T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 


Team Udayavani, Jun 30, 2024, 1:14 PM IST

1

2024ಟಿ20 ವಿಶ್ವಕಪ್‌ ಗೆದ್ದಿರುವ ಭಾರತ, ಇದಕ್ಕೂ ಮುನ್ನ ಕಪ್‌ ಗೆದ್ದಿದ್ದು 2007ರಲ್ಲಿ. ಟಿ20 ಇತಿಹಾಸದ ಚೊಚ್ಚಲ ಕಪ್‌ ಅನ್ನೇ ಎಂ.ಎಸ್‌.ಧೋನಿ ನೇತೃತ್ವದ ಭಾರತದ ಯುವ ಪಡೆ ಜಯಿಸಿತು. ತಂಡದಲ್ಲಿ ಯುವರಾಜ್‌ ಸಿಂಗ್‌, ವೀರೇಂದ್ರ ಸೆಹವಾಗ್‌, ಅಜಿತ್‌ ಅಗರ್ಕರ್‌ರಂತಹ ಕೆಲವೇ ಕೆಲವು ಅನುಭವಿಗಳಿದ್ದರು. ಅಂದಿನ ಹಳೆಯ ನೆನಪುಗಳು, ಇಂದಿನ ಹೊಸ ಅನುಭವಗಳ ಬುತ್ತಿ ಇಲ್ಲಿದೆ. 

ಅಂದು ಧೋನಿ ಇಂದು ರೋಹಿತ್‌:

ಅನುಮಾನವೇ ಇಲ್ಲ, ಮಹೇಂದ್ರ ಸಿಂಗ್‌ ಧೋನಿ ಭಾರತ ಕಂಡ ಅತ್ಯಂತ ಸಮರ್ಥ ಹಾಗೂ ಅದೃಷ್ಟಶಾಲಿ ನಾಯಕ. ದೇಶಕ್ಕೆ ಎರಡು ವಿಶ್ವಕಪ್‌ ತಂದುಕೊಟ್ಟ ಏಕೈಕ ನಾಯಕ‌. ಆದರೆ ರೋಹಿತ್‌ ಶರ್ಮ ಅದೃಷ್ಟದ ವಿಷಯದಲ್ಲಿ ಹಿಂದೆ. ಇಲ್ಲವಾದರೆ ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್‌ನಲ್ಲೇ ಭಾರತ ಚಾಂಪಿಯನ್‌ ಆಗಬೇಕಿತ್ತು. ಎಲ್ಲ ಪಂದ್ಯ ಗೆದ್ದು ಅಹ್ಮದಾಬಾದ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಮಂಡಿಯೂರಿತು. ಅಂದು ಚೊಚ್ಚಲ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟಾಗ ಧೋನಿ ಯಂಗ್‌ ಕ್ಯಾಪ್ಟನ್‌ ಆಗಿದ್ದರು. ಉತ್ಸಾಹದ ಚಿಲುಮೆಯಾಗಿದ್ದರು. 2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲೇ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಲೀಗ್‌ ಹಂತದಲ್ಲೇ ಹೊರಬಿದ್ದಾಗ ರಾಹುಲ್‌ ದ್ರಾವಿಡ್‌ ಅವರ ನಾಯಕತ್ವಕ್ಕೆ ಸಂಚಕಾರ ಬಂದಿತ್ತು. ಧೋನಿ ಪಟ್ಟವೇರಿದ್ದರು. ರೋಹಿತ್‌ ಹಾಗಲ್ಲ, ಅವರದು ಸುದೀರ್ಘ‌ ಅನುಭವ… ಆಟಗಾರನಾಗಿ, ನಾಯಕನಾಗಿ. ಬಹುಶಃ ಇದು ಅವರ ಕೊನೆಯ ವಿಶ್ವಕಪ್‌. ಈ ಬಾರಿ ರೋಹಿತ್‌ ಬೇಡ, ನಾಯಕತ್ವ ಹಾರ್ದಿಕ್‌ ಪಾಂಡ್ಯ ಅವರಿಗಿರಲಿ ಎಂಬ ಕೂಗು ಕೂಡ ಕೇಳಿಬಂದಿತ್ತು. ಆದರೆ ಇಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಜತೆಗೆ ನಾಯಕತ್ವದಲ್ಲೂ ಸೈ ಎನಿಸಿಕೊಂಡರು. ಜತೆಗಾರ ವಿರಾಟ್‌ ಕೊಹ್ಲಿ ಸತತ ವೈಫಲ್ಯ ಕಾಣುತ್ತಿದ್ದಾಗ ಒಂದೆಡೆ ಬೇರು ಬಿಟ್ಟು ಇನ್ನಿಂಗ್ಸ್‌ ಕಟ್ಟಿದ ಪರಿ ಪ್ರಶಂಸನೀಯ. ಅದರಲ್ಲೂ ಆಸ್ಟ್ರೇಲಿಯ ಎದುರಿನ ಸೂಪರ್‌-8 ಹಾಗೂ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಇವರದ್ದು ಕ್ಯಾಪ್ಟನ್ಸ್‌ ನಾಕ್‌!

2007ರಿಂದ ಎಲ್ಲ ಟಿ20 ವಿಶ್ವಕಪ್‌ ಆಡಿದ್ದಾರೆ ರೋಹಿತ್‌ ಶರ್ಮ:

ಅಂದಹಾಗೆ ರೋಹಿತ್‌ 2007ರಿಂದ ಇಂದಿನ ತನಕ ಎಲ್ಲ ಟಿ20 ವಿಶ್ವಕಪ್‌ಗ್ಳಲ್ಲಿ ಆಡಿದ ಅಪರೂಪದ ಸಾಧಕ. ಅಂದು ಧೋನಿ ಸಾರಥ್ಯದ ತಂಡದಲ್ಲಿ ಇವರು ಓಪನರ್‌ ಆಗಿರಲಿಲ್ಲ. ಗಂಭೀರ್‌ ಜತೆ ಸೆಹವಾಗ್‌ ಅಥವಾ ಯೂಸುಫ್‌ ಪಠಾಣ್‌ ಬರುತ್ತಿದ್ದರು. ರೋಹಿತ್‌ ಬ್ಯಾಟ್‌ ಹಿಡಿದು ಆಡಲಿಳಿಯುತ್ತಿದ್ದುದು 5-6ನೇ ಕ್ರಮಾಂಕದಲ್ಲಿ, ಧೋನಿ ಬಳಿಕ. ಪಾಕಿಸ್ಥಾನ ವಿರುದ್ಧದ ಫೈನಲ್‌ನಲ್ಲಿ 6ನೇ ಸರದಿಯಲ್ಲಿ ಆಡಿ 16 ಎಸೆತಗಳಿಂದ ಅಜೇಯ 30 ರನ್‌ ಬಾರಿಸಿದ ಸಾಧನೆ ರೋಹಿತ್‌ ಅವರದು.  ತಮ್ಮ ಕ್ರಿಕೆಟ್‌ ಬಾಳ್ವೆಯ ಸಂಧ್ಯಾಕಾಲದಲ್ಲಿ ಯಂಗ್‌ ಜನರೇಶನ್‌ನ ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಪಟ್ಟಕ್ಕೇರಿಸಿದ ಇವರ ಸಾಹಸಕ್ಕೆ ಸಲಾಂ!

ಸತತ 6 ಸಿಕ್ಸರ್‌  ಯುವಿ ವಿಶ್ವದಾಖಲೆ:

ಇಂಗ್ಲೆಂಡ್‌ ಎದುರಿನ ಡರ್ಬನ್‌ ಪಂದ್ಯವನ್ನು ಯಾರೂ ಮರೆಯರು. ಇಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಓವರ್‌ ಒಂದರಲ್ಲಿ 6 ಸಿಕ್ಸರ್‌ ಸಿಡಿಸುವ ಮೂಲಕ ಯುವರಾಜ್‌ ಸಿಂಗ್‌ ಇತಿಹಾಸ ನಿರ್ಮಿಸಿದ್ದರು. ಭಾರತ 18 ರನ್ನುಗಳ ಜಯ ಸಾಧಿಸಿತು.

ಸ್ಕೋರ್‌: ಭಾರತ-4ಕ್ಕೆ 218, ಇಂಗ್ಲೆಂಡ್‌-6ಕ್ಕೆ 200. ಪಂದ್ಯಶ್ರೇಷ್ಠ: ಯುವರಾಜ್‌ ಸಿಂಗ್‌.

ಸ್ಕಾಟ್ಲೆಂಡ್‌ ವಿರುದ್ಧ ಪಂದ್ಯ ರದ್ದು:

“ಡಿ’ ವಿಭಾಗದಲ್ಲಿದ್ದ ಭಾರತದ ಮೊದಲ ಎದುರಾಳಿ ಸ್ಕಾಟ್ಲೆಂಡ್‌. ಡರ್ಬನ್‌ನಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟಾಸ್‌ ಕೂಡ ಹಾಕಲಾಗಲಿಲ್ಲ.

ಪಾಕ್‌ ವಿರುದ್ಧ ಬೌಲ್‌ ಔಟ್‌ನಲ್ಲಿ ಜಯಭೇರಿ :

ಪಾಕಿಸ್ಥಾನ ವಿರುದ್ಧದ ಬಿಗ್‌ ಮ್ಯಾಚ್‌ ಅತ್ಯಂತ ರೋಚಕವಾಗಿ ಸಾಗಿ ಟೈಯಲ್ಲಿ ಅಂತ್ಯ ಕಂಡಿತು. ಎರಡೂ ತಂಡಗಳು 141 ರನ್‌ ಮಾಡಿದ್ದವು. ಬಳಿಕ ಬೌಲ್‌ ಔಟ್‌ ನಿಯಮದಂತೆ ಭಾರತ ಮೂರೂ ಎಸೆತಗಳನ್ನು ಸ್ಟಂಪ್‌ಗೆ ಗುರಿಯಿರಿಸಿ ಯಶಸ್ಸು ಕಂಡಿತು. ಪಂದ್ಯಶ್ರೇಷ್ಠ: ಮೊಹಮ್ಮದ್‌ ಕೈಫ್‌.

ನ್ಯೂಜಿಲ್ಯಾಂಡ್‌ ವಿರುದ್ಧ ಸೋಲು:

ಸೂಪರ್‌-8 ಸುತ್ತಿನ ಆರಂಭಿಕ ಪಂದ್ಯದಲ್ಲೇ ಧೋನಿ ಪಡೆ ನ್ಯೂಜಿಲೆಂಡ್‌ ವಿರುದ್ಧ 10 ರನ್‌ ಸೋಲಿನ ಆಘಾತಕ್ಕೆ ಎದುರಾಯಿತು. ಸ್ಕೋರ್‌: ನ್ಯೂಜಿಲ್ಯಾಂಡ್‌ 190, ಭಾರತ-9ಕ್ಕೆ 180.

ಸೆಮೀಸ್‌ನಲ್ಲಿ ಆಸೀಸ್‌ ವಿರುದ್ಧ ಜಯ:

ಡರ್ಬನ್‌ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಎದುರಾಯಿತು. ಯುವರಾಜ್‌ (70) ಮತ್ತು ಬೌಲರ್ ಮತ್ತೆ ಮಿಂಚಿದರು. ಧೋನಿ ಬಳಗ 15 ರನ್ನುಗಳಿಂದ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿತು. ಸ್ಕೋರ್‌: ಭಾರತ-5ಕ್ಕೆ 188. ಆಸ್ಟ್ರೇಲಿಯ-7ಕ್ಕೆ 173. ಪಂದ್ಯಶ್ರೇಷ್ಠ: ಯುವರಾಜ್‌ ಸಿಂಗ್‌.

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧವೂ ಜಯ:

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ಶ್ರೇಷ್ಠ ಪ್ರದರ್ಶನ ನೀಡಿ 37 ರನ್ನುಗಳಿಂದ ಗೆದ್ದು ಬಂತು. ರೋಹಿತ್‌ ಅಜೇಯ ಅರ್ಧಶತಕ (50), ಆರ್‌.ಪಿ.ಸಿಂಗ್‌ ಅವರ ಘಾತಕ ಬೌಲಿಂಗ್‌ (13ಕ್ಕೆ 4) ಇಲ್ಲಿನ ಹೈಲೈಟ್‌ ಆಗಿತ್ತು. ಸ್ಕೋರ್‌: ಭಾರತ-5ಕ್ಕೆ 153. ದಕ್ಷಿಣ ಆಫ್ರಿಕಾ-9ಕ್ಕೆ 116. ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ.

2007ವಿಜೇತ ತಂಡ:

ಎಂ.ಎಸ್‌.ಧೋನಿ (ನಾಯಕ), ಯುವರಾಜ್‌ ಸಿಂಗ್‌ (ಉಪನಾಯಕ), ಗೌತಮ್‌ ಗಂಭೀರ್‌, ವೀರೇಂದ್ರ ಸೆಹವಾಗ್‌, ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌, ರೋಹಿತ್‌ ಶರ್ಮ, ಪೀಯೂಷ್‌ ಚಾವ್ಲಾ, ಯೂಸುಫ್‌ ಪಠಾಣ್‌, ಜೋಗಿಂದರ್‌ ಶರ್ಮ, ಇರ್ಫಾನ್‌ ಪಠಾಣ್‌, ಅಜಿತ್‌ ಅಗರ್ಕರ್‌, ರುದ್ರಪ್ರತಾಪ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಎಸ್‌.ಶ್ರೀಶಾಂತ್‌.

ರೋಹಿತ್‌: ಅಂದು ಆಟಗಾರ, ಇಂದು ನಾಯಕ:

2007ರ ಟಿ20 ವಿಶ್ವಕಪ್‌ನಲ್ಲಿ ಯುವ ಪ್ರತಿಭೆಯಾಗಿ ಸುದ್ದಿಯಾಗಿದ್ದ ರೋಹಿತ್‌ ಶರ್ಮ, ಅಂದು ಕೇವಲ ಆಟಗಾರನಾಗಿದ್ದರು. ಆಗೇನು ಅವರು ಬಹಳ ಸದ್ದು ಮಾಡಿರಲಿಲ್ಲ. 2024ರಲ್ಲಿ ತಂಡದ ನಾಯಕನಾಗಿದ್ದಾರೆ. ಸಮಕಾಲೀನ ಕ್ರಿಕೆಟ್‌ ಜಗತ್ತಿನ ಸರ್ವಶ್ರೇಷ್ಠ ಆಟಗಾರರಲ್ಲೂ ಒಬ್ಬರಾಗಿದ್ದಾರೆ. ನಾಯಕನಾಗಿ ಹಲವು ಕೂಟಗಳಲ್ಲಿ ಭಾರತವನ್ನು ಫೈನಲ್‌ಗೆ ಒಯ್ದು ದಂತಕಥೆಗಳ ಸಾಲಿನಲ್ಲಿ ಸೇರಿದ್ದಾರೆ.

ಅಗರ್ಕರ್‌: ಅಂದು ಆಟಗಾರ, ಇಂದು ಆಯ್ಕೆಗಾರ:

ವಿಶ್ವಕಪ್‌ ಗೆಲುವಿನಲ್ಲಿ ಆಟಗಾರರಷ್ಟೇ ಪಾಲು ಇದನ್ನು ಆರಿಸಿದ ಆಯ್ಕೆ ಸಮಿತಿಗೂ ಸಲ್ಲುತ್ತದೆ. ಈ ಬಾರಿಯ ವಿಜಯೀ ತಂಡವನ್ನು ಆರಿಸಿದ ವ್ಯಕ್ತಿ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌. ಕಾಕತಾಳೀಯವೆಂದರೆ, ಇವರು 2007ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಆಲ್‌ರೌಂಡರ್‌ ಅಗರ್ಕರ್‌ ಅವರ ಟಿ20 ದಾಖಲೆ ಅಷ್ಟೇನೂ ಉಲ್ಲೇಖನೀಯವಲ್ಲ. ಆಡಿದ್ದು ನಾಲ್ಕೇ ಪಂದ್ಯ. ಇದರಲ್ಲಿ 3 ಪಂದ್ಯಗಳನ್ನು 2007ರ ವಿಶ್ವಕಪ್‌ನಲ್ಲಿ ಆಡಿದ್ದರು. ಇದರಲ್ಲೊಂದು ಪಂದ್ಯ ರದ್ದುಗೊಂಡಿತ್ತು (ಸ್ಕಾಟ್ಲೆಂಡ್‌). ಪಾಕಿಸ್ತಾನ ವಿರುದ್ಧ ಒಂದು ವಿಕೆಟ್‌ ಕೆಡವಿದ್ದರು, ಅಷ್ಟೇ. ನ್ಯೂಜಿಲೆಂಡ್‌ ವಿರುದ್ಧ ವಿಕೆಟ್‌ ಲಭಿಸಿರಲಿಲ್ಲ.

2007ರಲ್ಲಿ ರಾಜ್ಯದ  ಉತ್ತಪ್ಪ ಇದ್ದರು:

2007ರ ಟಿ20 ವಿಶ್ವಕಪ್‌ ವೇಳೆ ತಂಡದಲ್ಲಿದ್ದ ಕರ್ನಾಟಕದ ಕ್ರಿಕೆಟಿಗನೆಂದರೆ ರಾಬಿನ್‌ ಉತ್ತಪ್ಪ. ಇವರನ್ನು ವಿಶೇಷ ಕಾರಣಕ್ಕಾಗಿ ನೆನಪಿಸಿಕೊಳ್ಳಲೇ ಬೇಕು. ಅಂದು ಪಾಕಿಸ್ತಾನ ವಿರುದ್ಧದ ಲೀಗ್‌ ಪಂದ್ಯ ಟೈ ಆಗಿತ್ತು. ಫಲಿತಾಂಶ ನಿರ್ಧರಿಸಲು “ಬಾಲ್‌ ಔಟ್‌’ ನಿಯಮವಿತ್ತು. ಭಾರತದ ಮೂರೂ ಎಸೆತಗಳು ಗುರಿ ಮುಟ್ಟಿದ್ದವು. ಅಂದು ಒಂದು ಎಸೆತವನ್ನಿಕ್ಕಿದವರೇ ರಾಬಿನ್‌ ಉತ್ತಪ್ಪ!

ಬಾರಿ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರ ಇಲ್ಲ :

ಈ ಬಾರಿಯ ವಿಶ್ವಕಪ್‌ ಗೆಲುವಿನ ಸಂಭ್ರಮದ ಒಂದು ಕೊರತೆ ಎಂದರೆ ಕರ್ನಾಟಕದ ಕ್ರಿಕೆಟಿಗರಿಲ್ಲದಿರುವುದು. ಸಾಮಾನ್ಯವಾಗಿ ಕನ್ನಡಿಗರು ಭಾರತ ತಂಡದಲ್ಲಿ ಇದ್ದೇ ಇರುತ್ತಾರೆ. ಈ ಬಾರಿ ತಂಡದಲ್ಲಿ ಅಂತಹದ್ದೊಂದು ಸ್ಥಿತಿಯಿರಲಿಲ್ಲ. ಕೆ.ಎಲ್‌.ರಾಹುಲ್‌ ಪೈಪೋಟಿಯಲ್ಲಿದ್ದರೂ ಅವರು ಸ್ಥಾನ ಪಡೆಯಲಿಲ್ಲ.

ಕೋಚ್‌ ರಾಹುಲ್‌  ದ್ರಾವಿಡ್‌ ಕರ್ನಾಟಕದವರು :

ತಂಡದಲ್ಲಿ ಕರ್ನಾಟಕದ ಆಟಗಾರರಿಲ್ಲ ಎಂಬ ನೋವಿದ್ದರೂ ವಿಶ್ವವಿಜೇತ ತಂಡದ ಮಾರ್ಗದರ್ಶಕ ರಾಜ್ಯದ ರಾಹುಲ್‌ ದ್ರಾವಿಡ್‌ ಎನ್ನುವುದು ಸಂತೋಷದ ಸಂಗತಿ. ಭಾರತ ಕಂಡ ಅತ್ಯಂತ ಕಲಾತ್ಮಕ ಬ್ಯಾಟರ್‌ “ಗೋಡೆ’ ದ್ರಾವಿಡ್‌ ಕೆಲವು ಫೈನಲ್‌ ಸೋಲಿನ ನೋವಿನ ನಡುವೆಯೂ ತಂಡವನ್ನು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸಿದರು. ಇದರೊಂದಿಗೆ ತಂಡದೊಂದಿಗಿನ ಅವರ ಕೋಚಿಂಗ್‌ ನಂಟು ಮುಗಿದಿದೆ.

ಕಡೆಗೂ ಟಿ20 ವಿಶ್ವಕಪ್‌ ಗೆದ್ದ ವಿರಾಟ್‌ ಕೊಹ್ಲಿ!:

ಕೊನೆಗೂ ಬ್ಯಾಟಿಂಗ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಅವರಿಗೆ ಟಿ20 ವಿಶ್ವಕಪ್‌ ಒಂದು ಒಲಿಯಿತು. ಬಹುಶಃ ಇದು ಅವರ ಕೊನೆಯ ಟಿ20 ವಿಶ್ವಕಪ್‌ ಆದ್ದರಿಂದ ಈ ಕಪ್‌ನ ತೂಕ ಸಹಜವಾಗಿಯೇ ಜಾಸ್ತಿ. 2007ರ ಟಿ20 ಗೆಲುವಿನ ವೇಳೆ ಕೊಹ್ಲಿಯ ಪ್ರವೇಶ ಆಗಿರಲಿಲ್ಲ. 2014ರ ಫೈನಲ್‌ನಲ್ಲಿ ಕೊಹ್ಲಿ ಆಡಿದರೂ ಭಾರತ ಚಾಂಪಿಯನ್‌ ಆಗಲಿಲ್ಲ. ಅಂದಿನ ಶ್ರೀಲಂಕಾ ಎದುರಿನ ಪ್ರಶಸ್ತಿ ಸಮರದಲ್ಲಿ ಕೊಹ್ಲಿಯೇ ಟಾಪ್‌ ಸ್ಕೋರರ್‌ (77) ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ. ಈ ನಡುವೆ ಸತತವಾಗಿ ಆರ್‌ಸಿಬಿ ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸುತ್ತ ಬಂದರೂ ಅಲ್ಲೂ ಕಪ್‌ ಮಾತ್ರ ಕೈಗೆ ಬಂದಿಲ್ಲ. ಕೊಹ್ಲಿಯ ಈ ಎಲ್ಲ ಬರಗಾಲವನ್ನು ಈ ಬಾರಿಯ ಟಿ20 ವಿಶ್ವಕಪ್‌ ನೀಗಿಸಿದೆ.

2003ವಿಶ್ವಕಪ್‌ ಫೈನಲ್‌ಗೇರಿಯೂ ಟ್ರೋಫಿ ಸೋತ ಸೌರವ್‌ ಗಂಗೂಲಿ:

ಭಾರತ ಕ್ರಿಕೆಟಿನ ಸ್ವರೂಪವನ್ನೇ ಬದಲಿಸಿದ ಹೆಗ್ಗಳಿಕೆ ಸೌರವ್‌ ಗಂಗೂಲಿಯದ್ದು. ವೀರೇಂದ್ರ ಸೆಹವಾಗ್‌, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಇರ್ಫಾನ್‌ ಪಠಾಣ್‌, ಜಹೀರ್‌ ಖಾನ್‌ರಂತಹ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಅವರಿಗೆ ಅವಕಾಶ ನೀಡಿ ಬೆಳೆಸಿದ ಕಾರಣಕ್ಕೆ ಗಂಗೂಲಿಯನ್ನು ಯಶಸ್ವಿ ನಾಯಕ ಎಂದೇ ಹೇಳುತ್ತಾರೆ. ಅವರ  ನಾಯಕತ್ವ ದಲ್ಲೇ ಭಾರತ ದೀರ್ಘ‌ಕಾಲದ ಅನಂತರ 2003ರಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ಗೇರಿತ್ತು. ಆದರೆ ಫೈನಲ್‌ನಲ್ಲಿ ಭಾರತ ಮುಗ್ಗರಿಸಿತು. ಆಟಗಾರ ನಾಗಿ, ನಾಯಕನಾಗಿ ವಿಶ್ವಕಪ್‌ ಗೆಲ್ಲದ ಕೊರಗೂ ಗಂಗೂಲಿಯಲ್ಲಿ  ಉಳಿದುಹೋಗಿದೆ.

3 ಭಿನ್ನ ಟ್ರೋಫಿ ಗೆದ್ದ ಏಕೈಕ ನಾಯಕ ಧೋನಿ:

2007ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲಿಸಿದ್ದ ಧೋನಿ, ಸತತವಾಗಿ ವಿಶ್ವಕಪ್‌ ಟ್ರೋಫಿ ಬರ ಅನುಭವಿಸಿದ್ದ ಭಾರತಕ್ಕೆ ಸಾಂತ್ವನ ಹೇಳಿದ್ದರು. 2011ರಲ್ಲಿ ನಾಯಕನಾಗಿ ಏಕದಿನ ವಿಶ್ವಕಪ್‌ ಗೆದ್ದರು. 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಂಡವನ್ನು ಗೆಲ್ಲಿಸಿದರು. ಈ ಮೂರೂ ಮಾದರಿಯಲ್ಲಿ ತನ್ನ ತಂಡವನ್ನು ಗೆಲ್ಲಿಸಿದ ವಿಶ್ವದ ಏಕೈಕ ನಾಯಕ ಧೋನಿ.

1983ರಲ್ಲಿ ಕಪಿಲ್‌, 2007, 2011ರಲ್ಲಿ ಧೋನಿ:

ವಿಶ್ವ ಕ್ರಿಕೆಟ್‌ನಲ್ಲಿ ಭಾರತವನ್ನು ಅಚ್ಚರಿಯ ಕಂಗಳಿಂದ ಜನ ನೋಡಿದ್ದು 1983ರಲ್ಲಿ. ಯಾರೂ ಊಹೆಯನ್ನೇ ಮಾಡದ ರೀತಿಯಲ್ಲಿ ಕಪಿಲ್‌ ದೇವ್‌ ಬಳಗ ವೆಸ್ಟ್‌ ಇಂಡೀಸ್‌ನಂತಹ ದೈತ್ಯ ತಂಡವನ್ನೇ ಫೈನಲ್‌ನಲ್ಲಿ ಸೋಲಿಸಿತ್ತು. ತಂಡದ ಗೆಲುವಿನಲ್ಲಿ ಅಷ್ಟೂ ಆಟಗಾರರದ್ದು ಒಂದು ತೂಕವಾದರೆ, ನಾಯಕ ಕಪಿಲ್‌ ದೇವ್‌ ಅವರದ್ದೇ ಇನ್ನೊಂದು ತೂಕ.

1983ರ ನಂತರ 2003ರಲ್ಲಿ ಭಾರತ ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ಗೇರಿತ್ತು. ಆದರೆ ಅಲ್ಲಿ ಆಸ್ಟ್ರೇಲಿಯ ವಿರುದ್ಧ ಹೀನಾಯವಾಗಿ ಸೋತುಹೋಗಿ ಇಡೀ ದೇಶವನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು. 2007ರಲ್ಲಿ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ ಅನ್ನು ಭಾರತ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಗೆದ್ದು ಮೆರೆಯಿತು. ಅಷ್ಟಕ್ಕೂ ತಂಡದ ಓಟ ನಿಲ್ಲಲಿಲ್ಲ. 2011ರ ವಿಶ್ವಕಪ್‌ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸುಲಭವಾಗಿ ಸೋಲಿಸಿದ ಧೋನಿ ತಂಡ, ಭಾರತಕ್ಕೆ 2ನೇ ಏಕದಿನ ಕಿರೀಟವನ್ನು ಗೆಲ್ಲಿಸಿದರು. ಅದಾದ ಅನಂತರ ಭಾರತಕ್ಕೆ ವಿಶ್ವಕಪ್‌ ಮರೀಚಿಕೆಯಾಗಿತ್ತು.

ಭಾರತಕ್ಕೆ ಇನ್ನೂ ಒಲಿದಿಲ್ಲ ಟೆಸ್ಟ್‌ ವಿಶ್ವಕಪ್‌

1983, 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಿರುವ ಭಾರತ, 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ ಅನ್ನು ಗೆದ್ದಿದೆ. ಹಾಗೆಯೇ ಐಸಿಸಿ ಏಕದಿನ ಚಾಂಪಿಯನ್ಸ್‌ ಟ್ರೋಫಿಯನ್ನು  2 ಬಾರಿ ಗೆದ್ದಿದೆ. ಅಲ್ಲಿಗೆ ಐಸಿಸಿ ನಡೆಸುವ ಸೀಮಿತ ಓವರ್‌ಗಳ ಪ್ರಶಸ್ತಿಗಳನ್ನು ಭಾರತ ಗೆದ್ದಿದೆ. ಒಂದೇ ಒಂದು ಕೊರತೆಯೆಂದರೆ ಇದುವರೆಗೆ ನಡೆದ ಎರಡೂ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೆ ಹೋಗಿರುವ ಭಾರತ, ಎರಡೂ ಬಾರಿ ಸೋತಿದೆ. 2019-21ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ, 2021-23ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತುಹೋಯಿತು. ಒಮ್ಮೆ ಕೊಹ್ಲಿ ನಾಯಕತ್ವದಲ್ಲಿ, ಇನ್ನೊಮ್ಮೆ ರೋಹಿತ್‌ ನಾಯಕತ್ವದಲ್ಲಿ ಭಾರತ ಫೈನಲ್‌ನಲ್ಲಿ ಸೋತುಹೋಗಿದೆ. ಇಲ್ಲೊಂದು ಭಾರತ ಪ್ರಶಸ್ತಿ ಗೆಲ್ಲುವುದ ಬಾಕಿಯಿದೆ.

ಟಾಪ್ ನ್ಯೂಸ್

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು

Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್

Stock Market: BSE@80,130.53- ಮುಂದುವರಿದ ಷೇರುಪೇಟೆ ನಾಗಾಲೋಟ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

ICC-Champions-Trophy

ICC Champions Trophy: ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ-ಪಾಕಿಸ್ಥಾನ ಪಂದ್ಯ

Team-india

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು

SHIVAMOGGA

Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ

Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು

Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.