![2](https://www.udayavani.com/wp-content/uploads/2024/06/2-21-415x249.jpg)
ಅಸೆಂಬ್ಲಿಯಿಂದ ಪಾರ್ಲಿಮೆಂಟ್ಗೆ ಹೊರಟ 3 ಮಾಜಿ ಸಿಎಂಗಳು…
ರಾಜಕೀಯ ಭವಿಷ್ಯ ಮಸುಕಾಗುತ್ತಿದೆ ಎಂಬ ಹೊತ್ತಿನಲ್ಲೇ ಮೂವರಿಗೂ ಭರ್ಜರಿ ಗೆಲುವು
Team Udayavani, Jun 4, 2024, 8:34 PM IST
![ಅಸೆಂಬ್ಲಿಯಿಂದ ಪಾರ್ಲಿಮೆಂಟ್ಗೆ ಹೊರಟ 3 ಮಾಜಿ ಸಿಎಂಗಳು…](https://www.udayavani.com/wp-content/uploads/2024/06/CM-2-620x349.jpg)
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದರು. ಎಲ್ಲ ಮೂವರೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾಗಿದ್ದರು. ಅವರೆಲ್ಲರೂ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರು ಅಸೆಂಬ್ಲಿಯಿಂದ ಪಾರ್ಲಿಮೆಂಟ್ಗೆ ಹೊರಟಿದ್ದಾರೆ. ಇನ್ನೇನು ರಾಜಕೀಯ ಭವಿಷ್ಯ ಮಸುಕಾಗುತ್ತಿದೆ ಎಂಬ ಹೊತ್ತಿನಲ್ಲಿ ಮೂವರೂ ಮುಖ್ಯಮಂತ್ರಿಗಳಿಗೆ ಈ ಗೆಲುವು ಸಿಕ್ಕಿದೆ. ಇದು ಭವಿಷ್ಯದಲ್ಲಿ ಅವರ ರಾಜಕೀಯ ತಿರುವಿಗೆ ಕಾರಣವಾಗಲಿದೆ. ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ ಈ ನಾಯಕರು ಲಗ್ಗೆ ಇಡಲಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲೂ ಪಲ್ಲಟಗಳಿಗೆ ಪರೋಕ್ಷವಾಗಿ ಕಾರಣವಾಗಲಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ
ರಾಜ್ಯದ 28 ಕ್ಷೇತ್ರಗಳಲ್ಲಿ ಹೈವೋಲ್ಟೆàಜ್ ಕ್ಷೇತ್ರವಾಗಿದ್ದ ಮಂಡ್ಯದಿಂದ ಕಣಕ್ಕಿಳಿದಿದ್ದರು. ಇದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ತಮ್ಮ ನಡುವಿನ ನೇರ ಹಣಾಹಣಿ ಎಂದೇ ವಿಶ್ಲೇಷಿಸಲಾಗಿತ್ತು. ಅಷ್ಟೇ ಅಲ್ಲ, ರಾಜ್ಯದ ಪ್ರಬಲ ಸಮುದಾಯ ಒಕ್ಕಲಿಗ ನಾಯಕರು ಯಾರು ಎಂಬ ನಿರ್ಣಾಯಕ ಘಟ್ಟವೂ ಆಗಿತ್ತು. ಕುಮಾರಸ್ವಾಮಿ ತಮ್ಮ ಗೆಲುವಿನ ಜತೆಗೆ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರಿಗೂ ಸೋಲುಣಿಸುವ ಮೂಲಕ ಸಮುದಾಯದ ನಾಯಕ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ. ಇದಲ್ಲದೆ, ಮಿತ್ರಪಕ್ಷ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲೂ ಹಲವೆಡೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಕೇಂದ್ರದ ನೆರವಿನಿಂದ ಭವಿಷ್ಯದಲ್ಲಿ ತಮ್ಮ ಎದುರಾಳಿಗಳನ್ನು ಹಣಿಯಲು ನೆರವಾಗಲಿದೆ. ಮಗ ನಿಖೀಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಗಟ್ಟಿಗೊಳಿಸಲಿಕ್ಕೂ ಇದು ರಹದಾರಿ ಆಗಲಿದೆ.
ಬಸವರಾಜ ಬೊಮ್ಮಾಯಿ
ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಪ್ರತಿಪಕ್ಷ ಸ್ಥಾನವೂ ಸಿಗಲಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನವಂತೂ ನಿರೀಕ್ಷಿಸಿರಲಿಲ್ಲ. ರಾಜ್ಯ ರಾಜಕಾರಣದಲ್ಲಿ ಹಿನ್ನೆಲೆಗೆ ಸರಿಯುತ್ತಿರುವಾಗ ಈ ಗೆಲುವು ದಕ್ಕಿದೆ. ರಾಜ್ಯದ ಪ್ರಬಲ ಸಮುದಾಯವನ್ನು ಪ್ರತಿನಿಧಿಸುವುದರಿಂದ ಹಾಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಮೂಲಕ ಮತ್ತೆ ಅವಕಾಶಗಳ ಬಾಗಿಲು ತೆರೆಯಲಿದೆ. ರಾಜ್ಯ ರಾಜಕಾರಣದಲ್ಲಿ ಮತ್ತೆ ಅಸ್ತಿತ್ವ ಉಳಿಸಿಕೊಳ್ಳಲು ಇದು ಸಾಧ್ಯವಾಗಲಿದೆ.
ಜಗದೀಶ್ ಶೆಟ್ಟರ್
ಮುನಿಸಿಕೊಂಡು ಎದುರಾಳಿ ಮನೆಗೆ ಹೋಗಿದ್ದ ಶೆಟ್ಟರ್, ಮೇಲ್ಮನೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಲೋಕಸಭಾ ಹೊಸ್ತಿಲಲ್ಲಿ ಮನೆಗೆ ವಾಪಸ್ಸಾಗಿದ್ದರು. ಹುಬ್ಬಳ್ಳಿ-ಧಾರವಾಡ ಅವರ ರಾಜಕೀಯ ಕ್ಷೇತ್ರವಾಗಿತ್ತು. ಆದರೆ, ಬೆಳಗಾವಿಗೆ ಟಿಕೆಟ್ ನೀಡಲಾಗಿತ್ತು. ಅಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಒಂದು ರೀತಿಯಲ್ಲಿ ರಾಜಕೀಯ ಮರುಜನ್ಮ ಸಿಕ್ಕಂತಾಗಿದೆ. ಅವಕಾಶಗಳನ್ನು ತೊರೆದು ಬಂದಿದ್ದಾರೆ ಹಾಗೂ ಮಾಜಿ ಮುಖ್ಯಮಂತ್ರಿಯಾಗಿದ್ದರಿಂದ ಮತ್ತು ಸಮುದಾಯದ ಆಧಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ಪೈಪೋಟಿ ನೀಡಲಿದ್ದಾರೆ. ಒಂದು ವೇಳೆ ಅದು ಕೈಗೂಡಿದರೆ, ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಬಹುದು.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.