ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ
Team Udayavani, Sep 13, 2024, 6:00 AM IST
ವಸತಿರಹಿತರೆಲ್ಲರಿಗೂ ವಸತಿ ಕಲ್ಪಿಸುವ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಡಿ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ)ದ ಫಲಾನುಭವಿಗಳಾಗಲು ಈ ಹಿಂದೆ ಕೇಂದ್ರ ಸರಕಾರ ಅನುಸರಿಸುತ್ತಿದ್ದ “ಸ್ವಯಂಚಾಲಿತ ಹೊರಗುಳಿಯುವಿಕೆ’ ಮಾನದಂಡದಲ್ಲಿ ಕೆಲವು ಪ್ರಮುಖ ಸಡಿಲಿಕೆಗಳನ್ನು ಮಾಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಮತ್ತಷ್ಟು ಬಡ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದು, ಸ್ವಂತ ಸೂರು ಹೊಂದುವ ಇವರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.
ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಪಿಎಂಎವೈ-ಜಿ ಮಾನದಂಡಗಳಲ್ಲಿ ಸಡಿಲಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. 2024-25ರಿಂದ 2028-29ರ ಅವಧಿಗೆ ಅನ್ವಯವಾಗುವಂತೆ ಪಿಎಂಎವೈ-ಜಿ ಯೋಜನೆಯನ್ನು ಜಾರಿಗೊಳಿಸುವ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ತನ್ನ ಒಪ್ಪಿಗೆಯನ್ನು ನೀಡಿತ್ತು. ಕೇಂದ್ರ ಹಣಕಾಸು ಸಚಿವರು ಪ್ರಸಕ್ತ ಸಾಲಿನ ಬಜೆಟ್ ಭಾಷಣದ ವೇಳೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು.
ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಪೂರಕವಾಗಿ ಕೇಂದ್ರ ಸರಕಾರ ಪಿಎಂಎವೈ-ಜಿ ಯನ್ನು ಅನುಷ್ಠಾನಗೊಳಿಸಿತ್ತು. ಇದಕ್ಕಾಗಿ ಪ್ರತ್ಯೇಕ ಮಾನದಂಡವನ್ನು ರೂಪಿಸಿತ್ತು. ಈಗ ಮಾನದಂಡದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡುವ ಮೂಲಕ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಸತಿರಹಿತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಸರಕಾರ ಮುಂದಾಗಿದೆ.
ಇನ್ನು ಮುಂದೆ ಪಿಎಂಎವೈ-ಗ್ರಾಮೀಣದಡಿ ದ್ವಿಚಕ್ರ ವಾಹನ, ಮೋಟಾರುಚಾಲಿತ ಮೀನುಗಾರಿಕ ದೋಣಿ, ರೆಫ್ರಿಜರೇಟರ್, ಲ್ಯಾಂಡ್ಲೈನ್ ಫೋನ್ ಹೊಂದಿರುವ ಕುಟುಂಬಗಳು ಮತ್ತು ಮಾಸಿಕ 15 ಸಾವಿರ ರೂ. ಆದಾಯ ಗಳಿಸುವ ಕುಟುಂಬಗಳು ಕೂಡ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಈ ಹಿಂದಿನ ಮಾನದಂಡದ ಪ್ರಕಾರ ಈ ಎಲ್ಲ ಕುಟುಂಬಗಳು ಯೋಜನೆಯ ವ್ಯಾಪ್ತಿಯಿಂದ ಹೊರಗುಳಿದಿದ್ದವು. ಈ ಎಲ್ಲ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದರೂ ಕಠಿನ ಮಾನದಂಡದ ಪರಿಣಾಮ ಪಿಎಂಎವೈ-ಜಿಯ ಪ್ರಯೋಜನ ಪಡೆಯಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ಜನಜೀವನದ ಸ್ಥಿತಿಗತಿಯನ್ನು ಅವಲೋಕಿಸಿ, ಯೋಜನೆಯ ಮಾನದಂಡದಲ್ಲಿ ಸಡಿಲಿಕೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು.
ಕೊನೆಗೂ ಈ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರಕಾರ ಮಾನದಂಡದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಅರ್ಹ ಫಲಾನುಭವಿಗಳನ್ನು ಯೋಜನೆಯ ವ್ಯಾಪ್ತಿಗೆ ತಂದು ಈ ಬಡ ಕುಟುಂಬಗಳು ಕೂಡ ಸ್ವಂತ ಸೂರು ಹೊಂದಲು ಅವಕಾಶ ಕಲ್ಪಿಸಿಕೊಟ್ಟಿದೆ. ಸರ್ವರಿಗೂ ಸೂರು ಒದಗಿಸುವ ತನ್ನ ಉದ್ದೇಶಿತ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ದ್ವಿಚಕ್ರ ವಾಹನ, ರೆಫ್ರಿಜರೇಟರ್, ಮೋಟಾರು ಚಾಲಿತ ಮೀನುಗಾರಿಕ ದೋಣಿ ಇವೆಲ್ಲವೂ ಸರ್ವೇಸಾಮಾನ್ಯವಾಗಿದ್ದು, ಇವನ್ನು ಹೊಂದಿದ್ದ ಮಾತ್ರಕ್ಕೆ ಈ ಕುಟುಂಬಗಳು ಮಧ್ಯಮ ಅಥವಾ ಶ್ರೀಮಂತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇವೆಲ್ಲವನ್ನು ಹೊಂದಿದಾಕ್ಷಣ ಆ ಕುಟುಂಬ ಬಡತನ ರೇಖೆಗಿಂತ ಮೇಲಿದೆ ಎಂಬ ನಿರ್ಧಾರಕ್ಕೆ ಬರುವುದು ಒಂದಿಷ್ಟು ಆತುರದ ನಿರ್ಧಾರವಾದೀತು. ಈ ಹಿನ್ನೆಲೆಯಲ್ಲಿ ಪಿಎಂಎವೈ-ಜಿ ಮಾನದಂಡದಲ್ಲಿ ಸಡಿಲಿಕೆ ಮಾಡುವಂತೆ ಬಡವರು ಮತ್ತು ಜನಸಾಮಾನ್ಯರು ಮುಂದಿರಿಸಿದ್ದ ಬೇಡಿಕೆಗೆ ಈಗ ಸರಕಾರ ಸ್ಪಂದಿಸಿರುವುದರಿಂದ ದೇಶದ ಗ್ರಾಮೀಣ ಪ್ರದೇಶದ ಲಕ್ಷಾಂತರ ಮಂದಿ ಈ ಯೋಜನೆಯ ಫಲಾನುಭವಿಗಳಾಗಿ, ತಮ್ಮದೇ ಆದ ಮನೆಯನ್ನು ಹೊಂದಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.