UV Fusion: ಇಳೆಗೆ ಮಳೆಯ ಸುಮಪಾತದ ಸೊಗಸು


Team Udayavani, Sep 17, 2024, 3:26 PM IST

7-uv-fusion

ಮಳೆಯ ಮಾರುತಗಳು ಬೀಸಿ ತೀವ್ರಗೊಂಡು ಎಡೆಬಿಡದೆ ಸುರಿದಿವೆ. ಆಷಾಢ ಶ್ರಾವಣಗಳಲ್ಲಿ ಬಹುವಾಗಿ ಸುರಿದು ಮಳೆಯು ಭಾದ್ರಪದಕ್ಕೆ ಬಿಸಿಲಿನ ಭಾಗ್ಯವನ್ನು ತೋರಿಸಿದೆ.  ಸದಾ ಚಲಿಸಿ, ಕರಗಿ ಮಳೆಸುರಿಸುವ ಮೋಡಗಳು ಕುಂಟುತ್ತಾ ನಿಲ್ಲುತ್ತಾ ಬಿಸಿಲಿನ ಹೊಳಪನ್ನು ಪ್ರತಿಫ‌ಲಿಸುವ ಸೊಗಸು ಒಂದೆಡೆ. ಸರ್ವಸ್ವವೂ ಹಸುರಾಗಿ ನಲಿಯುವ ಜತೆಗೆ ಹೂವನ್ನೂ ಬಿರಿಯುವ ದ್ರುಮಗಳು. ಹೂ ಮಳೆಗೆ, ಬಿರುಮಳೆಗೆ ವೈವಿಧ್ಯಮಯ ಪುಷ್ಪಗಳು ತೊನೆದು, ಅಲ್ಲಾಡಿ, ಸುಮಪಾತವಾಗುವ ಪರಿ ಮಳೆಗಾಲದ ಮೆರುಗನ್ನು ಹೆಚ್ಚಿಸುತ್ತದೆ. ವರ್ಷೆಯ ಜತೆಗೆ ಸುಮವೃಷ್ಟಿಯು ಸೋಜಿಗದ ವಸ್ತು.

ಉಪವನಗಳಲ್ಲಿ ಮತ್ತು ರಸ್ತೆಯ ಪಕ್ಕಗಳಲ್ಲಿ ಹಳದಿಯ ಹೊದ್ದಲಿನಂತಹ ಕುಸುಮ ದಳಗಳು ಚೆಲ್ಲಿರುವುದನ್ನು ಗಮನಿಸಿರಬಹುದು ನೀವು. ಇದು ಪೀತಾಂಬರ ಹೂವು, ಹಳದಿ-ಪೀಲಾ ಗುಲ್ಮೊಹರು. ದಕ್ಷಿಣ ಕರ್ನಾಟಕದೆಡೆ ಬೆಟ್ಟದ ಹುಳಿ ಎಂದರೆ, ಸಂಕೇಶ್ವರ ಹೂವಿನ ಅನುಸರಣೆಯಲ್ಲಿ ಹಳದಿ ಸಂಕೇಶ್ವರವೆಂದೂ ಉತ್ತರ ಕರ್ನಾಟಕದೆಡೆ ಗುರುತಿಸುವರು. ತನ್ನ ಕಾಯಿಯ ಕಡು ಕೆಂಪು ತಾಮ್ರ ವರ್ಣ-ವಿಶೇಷತೆಗೆ ಕಾರ್ಪಪಾಡ್‌ ಮರವೆಂದೂ ಕರೆದಿದ್ದಾರೆ.  ಹೂವು ಬಿರಿದರೆ ಚೆಲುವು ಬೀರುವ, ಕಾಯಿ ಕಟ್ಟಿದರೆ ಕೊಸರಿ ನಿಲ್ಲುವ ಮರಕ್ಕೆ ಮಳೆ ಸೇಚನವಾದರೆ ಅರಳಿನಂತೆ ಹೂ ಉದುರಿಸುವುದೇ ಕೆಲಸ. ಕಂದು ಬಣ್ಣದ ಕಡ್ಡಿಗೆ ದಟ್ಟವಾದ ಹೂವುಗಳು ಹೂಗೊಂಚಲಿನ ವಿಶೇಷತೆ.

ಹೂಗೊಂಚಲಿನ ಬುಡದಲ್ಲಿ ಹೂವುಗಳಿದ್ದರೆ, ತುದಿಯಲ್ಲಿ ಮೃದುವಾದ ಮಖಮಲ್ಲಿನ ತೆರನಾದ ಮೊಗ್ಗುಗಳು. ಹೂವಿನ ಬಣ್ಣ ಕೋರೈಸುವ ಹಳದಿ, ದಳದ ಬುಡಕ್ಕೆ ಹೋದಂತೆ ತೆಳು ಕೇಸರಿ. ಐದು-ದಳದ, ಸ್ವಲ್ಪ ಪರಿಮಳಯುಕ್ತ ಈ ಹೂಗಳು ತೆರೆ-ತೆರೆಯಾಗಿ ಕೇಸರಿ-ಕೇಸರಗಳಿಂದ ಕೂಡಿರುತ್ತವೆ. ಹೂಗೊಂಚಲಿಗೆ ಹೂವುಗಳಷ್ಟೇ ಗುಂಡನೆಯ ಮೊಗ್ಗುಗಳ ಶೃಂಗಾರ. ಹೂವಿಗೆ ಕಾಂಟ್ರಾಸ್ಟ್‌-ವ್ಯತಿರಿಕ್ತವಾದ ವರ್ಣ ಅದರ  ಗುಂಡನೆಯ ಮೊಗ್ಗುಗಳದ್ದು.

ಮರವನ್ನು ದಿಟ್ಟಿಸಿದಾಗ ಹಸುರು, ಹಸುರಿನ ಮೇಲೆ ಹಳದಿ, ಹಳದಿಯ ಮೇಲೆ ದುಂಡನೆಯ ಕೆಂಪು ಮಣಿಗಳಂತಿರುವ ಮೊಗ್ಗುಗಳು ಪದರ-ಪದರವಾಗಿ ಪ್ರಭಾವಳಿಯನ್ನು ಉಂಟುಮಾಡುತ್ತವೆ.  ಸುಮಪಾತಕ್ಕೆ ಕಪ್ಪನೆಯ ರಾಜಮಾರ್ಗಗಳೆಲ್ಲವೂ ಹಳದಿ ಮಣಿಯಂತಿರುವ ಮೊಗ್ಗಿನಿಂದ ಚೆಲುವನ್ನು ಅಪ್ಪಿಕೊಳ್ಳುತ್ತವೆ. ಒಂದರ ಮೇಲೊಂದರಂತೆ ಶೇಖರವಾಗುವ ಪಿತಾಂಬರಿಯ ಹೂವುಗಳನ್ನು ತುಳಿದು ಸಾಗುವಾಗ ಮೇಲೊಮ್ಮೆ ಮರುಕ ಉದಿಸದೇ ಇರದು. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಪಾರಿಜಾತದ ಬೆಡಗು ಇದೇ ತೆರನಾದದ್ದಲ್ಲವೇ?

ಪಾರಿಜಾತವು ಅಚ್ಚ ಕೆಂಪು ಬಣ್ಣದ ಕಾವು ಇರುವಂತಹ ಬಿಳಿ ಹೂವು. ಇವು ಪರಿಸರದಲ್ಲಿ ಸುಗಂಧವನ್ನು ಪಸರಿಸುತ್ತಾ ರಾತ್ರಿ ಅರಳುತ್ತವೆ. ಮಳೆಗಾಲದ ಸಂಜೆಯ ಪರಿಮಳವನ್ನು ನೂರ್ಮಡಿಗೊಳಿಸುವ ಈ ಹೂವುಗಳು ದಂಡಿಯಾಗಿ ಅರಳಿ ಉದಾರತೆಯಿಂದಲೇ ಇಳೆಯನ್ನು ಸಿಂಗರಿಸುತ್ತವೆ. ಬೈಗಿಗೆ ಬಿರಿದ ಪಾರಿಜಾತ ಹೂವುಗಳು ಬೆಳಗಿನ ಪೂಜೆಯವರೆಗೂ ತನ್ನನ್ನು ಅರ್ಪಿಸಲು ಕಾಯ್ದುಕೊಂಡಿರುತ್ತವೆ.

ಬಿಸಿಲೇರಿದಂತೆ ಮುದುಡಿ, ದಳಗಳು ಒಡೆದು ಅಂದಗೆಡುತ್ತವಾದರೂ ಅದು ಪಸರಿಸುವ ಕಂಪು ಅಗಾಧ. ಪುರಾಣದ ಪ್ರಕಾರ ಸಮುದ್ರದಿಂದ ಉದಿಸಿದ ಪಾರಿಜಾತ ಮಳೆಗಾಲದಲ್ಲಿ ಪರಿಸರವನ್ನು ಸುಮನೋಹರಗೊಳಿಸುತ್ತವೆ. ಹಳದಿ ಪೀತಾಂಬರಿ, ಬಿಳಿ ದಳಗಳ ಕೆಂಪು ತೊಟ್ಟಿನ ಪಾರಿಜಾತದ ಜತೆಗೆ ನಿರೀಕ್ಷಿಸಬಹುದಾದ ಇನ್ನೊಂದು ಹೂವು ನೀರುಕಾಯಿ ಹೂವು ಅಥವಾ ಆಫ್ರಿಕನ್‌ ಟ್ಯೂಲಿಪ್‌.

ಆಫ್ರಿಕನ್‌ ಟ್ಯೂಲಿಪ್‌ ನೆರಳ ಅರಸಿ ನೆಡುವ ಮರಗಳ ಪೈಕಿಯದು. ಕೇಸರಿ ಕಡುಕೆಂಪು ಗೊಂಚಲ ಹೂವುಗಳು ಮರದಲ್ಲಿದ್ದರೆ ಇರುವ ಸೊಗಸು ನೆಲಕ್ಕೆ ಬಿದ್ದರೂ ಅಷ್ಟೇ ತೂಕದವು. ಅಡಿಕೆಯ ಗಾತ್ರದ ದುಂಡನೆಯ ತುತ್ತೂರಿಯ ರೀತಿಯ ಹೂವುಗಳ ಒಳಗಿಂದ ಇಣುಕುವ ಶಲಾಕಾಗ್ರಗಳು ದಳದೊಂದಿಗೆ ಮಿಳಿತವಾಗಿ ಗಿಳಿಯ ಕೊಕ್ಕಿನಂತಿರುವ ತೊಟ್ಟಿಗೆ ಅಂಟಿಕೊಂಡಿರುತ್ತವೆ.  ಹೂ ಉದುರಿದರೆ,  ಕಪ್ಪನೆಯ ಹೆದ್ದಾರಿಗೆ ರಂಗೋಲಿಯಿಟ್ಟಂತೆ ಭಾಸವಾಗುವ ಸುಮಪಾತಳಿಗಳು.  ವಿದೇಶದಿಂದ ಭಾರತವನ್ನು ತಲುಪಿದ ಈ ಮರ ಮತ್ತು ಅದರ ಹೂವುಗಳು  ಪ್ರತೀ ಓಣಿಯ ಹಂದರವನ್ನು ಚಂದಗಾಣಿಸುತ್ತವೆ.  ಕಾಲಿಟ್ಟರೆ ಜಾರುವ ಲೋಳೆಯನ್ನು ಉತ್ಪತ್ತಿಮಾಡುವ ಹೂಗೊಂಚಲುಗಳನ್ನು ಆಗಾಗ್ಗೆ  ಸರಿಸುವ ಆವಶ್ಯಕತೆಯೂ ಇದೆ.

ಮಳೆಗಾಲದ ಚಂಚಲತೆಯನ್ನು ಕೋಲ್ಮಿಂಚಿನ ಕೋರೈಸುವ ಬೆಳಕಿನಿಂದ ಅಳೆಯುವ ಸಮಯದಲ್ಲಿ ಸುಕೋಮಲ ಹೂವುಗಳು ಸದ್ದಿಲ್ಲದೇ ಉದುರುವವು. ಮಳೆಯ ಹರಿವಿಗೆ ತೇಲುತ್ತಾ ಸಾಲುಗೂಡುವವು. ಹರಿವಿನ ವೇಗಕ್ಕೆ ಸಿಕ್ಕಿ, ಹರಡಿ, ನೆಲದಮೇಲೆಲ್ಲಾ ಹೂಗಳ ಸಾಲುಗೆರೆಗಳನ್ನು ನೋಡಲು ಕಣ್ಣಿಗೆ ಸೊಗಸು. ಗುರುತ್ವದ ಕಾರಣಕ್ಕಾದರೂ ಆಗಲಿ ಇಳೆಯನ್ನು ಅಲಂಕರಿಸಲು ತಾಮುಂದೆ ಎಂದು ಸುಮವೃಷ್ಟಿ ಹೊರಟಿದೆ. ಅವುಗಳ ಅಂದದೊಂದಿಗೆ ಆಘ್ರಾಣಿಸೋಣ, ಈ ಮಳೆಗಾಲವೆಂಬ ಮೋಡಿಯ ಕಾಲ ಮುಗಿಯುವ ಮೊದಲು!

-ವಿಶ್ವನಾಥ ಭಟ್‌

ಧಾರವಾಡ

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.