Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ
ತೆಂಗು ಇಳುವರಿ ಗಣನೀಯ ಕುಸಿತ
Team Udayavani, Sep 28, 2024, 7:40 AM IST
ಕುಂದಾಪುರ/ಸವಣೂರು: ಅತಿಯಾದ ಮಳೆ, ರೋಗ ಬಾಧೆ, ಬೇಸಗೆಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ, ಕಾಡುಪ್ರಾಣಿಗಳ ಉಪಟಳ ಇತ್ಯಾದಿ ಕಾರಣಗಳಿಂದ ಈ ಬಾರಿ ತೆಂಗಿನಕಾಯಿ ಇಳುವರಿ ಶೇ. 50ರಷ್ಟು ಕುಸಿತ ವಾಗಿದ್ದು, ಇದೇ ಮೊದಲ ಬಾರಿಗೆ 1 ಕೆಜಿ ತೆಂಗಿನ ಕಾಯಿ ಬೆಲೆ 50 ರೂ.ಗೆ ತಲುಪಿದೆ.
ಕರಾವಳಿ ಇತಿಹಾಸದಲ್ಲಿ ಈವರೆ ಗಿನ ಗರಿಷ್ಠ ಬೆಲೆ 42 ರೂ. ಆಗಿದ್ದು, 3 ವರ್ಷ ಹಿಂದೆ ಈ ಪರಿಸ್ಥಿತಿ ಸೃಷ್ಟಿ ಯಾಗಿತ್ತು. ಇನ್ನು 4-5 ತಿಂಗಳ ವರೆಗೆ ಭಾರೀ ಬೇಡಿಕೆಯಿದ್ದರೂ ಬೇಡಿಕೆಯಷ್ಟು ತೆಂಗಿನ ಕಾಯಿ ಇಲ್ಲದ ಕಾರಣ 60 ರೂ. ಗಡಿ ದಾಟಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಬೆಳೆ ಹೆಚ್ಚಳದಿಂದಾಗಿ ಬೆಳೆಗಾರರು ಸಂತೋಷಗೊಂಡಿ ದ್ದರೂ ಬಹುತೇಕರಲ್ಲಿ ಇಳುವರಿ ಕಡಿಮೆಯಿದೆ.
15 ದಿನಗಳಲ್ಲಿ 20 ರೂ. ಏರಿಕೆ
15 ದಿನಗಳ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ 28-30 ರೂ. ಇದ್ದಿತ್ತು. ಆದರೆ ಈಗ ಹಬ್ಬಗಳ ಋತು ಕೂಡ ಆರಂಭಗೊಂಡಿದ್ದು, ಎಣ್ಣೆ ಮಿಲ್ಗಳಿಂದಲೂ ಬೇಡಿಕೆ ಹೆಚ್ಚುತ್ತಿ ರುವುದರಿಂದ 15 ದಿನಗಳಲ್ಲೇ 15-20 ರೂ. ಏರಿಕೆಯಾಗಿದೆ. 20 ವರ್ಷಗಳಿಂದ ತೆಂಗಿನಕಾಯಿ ಬೆಲೆ ಇಷ್ಟು ಏರಿದ್ದಿಲ್ಲ.
ಬೆಳೆಗಾರರ ಬಳಿಗೆ ದೌಡು
ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತೆಂಗಿನಕಾಯಿ ವ್ಯಾಪಾರಿಗಳು, ಎಣ್ಣೆಮಿಲ್ ಮಾಲಕರು ಈಗ ತೆಂಗು ಬೆಳೆಗಾರರ ತೋಟಕ್ಕೆ ತೆರಳಿ ಮೊದಲೇ ಬುಕ್ಕಿಂಗ್ ಮಾಡಿಕೊಳ್ಳುವ ಪ್ರಕ್ರಿಯೆ ಹಲವೆಡೆ ನಡೆಯುತ್ತಿದೆ.
ಕರಾವಳಿ: 80 ಸಾವಿರ ಹೆಕ್ಟೇರ್ ಪ್ರದೇಶ
ಕರಾವಳಿ ಜಿಲ್ಲೆಗಳಲ್ಲಿ ಒಟ್ಟಾರೆ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಅಂದಾಜು ಒಂದೂವರೆ ಲಕ್ಷ (ಅರ್ಧ ಎಕರೆಗಿಂತ ಹೆಚ್ಚಿರುವವರು) ಬೆಳೆಗಾರರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹಾಗೂ ದ.ಕ. ಜಿಲ್ಲೆಯಲ್ಲಿ 80 ಸಾವಿರಕ್ಕೂ ಮಿಕ್ಕಿ ತೆಂಗು ಬೆಳೆಗಾರರಿದ್ದಾರೆ.
4-5 ತಿಂಗಳಲ್ಲಿ ಇನ್ನಷ್ಟು ಹೆಚ್ಚಳ
ಬೇಡಿಕೆಯಷ್ಟು ಇಳುವರಿ ಇಲ್ಲ. ಇನ್ನು 4-5 ತಿಂಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಬಹುದು. ಒಂದು ಕಾಯಿಗೆ 30-40 ರೂ. ಸಿಕ್ಕರಷ್ಟೇ ಬೆಳೆಗಾರರಿಗೆ ಲಾಭ ಎಂದು ತೆಂಗು ಬೆಳೆಗಾರರಾಗಿರುವ ಭಾಕಿಸಂ ಉಡುಪಿಯ ಪ್ರಧಾನ ಕಾರ್ಯದರ್ಶಿ ಜಪ್ತಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.
ಬೆಲೆ ಏರಿಕೆಗೆ ಕಾರಣಗಳೇನು?
-ಈ ಬಾರಿ ಅತಿಯಾದ ಮಳೆಯಿಂದಾಗಿ ಎಲೆ ಕಾಯಿಗಳು ಸಾಕಷ್ಟು ಉದುರಿ ಶೇ. 30ರಷ್ಟು ಇಳುವರಿ ಕಡಿಮೆಯಾಗಿದೆ. ಇದು ಮುಂದಿನ 4-5 ತಿಂಗಳವರೆಗೆ ಪರಿಣಾಮ ಬೀರಲಿದೆ. ಕರಾವಳಿ ಮಾತ್ರವಲ್ಲ, ಮಲೆನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಇಡೀ ಪಶ್ಚಿಮ ಕರಾವಳಿಯಾದ್ಯಂತ ಇಳುವರಿ ಕಡಿಮೆಯಾಗಿದೆ.
-ಮಂಗ ಸಹಿತ ಕಾಡು ಪ್ರಾಣಿಗಳ ಉಪಟಳದಿಂದಾಗಿ ತೆಂಗಿನಕಾಯಿ ಉತ್ಪಾದನೆ ಆಗುತ್ತಿಲ್ಲ.
– ಕೊರೊನಾ ಅನಂತರ ಆರೋಗ್ಯ ವರ್ಧಕ ಎಣ್ಣೆಗಳ ಬಳಕೆಗೆ ಬೇಡಿಕೆ ಹೆಚ್ಚಿದ್ದು, ಅದರಲ್ಲೂ ತೆಂಗಿನ ಎಣ್ಣೆ ಉತ್ಪಾದನೆ ಹೆಚ್ಚಾಗುತ್ತಿದೆ. ಭಾರೀ ಬೇಡಿಕೆಯಿದೆ.
- ಕಳೆದ ಬೇಸಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಯಿದ್ದು, 1ಕ್ಕೆ 40-50 ರೂ. ವರೆಗೂ ಇದ್ದಿದ್ದರಿಂದ ಬಹುತೇಕ ಬೆಳೆಗಾರರು ಸೀಯಾಳ ಮಾರಲು ಹೆಚ್ಚು ಆಸಕ್ತಿ ತೋರಿಸಿದ್ದರಿಂದ ಶೇ. 30ರಷ್ಟು ತೆಂಗಿನ ಕಾಯಿ ಉತ್ಪಾದನೆ ಕಡಿಮೆಯಾಗಿದೆ. ಕೊರೊನಾ ಅನಂತರ ಬೇರೆ ತಂಪು ಪಾನೀಯಗಳಿಗಿಂತ ಎಳನೀರಿಗೆ ಬೇಡಿಕೆ ಜಾಸ್ತಿಯಿದೆ.
-ಕೆಲವು ವರ್ಷಗಳಿಂದ ಹೊಸ ತೋಟ ಯಾರೂ ಮಾಡಿಲ್ಲ. ಮರದಿಂದ ತೆಂಗಿನ ಕಾಯಿ ತೆಗೆಸುವುದು, ಖರ್ಚುವೆಚ್ಚ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.
-ಕರಾವಳಿ, ಮಲೆನಾಡು ಭಾಗದಲ್ಲಿ ಈ ವರ್ಷ ತರಹೇವಾರಿ ರೋಗ ಬಾಧೆಗಳು ಹೆಚ್ಚಾಗಿದ್ದು, ನುಸಿಬಾಧೆ, ಗರಿ ತಿನ್ನುವ ಹುಳ ಬಾಧೆ ಇತ್ಯಾದಿಯಿಂದಲೂ ಶೇ. 10ರಷ್ಟು ಇಳುವರಿ ನಷ್ಟವಾಗಿದೆ.
ಕೊಬ್ಬರಿ ದರವೂ ಹೆಚ್ಚಳ
ಜುಲೈ – ಆಗಸ್ಟ್ನಲ್ಲಿ 90-100 ರೂ. ಇದ್ದ ಒಂದು ಕೆಜಿ ಕೊಬ್ಬರಿ ಬೆಲೆ ಈಗ ಏಕಾಏಕಿ 150-160 ರೂ.ಗೆ ಏರಿಕೆ ಕಂಡಿದೆ. ಕೊಬ್ಬರಿ ಬೆಂಬಲ ಬೆಲೆ ಕ್ವಿಂಟಾಲ್ಗೆ 3-4 ಸಾವಿರ ರೂ. ಇದ್ದರೆ, ಈಗ ಅದಕ್ಕಿಂತ 15-16 ಸಾವಿರ ರೂ. ಮಾರುಕಟ್ಟೆ ದರವೇ ಇದೆ.
ಇಳುವರಿ ಕೊರತೆಯಿಂದ ಬೆಲೆ ಏರಿಕೆ ಯಾಗಿದೆ. ಇದೇ ದರ ಸ್ಥಿರವಾಗಿ ನಿಂತರೆ ಬೆಳೆ ಗಾರ ರಿಗೆ ಒಂದಷ್ಟು ಲಾಭ. ಶುದ್ಧ ತೆಂಗಿನ ಎಣ್ಣೆ ಯತ್ತ ಜನ ಒಲವು ತೋರಿದ್ದು, ಇದು ಕೂಡ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗಲು ಕಾರಣ. ಮಂಗಗಳ ಹಾವಳಿ ಯಿಂದ ಬಹುತೇಕ ಹಾನಿಯಾಗುತ್ತಿದೆ.
– ನವೀನ್ ಚಂದ್ರ ಜೈನ್,
ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.