Mother: ಅಮ್ಮನ ವರ್ಣನೆಯಲ್ಲಿ ಸೋಲುವ ಲೇಖನಿಗಳೇ ಹೆಚ್ಚು
Team Udayavani, Aug 31, 2024, 3:23 PM IST
ಕೆಲವರನ್ನು ಕೆಲವನ್ನು ವರ್ಣಿಸುವಾಗ ಸರಳ ವರ್ಣನೆ ಕೊಟ್ಟು ಬಿಟ್ಟರೆ ತೃಪ್ತಿ ಎನಿಸುವುದಿಲ್ಲ. ಅಂತಹದೇ ಸಾಲಿಗೆ ಸೇರುವ ಪದ ಅದು “ಅಮ್ಮ”.ಗರ್ಭದುಂಡೆಯ ಒಳಗೂ ಅದರಾಚೆಗೂ ಜತೆ ನಿಂತು ಕಾಯುವ ಆ ಜೀವದ ವರ್ಣನೆಯಲಿ ಸೋಲುವ ಲೇಖನಿಗಳೇ ಹೆಚ್ಚು. ಬರೆಯುವ ನನ್ನ ಲೇಖನಿ ಅದೇ ರೀತಿ ಸೋಲುವ ಮುನ್ನ ನನ್ನಮ್ಮನ ಕುರಿತು ಗೀಚಿದ್ದು ಹೀಗೆ…
ಅಮ್ಮ ಎಂದಾಗ ಮೊದಲು ನೆನಪಾಗುವುದೇ ಅವಳ ಸ್ವಾಭಿಮಾನದ ಬದುಕು. ಯಾರಾ ಹಂಗು ಇಲ್ಲದೆ ಸ್ವತಂತ್ರವಾಗಿ ಬದುಕಬೇಕೆನ್ನುವ ಅವಳ ಛಲ.ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಆ ಛಲಗಾತಿ,ತುಳಿಯುವ ಜನರೆದುರು ತಲೆಎತ್ತಿ ಬದುಕಿದ ಬಾಲ್ಯದ ಅಸ್ಪಷ್ಟ ಚಿತ್ರಣಗಳು. ಬಡತನದ ಬೇಗುದಿ ಅವಳ ಬಾಲ್ಯದ ಆಸೆಗಳನು ಚಿವುಟಿತು. ಶಿಕ್ಷಣದ ಕನಸು ಅದೇ ಪರಿಯಲಿ ಕಮರಿತು.ಬಡತನದ ಆರ್ಭಟಕೆ ಆಕೆಯ ನೂರು ಕನಸುಗಳು ಸತ್ತ ಸದ್ದು, ಜಗಕೆ ಮಾತ್ರ ನಿಶಬ್ಧ.
ಹೋರಾಟದಿಂದಲೇ ಶುರುವಾದ ಅವಳ ಬದುಕು ಇಂದಿಗೂ ಜಗದ ರಣರಂಗದಲಿ ಹೋರಾಟದ ಕಿಚ್ಚ ಪಿಡಿದು ಮುನ್ನುಗ್ಗುತ್ತಲೇ ಇದೆ.
ದುಡಿಯುವ ತಂದೆಗೆ ಜೊತೆಯಾಗಿ ದುಡಿದು ಕುಟುಂಬದ ಬಂಡಿ ಎಳೆಯುತಿರುವ ಅವಳ ಆಸೆ-ಕನಸುಗಳ ಬಗೆಗೆ ಕೇಳಿದಾಗ ಮಿಡಿಯುವುದು “ನೀನು ಮತ್ತು ನಿನ್ನಕ್ಕಒಳ್ಳೆಯ ಹಾದಿಗೆ ಹೋದರೆ ಸಾಕು ಮಗ” ಅನ್ನುವ ಆಕೆಯ ಮಾತೃ ಹೃದಯ. ಮಕ್ಕಳಿಗೆ ಗದರುವುದು, ಹೊಡೆಯುವುದು ತಾಯಂದಿರ ಸಹಜ ಗುಣ. ನನ್ನ ತಾಯಿಯು ಕೂಡ ಆ ಗುಣದಿಂದ ಹೊರತಾಗಿಲ್ಲ. ಅವಳು ನನಗೆ ಹೊಡೆದ ಸನ್ನಿವೇಶಗಳು ಬಹಳ ವಿರಳ. ಆದರೆ ಅವಳ ಕೆಲವೇ ಹೊಡೆತಗಳಿಂದ ಕಲಿತ ಪಾಠಗಳು ಮಾತ್ರ ಬಹಳ.
ಕೋಪದಿಂದ ಗದರಿ ನಮ್ಮಿಬ್ಬರ ನಡುವೆ ಸಣ್ಣದೊಂದು ಜಗಳವಾದ ಬಳಿಕ ಆಕೆಯೇ ಮರಳಿ ಬಂದು ನನ್ನನ್ನು ಮಾತನಾಡಿಸುವ ಆ ಗುಣವೇ ನನಗವಳಲ್ಲಿ ಅಚ್ಚುಮೆಚ್ಚು. ಸಾಮಾನ್ಯ ವಾಗಿ ತಾಯಂದಿರು ಮಕ್ಕಳ ಶಿಕ್ಷಣ ವಿಚಾರವಾಗಿ ಅವರ ಮೇಲೆ ಒತ್ತಡ ಹೇರುವುದು ನಿತ್ಯಕಾಣುವ ದೃಶ್ಯ. ಆದರೆ ಆ ವಿಚಾರದಲ್ಲಿ ನಾನು ಮಾತ್ರ ಪುಣ್ಯವಂತ, ಇಂದಿಗೂ ನನ್ನ ತಾಯಿ ಓದಿನ ವಿಚಾರದಲ್ಲಿ ಒತ್ತಡ ಹೇರಿಲ್ಲ ಮತ್ತು ಅಂಕಗಳು ಕಡಿಮೆ ಯಾದಾಗ ಗದರಿದ ಪ್ರಸಂಗವೂ ಎನಗೆ ನೆನಪಿಲ್ಲ.
ಆಕೆಯ ಅಡುಗೆಯ ಉಪ್ಪು ಹುಳಿ ಖಾರ ನೋಡುವ ಕೆಲಸ ಏನಿದ್ದರೂ ಸದಾ ನನ್ನದೇ. ನಾನು ಚೆನ್ನಾಗಿದೆ ಅಸ್ತು ಅಂದಮೇಲೆಯೇ ಆಕೆಯ ಮನಸಿಗೂ ತೃಪ್ತಿಯಾಗುವುದು. ಆಕೆಯ ಅಡುಗೆಗೆ,ಆಕೆ ತಲೆನೋವು ಎಂದಾಗ ಮಾಡಿ ಕೊಡುವ ಆ ವಿಶೇಷ ಚಹಾದ ಕಂಪಿಗೆ ನಾನೆಂದಿಗೂ ಅಭಿಮಾನಿಯೇ ಸರಿ.
ಮಾತೃಭಾಷೆಯನ್ನಷ್ಟೇ ಸ್ಪಷ್ಟವಾಗಿ ಮಾತನಾಡಬಲ್ಲ, ಕೇವಲ ಕನ್ನಡದಲ್ಲಿ ಸಹಿಯಷ್ಟೇ ಮಾಡಲು ಬರುವ, ಶಾಲೆಯ ಗಾಳಿಯು ಸೋಕದ ಅವಳು ನನ್ನ ಪಾಲಿಗೆ ಮಾತ್ರ ಅಸಾಮಾನ್ಯ ಶ್ರಮಜೀವಿ, ಜಗತ್ತಿನ ಶ್ರೇಷ್ಠ ತಾಯಿ, ಕುಟುಂಬ ನಿರ್ವಹಣೆಯಲ್ಲಿ ಉನ್ನತ ಪಧವೀದರೆ, ಅಡುಗೆಯಲ್ಲಿ ಅಸಾಧರಣ ಪ್ರತಿಭೆ, ಕಣ್ಣು ನೋಡಿಯೇ ನನ್ನ ಮನಸನರಿಯುವ ಮನೋವಿಜ್ಞಾನಿ, ಬಾಯಿಲೆಕ್ಕದಲ್ಲಿ ಕೂಡಿಸು, ಕಳೆ, ಗುಣಿಸು, ಭಾಗಿಸನ್ನು ಅರೆದು ಕುಡಿದಿರುವ ಗಣಿತ ಪಂಡಿತೆ.. ಹೀಗೆ ಹೇಳುತಾ ಹೋದರೆ ಆಕೆಯ ಗುಣಗಾನ ಅನಂತ.
ಕಷ್ಟಗಳ ಬೇಗೆಯಲ್ಲೇ ಬೆಂದ ಮತ್ತು ಬೆಯುತ್ತಿರುವ ಅವಳನ್ನು ಸುಖದ ಸುಪತ್ತಿಗೆಯಲ್ಲಿ ತೇಲಿಸುವುದೇ ನನ್ನ ಬಹುದೊಡ್ಡ ಕನಸು. ಅವರವರ ತಾಯಿಯ ವರ್ಣನೆಗೆ ಕೂತಾಗ ಪ್ರತಿಯೊಬ್ಬರು ಅಕ್ಷರ ಕೊರತೆಯ ತೊಂದರೆ ಎದುರಿಸುವ ಕವಿಗಳೇ. ಆಕೆಯ ವರ್ಣನೆ ನಿರಂತರ ಮತ್ತು ಅನಂತ ಅದಕೆ ಕೊನೆಯಿಲ್ಲ.
ಚೇತನ್ ಕಾಶಿಪಟ್ನ
ಎಸ್.ಡಿ.ಎಂ. ಕಾಲೇಜು
ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.