Desi Swara: ಕನ್ನಡ ಸಂಘ ಸಿಂಗಪುರ: ಸಿಂಗಾರೋತ್ಸವ- ಪ್ರತಿಭೆಗಳ ಅಪೂರ್ವ ಸಂಗಮ
ಸ್ಪೀಕರ್ನಲ್ಲಿ ಕನ್ನಡದ ಹಾಡುಗಳು ಆಗಲೇ ಮೊಳಗುತ್ತಿದ್ದವು.
Team Udayavani, Jun 8, 2024, 9:38 AM IST
ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕನ್ನಡ ಸಂಘ (ಸಿಂಗಪುರ)ದಿಂದ ಪ್ರಕಟಗೊಂಡ “ಸಿಂಗಾರೋತ್ಸವ’ದ ಸುದ್ದಿ, ಸ್ಥಳೀಯ ಸಿಂಗನ್ನಡಿಗರ ಪ್ರತಿಭೆಗಳಲ್ಲಿ ಹೊಸ ಸಂಚಲನವನ್ನೇ ಎಬ್ಬಿಸಿತ್ತು!! ಸುಮಾರು 5 ವರ್ಷಗಳ ಅನಂತರ ಪುನರಾರಂಭಗೊಂಡ ಎಲ್ಲರ ಮೆಚ್ಚಿನ ಕಾರ್ಯಕ್ರಮಕ್ಕೆ ಸಮಯದ ಅಭಾವ, ಮಕ್ಕಳ ಪರೀಕ್ಷೆಯ ಸಮಯ ಎಂದು ಹೇಳುತ್ತಲೇ ಅನೇಕ ಪ್ರತಿಭೆಗಳು ಮೆಲ್ಲನೆ ಅರಳಲು ತಾಲೀಮು ನಡಿದಿತ್ತೆಂಬುದು ಆಮೇಲೆ ತಿಳಿದ ವಿಷಯ.
ಹೊಸದಾಗಿ ಸಿಂಗಪುರಕ್ಕೆ ಬಂದಂತಹ ಕನ್ನಡಿಗರಿಗೆ, ಇದೇನು “ಸಿಂಗಾರೋತ್ಸವ’? ಎನ್ನುವ ಕುತೂಹಲ ಜತೆಗೆ ಭಾಗವಹಿಸುವ ಹಂಬಲ. ಇದು ಕನ್ನಡ ಸಂಘ (ಸಿಂಗಪುರ)ವು ತನ್ನ ಸದಸ್ಯರ ಒಟ್ಟಾರೆ ಕುಟುಂಬದ ಪ್ರತಿಭೆಗಳಿಗೆ ಮುಕ್ತ ಹಾಗೂ ಉಚಿತವಾಗಿ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಮಾರು 15 ವರ್ಷಗಳ ಹಿಂದೆ ಆರಂಭಗೊಂಡ ಸುಂದರ ಪರಿಕಲ್ಪನೆ. ಇಂದು ನೂರಕ್ಕೂ ಹೆಚ್ಚು ಪ್ರತಿಭೆಗಳನ್ನು ಯಾವುದೇ ವಯೋಮಾನದ ಮಿತಿಯಿಲ್ಲದೆ, ಯಾವುದೇ ಸ್ಪರ್ಧೆಗಳ ಮನೋಭಾವವಿಲ್ಲದೆ ಸಿಂಗನ್ನಡಿಗರು, ಸಿಂಗನ್ನಡಿಗರಿಂದ, ಸಿಂಗನ್ನಡಿಗೋಸ್ಕರ…ಆಚರಿಸಕೊಳ್ಳುವ ಸಂಭ್ರಮದ ಜಾತ್ರೆ ಅಂತಾನೆ ಹೇಳಬಹುದು. ನಮ್ಮ ಜಾತ್ರೇಲಿ…ನಮ್ದೇ ಹವಾ!! ಎನ್ನುವ ಉತ್ಸಾಹದೊಂದಿಗೆ ಸೇರಿದ ಅನೇಕ ಉತ್ಸಾಹಿ ತಂಡಗಳು ಹಾಡು, ಡ್ಯಾನ್ಸ್, ಪ್ರಹಸನ, ವಾದ್ಯವಾದನ, ನೃತ್ಯರೂಪಕ, ಕಾವ್ಯ, ಕಥನ, ಜನಪದದ ಹಾಡುಗಳ ಸಿದ್ಧತೆಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸುವ ದಿನ ಮೇ 18ಕ್ಕೆಂದು ಕಾಯುತ್ತಿದ್ದರು.
ಸಂಘವು ಮೇ 18ರಂದು ಎಲ್ಲರೂ ಸೇರಿ ಜಾತ್ರೆಯ ರೂಪದಲ್ಲಿ ಸಂಭ್ರಮಿಸಲೆಂದು, ಸ್ಥಳೀಯ ಕನ್ನಡಿಗರಿಗೆ ಪುಟ್ಟ ಮಳಿಗೆಗಳನ್ನು ಹಾಕಲು ಕರೆ ನೀಡಲಾಗಿತ್ತು, ಜಾತ್ರೆ ಅಂದ ಮೇಲೆ ಆಟಗಳಿಲ್ಲವೆಂದರೆ ಹೇಗೆ? ಅದನ್ನೂ ಕೂಡ, ಲಭ್ಯವಿದ್ದ ಜಾಗದಲ್ಲಿ ಚೊಕ್ಕವಾಗಿ ಆಯೋಜಿಸಲಾಗಿತ್ತು. ಜಾತ್ರೆಯ ಉಡುಪಿನಲ್ಲಿ ಬಂದವರಿಗೆ ಬಹುಮಾನಗಳನ್ನು ಕೊಡುವುದಾಗಿ ಮೊದಲೇ ಘೋಷಿಸಿತ್ತು, ತಿಂಡಿ ತಿನಿಸಿಲ್ಲವೆಂದೆರೆ ಅದೊಂದು ಜಾತ್ರೆಯೆ? ಸ್ವಾಗತ್ ರೆಸ್ಟೋರೆಂಟ್ ವತಿಯಿಂದ ವಿಧವಿಧವಾದ ಖಾದ್ಯಗಳು, ಟೀ/ಕಾಫಿ ಮದ್ದೂರುವಡೆ, ಸಮೋಸಗಳು ಕಾರ್ಯಕ್ರಮದ ಆರಂಭಗೊಳ್ಳುವ ಮುಂಚೆ ದೊಡ್ಡ ಕ್ಯೂನಲ್ಲಿ ಕೊಳ್ಳಲ್ಪಡುತ್ತಿದ್ದವು. ಇನ್ನು ಒಳಗಡೆ ಸಭಾಂಗಣವು “ಸಿಂಗಾರೋತ್ಸವ’ ಎನ್ನುವ ದೊಡ್ಡ ಪೋಸ್ಟರ್ನ್ನು ತನ್ನ ಗೋಡೆಗೆ ಹಾಕಿಕೊಂಡು ಮೆರೆಯುತಿತ್ತು, ವೇದಿಕೆ ಕೂಡ ಅಲಂಕಾರಗೊಂಡು ಎಲ್ಲರನ್ನು ರಂಜಿಸಲು ಸಜ್ಜಾಗಿತ್ತು, ಸ್ಪೀಕರ್ನಲ್ಲಿ ಕನ್ನಡದ ಹಾಡುಗಳು ಆಗಲೇ ಮೊಳಗುತ್ತಿದ್ದವು.
ಹಾಡು, ನೃತ್ಯ, ಏಕವ್ಯಕ್ತಿ ಅಭಿನಯ
ಸಂಜೆ 5 ಗಂಟೆಗೆ ಸರಿಯಾಗಿ ಆರಂಭವಾದ ಕಾರ್ಯಕ್ರಮವು ನಿಧಾನವಾಗಿ ತನ್ನನ್ನು ತಾನೇ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಯಿತು. ಒಂದಾದ ಮೇಲೆ ಒಂದರಂತೆ 4 ತಾಸುಗಳು ಸತತವಾಗಿ ತಂಡ ಹಾಗೂ ಏಕವ್ಯಕ್ತಿಗಳನ್ನೊಳಗೊಂಡ ವೈವಿಧ್ಯಮಯವಾದ ಕಲಾ ಪ್ರದರ್ಶನ ನೆರೆದ ಪ್ರೇಕ್ಷಕರನ್ನು ಸೂರೆಗೊಂಡವು. ಚಪ್ಪಾಳೆ, ಶಿಳ್ಳೆ, ಕೂಗುಗಳ ಮೂಲಕ ಸುಮಾರು 400ಕ್ಕೂ ಹೆಚ್ಚು ಕನ್ನಡಿಗರು ಪ್ರೋತ್ಸಾಹಿಸುತ್ತಿದ್ದರು. ಅನೇಕ ಮಕ್ಕಳು ತಮ್ಮ ಹಾಡು, ನೃತ್ಯ ಹಾಗೂ ವಾದ್ಯಗಳ ಮೂಲಕ ಪ್ರೇಕ್ಷಕರನ್ನು ಸೂರೆಗೊಂಡರೆ, ದೊಡ್ಡವರು ಕೂಡ ತಾವೇನು ಕಡಿಮೆ ಎನ್ನುವಂತೆ ಹಾಡಿ, ಕುಣಿದು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದರು. ಒಟ್ಟಿನಲ್ಲಿ ಎಲ್ಲ ಕಲಾ ಪ್ರಕಾರಗಳಲ್ಲಿ ವೈವಿಧ್ಯಮಯವಾಗಿ ತಮ್ಮ ಸೃಜನಶೀಲ, ಕ್ರಿಯಾಶೀಲತೆಯ ಸಿದ್ಧತೆಗಳಿಂದ ವೇದಿಕೆಯ ಮೆರುಗನ್ನು ಹೆಚ್ಚಿಸಿದರೆಂದರೆ ಅತಿಶಯೋಕ್ತಿಯಲ್ಲ.
ಗಾನ ಸುಧೆ
ಗಾಯನದಲ್ಲಿ ಮೊಳಗಿದ ಭಕ್ತಿಗೀತೆ, ಚಿತ್ರಗೀತೆ, ಭಾವಗೀತೆಗಳು, ಸಮೂಹ ಗಾಯನ ಹಾಗೂ ನೃತ್ಯ, ಯುಗಳ ಗೀತೆಗಳು, ಮೃದಂಗ ಹಾಗೂ ಡ್ರಮ್ಸ್ನ ವಿಭಿನ್ನ ಸಂಗಮದ ವಾದ್ಯ ವಾದನ, ಕೊಳಲಿನೊಂದಿಗೆ ಶಿಳ್ಳಿನಲ್ಲಿ ಹಾಡುಗಳ ಪ್ರಸ್ತುತಿ, ಕನ್ನಡ ಕಲಿ ಮಕ್ಕಳಿಂದ ಹೊಮ್ಮಿದ ಸಮೂಹ ಗಾಯನ, ಹೊಸತನದಲ್ಲಿ ಮೂಡಿದ ಲೇಜಂತಿ ಡ್ಯಾನ್ಸ್, ಜಾತ್ರೆಗಳ ಉಡುಪು, ಕೂಲಿಂಗ್ ಗ್ಲಾಸ್ನಲ್ಲಿ ಹಾಡಿ ಕುಣಿದ ಪುಟ್ಟ ಪುಟ್ಟ ಮಕ್ಕಳ ನೃತ್ಯ, ರಾಗೋಪಾಸನದಲ್ಲಿ ರೇವತಿ ರಾಗದ ವ್ಯಾಖ್ಯಾನದೊಂದಿಗೆ ಮೂಡಿದ ಗಾಯನ, ಜತೆಗೆ ವಯಲಿನ್ ವಾದನದ ಅಪೂರ್ವ ಪ್ರಯೋಗ, ಮಾಸ್ಟರ್ ಹಿರಣಯ್ಯ ಅವರ ನಾಟಕದ ಒಂದು ಭಾಗದ ಪ್ರದರ್ಶನ, ಮನೋಜ್ಞವಾಗಿ ಮೂಡಿ ಎಲ್ಲರ ಮನ ಸ್ಪರ್ಶಿಸಿದ ಅಮ್ಮ-ಮಗನ ನೃತ್ಯ ರೂಪಕ, ಸಭಾಂಗಣವನ್ನು ತುಂಬಿ ಹರಿದ ಶರೀಪಜ್ಜನ ತತ್ತ್ವಪದ, ಕಚಗುಳಿ ಇಟ್ಟ ಡ್ಯುಯಟ್ ಡ್ಯಾನ್ಸ್, ಜನಪದ ಗರತಿಯ ಒಂದು ದಿನದ ಕಾಲಚಕ್ರವನ್ನು ತ್ರಿಪದಿಗಳ ಮೂಲಕ ಹಾಡಿ, ಮಕ್ಕಳ ಅಭಿನಯದಲ್ಲಿ ಮೂಡಿದ ಪ್ರದರ್ಶನ, ಬಹುಷಃ ಬರೆಯುತ್ತಿದ್ದರೆ ಎಲ್ಲ ಪ್ರದರ್ಶನಗಳು ವಿಶೇಷವೆನ್ನುವಂತಿದ್ದವು. ಒಟ್ಟಿನಲ್ಲಿ ನಮಗೂ ಟ್ಯಾಲೆಂಟ್ ಉಂಟು ಅಂತ ಸಾರಿ ಹೇಳಿದಂತಿತ್ತು ಒಟ್ಟಾರೆ ಕಾರ್ಯಕ್ರಮದ ತಿರುಳು.
ಕಾರ್ಯಕ್ರಮವನ್ನು ನಿರೂಪಿಸಿದ ಹೊಸ ಪ್ರತಿಭೆಗಳು ವೈಷ್ಣವಿ ಹಾಗೂ ಮೋನಿಷ ಅವರು ಕೂಡ ತಮ್ಮ ಮಾತಿನಲ್ಲಿ ಪ್ರೇಕ್ಷಕರನ್ನು, ಕಲಾವಿದರನ್ನು ಹುರಿದುಂಬಿಸಿದ್ದು ಶ್ಲಾಘನೀಯ. ಒಟ್ಟಿನಲ್ಲಿ ಸಿಂಗಾರೋತ್ಸವ ಎಂದಿನಂತೆ ಪ್ರತಿಭೆಗಳನ್ನು ತೋರುವ ಅವಕಾಶ ಸೃಷ್ಟಿಸಿದ್ದಲ್ಲದೆ, ತಾಲೀಮಿನ ನೆಪದಲ್ಲಿ ಮಕ್ಕಳು ಸೇರಿ ನಲಿದಿದ್ದು, ಆಡಿದ್ದು, ಹೊಸ ಸ್ನೇಹಿತರನ್ನು ಪಡೆದಿದ್ದು ಸಂಘದ ಮೂಲೋದ್ದೇಶವನ್ನು ಎತ್ತಿ ಹಿಡಿದಂತೆ. ಅನೇಕ ಹೊಸ ಕನ್ನಡಿಗರ ಕುಟುಂಬಗಳ ಪರಸ್ಪರ ಪರಿಚಯ ಹೊಸ ಬಾಂಧವ್ಯ ಕನ್ನಡಿಗರು ಒಟ್ಟಾಗಿ ಸೇರಿ ಮತ್ತೆ ಸಂಘವನ್ನು ಬಲ ಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲೆಂಬುದು ಸಂಘದ ಆಶಯ. ಸಿಂಗಾರೋತ್ಸವದ ನೆನಪಿನ ಕ್ಷಣಗಳು, ಉಳಿಯಲಿ, ಮರುಕಳಿಸಲಿ ಮತ್ತೂಮ್ಮೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ
Box office: ರಿಲೀಸ್ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’
ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್
World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!
Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.