ಹಿಂದಿ ನಾಡಲ್ಲಿ ಬಿಜೆಪಿ ಹಿಂದೆ, ಐಎನ್‌ಡಿಐಎ ಮುಂದೆ!


Team Udayavani, Jun 5, 2024, 7:50 AM IST

ಹಿಂದಿ ನಾಡಲ್ಲಿ ಬಿಜೆಪಿ ಹಿಂದೆ, ಐಎನ್‌ಡಿಐಎ ಮುಂದೆ!

ಉತ್ತರ ಪ್ರದೇಶ, ಪ.ಬಂಗಾಲ, ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನದಲ್ಲಿ ಬಿಜೆಪಿಗೆ ಹೊಡೆತ; ಮ.ಪ್ರದೇಶ, ಗುಜರಾತ್‌, ಒಡಿಶಾ, ಉತ್ತರಾಖಂಡ, ದಿಲ್ಲಿಯಲ್ಲಿ ಬಿಜೆಪಿಗೆ ಬಲ

ಗುಜರಾತ್‌ ಹ್ಯಾಟ್ರಿಕ್‌ ಕ್ಲೀನ್‌ ಸ್ವೀಪ್‌ ಭಗ್ನ!
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಎಂದಿನಂತೆ ತನ್ನ ಪಾರಮ್ಯ ಮರೆದಿದ್ದರೂ ಕಾಂಗ್ರೆಸ್‌ 2014ರ ಬಳಿಕ ಖಾತೆ ತೆರೆಯುವ ಮೂಲಕ ತನ್ನ ಇರುವಿಕೆಯನ್ನು ಸಾಬೀತುಪಡಿಸಿದೆ. 26 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 2014 ಹಾಗೂ 2019ರಲ್ಲಿ ಕ್ಲೀನ್‌ ಸ್ವೀಪ್‌ ಪಡೆದಿದ್ದ ಬಿಜೆಪಿ ಈ ಬಾರಿ ಹ್ಯಾಟ್ರಿಕ್‌ ಸಾಧನೆಯನ್ನು ತಪ್ಪಿಸಿಕೊಂಡು, 1 ಸ್ಥಾನವನ್ನು ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ. ಕಳೆದ ಬಾರಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರತಿ ರಾಜ್ಯದಲ್ಲೂ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಮತ್ತೆ ಬಿಜೆಪಿ ಹಿಂದೆ ಹಿಮಾಚಲ ಅಚಲ
ಪರ್ವತ ರಾಜ್ಯಗಳಲ್ಲಿ ಒಂದಾದ, ದೇವರ ಭೂಮಿ ಎಂದು ಕರೆಯಲಾಗುವ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಯಾವುದೇ ವ್ಯತ್ಯಾಸವಾಗಿಲ್ಲ. 4 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ರಾಜ್ಯದಲ್ಲಿ 2019ರಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದ್ದ ಬಿಜೆಪಿ ಈ ಬಾರಿಯೂ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದೆ. ಖ್ಯಾತ ನಟಿ ಕಂಗನಾ ರಾವತ್‌, ಕೇಂದ್ರ ಸಚಿವ ಅನುರಾಗ್‌ ಠಾಗೂರ್‌ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ ಕಳೆದ ಬಾರಿಯಂತೆ ಈ ಸಲವೂ ಸೊನ್ನೆ ಸುತ್ತಿದೆ.

ಝಾರ್ಖಂಡ್‌ನ‌ಲ್ಲಿ “ಇಂಡಿಯಾ’ ಏರಿಕೆ
ಪೂರ್ವ ರಾಜ್ಯವಾದ ಝಾರ್ಖಂಡ್‌ನ‌ಲ್ಲಿ ಬಿಜೆಪಿ ಕಳೆದ ಬಾರಿಗಿಂತ 3 ಸ್ಥಾನಗಳನ್ನು ಕಳೆದುಕೊಂಡಿದೆ. 14 ಕ್ಷೇತ್ರಗಳಿರುವ ರಾಜ್ಯದಲ್ಲಿ 2019ರಲ್ಲಿ 11 ಕ್ಷೇತ್ರ ಗೆದ್ದು ಬೀಗಿದ್ದ ಬಿಜೆಪಿ ಈ ಬಾರಿ 8 ಸ್ಥಾನ ಪಡೆದು ಒಂದಂಕಿಗೆ ಸೀಮಿತವಾಗಿದೆ. ಇಂಡಿಯಾ ಒಕ್ಕೂಟ(ಜಿಎಂಎಂ-3, ಕಾಂಗ್ರೆಸ್‌-2) 5 ಸ್ಥಾನ ಪಡೆದ ಕಳೆದ ಬಾರಿಗಿಂತ 3 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಮಾಜಿ ಸಿಎಂ ಹೇಮಂತ್‌ ಸೊರೇನ್‌ ಜೈಲು ಪಾಲಾದದ್ದು ಮತದಾರರಲ್ಲಿ ಸಹಾನುಭೂತಿಗೆ ಕಾರಣವಾದಂತಿದೆ. ಈ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಚx

ಪಂಜಾಬ್‌: ಕಾಂಗ್ರೆಸ್‌, ಆಪ್‌ನದ್ದೇ ಪಾರಮ್ಯ
ಆಪ್‌ ಮತ್ತು ಕಾಂಗ್ರೆಸ್‌ ಇಂಡಿಯಾ ಕೂಟದ ಭಾಗವಾಗಿದ್ದರೂ ಪಂಜಾಬ್‌ನಲ್ಲಿ ಮಾತ್ರ ಉಭಯ ಪಕ್ಷಗಳು ಪರಸ್ಪರ ಎದುರಾಳಿಯಾಗಿದ್ದವು. ಕಳದೆ ವಿಧಾನಸಭೆ ಚುನಾವಣೆಯಲ್ಲಿ ಆಪ್‌, ಕಾಂಗ್ರೆಸ್‌ ಸೋಲಿಸಿ ಅಧಿಕಾರಕ್ಕೇರಿತ್ತು. ಹಾಗಾಗಿ, 13 ಸ್ಥಾನಗಳ ಈ ರಾಜ್ಯದಲ್ಲಿ ಪಂಜಾಬ್‌ ಹೆಚ್ಚಿನ ಸ್ಥಾನವನ್ನು ಗೆಲ್ಲುವ ಗುರಿ ಹೊಂದಿತ್ತು. ಅದು ಈಡೇರಿಲ್ಲ. ಬದಲಾಗಿ ಕಾಂಗ್ರೆಸ್‌ ತನ್ನ ಸೋಲಿನಿಂದ ಪುಟಿದೆದ್ದಿದೆ. ಹಾಗೆ ನೋಡಿದರೆ, 2019ರ ಫ‌ಲಿತಾಂಶಕ್ಕೆ ಹೋಲಿಸಿದರೆ ಒಂದು ಸ್ಥಾನ ಖೋತಾ ಆಗಿದೆ. ಇನ್ನು ಬಿಜೆಪಿ ಶೂನ್ಯ ಸಾಧನೆ ಮಾಡಿದರೆ, ಅಕಾಲಿದಳ ಕೂಡ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ರೈತರ ಪ್ರತಿಭಟನೆಯು ಬಹುದೊಡ್ಡ ಪಾತ್ರ ನಿರ್ವಹಿಸಿದಂತಿದೆ!

ಮಹಾರಾಷ್ಟ್ರದಲ್ಲಿ ರಿಯಲ್‌ ಎನ್‌ಸಿಪಿ, ಶಿವಸೇನೆ ಪಕ್ಷ ನಿರ್ಧಾರವಾಯಿತು!
ಈ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಇಡೀ ದೇಶದ ಗಮನವಿತ್ತು. ಮೈತ್ರಿಕೂಟಗಳ ಗೊಂದಲ, ಪಕ್ಷಗಳು ಒಡೆದು ಹೋಳಾಗಿದ್ದು ಸೇರಿ ಇಡೀ ಮಹಾರಾಷ್ಟ್ರ ರಾಜಕರಾಣವೇ ಗೊಂದಲದ ಗೂಡಾಗಿತ್ತು. ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಮಹಾವಿಕಾಸ ಆಘಾಡಿ ಸರ್ಕಾರ ಪತನವಾಗಿ, ಶಿಂಧೆ ಶಿವಸೇನೆ ನೇತೃತ್ವದಲ್ಲಿ ಬಿಜೆಪಿ ಮತ್ತು ಅಜಿತ್‌ ಪವಾರ್‌ ಎನ್‌ಸಿಪಿ ಸರ್ಕಾರ ರಚಿಸಿದ್ದವು. ಎನ್‌ಸಿಪಿ ಮತ್ತು ಶಿವಸೇನೆ ಒಡೆದು ಹೋಳಾದ್ದರಿಂದ ನಿಜವಾದ ಪಕ್ಷ ಯಾವುದು ಎಂಬುದಕ್ಕೆ ಮಾನದಂಡವೊಂದು ಬೇಕಿತ್ತು. ಆ ಕೊರತೆಯನ್ನು ಫ‌ಲಿತಾಂಶ ಈಡೇರಿಸಿದೆ. ಅಂತಿಮವಾಗಿ ಶರದ್‌ ಪವಾರ್‌ ಬಣದ ಎನ್‌ಸಿಪಿ ಮತ್ತು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಗೆ ಜನರು ಆಶೀರ್ವಾದ ಮಾಡಿದ್ದಾರೆ.

ಇನ್ನೂ ಚುನಾವಣೆ ಅತಿ ಹೆಚ್ಚು ಲಾಭವಾಗಿದ್ದು ಕಾಂಗ್ರೆಸ್‌ಗೆ. ಕಳೆದ ಬಾರಿ ಒಂದೇ ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 12 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡರೆ, ಬಿಜೆಪಿಗೆ 11 ಸ್ಥಾನಗಳು ಖೋತಾ ಆಗಿವೆ. ಈರುಳ್ಳಿ ರಫ್ತು ಮೇಲಿನ ನಿಷೇಧ, ರೈತರ ಆತ್ಮಹತ್ಯೆ, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ , ನಿರುದ್ಯೋಗ, ಬೆಲೆ ಏರಿಕೆಯಂಥ ವಿಷಯಗಳು ಬಿಜೆಪಿಗೆ ಹಿನ್ನಡೆಯಾಗಲು ಕಾರಣ ವಾಗಿವೆ. ಮಹಾರಾಷ್ಟ್ರದ ವಿದರ್ಭ ಸೇರಿದಂತೆ ರಾಜ್ಯದ ವಿವಿಧೆಡೆ ಕೇಂದ್ರ ಸರ್ಕಾರದ ಕೈಗೊಂಡ ಅನೇಕ ನಿರ್ಧಾರಗಳ ವಿರುದ್ಧ ಆಕ್ರೋಶವಿತು. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಯು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದ್ದು ಮಹಾರಾಷ್ಟ್ರ ಸರಿ ತೋರಿದಂತೆ ಕಾಣುತ್ತಿಲ್ಲ. ಅದು ಫ‌ಲಿತಾಂಶದಲ್ಲ ಕಂಡು ಬಂದಿದೆ. ಬಹುಶಃ ಮುಂಬರುವ ಮಹಾರಾಷ್ಟ್ರದ ವಿಧಾನಸಭೆಗೆ ಈ ಚುನಾವಣೆ ಫ‌ಲಿತಾಂಶವು ದಾರಿ ತೋರಿದಂತಿದೆ.

ರಾಜಸ್ಥಾನ: ಬಿಜೆಪಿ ಅತಿ ಆತ್ಮವಿಶ್ವಾಸಕ್ಕೆ ಹೊಡೆತ ನೀಡಿದ ಕಾಂಗ್ರೆಸ್‌ ಉತ್ತೀರ್ಣ
ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿ ಅದೇ ಪ್ರದರ್ಶನವನ್ನು ಲೋಕಸಭೆಯಲ್ಲಿ ತೋರಲು ವಿಫ‌ಲವಾಗಿದೆ. ಅಸಲಿಗೆ, ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ 10 ಸೀಟುಗಳು ಖೋತಾ ಆಗಿದೆ. ಇದು ಬಿಜೆಪಿಯ ಒಟ್ಟಾರೆ ಸೀಟುಗಳ ಹಿನ್ನಡೆಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಚುನಾವಣೆ ಮುಂಚೆ, ರಾಜಸ್ಥಾನ ಸಂಪೂರ್ಣವಾಗಿ ಬಿಜೆಪಿ ಪಾಲಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಪರಿಣಾಮ ಒಂದು ಕಡೆಯಾದರೆ, ರಾಜಸ್ಥಾನ ಮತ್ತು ಹರ್ಯಾಣದಲ್ಲಿ ಅಗ್ನಿವೀರ ಸೇನಾ ನೇಮಕಾತಿ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಅದು ಫ‌ಲಿತಾಂಶದ ರೂಪದಲ್ಲಿ ಹೊರಬಿದ್ದಿದೆ. ಇನ್ನು ಬಿಜೆಪಿಯ ಒಳ ರಾಜಕೀಯ, ಅಭ್ಯರ್ಥಿಗಳ ಬದಲಾವಣೆ ನೆಗೆಟಿವ್‌ ಪರಿಣಾಮ ಬೀರಿದಂತೆ ಕಾಣುತ್ತಿದೆ. ಕಾಂಗ್ರೆಸ್‌ ಪುಟಿದೆದ್ದಿದೆ. ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹೊÉàಟ್‌ ಮಧ್ಯೆ ಭಿನ್ನಾಭಿಪ್ರಾಯ ಇದ್ದರೂ ಅದು ಫ‌ಲಿತಾಂಶದಲ್ಲಿ ಕಂಡಿಲ್ಲ. ಇನ್ನೂ ಪ್ರಯತ್ನ ಪಟ್ಟಿದ್ದರೆ ಕಾಂಗ್ರೆಸ್‌ನ ಟ್ಯಾಲಿ ಹೆಚ್ಚಬಹುದಿತ್ತು.

ಛತ್ತೀಸ್‌ಗಢ ರಾಜ್ಯದಲ್ಲಿ ಯಥಾಸ್ಥಿತಿಗೆ ಭಂಗವಿಲ್ಲ
ಹಿಂದಿ ಹಾರ್ಟ್‌ಲ್ಯಾಂಡ್‌ ಛತ್ತೀಸ್‌ಗಢದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಅಸಲಿಗೆ, ಕಳೆದ ಬಾರಿಗಿಂತಲೂ ಒಂದು ಸ್ಥಾನವನ್ನು ಬಿಜೆಪಿ ಹೆಚ್ಚಿಗೆ ಗೆದ್ದುಕೊಂಡಿದೆ. ಅದೇ ಸ್ಥಾನ ಕಾಂಗ್ರೆಸ್‌ಗೆ ಮೈನಸ್‌ ಆಗಿದೆ. ಆದಿವಾಸಿಗಳು, ಹಿಂದುಳಿದ ವರ್ಗದ ಮತಗಳೇ ಅಧಿಕವಾಗಿರುವ ಈ ರಾಜ್ಯದಲ್ಲಿ ಬಿಜೆಪಿ ಕಳೆದ ವಿಧಾನಸಭೆಯ ಉತ್ತಮ ಪ್ರದರ್ಶನವನ್ನು ಲೋಕಸಭೆಯಲ್ಲಿ ರಿಪೀಟ್‌ ಮಾಡಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಒಂದು ಸ್ಥಾನಕ್ಕೆ ಖೋತಾ ಆಗಿದೆ. ಕಾಂಗ್ರೆಸ್‌, ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಛತ್ತೀಸ್‌ಗಢದಲ್ಲಿ ಮೋದಿ ಮ್ಯಾಜಿಕ್‌ ಮುಂದುವರಿದಿದೆ.

ಕೇರಳ: ಮೊದಲ ಸಲ ಖಾತೆ ತೆರೆದ ಬಿಜೆಪಿ
ದೇವರ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಕಾಂಗ್ರೆಸ್‌ ಮೈತ್ರಿ ಕೂಟವು ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದೆ. ಈ ಮೂಲಕ ದಕ್ಷಿಣ ರಾಜ್ಯದಲ್ಲಿ ಗಣನೀಯವಾಗಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 15 ಸ್ಥಾನ ಪಡೆದಿದ ಕಾಂಗ್ರೆಸ್‌ ಒಂದು ಸ್ಥಾನವನ್ನು ಮಾತ್ರ ಕಳೆದುಕೊಂಡಿದೆ. 20 ಲೋಕಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದು ದಾಖಲು ಮಾಡಿದೆ. ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್‌ ಗೋಪಿ ಗೆಲುವು ಸಾಧಿಸಿ ಕೇರಳದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದಾರೆ.

ಗೋವಾ: ಕಾಂಗ್ರೆಸ್‌, ಬಿಜೆಪಿಯದ್ದೇ ಹವಾ
ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಗೋವಾದಲ್ಲಿ ಕಳೆದ ಬಾರಿಯಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ 1 ಸ್ಥಾನ ಪಡೆದು ಸಮಬಲ ಸಾಧಿಸಿವೆ.

ಉತ್ತರಾಖಂಡದಲ್ಲಿ ಐದೂ ಗೆದ್ದ ಬಿಜೆಪಿ
ಉತ್ತರಾಖಂಡದಲ್ಲಿ 2019ರ ಫ‌ಲಿತಾಂಶವೇ ರಿಪೀಟ್‌ ಆಗಿದೆ. ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದರೆ, ಬಿಜೆಪಿ ಐದೂ ಸ್ಥಾನಗಳನ್ನು ಮತ್ತೆ ಗೆದ್ದುಕೊಂಡಿದೆ. ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದದ್ದೂ ಪ್ಲಸ್‌ ಪಾಯಿಂಟ್‌ ಆಗಿದೆ. ಮೋದಿ ಜನಪ್ರಿಯತೆಗೆ ಇಲ್ಲಿ ಮುಕ್ಕಾಗಿಲ್ಲ. ಆದರೆ, ಕಾಂಗ್ರೆಸ್‌ ಮಾತ್ರ ಸೋಲಿನ ಸರಪಳಿಯನ್ನು ಕಡಿದುಕೊಳ್ಳುತ್ತಿಲ್ಲ. ಮತದಾರರು ಬಿಜೆಪಿ ಮೇಲಿನ ತಮ್ಮ ವಿಶ್ವಾಸವನ್ನು ಮುಂದುವರಿಸಿದ್ದಾರೆ.

ಉತ್ತರ ಪ್ರದೇಶ: ಬಿಜೆಪಿ ಕಳೆದ ಸಲ 62, ಈ ಸಲ 33!
ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಗೆ ಉತ್ತರ ಪ್ರದೇಶ ದೊಡ್ಡ ಕೊಡುಗೆ ನೀಡಿದೆ. ಸಿಎಂ ಯೋಗಿ ಆದಿತ್ಯನಾಥ ಮತ್ತು ಪ್ರಧಾನಿ ಮೋದಿ(MY) ಫ್ಯಾಕ್ಟರ್‌ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ತಂದುಕೊಡಲಿದ ಎಂದು ಬಿಜೆಪಿ ನಂಬಿತ್ತು. ಆದರೆ, 28 ಸ್ಥಾನಗಳು ಖೋತಾ ಆಗಿವೆ. ಮತ್ತೂಂದೆಡೆ, ಕಾಂಗ್ರೆಸ್‌-ಎಸ್‌ಪಿ ಕೂಟ ಪುಟಿದೆದ್ದಿದೆ. ಮಾಯಾವತಿಯ ಬಿಎಸ್‌ಪಿ ರಾಜಕಾರಣ ಅಂತ್ಯವಾಗಿದೆ. ಬಿಜೆಪಿಗೆ ಸೋಲಿಗೆ ಕಾರಣವಾದ ಅಂಶಗಳೇ ಇಂಡಿಯಾ ಕೂಟ ಸ್ಥಾನ ಹೆಚ್ಚಳಕ್ಕೆ ಕೊಡುಗೆ ನೀಡಿದೆ. ಬಿಜೆಪಿ ಹೆಚ್ಚಾಗಿ ರಾಮ ಮಂದಿರ ನಿರ್ಮಾಣ, ಮೋದಿ-ಯೋಗಿ ಮ್ಯಾಜಿಕ್‌, ಯುಪಿಯಲ್ಲಿನ ಉತ್ತಮ ಆಡಳಿತ, ಹಿಂದು ಮತಗಳ ಧ್ರುವೀಕರಣ ನಂಬಿತ್ತು. ಆದರೆ, ಇದಾವುದು ಬಿಜೆಪಿ ಎಣಿಕೆಯಂತೆ ನಡೆಯಲಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗ್ನಿವೀರ್‌ ಯೋಜನೆ ವಿರುದ್ಧ ಜನರ ಆಕ್ರೋಶವು ಇಂಡಿಯಾ ಕೂಟದ ಪರವಾಗಿ ಮತಗಳಾಗಿ ಬದಲಾಯಿತು. ಅಯೋಧ್ಯೆ ರಾಮ ಮಂದಿರ ಇರುವ ಫೈಜಾಬಾದ್‌ ಕ್ಷೇತ್ರದಲ್ಲಿ ಎಸ್‌ಪಿ ಗೆದ್ದಿದೆ!

ಯೋಗಿ ಸೈಡ್‌ಲೈನ್‌:
ಈ ಬಾರಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಅವರನ್ನು ಬದಲಾಯಿಸಲಾಗುತ್ತದೆ ಎಂಬ ಸೂಚನೆಯೂ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಪ್ರಚಾರದಲ್ಲಿ ಯೋಗಿ ಅವರನ್ನು ಸೈಡ್‌ಲೈನ್‌ ಮಾಡಲಾಯಿತು. ಮತ್ತೊಂದೆಡೆ, ರಾಹುಲ್‌ ಗಾಂಧಿ ಮತ್ತು ಅಖೀಲೇಶ್‌ ಯಾದವ್‌ ಅವರ ಭರ್ಜರಿ ಪ್ರಚಾರ ಮತ್ತು ತಂತ್ರ, ಅಭ್ಯರ್ಥಿಗಳ ಆಯ್ಕೆಯಲ್ಲಿ ತೋರಿದ ಜಾಣ್ಮೆ ಬಿಜೆಪಿಗೆ ಭಾರೀ ಹೊಡೆತ ನೀಡಿದೆ. ಉತ್ತರ ಪ್ರದೇಶವನ್ನು ಗೆದ್ದವರು ದಿಲ್ಲಿ ಗದ್ದುಗೆಯನ್ನು ಗೆಲ್ಲುತ್ತಾರೆ ಎಂಬ ಮಾತು ಸತ್ಯವಾಗಿದೆ. ಬಿಜೆಪಿ, ಯುಪಿ ಹಿನ್ನಡೆ ಅನುಭವಿಸಿದ ಪರಿಣಾಮ ಅದು 272 ಮಾರ್ಕ್‌ ಕೂಡ ದಾಟಲು ಸಾಧ್ಯವಾಗಲಿಲ್ಲ!

ದಿಲ್ಲಿಯಲ್ಲಿ ಸೋತ ಐಎನ್‌ಡಿಐಎ!
ಆಮ್‌ ಆದ್ಮಿ ಪಾರ್ಟಿ(ಆಪ್‌) ಆಡಳಿತದಲ್ಲಿರುವ ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಆಡಳಿತ ವಿರೋಧಿ ಅಲೆಯನ್ನು ಗುರುತಿಸಿದ್ದ ಬಿಜೆಪಿ, 7 ಹಾಲಿ ಸಂಸದರ ಪೈಕಿ 6 ಜನರಿಗೆ ಟಿಕೆಟ್‌ ನಿರಾಕರಿಸಿ ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿತ್ತು. ಈಗ ಅವರೆಲ್ಲರೂ ಗೆದ್ದಿದ್ದಾರೆ. ದಿಲ್ಲಿಯ ವಿಷಯದಲ್ಲಿ ಬಿಜೆಪಿಯ ಹೊಸ ಮುಖಗಳಿಗೆ ಮನ್ನಣೆ ನೀಡಿದ ತಂತ್ರ ಫ‌ಲ ನೀಡಿದೆ. ಈಶಾನ್ಯ ದಿಲ್ಲಿಯಲ್ಲಿ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಆದರೆ, ಆಮ್‌ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್‌ ಜತೆಗೂಡಿ ಸ್ಪರ್ಧಿಸಿದರೂ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ! ಹಾಗಾಗಿ, ರಾಜಧಾನಿಯ ಜನರು ಈಗಲೂ ಮೋದಿ ಮೇಲೆ ತಮ್ಮ ವಿಶ್ವಾಸವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಜೈಲು ಸೇರಿದಂತೆ ಅನೇಕ ನಿರ್ಧಾರಗಳು ಬಿಜೆಪಿಗೆ ಪ್ರತಿಕೂಲವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಫ‌ಲಿತಾಂಶವು ಈ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿದೆ. ಬೆಲೆ ಏರಿಕೆ, ನಿರುದ್ಯೋಗ, ಸಂವಿಧಾನ ಬದಲಾವಣೆಯಂಥ ವಿಷಯಗಳಿಗೆ ಇಲ್ಲಿನ ಮತದಾರರು ಹೆಚ್ಚು ತಲೆಕೆಡಿಸಿಕೊಂಡತೆ ಕಾಣುತ್ತಿಲ್ಲ.

ಮೂರಕ್ಕಿಳಿಯಲಿಲ್ಲ, ಆರಕ್ಕೇರಲಿಲ್ಲ ಅಸ್ಸಾಂ
ಬಿಜೆಪಿ ಆಡಳಿತ ಇರುವ ಅಸ್ಸಾಂನಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡೂ 2019ರ ಫ‌ಲಿತಾಂಶವನ್ನು ರಿಪೀಟ್‌ ಮಾಡಿವೆ! ಆದರೆ, 14 ಸ್ಥಾನಗಳನ್ನು ಗುರಿ ಹಾಕಿ ಕೊಂಡಿದ್ದ ಸಿಎಂ ಹಿಮಂತ್‌ ಬಿಸ್ವ ಶರ್ಮಾ ಅವರಿಗೆ ಹಿನ್ನಡೆಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಯಂಥ ವಿಷಯಗಳು ಯಾವುದೇ ಪರಿಣಾಮ ಬೀರಿಲ್ಲ. ಹಾಗೆಯೇ ಕಾಂಗ್ರೆಸ್‌ ಪಕ್ಷವು ಪ್ರಸ್ತಾಪಿಸಿದ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸಂವಿಧಾನ ಬದಲಾವಣೆಯಂಥ ವಿಷಯಗಳಿಗೂ ಇಲ್ಲಿನ ಮತದಾರರು ಕ್ಯಾರೆ ಎಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜತೆಗೆ, ಮುಸ್ಲಿಮ್‌ ಧ್ರುವೀಕರಣವೂ ಫ‌ಲ ನೀಡಿಲ್ಲ. ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್‌ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹಾಗಾಗಿ, ಅಸ್ಸಾಮ್‌ನ ಸ್ಥಿತಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತಾಗಿದೆ.

ಆಂಧ್ರದಲ್ಲಿ ಕಮಾಲ್‌ ಮಾಡಿದ ಎನ್‌ಡಿಎ
2019ರಂತೆ ಈ ಬಾರಿಯೂ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದೆ. ಆದರೆ, ಟಿಡಿಪಿ-ಬಿಜೆಪಿ-ಎನ್‌ಎಸ್‌ಪಿ ಒಂದಾಗಿರುವ ಎನ್‌ಡಿಎ ಆಂಧ್ರದಲ್ಲಿ ಕಮಾಲ್‌ ಮಾಡಿದೆ. ಒಟ್ಟು 25 ಕ್ಷೇತ್ರಗಳಿರುವ ಆಂಧ್ರದಲ್ಲಿ ಎನ್‌ಡಿಎ ಅತ್ಯುತ್ತಮ ಪ್ರದರ್ಶನ ತೋರಿದೆ. ತೆಲಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ನೇತೃತ್ವಕ್ಕೆ ಆಂಧ್ರವಾಲಾಗಳು ಮನ್ನಣೆ ನೀಡಿದ್ದಾರೆ. ಜತೆಗೆ ನಟ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ ಪ್ರಮುಖ ಪಾತ್ರ ನಿರ್ವಹಿಸಿದೆ. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ಆಡಳಿತ ವಿರೋಧಿಯಲ್ಲಿ ಕೊಚ್ಚಿ ಹೋಗಿದೆ. ಮತ್ತೂಂದೆಡೆ ಕಾಂಗ್ರೆಸ್‌ ಮಕಾಡೆ ಮಲಗಿದೆ. ಜಗನ್‌ಮೋಹನ್‌ ರೆಡ್ಡಿ ಸಹೋದರಿ ಕಾಂಗ್ರೆಸ್‌ ಪಕ್ಷಕ್ಕೆ ಬಂದರೂ ಅಂಥ ವ್ಯತ್ಯಾಸವಾಗಿಲ್ಲ. ಲೋಕಸಭೆ ಮಾತ್ರವಲ್ಲದೇ, ಆಂಧ್ರ ವಿಧಾನಸಭೆಯಲ್ಲೂ ಟೆಡಿಪಿ ನೇತೃತ್ವದ ಎನ್‌ಡಿಎ ಅಧಿಕಾರಯುತವಾಗಿಯೇ ಅಧಿಕಾರಕ್ಕೇರಿದೆ.

ತ.ನಾಡಲ್ಲಿ ಡಿಎಂಕೆ ಜಯಭೇರಿ ಡಂಗುರ
ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಇಂಡಿಯಾ ಕೂಟವು ಭರ್ಜರಿ ಜಯ ಸಾಧಿಸಿ, ಕ್ಲೀನ್‌ ಸ್ವೀಪ್‌ ಮಾಡಿದೆ. ಕಳೆದ ಬಾರಿಗೆ ಹೋಲಿಸಿದರೆ ಡಿಎಂಕೆಗೆ 2 ಸ್ಥಾನ ಕಡಿಮೆ ಬಂದಿವೆ. ಆದರೆ, ಒಟ್ಟಾರೆ ಕೂಟವಾಗಿ ಗೆದ್ದಿದೆ. ಇತ್ತ ಬಿಜೆಪಿ ಮತ್ತು ಎಐಎಡಿಎಂಕೆ ಒಂದೂ ಸ್ಥಾನವನ್ನು ಗೆದ್ದಿಲ್ಲ. ಎಐಎಡಿಎಂಕೆ ಸ್ಥಾನವನ್ನು ತುಂಬವ ಪ್ರಯತ್ನದ ಬಿಜೆಪಿ ಯತ್ನಕ್ಕೆ ಹಿನ್ನಡೆಯಾಗಿದೆ. ಸ್ವತಃ ಪ್ರಧಾನಿ ಮೋದಿ ಕಳೆದ 10 ವರ್ಷದಲ್ಲಿ ತಮಿಳುನಾಡಿನ ಜನರನ್ನು ಮನ ಗೆಲ್ಲುವ ಪ್ರಯತ್ನ ಕೈಗೂಡಿಲ್ಲ! ದ್ರಾವಿಡ ರಾಜಕಾರಣಕ್ಕೆ ಅಲ್ಲಿನ ಜನರು ವೋಟ್‌ ನೀಡಿದ್ದಾರೆ. ಮತ್ತೂಂದೆಡೆ ಎಐಎಡಿಎಂಕೆ ಹೀನಾಯ ಪ್ರದರ್ಶನ ತೋರಿದೆ. ಜತೆಗೆ, ಎಡಪಕ್ಷಗಳು ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿವೆ.

ತೆಲಂಗಾಣ: ಕಾಂಗ್ರೆಸ್‌, ಬಿಜೆಪಿ ಫಿಫ್ಟಿ ಫಿಫ್ಟಿ
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆಶಾದಾಯಕ ಕಂಡ ರಾಜ್ಯವಿದು. ವಿಧಾನಸಭೆಯಲ್ಲಿ ಭರ್ಜರಿ ಜಯ ಗಳಿಸಿದ್ದ ಕಾಂಗ್ರೆಸ್‌ ಕೂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಈ ಚುನಾವಣೆಯೊಂದಿಗೆ ದಕ್ಷಿಣದಲ್ಲಿ ಕರ್ನಾಟಕದ ಬಳಿಕ ಕಾಂಗ್ರೆಸ್‌-ಬಿಜೆಪಿ ನಡುವಿನ ರಾಜಕಾರಣದ ರಾಜ್ಯವಾಗಿ ಬದಲಾಗಿದೆ. ಪ್ರಾದೇಶಿಕ ಪಕ್ಷ ಬಿಆರ್‌ಎಸ್‌ ನೆಲಕಚ್ಚಿದೆ. ಕಳೆದ ಬಾರಿಯಂತೆ ಈ ಬಾರಿಯೂ ಒಂದೇ ಸ್ಥಾನಕ್ಕೆ ಎಐಎಂಐಎಂ ತೃಪ್ತಿಪಟ್ಟುಕೊಂಡಿದೆ. ಹೈದ್ರಾಬಾದ್‌ನಲ್ಲಿ ಖಾತೆ ತೆರೆಯುವ ಬಿಜೆಪಿ ಪ್ರಯತ್ನ ಕೈಗೂಡಿಲ್ಲ!

ಪ.ಬಂಗಾಲ ಸಾರಿದ “ಸಂದೇಶ’ ಏನು?
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲ ಪ್ರಶ್ನಾತೀತ ನಾಯಕಿ ಎಂದು ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ. “ಸಂದೇಶ್‌ಖಾಲಿ’ಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದ ಮೂಲಕ ಬಿಜೆಪಿ ಚುನಾವಣೆ ಗೆಲ್ಲುವ ಬಹುದೊಡ್ಡ ಕಾರ್ಯತಂತ್ರ ರೂಪಿಸಿತ್ತು. ಆದರೆ, ಕೈಗೂಡಿಲ್ಲ. ಸಿಎಎ ಜಾರಿ ಮಾಡಲ್ಲ ಎಂದಿದ್ದ ಮಮತಾರ ಟಿಎಂಸಿಗೆ ಮತದಾರ ಮನ್ನಣೆ ನೀಡಿದ್ದಾನೆ. ಹಿಂದೂ-ಮುಸ್ಲಿಮ್‌ ಧ್ರುವೀಕರಣಕ್ಕೆ ಯಾವುದೇ ಮಾನ್ಯತೆ ದೊರೆತಿಲ್ಲ. ಕಳೆದ ಬಾರಿ ಗೆದ್ದಿದ್ದ 18 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿಯೂ ಬಿಜೆಪಿ ಸಫ‌ಲ ಆಗಿಲ್ಲ. ಇಲ್ಲೇನಿದ್ದರೂ ದೀದಿಯದ್ದೇ ಆಟ!

ಬಿಹಾರ ರಾಜ್ಯದಲ್ಲಿ
ವಿಪಕ್ಷ ಪುನಃಶ್ಚೇತನ
2019ರ ಫ‌ಲಿತಾಂಶಕ್ಕೆ ಹೋಲಿಸಿದರೆ, ಬಿಹಾರ ಪ್ರತಿಪಕ್ಷಗಳ ಪಾಲಿಗೆ ಈ ಚುನಾವಣೆ ಪುನಃಶ್ಚೇತನ ನೀಡಿದೆ. ಒಟ್ಟಾರೆ ಎನ್‌ಡಿಎಗೆ 9 ಸ್ಥಾನಗಳ ಹಿನ್ನಡೆಯಾಗಿದೆ. ಅದರಲ್ಲಿ ಬಿಜೆಪಿ 5 ಮತ್ತು ಜೆಡಿಯು 4 ಸ್ಥಾನ ಕುಸಿತ ಕಂಡರೆ, ಇಂಡಿಯಾ ಕೂಟ 9 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇಂಡಿಯಾ ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್‌ ಕುಮಾರ್‌ ಚುನಾವಣೆ ಮುಂಚೆಯೇ ಬಿಜೆಪಿಯ ಎನ್‌ಡಿಎ ಸೇರ್ಪಡೆಯಾದರು. ಬಹುಶಃ ನಿರೀಕ್ಷೆಯ ಹುದ್ದೆ ಸಿಗದ್ದಕ್ಕೆ ಅವರು ಕೂಟವನ್ನ ಬದಲಿಸಿದರು. ಬಹುತೇಕ ರಾಜಕೀಯ ಪಂಡಿತರ ಪ್ರಕಾರ, ಜೆಡಿಯುಗೆ ಭಾರೀ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿ ದ್ದರು. ಆದರೆ, ಆ ರೀತಿಯೇನೂ ಆಗಿಲ್ಲ. ಎನ್‌ಡಿಎದಲ್ಲಿ ಜೆಡಿಯು 3ನೇ ದೊಡ್ಡ ಪಕ್ಷವಾಗಿದೆ. ಇನ್ನು ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್‌ ಶಕ್ತಿಮೀರಿ ಪ್ರಯತ್ನ ನಡೆಸಿದರು. ಅವರು ಹೋದಲೆಲ್ಲ ಜನ ಕೂಡ ಸೇರುತ್ತಿದ್ದರು. ಆದರೆ, ಅವು ಮತಗಳಾಗಿ ಬದಲಾಗಿಲ್ಲ. ಅಗ್ನಿಪಥ ವಿರುದ್ಧದ ಆಕ್ರೋಶ, ನಿರುದ್ಯೋಗ, ಬೆಲೆ ಏರಿಕೆಗಳು ಬಿಜೆಪಿಯ ವಿರುದ್ಧ ಕೆಲಸ ಮಾಡಿದರೆ, ಇಂಡಿಯಾ ಕೂಟಕ್ಕೆ ಪ್ಲಸ್‌ ಪಾಯಿಂಟ್‌ ಆಗಿವೆ. ಇನ್ನೂ ಕಾಂಗ್ರೆಸ್‌ನ ಪ್ರದರ್ಶನದಲ್ಲಿ ಅಂಥ ಏರಿಳತಗಳೇನೂ ಆಗಿಲ್ಲ. ಬಿಹಾರದಲ್ಲಿ ಪ್ರತಿಪಕ್ಷ ಪುನಃಶ್ಚೇತನವಾಗಿದೆ.

ಬಿಜೆಪಿಗೆ ಭರ್ಜರಿ ಲಾಭ ತಂದ ಮ.ಪ್ರ.
ಬಿಜೆಪಿಗೆ ಬಲ ನೀಡಿದ ರಾಜ್ಯಗಳ ಪೈಕಿ ಮಧ್ಯ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅದೇ ರೀತಿ, ಕಾಂಗ್ರೆಸ್‌ನ ನಿರೀಕ್ಷಿತ ಮಟ್ಟ ತಲುಪದಿರಲು ಇದೇ ರಾಜ್ಯ ಕಾರಣ! ವಿಧಾನಸಭೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌ ಅದೇ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದೆ. ಬಿಜೆಪಿಯ ಪರವಾಗಿ ಬುಡಕಟ್ಟು ಮತ್ತು ದಲಿತ, ಹಿಂದುಳಿದ ಮತಗಳು ಅಚಲವಾಗಿ ನಿಂತಿದ್ದು, ಅದು ಹಾಗೆಯೇ ಮುಂದುವರಿದಿದೆ. ಮಾಜಿ ಶಿವರಾಜ್‌ ಸಿಂಗ್‌ ಚೌಹಾಣ್‌ ವರ್ಚುಸ್ಸು ಇನ್ನೂ ಮಾಸಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವ ಮತ್ತು ಸಂಘಟನೆಯ ಕೊರತೆ ಎದ್ದು ಕಾಣುತ್ತದೆ.

ಬಿಜೆಪಿ ಬಾಯಿಗೆ ಬಿದ್ದ ಒಡಿಶಾ ಲಡ್ಡು!
ಬಿಜೆಪಿ ಈ ಬಾರಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಹೆಚ್ಚು ಪ್ರಚಾರ ಕೈಗೊಂಡಿತ್ತು. ಈ ಪೈಕಿ ಪೂರ್ವ ಭಾರತದ ಒಡಿಶಾ ಬಿಜೆಪಿ ಪ್ರಯತ್ನಕ್ಕೆ ಫ‌ಲ ನೀಡಿದೆ. ಕಳೆದ ಬಾರಿ 8 ಸ್ಥಾನ ಗೆದ್ದಿದ್ದ ಈ ಬಾರಿ ಹೆಚ್ಚುವರಿ 11 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಜತೆಗೆ, ಒಡಿಶಾದ ವಿಧಾನ ಸಭೆಯಲ್ಲೂ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಒಡಿಶಾದಲ್ಲಿ 24 ವರ್ಷ ಆಡಳಿತದಲ್ಲಿದ್ದ ನವೀನ್‌ ಪಟ್ನಾಯಿಕ್‌ ಅವರು ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ವಿಶೇಷವಾಗಿ ಮಹಿಳಾ ಮತದಾರರು ಬಿಜೆಪಿಯನ್ನು ಕೈಹಿಡಿದಿದ್ದಾರೆ. ಆದರೆ, ಕಾಂಗ್ರೆಸ್‌ ಮಾತ್ರ ಸಾಧನೆ ಅಷ್ಟಕ್ಕಷ್ಟೇ. ಬಿಜೆಪಿ ಒಟ್ಟು ಪ್ರದರ್ಶನಕ್ಕೆ ಒಡಿಶಾ ಗಮನಾರ್ಹ ಕೊಡುಗೆ ನೀಡಿದೆ.

ಹರ್ಯಾಣದಲ್ಲಿ ಬಿಜೆಪಿಗೆ ತಟ್ಟಿದ ರೈತಾಕ್ರೋಶ
ಕಳೆದ ಬಾರಿ ಹತ್ತೂ ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 5 ಸ್ಥಾನಗಳನ್ನು ಕಳೆದುಕೊಂಡಿದೆ. ಹರ್ಯಾಣದಲ್ಲಿ ರೈತ ಪ್ರತಿಭಟನೆ ಮತ್ತು ಅಗ್ನಿವೀರದೆಡೆಗಿನ ಆಕ್ರೋಶವು ಫ‌ಲಿತಾಂಶದಲ್ಲಿ ಎದ್ದು ಕಾಣುತ್ತಿದೆ. ಜತೆಗೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್‌ ತೋರಿದ ಜಾಣ್ಮೆಯು ಅದಕ್ಕೆ ಪ್ರತಿಫ‌ಲವನ್ನು ತಂದುಕೊಟ್ಟಿದೆ. ಹಾಗಾಗಿ, ನಿರೀಕ್ಷೆಯಂತೆ ಕಾಂಗ್ರೆಸ್‌ ಉತ್ತಮ ಪ್ರದರ್ಶನ ತೋರಿದೆ. ಆದರೆ, ಅದೇ ಮಾತನ್ನು ಬಿಜೆಪಿಗೆ ಹೇಳುವಂತಿಲ್ಲ. ರಾಜ್ಯದಲ್ಲಿನ ನಾಯಕತ್ವ ಬದಲಿಸಿದರೂ ಹಿಂದುಳಿದ ಮತ್ತು ಜಾಟ್‌ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಹರ್ಯಾಣದಲ್ಲಿ ರೈತಾಗ್ನಿಗೆ ಬಿಜೆಪಿ ತುತ್ತಾಗಿದೆ!

ಕಾಶ್ಮೀರದಲ್ಲಿ ಬಿಜೆಪಿ, ಎನ್‌ಸಿ ಪ್ರಾಬಲ್ಯ
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಮತದಾರರು ಅದ್ಭುತವಾಗಿ ಸ್ಪಂದಿಸಿದರು. ಮತದಾನ ಕೂಡ ದಾಖಲೆಯಾಗಿತ್ತು. ಒಟ್ಟು 5 ಸ್ಥಾನಗಳ ಪೈಕಿ ಬಿಜೆಪಿ 2, ನ್ಯಾಷನಲ್‌ ಕಾನ್ಫರೆನ್ಸ್‌ 2 ಮತ್ತು ಒಂದು ಸ್ಥಾನವನ್ನು ಪಕ್ಷೇತರರು ಗೆದ್ದಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಪಿಡಿಪಿ ಮಾತ್ರ ಶೂನ್ಯ ಸಾಧನೆ ಮಾಡಿವೆ. ಜಮ್ಮು ಪ್ರದೇಶದ ಮತದಾರರು ಬಿಜೆಪಿಗೆ ಒಲವು ತೋರಿದರೆ, ಕಾಶ್ಮೀರದ ಜನ ನ್ಯಾಷನಲ್‌ ಕಾನ್ಫರೆನ್ಸ್‌ ನತ್ತ ವಾಲಿದ್ದಾರೆ.

ಈಶಾನ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಸಮಬಲ
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ, ಮೇಘಾಲಯ, ಸಿಕ್ಕಿಂ, ಮಿಜೋರಾಂ, ನಾಗಲ್ಯಾಂಡ್‌ನ‌ಲ್ಲಿ ಒಟ್ಟು 11 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳು ಜಯ ಕಂಡಿವೆ. ಬಿಜೆಪಿ ಈಶಾನ್ಯ ಭಾರತದತ್ತ ಹೆಚ್ಚಿನ ಆಸ್ಥೆ ವಹಿಸಿದ್ದರೂ ಯಾವುದೇ ಫ‌ಲ ನೀಡಿಲ್ಲ. ಮಣಿಪುರ ಹಿಂಸಾಚಾರ ಪರಿಣಾಮ ಬೀರಿರುವುದನ್ನು ಗುರುತಿಸಬಹುದಾಗಿದೆ.

ಲಕ್ಷದ್ವೀಪದಲ್ಲಿ ಖಾತೆ ತೆರೆದ ಬಿಜೆಪಿ
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಪುದುಚೆರಿಯಲ್ಲಿ ಕಾಂಗ್ರೆಸ್‌, ಲಕ್ಷದ್ವೀಪ, ಅಂಡಮಾನ್‌ ಮತ್ತು ನಿಕೋಬಾರ್‌, ದಾದ್ರಾ ಮತ್ತು ನಗರ ಹವೇಲಿಯಲ್ಲಿ ಬಿಜೆಪಿ ಗೆದ್ದಿದೆ. ಇನ್ನು ಲಡಾಖ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಲಕ್ಷದ್ವೀಪದಲ್ಲಿ ಬಿಜೆಪಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದರೆ, ಲಡಾಖ್‌ ಕ್ಷೇತ್ರವನ್ನು ಕಳೆದು ಕೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿತ್ತು. ಒಟ್ಟಾರೆಯಾಗಿ ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರದರ್ಶನ ಸಮಾನವಾಗಿದೆ.

ಟಾಪ್ ನ್ಯೂಸ್

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ

Nirmala Sitharaman

Bengaluru; ಚುನಾವಣಾ ಬಾಂಡ್‌ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್‌ ವಿರುದ್ದ ಎಫ್‌ಐಆರ್

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ

Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.