Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ


Team Udayavani, Oct 12, 2024, 8:30 AM IST

7-mysore

ಇಡೀ ಸಾಂಸ್ಕೃತಿಕ ನಗರಿಯ ಬೀದಿ, ಬೀದಿಗಳಲ್ಲಿ ಗರಡಿ ಮನೆಗಳು ತುಂಬಿ ಹೋಗಿದ್ದವು. ಎತ್ತ ನೋಡಿದರೂ ಪೈಲ್ವಾನರ ದಂಡು ಎದ್ದು ಕಾಣಿಸುತ್ತಿತ್ತು. ವಾರಕ್ಕೊಮ್ಮೆ, ಎರಡು ಅಥವಾ ಮೂರು ಬಾರಿಯಾದರೂ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು.

ಅಷ್ಟೇ ಅಲ್ಲ ! ನಗರದ ಕೆ.ಜಿ.ಕೊಪ್ಪಲಿನ ಬಹುತೇಕ ಮಹಿಳೆಯರೆಲ್ಲ ತಮ್ಮ ಎದೆಯಹಾಲನ್ನು ಕರೆದು ತಂದು ಪೈಲ್ವಾನರೊಬ್ಬರಿಗೆ ನೀಡಿ ತಾಕತ್ತು ಹೆಚ್ಚಿಸಿ, ಊರಿನ ಮಾನ ಕಾಪಾಡಿದ ಅಪರೂಪದ ಸಂದರ್ಭವು ವೈಭವದೊಳಗಿದೆ. ಜತೆಗೆ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಮೈಸೂರು ಮಹಾರಾಜರೇ ಸ್ವತಃ ಕುಸ್ತಿ ಅಖಾಡಕ್ಕಿಳಿದು ವಿರೋಧಿ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ್ದ ರೋಚಕ ಇತಿಹಾಸ ಕೂಡ ಇದೆ.

ಮೈಸೂರು ಮಹಾರಾಜರ ಕಾಲದಲ್ಲಿ ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡು ಕಲೆ ಕುಸ್ತಿ ಇಂದು ಯುವಕರಲ್ಲಿ ಆಸಕ್ತಿಯಿಲ್ಲದೆ ಸೊರಗುತ್ತಿದೆ ಎನ್ನುವುಸು ವಿಪರ್ಯಾಸ.

ಮೈಸೂರಿನ ಕುಸ್ತಿಯ ಇತಿಹಾಸ ರೋಚಕತೆಯಿಂದ ಕೂಡಿದೆ. ಈ ಕುಸ್ತಿಯ ತವರೂರು ಗುಜರಾತ್‌. ಅಲ್ಲಿನ ಮೊದೇರಾ ಪ್ರದೇಶದ ಮೊದಮಲ್ಲ ಬ್ರಾಹ್ಮಣ ಸಮುದಾಯ ಇಂದಿನ ಕುಸ್ತಿ ಅಥವಾ ಮಲ್ಲಯುದ್ದದ ಮೂಲ ಜನಾಂಗವೆನ್ನಲಾಗಿದೆ. ಕ್ರಮೇಣ ಈ ಜನಾಂಗದವರು ದಕ್ಷಿಣ ಭಾರತ ಸೇರಿದಂತೆ ನಾನಾ ಕಡೆಯಲ್ಲಿ ತಮಗೆ ದೊರಕಿದ ರಾಜಾಶ್ರಯದಡಿಯಲ್ಲಿ ನೆಲೆನಿಂತು ತಮ್ಮಲ್ಲಿನ ಕಲೆಯನ್ನು ಪೋಷಿಸುತ್ತಾ ಬಂದರು. ಹೀಗೆ ಬಂದ ಜಟ್ಟಿಗಳಿಗೆ ಆಶ್ರಯ ನೀಡಿದವರಲ್ಲಿ ವಿಜಯನಗರದ ದೊರೆಗಳು ಹಾಗೂ ಮೈಸೂರಿನ ಒಡೆಯರು ಪ್ರಮುಖರಾಗಿದ್ದಾರೆ.

ವಿಜಯನಗರ ಸಾಮಾಜ್ರದ ಪತನದ ನಂತರ ಕುಸ್ತಿ ಕಲೆಗೆ ಪ್ರಮುಖವಾಗಿ ಪ್ರೋತ್ಸಾಹ ಮತ್ತು ನೆಲೆ ದೊರಕಿಸಿಕೊಟ್ಟವರೆಂದರೆ ಮೈಸೂರು ಮಹಾರಾಜರು.

ಮೈಸೂರಿನ ಅನೇಕ ಒಡೆಯರುಗಳು ಸ್ವತಃ ಕುಸ್ತಿಮಲ್ಲರಾಗಿದ್ದುದು ವಿಶೇಷ. ರಾಜರುಗಳು ಮಾರುವೇಷದಲ್ಲಿ ನೆರೆರಾಜ್ಯಗಳಿಗೆ ಹೋಗಿ ಅಲ್ಲಿನ ಮಲ್ಲರಿಗೆ ಸವಾಲೆಸೆದು ಮಣಿಸಿದ ಘಟನೆಗಳನ್ನು ಇಂದಿಗೂ ಮೈಸೂರು ಸುತ್ತಮುತ್ತಲ ಹಿರಿಯರು ಮೆಲುಕು ಹಾಕುತ್ತಾರೆ. ಕುಸ್ತಿ ಮಲ್ಲರುಗಳು ತಾವು ಹುಲಿ, ಸಿಂಹ, ಆನೆಗಳಂತಹ ಪ್ರಾಣಿಗಳನ್ನು ಮಣಿಸುವ ಮೂಲಕ ಮಹಾರಾಜರುಗಳಿಂದ ಬಿರುದು ಪಡೆಯುವ ಜತೆಗೆ ಬಹುಮಾನವನ್ನು ಪಡೆದುಕೊಂಡಿದ್ದರು.

ಮುಮ್ಮಡಿ ಕೃಷ್ಣರಾಜ ಒಡೆಯರು ಒಂದು ಬಾರಿ ಬೇಟೆಗೆ ಹೋಗಿದ್ದಾಗ ಕರಡಿಯೊಂದರ ದಾಳಿಗೆ ಒಳಗಾಗಿದ್ದಾರೆ. ಆ ವೇಳೆ ಅವರ ಜತೆಯಲ್ಲಿದ್ದ ಸದಾನಂದ ಸುಬ್ಟಾ ಜಟ್ಟಪ್ಪನೆಂಬುವವರು ಮಹಾರಾಜರನ್ನು ತೊಂದರೆಯಿಂದ ಪಾರುಮಾಡಿದರು. ಆಗ ಮಹಾರಾಜರು ಸದಾನಂದ ಜಟ್ಟಪ್ಪನವರಿಗೆ ಮೈಸೂರಿನ ನಜರಾಬಾದ್‌ನಲ್ಲಿ ಗರಡಿಮನೆಯನ್ನಾರಂಭಿಸಲು ವಿಶಾಲಜಾಗವನ್ನು ನೀಡಿದರು. ಈ ಪ್ರದೇಶದಲ್ಲಿಯೆ ಮುಂದೆ ಅನೇಕ ಜಟ್ಟಿಗ ಮನೆತನಗಳು ನೆಲೆಸಿದವು. ಇಂದಿಗೂ ಈ ಗಾಡಿಮನೆಯು ನಿಂಬಜಾದೇವಿ ಮಂದಿರ ಹಾಗೂ ಕಲ್ಯಾಣಮಂಟಪದ ಪ್ರದೇಶವಾಗಿರುವುದನ್ನು ನಾವು ಕಾಣುತ್ತೇವೆ.

ಅರಮನೆ ಅಂಗಳದಲ್ಲೇ ಅಖಾಡ

ರಾಜರ ಕಾಲದಲ್ಲಿ ಎಲ್ಲ ಕುಸ್ತಿಗಳಿಗೂ ಅರಮನೆ ಮುಂದೆಯೇ ಅಖಾಡ ನಿರ್ಮಾಣವಾಗುತ್ತಿತ್ತು. ಸ್ವತಃ ಮಹಾರಾಜರೇ ಕುಸ್ತಿ ನೋಡಲು ಕೂರುತ್ತಿದ್ದರು. ರಾಷ್ಟ್ರದ ನಾನಾ ಭಾಗದಿಂದ ಆಗಮಿಸಿದ ಪೈಲ್ವಾನರು ಮತ್ತು ಆಸ್ಥಾನದ ಕುಸ್ತಿ ಪಟುಗಳು ಸೆಣೆಸುತ್ತಿದ್ದರು. ಕುಸ್ತಿ ಕಾಳಗದಲ್ಲಿ ಗೆದ್ದವರಿಗೆ ಯೋಗ್ಯಾನುಸಾರ ಬಹುಮಾನ ನೀಡುತ್ತಿದ್ದರು. ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೆ ಇಬ್ಬರಿಗೂ ಸಮಾನ ಗೌರವ ಸಿಗುತ್ತಿತ್ತು. ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ರಾಜರ ಕಾಲದಲ್ಲಿ ಸಿಗುತ್ತಿದ್ದ ಗೌರವಾದರಗಳು ಈಗ ಇಲ್ಲ. ಕುಸ್ತಿ ಮಾಡಬೇಕು, ಜಟ್ಟಿಗಳಾಗಬೇಕು ಎಂಬ ಆಸೆಯೂ ಈಗಿನ ಯುವಪೀಳಿಗೆಯಲ್ಲಿ ಇಲ್ಲವೆಂಬುದೇ ಬೇಸರದ ಸಂಗತಿ.

ಸಾಮು ಹೊಡೆಯುವ ಕೈಯಲ್ಲಿ ಮೊಬೈಲ್‌ಫೋನ್‌ ಬಂದಿದೆ, ಬೆಳಗಿನ ಜಾವ ಏಳುವ ರೂಢಿ ತಪ್ಪಿಸಿರುವ ಟಿ.ವಿ., ಕಂಪ್ಯೂಟರ್‌ಗಳು ಮನೆಮನೆ ಕೊಠಡಿಯಲ್ಲಿವೆ. ಮಣ್ಣಿನ ಅಂಕಣದ ಕುಸ್ತಿಗಿಂತ ಕ್ರಿಕೆಟ್‌ ಆಕರ್ಷಕವಾಗಿ ಕಾಣುತ್ತಿದೆ.

ಜಯ ಚಾಮರಾಜೇಂದ್ರ ಒಡೆಯರು ವಿಜಯದಶಮಿ ಸಾಂಪ್ರದಾಯಿಕ ರಾಜಮೆರವಣಿಗೆ ನಿಂತಮೇಲೆ ಒಂದು ರೀತಿ ಕುಸ್ತಿ ಕಳೆಗುಂದಿತು. ನವರಾತ್ರಿ ಕುಸ್ತಿಗಳು ಅರಮನೆಯ ಆವರಣದಲ್ಲಿ ನಡೆಯುವುದು ರದ್ದಾಯಿತು. ಆದರೆ, ದಸರಾ ಕುಸ್ತಿಗಳು ದೊಡ್ಡಕೆರೆ ಮೈದಾನದಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿವೆ. ಆದರೆ, ಪ್ರತಿವರ್ಷ ವಿಜಯ ದಶಮಿಯೊಂದು ಅರಮನೆ ಆವಣದಲ್ಲಿ ಸಾಂಪ್ರದಾಯಿಕ ವಜ್ರಮಷ್ಠಿ ಕಾಳಗ ನಡೆಯುತ್ತಿದೆ. ರಾಜಮಹಾರಜರುಗಳ ಪ್ರೋತ್ಸಾಹದಿಂದ ಕುಸ್ತಿಕಲೆ ಅಭಿವೃದ್ಧಿಹೊಂದಲು ಕಾರಣವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಮಹಾರಾಜರುಗಳು ಜೆಟ್ಟಿಗಳನ್ನು ಸಾಕುತ್ತಿದ್ದರು. ಈ ಕ್ಷೇತ್ರದಲ್ಲಿ ಮೈಸೂರು ಒಡೆಯರ ಕೊಡುಗೆ ಅಪಾರ. ರಾಜರ ಸಮ್ಮುಖದಲ್ಲಿ ಗೆದ್ದಂತಹ ಪಟುಗಳಿಗೆ ದೊಡ್ಡದಾದ ಬೆಳ್ಳಿ ಕಪ್ಪನ್ನು ಬಹುಮಾನವಾಗಿ ಕೊಟ್ಟು ಅದರ ತುಂಬಾ ಬೆಳ್ಳಿ ನಾಣ್ಯಗಳನ್ನು ನೀಡುತ್ತಿದ್ದರು.

ರಣಧೀರ ಕಂಠೀರವ ನರಸರಾಜ ಒಡೆಯರು, ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು ಕುಸ್ತಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯ.

ಬೀದಿ ಬೀದಿಯಲ್ಲೂ ಗರಡಿ

ಗರಡಿಗಳ ನಗರಿ ಮೈಸೂರಿನ ಕುಸ್ತಿ ಪರಂಪರೆಯೇ ಹಾಗೆ. ಇಲ್ಲಿಯ ಬಹುತೇಕ ಎಲ್ಲ ರಸ್ತೆಗಳು ಗರಡಿ ಬೀದಿಗಳೇ. ಯಾವುದೇ ರಸ್ತೆಗೆ ಹೋದರು ಅದನ್ನು ಒಂದು ಗರಡಿ ಹೆಸರಿನಿಂದ ಕರೆಯುವುದು ಉಂಟು. ಪ್ರತಿಯೊಬ್ಬ ಪೈಲ್ವಾನನ ಮನೆಯೂ ಕುಸ್ತಿ ಪರಂಪರೆಯ ಅರಮನೆಗಳಾಗಿವೆ. ಏಕೆಂದರೆ ತಾತ, ಮುತ್ತಾತಂದಿರಿಂದ ವಂಶಪಾರಂಪರ್ಯದಿಂದಲೂ ಕುಸ್ತಿ ಕಲೆ ಒಲಿದು ಬಂದಿದೆ.

ನಗರದಲೊಂದು ಸುತ್ತು ಹೊಡೆದರೆ ಸುಮಾರು ನೂರಕ್ಕೂ ಹೆಚ್ಚು ಗರಡಿಮನೆಗಳು ಕಾಣಸಿಗುತ್ತವೆ. ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫ‌ಕೀರ್‌ ಅಹಮ್ಮದ್‌ ಸಾಹೇಬರ ಗರಡಿ, ಮಾಯಣ್ಣನ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ.

ಈ ಗರಡಿಯಲ್ಲಿ ಅಭ್ಯಸಿಸಿ, ಮೈಸೂರಿನ ಕೀರ್ತಿ ಹೆಚ್ಚಿಸಿದ ಪೈಲ್ವಾನರಾದ ಬಸವಯ್ಯ, ಬಂಡಿಕೇರಿ ಚಿಕ್ಕಣ್ಣ, ಪಾಪಣ್ಣ, ಪಾಪಯ್ಯ, ಕಿಟ್ಟ, ಅಣ್ಣಯ್ಯ, ಖಾದರ್‌, ಮಹಮ್ಮದ್‌, ಶೇಖರ್‌ ನಾಗರಾಜು, ರಾಮಣ್ಣ, ವಿಶ್ವನಾಥ್‌, ಶ್ರೀಕಂಠು, ಶ್ರೀನಿವಾಸಣ್ಣನವರು, ದೊಡ್ಡತಿಮ್ಮಯ್ಯ, ಚನ್ನಣ್ಣ, ಸಿದ್ಧಣ್ಣ ಆಚಾರ್‌, ಚಿನ್ನಕೃಷ್ಣಪ್ಪ, ನಾಗರಾಜ್‌, ಶಿವಣ್ಣ ಸೇರಿದಂತೆ ಕೆಲವರ ಹೆಸರುಗಳು ಮಾತ್ರ ಮೈಸೂರು ಕುಸ್ತಿ ಇತಿಹಾಸದಲ್ಲಿ ಈಗ ಉಳಿದಿವೆ.

ಎದೆಯಹಾಲು ಕುಡಿದ ಪೈಲ್ವಾನ

ಮೈಸೂರಿನ ಕೆಲ ಪೈಲ್ವಾನರುಗಳ ವಿಶೇಷತೆಗಳನ್ನು ಹೇಳ ಹೊರಟರೆ ಅನೇಕ ರೋಚಕ ಸಂಗತಿಗಳು ತಿಳಿದು ಬರುತ್ತವೆ. ಈ ಪೈಕಿ ಕೆ.ಜಿ.ಕೊಪ್ಪಲಿನ ಪೈಲ್ವಾನ್‌ ಬಸವಯ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ, ಇವರು ಪೈಲ್ವಾನರಾಗಿ ರೂಪಗೊಂಡಿದು ಒಂದು ವಿಶೇಷ ಸಂದರ್ಭವೇ ಸರಿ.

ಮಂಡಿಮೊಹಲ್ಲಾದ ಪೈ.ಅಮೀರುದ್ದೀನ್‌ ಖುರೈಸಿ ಕೊಪ್ಪಲಿನ ಒಬ್ಬ ಪೈಲ್ವಾನನನ್ನು ಸೋಲಿಸಿ “ಮೈಸೂರಿಗೆ ಗಂಡ ಕೊಪ್ಪಲಿಗೆ ಮಿಂಡ’ ಎಂದು ಹೇಳಿದನಂತೆ. ಈ ಮಾತಿನಿಂದ ಕೊಪ್ಪಲಿನ ಹಿರಿಯರು ತಲೆಕೆಡಿಸಿಕೊಂಡರಂತೆ. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಬಸವಯ್ಯನನ್ನು ನೋಡಿದ ಉಸ್ತಾದ್‌ ಪಕೀರ್‌ಸಾಬ್‌ ಅಯ್ಯ ಈ ಯುವಕನನ್ನು ನನ್ನ ಕೈಯಲ್ಲಿ ಹಾಕಿ ಖುರೈಸಿಗೆ ಪಾಠ ಕಲಿಸುತ್ತೇನೆ ಎಂದರಂತೆ. ಅದರಂತೆ ಅಂದಿನಿಂದಲೇ ಬಸವಯ್ಯನವರ ತಾಲೀಮು ಶುರುವಾಯಿತು. ಆಗ ಇಡೀ ಕೊಪ್ಪಲಿನ ಹೆಂಗಸರು ತಮ್ಮ ಎದೆಯಹಾಲನ್ನು ಕರೆದು ತಂದು ಬಸವಯ್ಯ ಅವರಿಗೆ ಪುಷ್ಠಿಯಾಗಿ ನೀಡಿ ಸಾಕಿದ್ದರು. ಇಡೀ ಊರಿನ ತಾಯಂದಿರು ತಮ್ಮ ಎಳೆಕೂಸಿಗೆ ಒಂದು ಎದೆ ಹಾಲು ಸಾಕು ಎಂದು ಇನ್ನೊಂದು ಎದೆ ಹಾಲನ್ನು ಬಸವಯ್ಯ ಅವರಿಗೆ ನೀಡಿ ಪುಷ್ಠಿ ನೀಡಿದ್ದು ಮೈಸೂರು ಕುಸ್ತಿ ಇತಿಹಾಸದಲ್ಲಿ ಸ್ಮರಣೀಯವಾದದ್ದು.

ಸತತ ಒಂದು ವರ್ಷದ ಪರಿಶ್ರಮದಿಂದ ಖುರೈಸಿಯನ್ನು ಮಣ್ಣು ಮುಕ್ಕಿಸಿದರು. ಬಳಿಕ ಬಸವಯ್ಯ ಅವರು ಅನೇಕ ಕುಸ್ತಿಗಳನ್ನು ಆಡಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ, ರಾಜಾಶ್ರಯವನ್ನೂ ಪಡೆದರು.

ಅಖಾಡಕ್ಕಿಳಿದಿದ್ದ ಒಡೆಯರ್‌

ಕಂಠೀರವ ನರಸಿಂಹರಾಜ ಒಡೆಯರ್‌ ಅವರ ಕಾಲದಲ್ಲಿ ತಿರುಚನಪಳ್ಳಿಯ ಪೈಲ್ವಾನನೊಬ್ಬ ಮೈಸೂರಿಗೆ ಭೇಟಿ ನೀಡಿ ತನ್ನ ಲಂಗೋಟಿಯನ್ನು ಊರಿನ ಹೊರ ಆವರಣದಲ್ಲಿರುವ ಮರಕ್ಕೆ ನೇತು ಹಾಕಿದ್ದನಂತೆ. ಯಾರದರೂ ಕುಸ್ತಿಪಟು ನನ್ನ ವಿರುದ್ಧ ಜಯಶಾಲಿಯಾದರೆ ಈ ಲಂಗೋಟಿಯನ್ನು ತೆಗೆಯುತ್ತೇನೆ. ಇಲ್ಲವಾದರೆ ನಾನು ಬದುಕಿರುವವರೆಗೂ ಇಲ್ಲಿ ನೇತು ಹಾಕಿರುವ ಲಂಗೋಟಿ ಕೆಳಗೆ ತಲೆ ತಗ್ಗಿಸಿ ನಡೆಯಬೇಕು ಎಂದು ಜನತೆಯನ್ನು ಅವಮಾನಿಸಿ ಸವಾಲು ಹಾಕಿದ್ದನಂತೆ.

ಇದರಿಂದ ಕೆರಳಿದ ಅನೇಕ ಮೈಸೂರಿನ ಕುಸ್ತಿ ಪಟುಗಳು ತಿರುಚನಪಳ್ಳಿಗೆ ತೆರಳಿ ಪೈಲ್ವಾನ್‌ನೊಡನೆ ಕಾದಾಡಿದ್ದರು. ಆದರೆ ಅವನ ಮುಂದೆ ಮೈಸೂರು ಪೈಲ್ವಾನರು ಸೋತು ಸುಣ್ಣವಾಗಿದ್ದರು. ಇದರಿಂದ ಕೆರಳಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್‌ ತಾವೇ ಮಾರುವೇಷದಲ್ಲಿ ತಿರುಚನಪಳ್ಳಿಗೆ ತೆರಳಿ ಆ ಪೈಲ್ವಾನನ್ನು ಸೆದೆಬಡಿದು ಮಣ್ಣು ಮುಕ್ಕಿಸಿದ್ದರಂತೆ. ನಂತರ ಅಲ್ಲಿಂದ ಪೈಲ್ವಾನನ್ನು ಕರೆದುಕೊಂಡು ಬಂದು ಮರಕ್ಕೆ ನೇತು ಹಾಕಿದ ಲಂಗೋಟಿಯನ್ನು ತೆಗೆಸಿ ತಮ್ಮ ಶೌರ್ಯ ಮೆರೆದಿದ್ದರಂತೆ ಎನ್ನುವುದು ಕುಸ್ತಿ ಇತಿಹಾಸ ಅವಿಸ್ಮರಣೀಯ.

ಇವರು ಪ್ರತಿನಿತ್ಯ ಚಾಮುಂಡಿ ಬೆಟ್ಟದಲ್ಲಿರುವ ಸಾವಿರ ಮೆಟ್ಟಿಲುಗಳನ್ನು ಹತ್ತುವಾಗ ಬಲಿಷ್ಠ ಕರುವೊಂದನ್ನು ತಮ್ಮ ಹೆಗಲ ಮೇಲೆ ಇಟ್ಟುಕೊಂಡು ನಡೆಯುತ್ತಿದ್ದರು ಎಂಬ ಇತಿಹಾಸವು ಕೂಡ ಇದೆ.

ಮರೆಯಾದ ಕುಸ್ತಿ ಗತ ವೈಭವ

ರಾಜರ ಕಾಲದಲ್ಲಿ ವೈಭೋಗದಿಂದ ಮೆರೆದಿದ್ದ ಕುಸ್ತಿಗೆ ಈಗ ಪ್ರೋತ್ಸಾಹವೂ ಕೊಚ ಕಡಿಮೆಯಾಗಿದೆ. ಎಲ್ಲೆಲ್ಲೂ ತಲೆಯೆತ್ತಿರುವ ಜಿಮ್‌, ಏರೋಬಿಕ್ಸ್‌ ನಂತಹ ಆಧುನಿಕ ತಾಣಗಳತ್ತ ಯುವಕರು ಹೆಚ್ಚೆಚ್ಚು ವಾಲುತ್ತಿ¨ªಾರೆ. ಸಿಕ್ಸ್‌ ಪ್ಯಾಕ್‌ ಮೋಹಕ್ಕೆ ಒಳಗಾಗಿರುವ ಯುವಜನತೆ ಅಲ್ಲಿನ ಉಪಕರಣಗಳನ್ನು ಬಳಸಿ ಕಸರತ್ತಿನ್ನು ನಡೆಸುತ್ತಾ ತಮ್ಮ ನೆಲದ ಸಂಪ್ರದಾಯಿಕ ಕಲೆಯಾದ ಕುಸ್ತಿಯಿಂದ ದೂರಾಗುತ್ತಿದ್ದಾರೆ. ಹೀಗಾಗಿ ದೇಸೀ ಪರಂಪರೆಯ ಕುಸ್ತಿ ಹಾಗೂ ಗರಡಿ ಮನೆಗಳು ಮೈಸೂರಿನಲ್ಲಿ ಸದ್ದಿಲ್ಲದೇ ನೇಪಥ್ಯಕ್ಕೆ ಸರಿಯುತ್ತಿವೆ.

ಇಂದಿನ ದಿನಗಳಲ್ಲಿ ರಾಜಕಾಲದಲ್ಲಿದಟ್ಟು ಪ್ರೋತ್ಸಾಹ ಕುಸ್ತಿ ಮಲ್ಲರಿಗೆ ಇಲ್ಲವಾಗಿದೆ. ಹಿಂದೆಲ್ಲಾ ವಾರ ವಾರವೂ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ರಾಜರು, ಮಹಾಜನಗಳು ನಾನಾ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಆದರೆ, ಇಂದು ವರ್ಷಕ್ಕೆ ಒಂದು ಬಾರಿ ದಸರಾ ಕುಸ್ತಿಗಳು ನಡೆಯುತ್ತವೆ. ಕೆಲವೊಂದು ಸಂಘಟನೆಗಳು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರ ಗರಡಿ ಮನೆಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿವೆ. ಆದರೆ, ರಾಜರ ಕಾಲದಲ್ಲಿ ದೊರೆಯುತ್ತಿದಷ್ಟು ಪ್ರೋತ್ಸಾಹ ಕುಸ್ತಿ ಪಟುಗಳಿಗೆ ದೊರೆಯುತ್ತಿಲ್ಲ.

ಇನ್ನು ಪೈಲ್ವಾನರಿಗೆ ಸಾಕಷ್ಟು ಪೌಷ್ಟಿಕ ಆಹಾರ ಮತ್ತು ಕುಸ್ತಿ ಅಭ್ಯಾಸಕ್ಕೆ ಬಳಸುವ ಉಪಕರಣಗಳು, ಅವರು ಉಡುವ ಉಡುಗೆಗಳು ಸಹ ದೊರೆಯುವುದು ಕಷ್ಟ. ಕಸರತ್ತು ಅಭ್ಯಾಸಿಗಳು ಧರಿಸುವ ಹನುಮಾನ್‌ ಕಾಚಾ ಅಥವಾ ಲಂಗೋಟಿಗೆ ಅದರದ್ದೇ ಆದ ಮಹತ್ವವಿದೆ. ಆದರೆ ಇಂದು ಈ ಹನುಮಾನ್‌ ಕಾಚಾಗಳಾನ್ನು ಹೊಲಿದು ಕೊಡುವವರೆ ಇಲ್ಲವಾಗಿದ್ದಾರೆ. ಹೀಗೆ ಪರಿಕರಗಳ ಕೊರತೆ ಇಲ್ಲವೇ ಅಲಭ್ಯತೆಗಳೂ ಕುಸ್ತಿ ಕಲೆಯಂತಹಾ ಮಹತ್ವದ ಕಲೆಯೊಂದು ನೇಪಥ್ಯಕ್ಕೆ ಸರಿಯಲು ಕಾರಣವೆಂದರೆ ತಪ್ಪಾಗಲಾರದು.

■ ಸತೀಶ್‌ ದೇಪುರ

ಟಾಪ್ ನ್ಯೂಸ್

Nagpur: Destructive agenda by many in the name of “alternative politics”: Mohan Bhagwat

Nagpur: ʼಪರ್ಯಾಯ ರಾಜಕೀಯʼ ಹೆಸರಲ್ಲಿ ಹಲವರಿಂದ ವಿನಾಶಕಾರಿ ಅಜೆಂಡಾ: ‌ಮೋಹನ್ ಭಾಗವತ್

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

6-uv-fusion

UV Fusion: ಸಹವಾಸ ದೋಷ

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ

ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-mysore-story

Mysore Dasara: ನಮ್ಮ ಒಡೆಯರ್‌ ಊರು…

8-mysore-elephant

Mysore Elephants ಆನೆ ಮತ್ತು ಮಾವುತ ಭಾವನಾತ್ಮಕ ಸಂಬಂಧ

9-mysore-film-city-2

Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

2(5)

Tata ಎಂದರೆ ಹೊಸತನ; ಭಾರತ ಖ್ಯಾತ ಉದ್ಯಮಿ ರತನ್‌ ಟಾಟಾಗೆ ವಿದಾಯ

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Nagpur: Destructive agenda by many in the name of “alternative politics”: Mohan Bhagwat

Nagpur: ʼಪರ್ಯಾಯ ರಾಜಕೀಯʼ ಹೆಸರಲ್ಲಿ ಹಲವರಿಂದ ವಿನಾಶಕಾರಿ ಅಜೆಂಡಾ: ‌ಮೋಹನ್ ಭಾಗವತ್

15

Wandse: ಬಗ್ವಾಡಿಯ ಮನೆ ಮನೆಗೂ ಶ್ರೀದೇವಿ

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

UP: 10 ವರ್ಷದ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.