೆ ನಿಧಾನವಾಗುತ್ತಿರುವುದು, ದೃಷ್ಟಿಗೆ ದೃಷ್ಟಿ ಜೋಡಿಸದಿರುವುದು, ಹೆಸರು ಕರೆದರೆ ಪ್ರತಿಕ್ರಿಯಿಸದಿರುವುದನ್ನು ಹೆತ್ತವರು ಗುರುತಿಸಿದರು. ಶಿಶು ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಿದಾಗ ಈ ಶಿಶು ಮಧ್ಯಮದಿಂದ ತೀವ್ರ ಪ್ರಮಾಣದ ಆಟಿಸಂ ಹೊಂದಿರುವುದನ್ನು ಖಚಿತಪಡಿಸಿದರು.

ಇದನ್ನು ತಿಳಿದು ಕಂಗಾಲಾದರೂ ಹೆತ್ತವರು ವಾಸ್ತವವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಮಗು ಸಾಮಾಜಿಕ ಪ್ರವೇಶವನ್ನು ಪಡೆಯುವುದಕ್ಕೆ ನೆರವಾಗುವ ನಿರ್ಧಾರಕ್ಕೆ ಬಂದರು. ಮಗುವಿನ ಅತೀ ಚಟುವಟಿಕೆ ಮತ್ತು ಚಾಂಚಲ್ಯವನ್ನು ಅನೇಕ ಬಂಧುಮಿತ್ರರು ಮಗುವನ್ನು ಮನೋರೋಗಿಗಳ ಆರೋಗ್ಯಸೇವಾಶ್ರಮಕ್ಕೆ ದಾಖಲಿಸುವ ಅಥವಾ ಕೈಗಳಿಗೆ ಕೋಳ ತೊಡಿಸಬೇಕು ಎಂಬ ಸಲಹೆಗಳನ್ನು ನೀಡಿದರು. ಆದರೆ ಹೆತ್ತವರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಮಗು ಬೆಳಕು, ಸದ್ದು ಮತ್ತು ಇತರ ಅನೇಕ ಪ್ರಚೋದಕಗಳಿಗೆ ಅತಿಯಾದ ಪ್ರತಿಸ್ಪಂದನೆಯನ್ನು ಪ್ರದರ್ಶಿಸುತ್ತಿತ್ತು.

ಮಕ್ಕಳು, ಮಕ್ಕಳ ಮನಶ್ಶಾಸ್ತ್ರ ಮತ್ತಿತರ ಕ್ಷೇತ್ರಗಳಲ್ಲಿ ಈ ಹಿಂದೆಯೇ ಸ್ವಲ್ಪ ಮಟ್ಟಿಗಿನ ಆಸಕ್ತಿ ಹೊಂದಿದ್ದ ಈ ಮಗುವಿನ ತಾಯಿಯು ಆಟಿಸಂ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಮತ್ತು ಅರಿವನ್ನು ಹೊಂದಿದ ಬಳಿಕ ಸ್ವಲೀನತೆಯಿರುವ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುವ ಬಗ್ಗೆ ಡಿಪ್ಲೊಮಾ ಕಲಿಕೆ ನಡೆಸಲು ಮತ್ತು ವಿವಿಧ ಮಕ್ಕಳು ಪ್ರದರ್ಶಿಸುವ ಸ್ವಲೀನತೆಯ ಲಕ್ಷಣಗಳ ಗುತ್ಛದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದರು. ಜತೆಗೆ ಸ್ವಲೀತೆಯುಳ್ಳ ಮಕ್ಕಳು ಎಂಬುದಾಗಿ ಗುರುತಿಸಿರುವ ಮಕ್ಕಳು ಅದರ ಜತೆಗೆ ಅಪ್ರತಿಮ ಗುಣಗಳು ಮತ್ತು ಪ್ರತಿಭೆಗಳನ್ನು ಹೊಂದಿರುತ್ತಾರೆ ಎಂಬುದನ್ನು ಮನಗಂಡರು.

ಇಂತಹ ಮಕ್ಕಳು ಗಮನಾರ್ಹ ಗ್ರಹಣ ಮತ್ತು ದೃಶ್ಯ ಕೌಶಲಗಳು, ಉತ್ಕೃಷ್ಟ ದೀರ್ಘ‌ಕಾಲೀನ ಸ್ಮರಣಶಕ್ತಿ ಮತ್ತು ವಿವರಗಳ ಮೇಲೆ ಉತ್ತಮ ಏಕಾಗ್ರತೆಯ ಗುಣಗಳನ್ನು ಹೊಂದಿರುವುದನ್ನು ಗಮನಿಸಿದರು. ಜನದಟ್ಟಣೆಯ ಮಾರುಕಟ್ಟೆಗಳು ಮತ್ತು ಥಿಯೇಟರ್‌ಗಳಂತಹ ಪ್ರದೇಶಗಳಿಗೆ ತನ್ನ ಮಗುವನ್ನು ಕರೆದೊಯ್ಯುವ ಮೂಲಕ ತನ್ನ ಮಗುವನ್ನು ವೈವಿಧ್ಯಮಯ ಪ್ರಚೋದಕಗಳಿಗೆ ಒಡ್ಡುವಂತಹ ಕಾರ್ಯವನ್ನು ಆಕೆ ನಡೆಸಿದರು.

ತನ್ನ ಮಗು ಸಂಗೀತ, ಕರಕುಶಲ ಕಲೆ, ಈಜು ಮತ್ತು ಬಾಸ್ಕೆಟ್‌ಬಾಲ್‌ ಸಹಿತ ವಿವಿಧ ಆಟಗಳನ್ನು ಆಡುವುದರಲ್ಲಿ ತನ್ನ ಮಗುವಿಗೆ ಅಪಾರ ಆಸಕ್ತಿ ಇರುವುದನ್ನು ತಾಯಿ ಗಮನಿಸಿದರು. ಮಗು ಈಜುವ ವೇಳೆ ಕೈಗಳನ್ನು ಬಡಿಯುವುದು, ದೈಹಿಕ ಚಲನೆಗಳಂತಹ ವಿವಿಧ ಈಜು ಕೌಶಲಗಳನ್ನು ಪ್ರದರ್ಶಿಸುವುದನ್ನು ಆಕೆ ಗುರುತಿಸಿದರು. “ನನ್ನ ಮಗುವೇಕೆ ಹೀಗೆ’. “ಎಲ್ಲರ ಎದುರಿಗೆ ನನಗೆ ಇವನಿಂದಾಗಿ ಮುಜುಗರವಾಗುತ್ತದೆ’ ಎಂಬಂತಹ ಸಾಮಾನ್ಯ ಋಣಾತ್ಮಕ ಆಲೋಚನೆಗಳನ್ನು ಆಕೆ ಬದಿಗಿರಿಸಿ, “ನನ್ನ ಮಗುವಿನ ಈ ವರ್ತನೆಯನ್ನೇ ನಾನು ಪ್ರಯೋಜನಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು’ ಎಂಬುದಾಗಿ ವಿಭಿನ್ನವಾಗಿ ಚಿಂತಿಸಿದರು. ಮಗು ಈಜುವ ವೇಳೆ ನಡೆಸುತ್ತಿದ್ದ ಕೈಗಳನ್ನು ಬಡಿಯುವ ವರ್ತನೆಯನ್ನೇ ಉಪಯೋಗಿಸಿಕೊಂಡು ಆತ ಬಾಸ್ಕೆಟ್‌ಬಾಲ್‌ ಆಡುವಂತೆ ಮತ್ತು ತಾಳವಾದ್ಯ (ಮೃದಂಗ) ನುಡಿಸುವಂತೆ ಪ್ರೇರೇಪಿಸಿದರು.

ಮಗುವಿನ ಅತೀ ಚಟುವಟಿಕೆಯ, ಚಾಂಚಲ್ಯ ವರ್ತನೆಯನ್ನು ಸದುಪಯೋಗಕಾರಿಯಾಗಿ, ಸೃಷ್ಟಿಶೀಲವಾಗಿ ಹರಿಯಿಸುವ ಪ್ರಯತ್ನವಾಗಿ ಮಗು ಕಲಾಲೋಕದಲ್ಲಿ ತೊಡಗುವಂತೆ ಹುರಿದುಂಬಿಸಿದರು. “ವಿಶೇಷ ಮಕ್ಕಳಿಗೆ ಬೋಧಕಿಯಾಗಿ ಮತ್ತು ಸ್ವಲೀನತೆಯನ್ನು ಹೊಂದಿರುವ ಮಗುವಿಗೆ ತಾಯಿಯಾಗಿ ಈ ಪ್ರಯಾಣದುದ್ದಕ್ಕೂ ಈ ಮಕ್ಕಳು ಜನರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸಾಮಾನ್ಯ ಮಕ್ಕಳಿಗಿಂತ ಮುಂದಿರುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಸ್ವಲೀನತೆಯನ್ನು ಹೊಂದಿರುವ ಮಕ್ಕಳು ನೀವು ಹೇಳಿದ್ದನ್ನು ಕೇಳುವುದಿಲ್ಲ, ಬದಲಾಗಿ ನಿಮ್ಮ ಆಲೋಚನೆಗಳನ್ನು ಆಲಿಸುತ್ತಾರೆ’ ಎಂಬುದಾಗಿ ಈ ಮಹಾತಾಯಿ ಉದ್ಗರಿಸುತ್ತಾರೆ.

ಈ ಹಿಂದೆಯೇ ಹೇಳಿರುವ ಹಾಗೆ, 2024ರ ಸ್ವಲೀನತೆ ಅರಿವು ಮಾಸದ ಧ್ಯೇಯವು “ಸ್ವಲೀನತೆಯ ಕುರಿತಾದ ಅರಿವು: ಎಸ್‌ ಡಿಜಿ (ಸಸ್ಟೆನೇಬಲ್‌ ಡೆವಲೆಪ್‌ಮೆಂಟ್‌ ಗೋಲ್ಸ್‌ – ಸುಸ್ಥಿರ ಅಭಿವೃದ್ಧಿ ಗುರಿಗಳು) ಗಳ ಸರಿಹೊಂದಾಣಿಕೆಯಲ್ಲಿ ಸಶಕ್ತೀಕರಣದ ಯಶೋಗಾಥೆಗಳು, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ವಿಜಯಗಳು’ ಎಂಬುದಾಗಿದೆ. ಎಸ್‌ಡಜಿಗಳು ಅಥವಾ ಸುಸ್ಥಿರ ಅಭಿವೃದ್ಧಿ ಗುರಿಗಳು ಎಲ್ಲ ಸಮಾಜಗಳಿಗಾಗಿ ಜಾಗತಿಕ ಗುರಿಗಳಾಗಿದ್ದು, “ಯಾರನ್ನೂ ಹಿಂದೆ ಉಳಿಯಲು ಬಿಡಬಾರದು’ ಎಂಬ ಶಪಥ ಮಾಡಬೇಕಾಗಿದೆ. ಸ್ವಲೀನತೆಯನ್ನು ಹೊಂದಿರುವ ಮಕ್ಕಳಿಗಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಅವರಿಗೆ ನಾವು ಹೇಗೆ ಬೆಂಬಲ ನೀಡಬೇಕು ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ.

ಎಸ್‌ಡಿಜಿ 3: ಉತ್ತಮ ಆರೋಗ್ಯ ಮತ್ತು ಕಲ್ಯಾಣ (ಬೇಗನೆ ರೋಗಪತ್ತೆ, ಚಿಕಿತ್ಸೆ, ಸತತ ಆರೋಗ್ಯ ಆರೈಕೆ)

  • ­ಎಲ್ಲ ಹೆತ್ತವರೂ ತಮ್ಮ ಮಕ್ಕಳ ಬೆಳವಣಿಗೆಯ ಮೈಲಿಗಲ್ಲುಗಳ ಬಗ್ಗೆ ನಿಗಾ ಹೊಂದಿರಬೇಕು. ಯಾವುದೇ ವಿಚಲನೆ ಅಥವಾ ವಿಳಂಬ ಗಮನಕ್ಕೆ ಬಂದರೆ ಅವುಗಳನ್ನು ಗುರುತಿಸುವುದು ಮುಖ್ಯ ಮತ್ತು ಆರೋಗ್ಯ ಸೇವಾ ಸಿಬಂದಿ (ಕ್ಲಿನಿಕಲ್‌ ಸೈಕಾಲಜಿಸ್ಟ್‌, ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌, ಆಕ್ಯುಪೇಶನಲ್‌ ಥೆರಪಿಸ್ಟ್‌, ಸ್ಪೆಶಲ್‌ ಎಜ್ಯುಕೇಟರ್‌)ಯ ಸಹಕಾರದೊಂದಿಗೆ ಬೇಗನೆ ಮಗು ಹೊಂದಿರುವ ಸಮಸ್ಯೆಯನ್ನು ಗುರುತಿಸುವುದು ಹಾಗೂ ಅತ್ಯುತ್ತಮ ಫ‌ಲಿತಾಂಶದ ಬಗ್ಗೆ ಸಲಹೆ ಪಡೆಯಬೇಕು.

ಎಸ್‌ಡಿಜಿ 4: ಗುಣಮಟ್ಟದ ಶಿಕ್ಷಣ (ಸಮಗ್ರ, ಒಳಗೊಳ್ಳುವಿಕೆಯ ಶಿಕ್ಷಣ ಮತ್ತು ಜೀವನಪರ್ಯಂತ ಕಲಿಯುವಿಕೆಯ ಅವಕಾಶಗಳು) ­

  • ಶಾಲೆಗಳು ಎಲ್ಲ ವಿಧದ ಮಕ್ಕಳನ್ನೂ ಒಳಗೊಳ್ಳುವಂತಹ ಶಿಕ್ಷಣ ಒದಗಿಸುವ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಗಣಿಸಬೇಕು. ಇದು ಸ್ವಲೀನತೆಯನ್ನು ಹೊಂದಿರುವ ಮಗು ಮತ್ತು ಸಾಮಾನ್ಯ ಮಗು – ಇಬ್ಬರಿಗೂ ಪರಸ್ಪರ ಪ್ರಯೋಜನಕಾರಿ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯುವುದಕ್ಕೆ ಅಗತ್ಯವಾಗಿರುವ ವಿವಿಧ ವೈಕಲ್ಯಗಳ ಬಗೆಗಿನ ಅರಿವನ್ನು ಬಾಲ್ಯದಿಂದಲೇ ಸಾಮಾನ್ಯ ಮಗುವಿಗೆ ಇದು ಒದಗಿಸುತ್ತದೆ. ಇನ್ನೊಂದೆಡೆ ಸ್ವಲೀನತೆಯನ್ನು ಹೊಂದಿರುವ ಮಗು ಸಹಜ ಚೈತನ್ಯಯುಕ್ತ ವಾತಾವರಣವನ್ನು ಈ ಮೂಲಕ ಪಡೆದು ಸಮಾಜದಲ್ಲಿ ತಾನೂ ಒಳಗೊಂಡಿರುವ ಭಾವವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಎಸ್‌ಡಿಜಿ 8: ಘನತೆಯುಕ್ತ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆ (ಸಮಾಜದಲ್ಲಿ ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗಿಯಾಗುವುದು, ಸಮಗ್ರ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಅವಕಾಶಗಳು)

  • ಸ್ವಲೀನತೆಯನ್ನು ಹೊಂದಿರುವ ಅನೇಕ ಮಕ್ಕಳು ಅತ್ಯುನ್ನತ ಬೌದ್ಧಿಕ ಮಟ್ಟವನ್ನು ಹೊಂದಿದ್ದು, ಸರಿಯಾದ ರೀತಿಯಲ್ಲಿ ಬೆಳೆಸಿ ಉಪಯೋಗಿಸಿದರೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಅಥವಾ ಔದ್ಯೋಗಿಕ ಕ್ಷೇತ್ರಗಳಲ್ಲಿ ಗರಿಷ್ಠ ಫ‌ಲಿತಾಂಶವನ್ನು ಗಳಿಸಬಹುದಾಗಿದೆ. ­
  • ಉದ್ಯೋಗ ಗಳಿಸುವುದಕ್ಕೆ ನೆರವಾಗಬಲ್ಲ ಚಟುವಟಿಕೆಗಳನ್ನು ಗುರುತಿಸಬೇಕು.

ಎಸ್‌ಡಿಜಿ 10: ಅಸಮಾನತೆಗಳನ್ನು ಕಡಿಮೆ ಮಾಡುವುದು

  • ­ “ಸ್ವಲೀನತೆ’ ಎಂಬ ಹಣೆಪಟ್ಟಿಯನ್ನು ಮನಸ್ಸಿನಿಂದ ದೂರ ಮಾಡಿ ಮಗುವನ್ನು ಹೃತ್ವೂರ್ವಕವಾಗಿ ಸ್ವೀಕರಿಸಬೇಕು. ­
  • ಸ್ವಲೀನತೆಯ ಮುಸುಕಿನ ಹಿಂದೆ ಅವರಲ್ಲಿ ಇರಬಹುದಾದ ವಾಸ್ತವಿಕ ಪ್ರತಿಭೆಗಳು, ಸಾಮರ್ಥ್ಯಗಳನ್ನು ಗುರುತಿಸಬೇಕು ಮತ್ತು ಅವರು ತಮ್ಮ ಜೀವನಪಥದಲ್ಲಿ ಮುಂದುವರಿಯುವಂತೆ ಪ್ರೇರೇಪಿಸಬೇಕು.

ಎಸ್‌ಜಿಡಿ 16: ಶಾಂತಿ, ನ್ಯಾಯ ಮತ್ತು ಸದೃಢ ಸಂಸ್ಥೆಗಳು (ಎಲ್ಲರ ಹಕ್ಕುಗಳನ್ನು ಗೌರವಿಸುವ ಮತ್ತು ಎತ್ತಿಹಿಡಿಯುವ ಸಮಗ್ರ ಸಮಾಜಗಳು) ­

  • ಸ್ವಲೀನತೆಯುಳ್ಳ ಮಗು ಪ್ರತಿಸ್ಪಂದಿಸದಿದ್ದರೂ ನಗುವಿನಿಂದ ಸ್ವಾಗತಿಸಿ. ­
  • ಎಷ್ಟು ಸಾಧ್ಯವೋ ಅಷ್ಟು ಅವರ ಜತೆಗೆ ಮಾತನಾಡಿ. ­
  • ನಿಮ್ಮ ಮಗುವಿನ ಜತೆಗೆ ಸ್ವಲೀನತೆಯುಳ್ಳ ಮಗು ಆಟವಾಡುವಂತೆ ಆಹ್ವಾನಿಸಿ. ­
  • ನೀವು ಸಾರ್ವಜನಿಕ ಸ್ಥಳವೊಂದರಲ್ಲಿದ್ದು, ಸ್ವಲೀನತೆಯನ್ನು ಹೊಂದಿರುವ ಮಗುವೊಂದು ರಚ್ಚೆ ಹಿಡಿದಿದ್ದರೆ ಅಥವಾ ಕೋಪೋದ್ರೇಕ ಪ್ರದರ್ಶಿಸುತ್ತಿದ್ದರೆ ಮಗುವನ್ನು ನೇರವಾಗಿ ನಿಯಂತ್ರಿಸುವುದಕ್ಕೆ ಸಾಧ್ಯವಾಗದಿದ್ದರೂ ನಿಮ್ಮ ಸಹಾಯಹಸ್ತವನ್ನು ಚಾಚಿ. ಮಗುವನ್ನು ನಿಭಾಯಿಸುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತಿರುವ ಮಗುವಿನ ತಾಯಿ ಅಥವಾ ಆರೈಕೆದಾರರಿಗೆ ನೀವು ಸಹಾಯ ಮಾಡಬಹುದು (ಅವರ ಬ್ಯಾಗ್‌ ಹಿಡಿದುಕೊಳ್ಳಬಹುದು, ಮಗು ಕುಳಿತಲ್ಲಿಂದ ಏಳಲು ನಿರಾಕರಿಸುತ್ತಿದ್ದರೆ ಮಗುವನ್ನು ಎತ್ತಿಕೊಳ್ಳಲು ನೆರವಾಗಬಹುದು, ಮಗುವನ್ನು ನಿಭಾಯಿಸಲು ಗೊತ್ತಿರುವ ಯಾರನ್ನಾದರೂ ಕರೆಯಲು ಸಹಾಯ ಮಾಡಬಹುದು). ­
  • ಸ್ವಲೀನತೆಯನ್ನು ಹೊಂದಿರುವ ಮಗು, ಸ್ವಲೀನತೆಯ ವಿಷಯ ಬಗ್ಗೆ ಆಸಕ್ತಿ, ಕುತೂಹಲ ಬೆಳೆಸಿಕೊಳ್ಳಿ; ಈ ಕುಟುಂಬ ಸದಸ್ಯರ ಜತೆಗೆ ಸಂಭಾಷಣೆ ನಡೆಸಿ; ಆಗ ಸ್ವಲೀನತೆಯುಳ್ಳ ಮಗು ಅವರಿಗಿದ್ದರೆ ಅವರ ಸಮಸ್ಯೆ, ಕಷ್ಟಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ದೊರೆಯುತ್ತದೆ. ಸಾಧ್ಯವಿದ್ದರೆ ನೀವು ಕೂಡ ಕೆಲವು ಪರಿಹಾರ ಸೂತ್ರಗಳನ್ನು ಸೂಚಿಸಬಹುದು. ­
  • ಸ್ವಲೀನತೆಯುಳ್ಳ ಮಗುವಿನ ಆರೈಕೆ ಪ್ರಕ್ರಿಯೆಯಲ್ಲಿ ನೆರವಾಗಬಲ್ಲ ಹೊಸ ಮಾಹಿತಿಗಳು, ಹೊಸ ಜನರ ಸಂಪರ್ಕಗಳನ್ನು ಹಂಚಿಕೊಳ್ಳಿ.

ನೆನಪಿಡಿ: “”ಮಗು ಅಥವಾ ವಯಸ್ಕರಿಗೆ ಸ್ವಲೀನತೆಯ ಹಣೆಪಟ್ಟಿ ಕಟ್ಟಬೇಡಿ”; “ಸಾಮರ್ಥ್ಯವನ್ನು ನೋಡಿರಿ, ಹಣೆಪಟ್ಟಿಯನ್ನಲ್ಲ”

-ಡಾ| ಸುನಿಲಾ ಜಾನ್‌,

ಅಸೋಸಿಯೇಟ್‌ ಪ್ರೊಫೆಸರ್‌

ಸಂಜನಾ ಶೇಷಾದ್ರಿ

-ಪದ್ಮಾ ಶೇಷಾದ್ರಿ

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.