Internal Reservation: ಬಸವರಾಜ್ ಬೊಮ್ಮಾಯಿ ಅವಧಿಯ ಒಳಮೀಸಲಿಗೆ ಬಿಜೆಪಿ ಒತ್ತಡ
ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ತಂತ್ರಗಾರಿಕೆ ಬಿಜೆಪಿ ನಿಯೋಗದಿಂದ ಶೀಘ್ರವೇ ಮುಖ್ಯಮಂತ್ರಿ ಭೇಟಿ
Team Udayavani, Oct 9, 2024, 7:30 AM IST
ಬೆಂಗಳೂರು: ಜಾತಿಗಣತಿ ವರದಿ ಮಂಡನೆಗೆ ಬಿಜೆಪಿ ವಿರೋಧವಿಲ್ಲ ಎಂಬ ಸಂದೇಶ ರವಾನಿಸುವುದರ ಜತೆಗೆ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲೂ ವಿಪಕ್ಷ ಬಿಜೆಪಿ ತಂತ್ರ ರೂಪಿಸಿದೆ. ಶೀಘ್ರದಲ್ಲೇ ಬಿಜೆಪಿಯ ನಿಯೋಗವು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಗ್ರಹಿಸಲು ನಿರ್ಧರಿಸಿದೆ.
ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿರ್ಣಯಕ್ಕೆ ಬರಲಾಗಿದ್ದು, ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಶಿಫಾರಸು ಮಾಡಿದ್ದ ಮೀಸಲಾತಿ ವರ್ಗೀಕರಣವನ್ನೇ ಅನುಷ್ಠಾನಕ್ಕೆ ತರುವಂತೆ ಸಿಎಂಗೆ ಆಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮಾಜಿ ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪಸಮಿತಿಯ ಶಿಫಾರಸುಗಳು, ಬಸವರಾಜ ಬೊಮ್ಮಾಯಿ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು, ಅದರಿಂದ ಪರಿಶಿಷ್ಟ ಜಾತಿಗೆ ಆಗಿದ್ದ ಲಾಭ ಹಾಗೂ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಯಾವ ರೀತಿ ದಾರಿ ತಪ್ಪಿಸಿತ್ತು? ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟುಕೊಂಡು ಸಭೆಯಲ್ಲಿ ಚರ್ಚಿಸಲಾಯಿತು. ಸಾಕಷ್ಟು ಚರ್ಚೆ ನಡೆಸಿದ ಅನಂತರ 2 ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಯಾವ ಹಂತದಲ್ಲಿಯೂ 2 ನಿರ್ಣಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಬಾರದು ಎನ್ನುವ ಎಚ್ಚರಿಕೆಯ ಹೆಜ್ಜೆ ಇಡಲೂ ಚಿಂತನ-ಮಂಥನ ನಡೆದಿದೆ.
ಜಾತಿಗಣತಿ ವರದಿ ಮಂಡನೆಗೆ ವಿರೋಧವಿಲ್ಲ
ಪ್ರಮುಖವಾಗಿ ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೊಟ್ಟಿರುವ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ಬಿಜೆಪಿ ವಿರೋಧವಿಲ್ಲ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಲು ನಿರ್ಣಯ ಕೈಗೊಂಡಿದೆ. ವರದಿ ಮಂಡನೆಗೆ ಬಿಜೆಪಿ ವಿರೋಧವಿದೆ ಎನ್ನುವುದರ ಮೂಲಕ ಮೀಸಲಾತಿ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ ಎಂಬುದೂ ಸಭೆಯಲ್ಲಿ ಚರ್ಚೆಯಾಗಿದೆ.
ಹೀಗಾಗಿ ಜಾತಿಗಣತಿ ವರದಿ ಮಂಡನೆಗೆ ಬಿಜೆಪಿ ವಿರೋಧವಿಲ್ಲ. ವರದಿ ಅವೈಜ್ಞಾನಿಕವಾಗಿದೆ ಎಂದು ಆಡಳಿತ ಪಕ್ಷದವರೇ ಹೇಳುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಅದನ್ನು ಮೊದಲು ನಿವಾರಿಸಿ, ನಿಮ್ಮ ಪಕ್ಷದವರನ್ನು ಒಪ್ಪಿಸಿ, ಸಹಮತದೊಂದಿಗೆ ಬನ್ನಿ ಎಂದು ಸರಕಾರದೆಡೆಗೇ ಬೊಟ್ಟು ಮಾಡಲು ತುದಿಗಾಲಲ್ಲಿ ನಿಂತಿದೆ. ಸಂಪುಟದ ಮುಂದೆ ಒಮ್ಮೆ ವರದಿ ಮಂಡನೆಯಾದ ಬಳಿಕ ಪಕ್ಷದ ನಿಲುವು ತಿಳಿಸೋಣ ಎನ್ನುವ ತೀರ್ಮಾನಕ್ಕೆ ಸಭೆ ಬಂದಿದೆ.
ಗುರುವಾರ ಅಥವಾ ದಸರಾ ಬಳಿಕ ಸಿಎಂ ಭೇಟಿ
ಒಳಮೀಸಲಾತಿ ಜಾರಿಗಾಗಿ ಸಂವಿಧಾನದ ತಿದ್ದುಪಡಿ, ಕೇಂದ್ರ ಸರಕಾರದ ಮೊರೆ ಹೋಗುವ ಆವಶ್ಯಕತೆ ಇಲ್ಲ. ಆಯಾ ರಾಜ್ಯ ಸರಕಾರಗಳಿಗೇ ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಕೊಟ್ಟು ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸುವ 2ನೇ ನಿರ್ಣಯವನ್ನು ಸಭೆಯಲ್ಲಿ ಕೈಗೊಂಡಿದೆ.
ಇದಕ್ಕಾಗಿ ವಿಪಕ್ಷ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಇದಕ್ಕಾಗಿ ನಿಯೋಗ ರಚಿಸಿದ್ದು, ಅ.10ರ ಗುರುವಾರ ಅಥವಾ ದಸರಾ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರಕಾರ ತಿರಸ್ಕರಿಸಿದ್ದು, ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಸರಕಾರ ಕೈಗೊಂಡ ನಿರ್ಣಯ ಸೂಕ್ತವಾಗಿದ್ದು, ಅದನ್ನೇ ಜಾರಿಗೊಳಿಸುವಂತೆ ಒತ್ತಾಯಿಸಲು ನಿರ್ಣಯಿಸಿದೆ.
ಒಳಮೀಸಲಿನ ಒಳಹೂರಣ
ಈ ಹಿಂದೆ ನ್ಯಾ| ಸದಾಶಿವ ಆಯೋಗ ನೀಡಿದ್ದ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಲು ಗೋವಿಂದ ಕಾರಜೋಳ, ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ಕೆಲ ಶಿಫಾರಸುಗಳನ್ನು ಸಂಪುಟ ಸಭೆಯ ಮುಂದಿಟ್ಟಿತ್ತು. ಸದಾಶಿವ ಆಯೋಗದ ಮೂಲ ವರದಿಯಲ್ಲಿ ಶೇ. 3ರಷ್ಟು ಮೀಸಲಾತಿ ಪಡೆಯುತ್ತಿದ್ದ ಸ್ಪೃಶ್ಯರನ್ನು (ಲಂಬಾಣಿ, ಬೋವಿ, ಕೊರಚ, ಕೊರಮ ಇತ್ಯಾದಿ) ಮೀಸಲಾತಿಯಿಂದಲೇ ಹೊರಗಿಡುವ ಶಿಫಾರಸು ಇತ್ತು. ಆದರೆ ಈ ವರದಿಯಲ್ಲಿದ್ದ ಉಪವರ್ಗವಾರು ದತ್ತಾಂಶವನ್ನು ಆಧಾರವಾಗಿ ಇಟ್ಟುಕೊಂಡು ಸ್ಪೃಶ್ಯರಿಗಿದ್ದ ಶೇ. 3ರಷ್ಟು ಒಳಮೀಸಲನ್ನು ಶೇ. 4.5ಕ್ಕೆ ಏರಿಸಲು ಉಪಸಮಿತಿ ಶಿಫಾರಸು ಮಾಡಿತ್ತು.
ಅದೇ ರೀತಿ ಶೇ.5ರಷ್ಟಿದ್ದ ಬಲಗೈ ಸಮುದಾಯದ ಮೀಸಲನ್ನು ಶೇ. 5.5, ಎಡಗೈ ಸಮುದಾಯಕ್ಕೆ ಶೇ.6 ಹಾಗೂ ಇತರೆ (ಅಲೆಮಾರಿ, ಅರೆಅಲೆಮಾರಿ ಇತ್ಯಾದಿ) ಸಮುದಾಯಕ್ಕೆ ಶೇ.1ರಷ್ಟು ಸೇರಿ ಒಟ್ಟು ಶೇ. 15ರಿಂದ ಶೇ. 17ಕ್ಕೆ ಮೀಸಲಾತಿ ಹೆಚ್ಚಿಸಲು ಬಸವರಾಜ ಬೊಮ್ಮಾಯಿ ಸರಕಾರ ನಿರ್ಣಯ ಕೈಗೊಂಡಿತ್ತು. ಸ್ಪೃಶ್ಯರಿಗೆ ಮೀಸಲು ಹೆಚ್ಚಿಸಿದ್ದರಿಂದ ಕೆಲವರು ಅಸಮಾಧಾನಗೊಂಡರೆ, ಎಡಗೈ ಸಮುದಾಯಕ್ಕೆ ಹೆಚ್ಚಿಗೆ ಮೀಸಲಾತಿ ಕೊಟ್ಟಿದ್ದರಿಂದ ಬಲಗೈ ಸಮುದಾಯದ ಕಣ್ಣು ಕೆಂಪಾಗಿತ್ತು. ಇದರಿಂದ ಕೆಲ ದಲಿತ ಸಂಘಟನೆಗಳು ಈ ನಿರ್ಣಯದ ವಿರುದ್ಧ ತಿರುಗಿಬಿದ್ದರೆ, ಕೆಲ ಸಂಘಟನೆಗಳು ಪರ ನಿಂತವು. ಇನ್ನೂ ಹಲವು ಸಂಘಟನೆಗಳು ತಟಸ್ಥ ನೀತಿ ಅನುಸರಿಸಿದ್ದವು.
ಹಿಂದಿನ ಬೊಮ್ಮಾಯಿ ಸರಕಾರ ಕೇಂದ್ರಕ್ಕೆ ಮಾಡಿದ ಶಿಫಾರಸನ್ನು ರಾಜ್ಯದ ಕಾಂಗ್ರೆಸ್ ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಶೀಘ್ರವೇ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಾಯಿಸಲಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ
National Film Award: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರದಾನ
Price Hike: ಕಾಫಿ ಪ್ರಿಯರಿಗೆ ಕಹಿ ಸುದ್ದಿ, ಕಾಫಿ ಪುಡಿ ಬೆಲೆ 100 ರೂ. ಹೆಚ್ಚಳ
Donation: ರಾಮನಗರದ ಮಠಕ್ಕೆ ರಾಜಸ್ಥಾನದ ಉದ್ಯಮಿಯಿಂದ 3 ಸಾವಿರ ಎಕರೆ ಭೂಮಿ ದಾನ!
Koppal: ಸಿಎಂ ವಾಹನ ಸಂಚಾರಕ್ಕೆ ಅಡ್ಡಿ: ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ವಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್ ಶಕ್ತಿಕಾಂತ್ ದಾಸ್
Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !
Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ
High Court: ವಕೀಲರ ವಾಕ್ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್ ಕೌನ್ಸಿಲ್ಗೆ ಇಲ್ಲ
Arrested: ತ.ನಾಡಿನಿಂದ ಬಂದು ಲ್ಯಾಪ್ಟಾಪ್ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.