![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 19, 2024, 5:06 PM IST
ಮಹಾನಗರ: ನಗರದಲ್ಲಿ ಫುಟ್ಪಾತ್ಗಳನ್ನು ಪಾದಚಾರಿಗಳ ಬಳಕೆಗೆ ಮುಕ್ತವಾಗಿಸುವುದು, ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಳಿಸುವುದು, ಸ್ವಚ್ಛತೆ ಕಾಪಾಡುವುದು, ಅನಧಿಕೃತ ವ್ಯಾಪಾರಗಳಿಗೆ ಕಡಿವಾಣ ಮೊದಲಾದ ಉದ್ದೇಶದಿಂದ ನಗರದಲ್ಲಿ ಇತ್ತೀಚೆಗೆ ಬೀದಿ ಬದಿ ವ್ಯಾಪಾರಗಳನ್ನು ತೆರವುಗೊಳಿಸುವ ಟೈಗರ್ ಕಾರ್ಯಾಚರಣೆ ನಡೆದಿದೆ. ಅದರಂತೆ ಲಾಲ್ಬಾಗ್ ಜಂಕ್ಷನ್-ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಡುವಿನ ರಸ್ತೆ ಬದಿಯಲ್ಲಿ ಕೂಡ ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸಲಾಗಿದೆ. ಆದರೆ ಈ ಸ್ಥಳ ಸದ್ಯ ವಾಹನಗಳ ಪಾರ್ಕಿಂಗ್ಗೆ ಬಳಕೆಯಾಗುತ್ತಿದೆಯೇ ಹೊರತು ಪಾದಚಾರಿಗಳ ಉಪಯೋಗಕ್ಕೆ ಸಿಗುತ್ತಿಲ್ಲ.
ಪಾಲಿಕೆ ಕಚೇರಿ ಮುಂಭಾಗದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಡೆಗೆ ಹೋಗುವ ರಸ್ತೆಯ ಬದಿ ಕಾಂಪ್ಲೆಕ್ಸ್ ವೊಂದರ ಪಕ್ಕದಲ್ಲಿ ಮಾತ್ರ ಫುಟ್ಪಾತ್ ನಿರ್ಮಾಣವಾಗಿದೆ. ಅನಂತರ ಮುಂದೆ ಕೆಎಸ್ಆರ್ಟಿಸಿ ಜಂಕ್ಷನ್ ಹಾಗೂ ಅಲ್ಲಿಂದ ಮುಂದಕ್ಕೂ ಫುಟ್ಪಾತ್ ಇಲ್ಲ. ಲಾಲ್ಭಾಗ್-ಕೆಎಸ್ಆರ್ಟಿಸಿ ಜಂಕ್ಷನ್ ನಡುವೆ ನಿತ್ಯ ಸಾವಿರಾರು ಮಂದಿ ನಡೆದಾಡುತ್ತಾರೆ. ಇಲ್ಲಿ ಫುಟ್ಪಾತ್ಗಾಗಿ ಮೀಸಲಿಟ್ಟ ಜಾಗವೂ ಇದೆ. ಆದರೆ ಫುಟ್ಪಾತ್ ಮಾತ್ರ ನಿರ್ಮಾಣವೇ ಆಗಿಲ್ಲ. ಆ ಜಾಗವನ್ನು ಬೀದಿಬದಿ ವ್ಯಾಪಾರಸ್ಥರು ಅತಿಕ್ರಮಿಸಿಕೊಂಡಿದ್ದರು. ಇತ್ತೀಚೆಗೆ ಅವರನ್ನು ತೆರವುಗೊಳಿಸ ಲಾಗಿದೆ. ಆದರೆ ಆ ಜಾಗದಲ್ಲಿ ಈಗ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಳಿದುಳಿದ ಸ್ವಲ್ಪ ಜಾಗದಲ್ಲಿ ಕೆಲವರು ತಳ್ಳುಗಾಡಿಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಪರಿಣಾಮವಾಗಿ ಪಾದಚಾರಿಗಳು ರಸ್ತೆಯ ನಡುವೆ, ವಾಹನಗಳ ಮಧ್ಯೆ ಅಪಾಯಕಾರಿಯಾಗಿ ನಡೆದುಕೊಂಡು ಹೋಗಬೇಕಾಗಿದೆ. ಇದು ವಾಹನ, ಜನ ದಟ್ಟಣೆ ಇರುವ ಪ್ರದೇಶ. ಆಗಾಗ್ಗೆ ಅಪಘಾತಗಳು ಕೂಡ ಸಂಭವಿಸುತ್ತಿರುತ್ತವೆ.
ಫುಟ್ಪಾತ್ ನಿರ್ಮಿಸಿ
ಲಭ್ಯವಿರುವ ಜಾಗದಲ್ಲಿ ಕೂಡಲೇ ಫುಟ್ಪಾತ್ ನಿರ್ಮಿಸುವುದು ಸೂಕ್ತ. ಇಲ್ಲವಾದರೆ ಇದು ಶಾಶ್ವತವಾಗಿ ವಾಹನಗಳ ಪಾರ್ಕಿಂಗ್ಗೆ ಮೀಸಲಾಗುವ ಅಪಾಯವಿದೆ. ರಾತ್ರಿಯೂ ಇಲ್ಲಿ ಜನರ ಓಡಾಟ ಹೆಚ್ಚು. ಹಾಗಾಗಿ ಇಲ್ಲಿ ಫುಟ್ಪಾತ್ ನಿರ್ಮಿಸಿದರೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಸೆ.
You seem to have an Ad Blocker on.
To continue reading, please turn it off or whitelist Udayavani.