![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-415x249.jpg)
Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ
Team Udayavani, May 18, 2024, 1:16 AM IST
![Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ](https://www.udayavani.com/wp-content/uploads/2024/05/DCUD-620x328.jpg)
ಉಡುಪಿ: ಜಿಲ್ಲೆಯ ಕೆಲವು ಗ್ರಾ.ಪಂ.ಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಿರುವ ಜತೆಗೆ ಮುಂಗಾರು ಸಮೀಪಿಸುತ್ತಿರುವುದರಿಂದ ಅಗತ್ಯ ಪೂರ್ವ ಸಿದ್ಧತೆ ಕೈಗಳ್ಳಲು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿ ತಿಯ ಸಹಯೋಗದೊಂದಿಗೆ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ “ಜಿಲ್ಲೆಯ ಕುಡಿ ಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದ ಸಿದ್ಧತೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಬೈಂದೂರು ಪ.ಪಂ. ವ್ಯಾಪ್ತಿಯ 10 ವಾರ್ಡ್ಗಳಿಗೆ ಟ್ಯಾಂಕರ್ ನೀರು ನೀಡಲಾಗುತ್ತಿದೆ. ಬ್ರಹ್ಮಾವರ ಮತ್ತು ಬೈಂದೂರು, ಪೆರ್ಡೂರು ಗ್ರಾ.ಪಂ.ಗಳ ಕೆಲವು ಪ್ರದೇಶ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿಗಳ ನೇತೃತ್ವದ ಕಾರ್ಯಪಡೆಯಲ್ಲಿ ತೀರ್ಮಾನ ತೆಗೆದುಕೊಂಡು ಈ ಪ್ರದೇ ಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮೇ 4ರಿಂದ ರೇಷನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಎತ್ತರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲ ಕಡೆ ಮಳೆ ನೀರು ಹರಿಯುವ ತೋಡು/ಚರಂಡಿ ಸ್ವತ್ಛ ಮಾಡಲಾಗಿದೆ. ಈಗಾಗಲೇ 200ರಿಂದ 250 ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಮೆಸ್ಕಾಂ ವತಿಯಿಂದ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುವ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ತಂಡ ಸಿದ್ಧವಿದೆ. ಗುಡುಗು ಸಿಡಿಲಿನ ಮುನ್ಸೂಚನೆಗೆ ಆ್ಯಪ್ ಕೂಡ ಬಂದಿದ್ದು ಮಳೆಗಾಲಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಜಿಲ್ಲಾದ್ಯಂತ ಕಾಲುಸಂಕಗಳನ್ನು ಆದ್ಯತೆ ಮೇರೆಗೆ ನಿರ್ಮಿಸಲಾಗುತ್ತಿದೆ. ಖಾಸಗಿ ಜಮೀನಿನಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಕೆಲವು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಜಮೀನು ಮಾಲಕರು ಸಹಕರಿಸಬೇಕು. ನರೇಗಾ ದಡಿಯಲ್ಲೂ ಹಲವು ಕಡೆ ಕಾಲು ಸಂಕ ನಿರ್ಮಿಸಲಾಗುತ್ತಿದೆ ಎಂದರು.
ನೀರಿನ ಸಮಸ್ಯೆ ಇರದು
ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಕೆಲವೆಡೆ ಬಹು ಗ್ರಾಮ ಕುಡಿಯುವ ನೀರಿನ ಯೋಜ ನೆಯ ಕಾಮಗಾರಿ ಸಮಸ್ಯೆ ಬಗೆಹರಿ ಸಿದ್ದೇವೆ. ಜಲ್ಜೀವನ್ ಮಿಷನ್ ಕಾಮಗಾರಿ ಯೂ ವೇಗವಾಗಿ ಸಾಗುತ್ತಿದೆ. ಮುಂದಿನ ವರ್ಷದೊಳಗೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ವಾರಾಹಿಯಿಂದಲೂ ಕೆಲವು ಭಾಗಕ್ಕೆ ನೀರು ಪೂರೈಕೆಯಾಗಲಿದೆ ಎಂದರು.
ನಗರಸಭೆ ಪೌರಾಯುಕ್ತ ರಾಯಪ್ಪ, ವಾರ್ತಾಧಿಕಾರಿ ಮಂಜುನಾಥ್, ಡಿಎಚ್ಒ ಡಾ| ಐ.ಪಿ.ಗಡಾದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
27 ಸಾವಿರ ರೈತರಿಗೆ ಪರಿಹಾರ
ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕನ್ನು ಬರ ಪೀಡಿತ ಪ್ರದೇಶವಾಗಿ ಘೋಷಿಸಿದ್ದು, ಈ ಮೂರು ತಾಲೂಕಿನ 27 ಸಾವಿರ ರೈತರಿಗೆ 4.86 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಸುಮಾರು 11 ಕೋ.ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಾಗಲೇ ಮೊದಲ ಹಂತದಲ್ಲಿ ರೈತರಿಗೆ ತಲಾ 2 ಸಾವಿರ ಹಾಗೂ ಈಗ ಮತ್ತೆ ತಲಾ 2 ಸಾವಿರ ಪರಿಹಾರ ನೀಡಲಿದ್ದೇವೆ. ಭತ್ತ ಬೆಳೆಹಾನಿಯಾದ ಎಲ್ಲ ರೈತರಿಗೂ ಪರಿಹಾರ ನೀಡಲಾಗುವುದು ಎಂದರು.
ಡೆಂಗ್ಯೂ ಹಾಗೂ ಮಲೇರಿಯಾದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಮಳೆ ಆರಂಭವಾಗಲು ಕೆಲವು ದಿನಗಳು ಬಾಕಿ ಇರುವುದರಿಂದ ಸಾರ್ವಜನಿಕರು ತಾವಿರುವ ಪರಿಸರದ ಸುತ್ತ ಸ್ವತ್ಛತೆಗೆ ಆದ್ಯತೆ ನೀಡಬೇಕು. ಸಾಂಕ್ರಾಮಿಕ ರೋಗ ಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. 2024ರ ಜನವರಿಯಿಂದ ಈವರೆಗೂ ಸುಮಾರು 77 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಅದು ನಗರ ಪ್ರದೇಶದಲ್ಲಿ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.