Tata ಎಂದರೆ ಹೊಸತನ; ಭಾರತ ಖ್ಯಾತ ಉದ್ಯಮಿ ರತನ್‌ ಟಾಟಾಗೆ ವಿದಾಯ

ಮಧ್ಯಮವರ್ಗದ ಕನಸು ನನಸಾಗಿಸಲು ನ್ಯಾನೋ ಕಾರು ಪರಿಚಯ 2.2 ಎಕರೆ ಭೂಮಿಯಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಆಸ್ಪತ್ರೆ ನಿರ್ಮಾಣ

Team Udayavani, Oct 11, 2024, 12:52 PM IST

2(5)

ಬುಧವಾರ ರಾತ್ರಿ ನಿಧನ ಹೊಂದಿದ ರತನ್‌ ಟಾಟಾ ಅವರದು ತಂತ್ರಜ್ಞಾನ, ನಾವೀನ್ಯ, ಮಾನವೀಯತೆ ಎಲ್ಲದರಲ್ಲೂ ಎತ್ತಿದ ಕೈ. ಅವರ ಆವಿಷ್ಕಾರಗಳು, ಹೊಸತನಗಳು ಜನ ಜೀವನ ಸುಲಭಗೊಳಿಸುವುದು ಮಾತ್ರವಲ್ಲ, ಸರ್ವಸ್ತರದ ಉನ್ನತಿಗೂ ಕಾರಣವಾಗುವಂತೆ ಇದ್ದವು.

ಭಾರತದ ‘ಭೂಷಣ’
ಭಾರತ ಸರಕಾರ ಕೊಡಮಾಡುವ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ರತನ್‌ ಟಾಟಾ ಅವರಿಗೆ ಸಂದಿದೆ. ಅಲ್ಲದೇ ಮಹಾರಾಷ್ಟ್ರ ಭೂಷಣ, ಅಸ್ಸಾಂ ಬಿಭವ್‌, ದಶಕದ ಪರಿವರ್ತನಾ ನಾಯಕ, ಸಾಯಾಜಿ ರತ್ನ, ಜೀವಮಾನ ಸಾಧಕ, ಮಹಾರಾಷ್ಟ್ರ ಉದ್ಯೋಗ ರತ್ನ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ದೇಶಿಯವಾಗಿ ಮಾತ್ರವಲ್ಲದೇ ಯಾಲೆ ವಿವಿ ಕೊಡಮಾಡುವ ಲೆಜೆಂಡ್‌ ಇನ್‌ ಲೀಡರ್‌ಶಿಪ್‌ ಸೇರಿದಂತೆ ಬ್ರಿಟನ್‌, ಇಟಲಿ, ಉರುಗ್ವೆ, ಆಸ್ಟ್ರೇಲಿಯಾ, ಜಪಾನ್‌, ಫ್ರಾನ್ಸ್‌ ರಾಷ್ಟ್ರಗಳೂ ವಿವಿಧ ಪ್ರಶಸ್ತಿಗಳನ್ನು ನೀಡಿ ಅವರನ್ನು ಗೌರವಿಸಿದ್ದವು.

ಟಾಟಾ ನ್ಯಾನೋ: ಆಟೋಮೋಬೈಲ್‌ ಕ್ಷೇತ್ರದಲ್ಲಿ ಹೊಸ ತಲ್ಲಣ ಸೃಷ್ಟಿಸಿದ್ದ ಟಾಟಾ ಸಂಸ್ಥೆಯ ಸಾಧನೆಯ ಪಟ್ಟಿಗಳ ಪೈಕಿ ನ್ಯಾನೋ ಕಾರಿನ ಪರಿಚಯವೂ ಒಂದು. ಸಾಮಾನ್ಯ ವರ್ಗದ ಜನರೂ ಕಾರಿನಲ್ಲಿ ಕುಟುಂಬಸಹಿತವಾಗಿ ಓಡಾಡಬೇಕೆಂಬ ಕನಸಿಗೆ ಒತ್ತಾಸೆಯಾಗಿ ನಿಲ್ಲಲೆಂದೇ ಟಾಟಾ ಮೋಟಾರ್ ಈ ಕಾರನ್ನು ಪರಿಚಯಿಸಿತು. ಇದು ಜಗತ್ತಿನ ಅಗ್ಗದ ಕಾರು ಎಂಬ ಖ್ಯಾತಿಗೂ ಪಾತ್ರವಾಗಿದೆ. ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಮಳೆಯಲ್ಲೇ ಸ್ಕೂಟರಿನಲ್ಲಿ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ನೆನೆದುಕೊಂಡು ಮನೆಯತ್ತ ಹೊರಟಿದ್ದ ದೃಶ್ಯವನ್ನು ಕಂಡು ರತನ್‌ ಟಾಟಾ ಈ ಕಾರಿನ ಉತ್ಪಾದನೆಗೆ ಮುಂದಾದರು ಎಂಬುದು ಸ್ಮರಿಸಬೇಕಾದ ವಿಚಾರ.

ರತ್ನನ ಕನಸು! ತನ್ನ ಕನಸಿನ ನ್ಯಾನೋ ಕಾರಿನ ಜತೆ ರತನ್‌ ಟಾಟಾ.

ಟಾಟಾ ಸಮೂಹದ ಜಾಗತಿಕ ವಿಸ್ತರಣೆ: ವಿದೇಶಿ ನೆಲದಲ್ಲೂ ಭಾರತೀಯ ಸಂಸ್ಥೆಯೊಂದನ್ನು ಭದ್ರವಾಗಿ ನೆಲೆಯೂರಿಸಿದ ಗರಿಮೆ ರತನ್‌ ಟಾಟಾ ಅವರಿಗೆ ಸಂದಲೇಬೇಕು. ಟೆಟಿÉ ಟೀ, ಕೋರಸ್‌ ಸ್ಟೀಲ್‌, ಜಾಗ್ವಾರ್‌ ಲ್ಯಾಂಡ್‌ ರೊವರ್‌, ಬ್ರನ್ನರ್‌ ಮಾಂಡ್‌, ಜನರಲ್‌ ಕೆಮಿಕಲ್‌ ಇಂಡಸ್ಟ್ರಿಯಲ್‌ ಪ್ರಾಡಕ್ಟ್ ಮತ್ತು ಡೋವೋ ಸಂಸ್ಥೆ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳ ಸ್ವಾಧೀನದ ಮೂಲಕ ಉದ್ಯಮಲೋಕದಲ್ಲಿ ಹೊಸ ಕ್ರಾಂತಿಯನ್ನೇ ರತನ್‌ ಟಾಟಾ ಸೃಷ್ಟಿಸಿದ್ದರು.

ಪ್ರಾಣಿಗಳಿಗಾಗೇ 24×7 ಆಸ್ಪತ್ರೆ: ಸಾಕು ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಹೊಂದಿದ್ದ ರತನ್‌ ಟಾಟಾ ಮನುಷ್ಯರಿಗೆ ಎಲ್ಲ ಸಮಯದಲ್ಲೂ ವೈದ್ಯಕೀಯ ನೆರವು ಸಿಗುವಂತೆಯೇ ಪ್ರಾಣಿಗಳಿಗೂ ಸಿಗಬೇಕು ಎಂಬ ಉದ್ದೇಶದೊಂದಿಗೆ ಮುಂಬಯಿಯಲ್ಲಿ 2.2 ಎಕರೆ ಭೂಮಿಯಲ್ಲಿ ಪ್ರಾಣಿಗಳಿಗಾಗಿಯೇ ಆಸ್ಪತ್ರೆ ಯೊಂದನ್ನು ನಿರ್ಮಿಸಿದ್ದರು. ನಾಯಿ, ಬೆಕ್ಕು, ಮೊಲಗಳಂಥ ಸಣ್ಣ ಪ್ರಾಣಿಗಳಿಗಾಗಿ ದಿನದ 24 ಗಂಟೆಯೂ ಈ ಆಸ್ಪತ್ರೆ ಸೇವೆ ಒದಗಿಸುತ್ತಿದೆ.

ಲಾಭದ ಪರ್ವಕ್ಕೆ ಮುನ್ನುಡಿ: ಟಾಟಾ ಸನ್ಸ್‌ (ಟಾಟಾ ಸಮೂಹ) ಆದಾಯ ಉತ್ತಮವಾಗಿ ಇತ್ತಾದರೂ ರತನ್‌ ಟಾಟಾ ದೃಷ್ಟಿಯಲ್ಲಿ ಆ ಲಾಭ ಲಾಭವೇ ಆಗಿರಲಿಲ್ಲ. ಜನಿಸಿದ್ದು ಸ್ವಾತಂತ್ರ್ಯ ಪೂರ್ವದಲ್ಲಾದರೂ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುವುದು ರತನ್‌ ಟಾಟಾರಲ್ಲಿದ್ದ ವಿಶೇಷ ಗುಣ. ಅದರಂತೆ ರತನ್‌ ಟಾಟಾ ಸಮೂಹದ ಮುಖ್ಯಸ್ಥರಾದ ಅನಂತರದ ಕೆಲವೇ ವರ್ಷಗಳಲ್ಲಿ ತಮ್ಮ ಕಂಪೆನಿಗಳಲ್ಲಿ ವಿನೂತನ ಯಾಂತ್ರಿಕ, ತಂತ್ರಿಕ ಬದಲಾವಣೆಗಳನ್ನು ತಂದರು. ತಂತ್ರಜ್ಞಾನಗಳಿಗೆ ತೆರೆದುಕೊಂಡ ಕಾರಣದಿಂದಲೇ ಸಂಸ್ಥೆ ಹೆಚ್ಚು ಲಾಭ ಗಳಿಸಲು ಸಾಧ್ಯವಾಯಿತು ಸಂಸ್ಥೆಯ ಆದಾಯ 40 ಪಟ್ಟು ಹಾಗೂ ಲಾಭಾಂಶ 50 ಪಟ್ಟು ಹೆಚ್ಚಾಯಿತು.

ವಿಮಾನ ಹಾರಿಸಿದರು!; ಎಫ್-16 ಫಾಲ್ಕನ್‌ ಅನ್ನು ಹಾರಿಸಿದ ಮೊದಲ ಭಾರತೀಯ ನಾಗರಿಕ ಎಂಬ ಖ್ಯಾತಿ

ಟಾಟಾ ಸಮೂಹದ ಕಂಪೆನಿಗಳು
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌, ಟಾಟಾ ಮೋಟಾರ್, ಟಾಟಾ ಸ್ಟೀಲ್‌, ಟಾಟಾ ಕೆಮಿಕಲ್ಸ್‌, ಟಾಟಾ ಕನ್ಸ್ಯೂಮರ್‌ ಪ್ರೋಡಕ್ಟ್ಸ್, ಟೈಟನ್‌, ಟಾಟಾ ಕ್ಯಾಪಿಟಲ್‌, ಟಾಟಾ ಪವರ್‌, ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌, ಇಂಡಿಯನ್‌ ಹೊಟೇಲ್ಸ್‌, ಟಾಟಾ ಕಮ್ಯೂನಿಕೇಷನ್ಸ್‌, ಜಾಗ್ವಾರ್‌ ಲ್ಯಾಂಡ್‌ರೋವರ್‌, ಫಿಯೆಟ್‌ ಟಾಟಾ, ಟಾಟಾ ಡಿಫೆನ್ಸ್‌, ಟಾಟಾ ಗ್ಲೋಬಲ್‌ ಬೆವಿರೇಜಸ್‌, ಟಾಟಾ ಹೌಸಿಂಗ್‌ ಟೆವಲಪ್ಮೆಂಟ್‌ ಕಂಪನಿ, ಟಾಟಾ ಸ್ಕೈ, ಟಾಟಾ ಸ್ಟಾರ್‌ಬಕ್ಸ್‌, ಟಾಟಾ ಕ್ಯಾಪಿಟಲ್‌, ಟಾಟಾ ಕೆಮಿಕಲ್ಸ್‌

ಟಾಟಾ ಇಂಡಸ್ಟ್ರೀಸ್‌ ಕಂಪೆನಿಗಳು
ಟಾಟಾ ಹೆಲ್ತ್‌, ಟಾಟಾ ಕ್ಲಾಸ್‌ಎಡ್ಜ್, ಟಾಟಾ ಕ್ಲಿಕ್‌ (ಇ-ರೀಟೇಲ್‌), ಫ್ಲಿಸೋಮ್‌ (ಸೋಲಾರ್‌ ಫಿಲ್ಮ್ ತಂತ್ರಜ್ಞಾನ), ಟಾಟಾ ಸ್ಮಾರ್ಟ್‌ ಫುಡ್ಸ್‌, ಇನ್ಜ್ ಪೆರಾ ಹೆಲ್ತ್‌ಕೇರ್‌ ಸೈನ್ಸಸ್‌, ಟಾಟಾ ಐಕ್ಯು, ಟಾಟಾ ಎಐಜಿ, ಟಾಟಾ ಆಟೋಕಾಂಪ್‌ ಸಿಸ್ಟಮ್ಸ್‌

ಟಾಟಾ ಹೆಸರಿಲ್ಲದ ಅಂಗ ಸಂಸ್ಥೆಗಳು
ಏರ್‌ ಏಷ್ಯಾ ಇಂಡಿಯಾ, ಇಂಡಿಕ್ಯಾಶ್‌ ಎಟಿಎಂ, ಬ್ರುನ್ನರ್‌ ಮೋಂಡ್‌, ಸಿ-ಎಡ್ಜ್ ಟೆಕ್ನಾಲಾಜೀಸ್‌, ಸಿಎಂಸಿ ಲಿಮಿಟೆಡ್‌, ಕಾಂಪುಟೇಷನಲ್‌ ರಿಸರ್ಚ್‌ ಲ್ಯಾಬೊರೇಟರೀಸ್‌, ಇ-ಎನ್‌ಎಕ್ಸ್‌ಟಿ ಫೈನಾನ್ಷಿಯಲ್‌ ಲಿ., ಕ್ರೋಮಾ, ಜಮೆÒಡು³ರ್‌ ಎಫ್‌ಸಿ (ಫುಟ್ಬಾಲ್‌ ಕ್ಲಬ್‌), ಎಂಜಂಕ್ಷನ್‌, ರ್ಯಾಲೀಸ್‌ ಇಂಡಿಯಾ ಲಿ. (ಕೃಷಿ ಸಂಶೋಧನೆ), ತಾಜ್‌ ಏರ್‌, ತಾಜ್‌ ಹೊಟೇಲ್ಸ್‌ ರೆಸಾಟ್ಸ್‌ ಆಂಡ್‌ ಪ್ಯಾಲೆಸಸ್‌, ತನಿಷ್ಕ್‌ , ಟೆಟ್ಲಿ, ಟೈಟನ್‌ ಇಂಡಸ್ಟ್ರೀಸ್‌, ಟ್ರೆಂಟ್‌, ಟಿಆರ್‌ಎಲ್‌ ಕ್ರೋಸಕಿ ರೀಫ್ಯಾಕ್ಟರೀಸ್‌ ಲಿ, ವೋಲ್ಟಾಸ್‌, ವಿಸ್ತಾರ, ವಿಎಸ್‌ಎನ್‌ಎಲ್‌ ಇಂಟರ್‌ನ್ಯಾಷನಲ್‌ ಕೆನಡ, ಟೈಟಾನ್‌ಎಕ್ಸ್‌

ಶಿಕ್ಷಣ ಮತ್ತು ಸಂಶೋಧನ ಸಂಸ್ಥೆಗಳು
ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ), ನ್ಯಾಷನಲ್‌ ಸೆಂಟರ್‌ ಫಾರ್‌ ಪಫಾರ್ಮಿಂಗ್‌ ಆರ್ಟ್ಸ್, ನೆಟ್ಟುರ್‌ ಟೆಕ್ನಿಕಲ್‌ ಟ್ರೇನಿಂಗ್‌ ಫೌಂಡೇಷನ್‌ (ಎನ್‌ಟಿಟಿಎಫ್‌), ಟಾಟಾ ಇಕೋಟೆಕ್ನಾಲಜಿ ಸೆಂಟರ್‌, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌, ಟಾಟಾ ಮ್ಯಾನೇಜ್ಮೆಟ್‌ ಟ್ರೇನಿಂಗ್‌ ಸೆಂಟರ್‌, ಟಾಟಾ ಮೆಮೋರಿಯಲ್‌ ಹಾಸ್ಪಿಟಲ್‌, ಟಾಟಾ ಮೆಡಿಕಲ್‌ ಸೆಂಟರ್‌, ಟಾಟಾ ಎನರ್ಜಿ ಆಂಡ್‌ ರಿಸೋರ್ಸಸ್‌ ಇನ್‌ ಸ್ಟಿಟ್ಯೂಟ್‌, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಜೆನೆಟಿಕ್ಸ್‌ ಆಂಡ್‌ ಸೊಸೈಟಿ

ಉತ್ಸಾಹಿ ನವೋದ್ಯಮಿಗಳಿಗೆ ಪ್ರೋತ್ಸಾಹ
‘ಹೂಡಿಕೆದಾರರ ಹಣ ಮುಳುಗಿಸುವ ನವೋದ್ಯಮಗಳಿಗೆ ಎರಡನೇ ಅವಕಾಶ ಇರುವುದಿಲ್ಲ’- ಇದು ಕೆಲವು ವರ್ಷಗಳ ಹಿಂದೆ ಸಂದರ್ಶನ ಒಂದರಲ್ಲಿ ರತನ್‌ ಟಾಟಾ ಅವರೇ ಹೇಳಿದ ಮಾತು. ಆದರೆ ರತನ್‌ ಟಾಟಾ ಹೊಸ ವ್ಯವಹಾರ ಆರಂಭಿಸುವ ನವೋದ್ಯಮಿಗಳಿಗೆ ಆಶಾಕಿರಣವಾಗಿ ನಿಂತಿದ್ದು ಸುಳ್ಳಲ್ಲ. ವಿಶೇಷವೆಂದರೆ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿದ್ದಾಗ ಮಾಡಿದ್ದಕ್ಕಿಂತಲೂ ನಿವೃತ್ತಿ ಬಳಿಕ ಮಾಡಿದ ಸ್ಟಾರ್ಟ್‌-ಅಪ್‌ ಹೂಡಿಕೆಗಳೇ ಹೆಚ್ಚು. ಒಟ್ಟಾರೆ 24ಕ್ಕೂ ಹೆಚ್ಚು ನವೋದ್ಯಮಗಳಲ್ಲಿ ಹಣ ತೊಡಗಿಸುವ ಮೂಲಕ ಉತ್ಸಾಹಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ರತನ್‌ ಟಾಟಾರ ಹೂಡಿಕೆಯ ಜಾಡು ಹಿಡಿದು ಹೊರಟರೆ ಕಾಣಸಿಗುವುದು ಡಿಜಿಟಲ್‌ ಪೇಮೆಂಟ್‌ ಆ್ಯಪ್‌ ಪೇಟಿಎಂ, ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆ ಓಲಾ, ಮತ್ತು ಒಂದೇ ವೇದಿಕೆಯಲ್ಲಿ ವಿವಿಧ ಉತ್ಪನ್ನಗಳನ್ನು ಒದಗಿಸುವ ದೇಶದ ಮೊದಲ ಆನ್‌ಲೈನ್‌ ಮಾರುಕಟ್ಟೆ ಸ್ನ್ಯಾಪ್‌ಡೀಲ್‌, ಅರ್ಬನ್‌ ಲ್ಯಾಡರ್‌, ಕಾರ್‌ದೇಖೊ, ಪೇಟಿಎಂ, ಕ್ಯಾಶ್‌ಕರೊ, ಅಬ್ರಾ, ಅರ್ಬನ್‌ ಕ್ಲಾಪ್‌, ಇನ್ಫಿನೈಟ್‌ ಅನಾಲಿಟಿಕ್ಸ್‌, ಟ್ರಾಕ್ಸಿನ್‌, ಕ್ರೆಯಾನ್‌ ಡಾಟಾ, ಯುವರ್‌ ಸ್ಟೋರಿ, ಶವೋಮಿ, ಸಬ್‌ಸೆಬೋಲೊ ಇತ್ಯಾದಿ ಹಲವು ಸ್ಟಾರ್ಟ್‌ಅಪ್‌ಗ್ಳಲ್ಲಿ ರತನ್‌ ಟಾಟಾ ಬಂಡವಾಳ ಹೂಡಿದ್ದಾರೆ.

ಹೆಮ್ಮೆಯ ಉದಾರ ರತ್ನ
ಸಮಾಜ ಸೇವೆ, ಕರುಣೆ ಮತ್ತು ಉದಾರತೆ ಇವು ರತನ್‌ ಟಾಟಾ ಅವರಲ್ಲಿದ್ದ ಮೂರು ಮಹಾನ್‌ ಆದರ್ಶ ಗುಣಗಳು. ಮೊದಲೇ ಹೇಳಿದಂತೆ ರತನ್‌ ಟಾಟಾ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಎಂದೋ ದಾಖ ಲಿಸಬಹುದಿತ್ತು. ಆದರೆ ತಾನೊಬ್ಬ ಆಗರ್ಭ ಶ್ರೀಮಂತನಾಗಿ ಹೊರಹೊಮ್ಮುವುದು ಎಂದಿಗೂ ಅವರ ಗುರಿಯಾಗಲಿಲ್ಲ. ಬದಲಿಗೆ ತಮ್ಮ ದುಡಿಮೆಯ ಹೆಚ್ಚಿನ ಪಾಲನ್ನು ಸಮಾಜಕ್ಕಾಗಿ ನೀಡುವುದು ಅವರ ಮನದಾಸೆಯಾಗಿತ್ತು.

ತಮ್ಮಲ್ಲಿದ್ದ ಈ ಉದಾರತೆಯ ಗುಣದಿಂದಾಗಿಯೇ ರತನ್‌ ಟಾಟಾ ಅವರು ಎಂದಿಗೂ ಒಬ್ಬ ಸಾದಾ ಉದ್ಯಮಿಯಂತೆ ವರ್ತಿಸಲೇ ಇಲ್ಲ. ಟಾಟಾ ಸಮೂ ಹದ ಹೊಣೆಯಿಂದ ನಿವೃತ್ತರಾದ ಬಳಿಕ ಟಾಟಾ ಟ್ರಸ್ಟ್‌ ಹೊಣೆ ಹೊತ್ತ ರತನ್‌ ಟಾಟಾ, ತಮ್ಮ ದುಡಿ ಮೆಯ ಶೇ.60ರಷ್ಟು ಹಣವನ್ನು ಸಮಾಜಕ್ಕಾಗಿ ನೀಡಿ ದ್ದಾರೆ. 2019-20ರಲ್ಲಿ ದೇಶ ಕೊರೊನಾ ವೈರಸ್‌ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದಾಗ ಟಾಟಾ ಸಮೂಹ 1,000 ಕೋಟಿ ರೂ. ದೇಣಿಗೆ ನೀಡಿದರೆ, ರತನ್‌ ಟಾಟಾ ವೈಯಕ್ತಿಕವಾಗಿ 500 ಕೋಟಿ ರೂ. ನೀಡಿದ್ದು ಅವರೆಷ್ಟು ಉದಾರಿ ಎಂಬುದಕ್ಕೆ ಸಾಕ್ಷಿ.

ಸಮಾಜದ ಪ್ರತೀ ಸಂಕಷ್ಟಕ್ಕೂ ಸ್ಪಂದಿಸಿರುವ ರತನ್‌, ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ, ಬಡವರ ಜೀವನ ಮಟ್ಟ ಸುಧಾರಣೆ, ನೀರಿನ ಯೋಜನೆ, ಡಿಜಿಟಲೀಕರಣ, ಪ್ರಾಕೃತಿಕ ವಿಕೋಪದ ವೇಳೆ ನೆರವು, ಕೌಶಲಾಭಿವೃದ್ಧಿ, ಸಾಮಾಜಿಕ ನ್ಯಾಯ, ನವೋದ್ಯಮ ಸೇರಿ ಹಲವು ಸಂದರ್ಭ, ಪರಿಸ್ಥಿತಿ ಮತ್ತು ಅಗತ್ಯ ಸಂದರ್ಭಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ.

ಆರೋಗ್ಯ ಸೇವೆಗೂ ಸೈ
ರತನ್‌ ಟಾಟಾ ಅವರು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೊಂದಿದ್ದ ಕಾಳಜಿಗೆ ಟಾಟಾ ಟ್ರಸ್ಟ್‌ ಹಾಗೂ ಟಾಟಾ ಮೆಮೋರಿಯಲ್‌ ಆಸ್ಪತ್ರೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಸಿಗಬೇಕು ಎಂದು ಆಶಿಸಿದ ರತನ್‌, ಕ್ಯಾನ್ಸರ್‌ ರೋಗಿಗಳ ನೆರವಿಗಾಗಿ ಟಾಟಾ ಟ್ರಸ್ಟ್‌ ಮೂಲಕ 1,000 ಕೋಟಿ ರೂ. ನೀಡಿದ್ದರು. ಇನ್ನೊಂದೆಡೆ ಟಾಟಾ ಮೊಮೋರಿಯಲ್‌ ಆಸ್ಪತ್ರೆಗೆ ಹೋಗುವ ಬಡ ರೋಗಿಗಳಿಗೆ ಬಹುತೇಕ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗುತ್ತದೆ.

ವಿಶ್ವದಲ್ಲೇ ಅಪರೂಪದ ಕೊಡುಗೈ ದಾನಿ
ಸಮಾಜವು ಇತರ ಉದ್ಯಮಿಗಳನ್ನು ನೋಡುವ ಬಗೆಗೂ, ರತನ್‌ ಟಾಟಾ ಅವರನ್ನು ನೋಡುವ ಬಗೆಗೂ ಅಜಗಜಾಂತರ ವ್ಯತ್ಯಾಸವಿದೆ. ರತನ್‌ ಲಾಭಕ್ಕೆ ಆಸೆಪಡುವ ಒಬ್ಬ ಉದ್ಯಮಿಯಾಗಿ ಎಂದೂ ಕಾಣಿಸಲೇ ಇಲ್ಲ. ಹೀಗಾಗಿಯೇ ಜಗತ್ತಿನ ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದರೂ ಶ್ರೀಮಂತ ಉದ್ಯಮಿ ಎಂಬ ಹೆಸರು ಅವರ ಹಿಂದೆ ಬರಲಿಲ್ಲ. ಅವರ ಬಳಿಯಿದ್ದ ಒಟ್ಟು ಆಸ್ತಿ ಮೌಲ್ಯ ಸುಮಾರು 7,500 ಕೋಟಿ ರೂ. ಇರಬಹುದು. ಆದರೆ ಇದಕ್ಕೂ ಹತ್ತುಪಟ್ಟು ಹಣವನ್ನು ಅವರು ಸಮಾಜಕ್ಕೆ ನೀಡಿದ್ದಾರೆ. ತಮ್ಮ ಬಳಿಯಿದ್ದ ಒಟ್ಟು ಷೇರುಗಳಲ್ಲಿ ಶೇ.60 ಷೇರುಗಳನ್ನು ಚಾರಿಟೆಬಲ್‌ ಟ್ರಸ್ಟ್‌ಗೆ ನೀಡಿದ ಏಕೈಕ ಉದ್ಯಮಿ ಎಂದರೆ ರತನ್‌ ಟಾಟಾ ಮಾತ್ರ. ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಿದ್ದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಆತ ಮಾಡಿದ ಉತ್ತಮ ಕೆಲಸಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಆತನ ಹೆಸರನ್ನು ಅಜರಾಮರವಾಗಿಸುತ್ತವೆ. ಅಂತಹ ಅಜರಾಮರ ವ್ಯಕ್ತಿಯಾಗಿ ರತನ್‌ ಟಾಟಾ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.

ಮನ ಮುಟ್ಟುವ ರತನ್‌ ಟಾಟಾ ಅಣಿ ಮುತ್ತುಗಳು
ಸರಿಯಾದ ನಿರ್ಧಾರ ಕೈಗೊಳ್ಳುವುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಮೊದಲು ನಿರ್ಧಾರ ಕೈಗೊಳ್ಳುತ್ತೇನೆ, ಬಳಿಕ ಅವುಗಳನ್ನು ಸರಿಯಾದ ನಿರ್ಧಾರವಾಗಿಸುತ್ತೇನೆ.

ಮತ್ತೂಮ್ಮೆ ಮಾಡಬೇಕು ಎಂದೆನಿಸುವ ಕೆಲಸಗಳು ನನ್ನ ಜೀವನದಲ್ಲಿ ಸಾಕಷ್ಟಿವೆ. ಆ ಕೆಲಸವನ್ನು ನಾನೀಗ ಹಿಂದಿಗಿಂತ ಭಿನ್ನವಾಗಿ ಮಾಡಬಲ್ಲೆ. ಆದರೆ ಹಿಂದಿರುಗಿ ನೋಡಲು ಮತ್ತು ನಾನು ಏನೆಲ್ಲ ಮಾಡಬಹುದಿತ್ತು ಎಂದು ಯೋಚಿಸಲು ನನಗೆ ಇಷ್ಟವಿಲ್ಲ.

ಜನ ನಿಮ್ಮತ್ತ ಎಸೆಯುವ ಕಲ್ಲುಗಳನ್ನೆಲ್ಲ ಸಂಗ್ರಹಿಸಿ. ಮುಂದೊಂದು ದಿನ ನಿಮ್ಮ ಸಾಧನೆಯ ಸ್ಮಾರಕ ನಿರ್ಮಿಸಲು ಅವುಗಳನ್ನು ಬಳಸಿಕೊಳ್ಳಿ.

ನೀವು ವೇಗವಾಗಿ ನಡೆಯಬೇಕು ಅಂದುಕೊಂಡಿದ್ದರೆ ಒಬ್ಬರೇ ನಡೆದುಕೊಂಡು ಹೋಗಿ. ಆದರೆ ಬಹು ದೂರ ನಡೆದು ಹೋಗಬೇಕೆಂದು ಬಯಸಿದರೆ ಇತರರನ್ನೂ ಜತೆಗೆ ಕರೆದೊಯ್ಯಿರಿ.

ಬೇರೆಯವರನ್ನು ನಕಲು ಮಾಡುವ ವ್ಯಕ್ತಿ ಸ್ವಲ್ಪ ಸಮಯದವರೆಗೆ ಸಫಲನಾಗಬಲ್ಲ. ಆದರೆ ಆತ ಜೀವನದಲ್ಲಿ ತುಂಬಾ ದೂರ ಯಶಸ್ವಿಯಾಗಿ ಸಾಗಲಾರ.

ಕಬ್ಬಿಣವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಅದರ ತುಕ್ಕೇ ಅದನ್ನು ನಾಶ ಮಾಡುತ್ತದೆ. ಹಾಗೇ ವ್ಯಕ್ತಿಯನ್ನು ಯಾರೂ ನಾಶ ಮಾಡಲಾಗದು, ಬದಲಿಗೆ ಆತನ ಮನಸ್ಥಿತಿಯೇ ಆತನ ವಿನಾಶಕ್ಕೆ ಕಾರಣವಾಗುತ್ತದೆ.

ನಾವು ಮುಂದೆ ಸಾಗುತ್ತ ಇರಬೇಕೆಂದರೆ ಜೀವನದಲ್ಲಿ ಏರಿಳಿತಗಳು ಅತೀ ಮುಖ್ಯ.

ಅತ್ಯಂತ ಯಶಸ್ವಿ ವ್ಯಕ್ತಿಗಳನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಅವರ ಆ ಯಶಸ್ಸು ನಿಷ್ಕರುಣೆಯ ಮಾರ್ಗದ ಮೂಲಕ ಬಂದಿದ್ದರೆ ಅಂತಹ ವ್ಯಕ್ತಿಯನ್ನು ನಾನು ಪ್ರಶಂಸಿಸಬಹುದು ಆದರೆ ಗೌರವಿಸುವುದಿಲ್ಲ.

ನಂ.1 ಆಗುವುದು ಸುಲಭ. ಆದರೆ ನಂ.1 ಆಗಿಯೇ ಉಳಿಯುವುದು ಕಷ್ಟ. ಕಾರಣ, ನಂ.1 ಆಗಿ ಉಳಿಯುವ ದೃಷ್ಟಿಕೋನದೊಂದಿಗೇ ನಾವು ಹೋರಾಡಬೇಕಾಗುತ್ತದೆೆ.

ನಾವೆಲ್ಲರೂ ಸಮಾನವಾದ ಪ್ರತಿಭೆಯನ್ನು ಹೊಂದಿಲ್ಲ. ಆದರೆ ನಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮವಾಗಿಸಿಕೊಳ್ಳಲು ಎಲ್ಲರೂ ಸಮಾನ ಅವಕಾಶ ಹೊಂದಿದ್ದೇವೆ.

ರತನ್‌ ಟಾಟಾ ದೂರದೃಷ್ಟಿಯುಳ್ಳ ಉದ್ಯಮಿ­ಯಾಗಿದ್ದರು. ಭಾರತದ ಪ್ರತಿಷ್ಠಿತ ವ್ಯಾಪಾರ ಸಂಸ್ಥೆ ಒಂದಕ್ಕೆ ಸ್ಥಿರ ನಾಯಕತ್ವ ನೀಡಿದರು. ತಮ್ಮ ಸಂಸ್ಥೆಯನ್ನು ಮೀರಿ ಸಾಗಿದ ಅವರ ಕೊಡು­ಗೆಗಳಿಂದ ಮತ್ತು ನಮ್ರತೆ, ದಯೆ ಮತ್ತು ಸಮಾಜಕ್ಕೆ ಒಳಿತಾಗ­ಬೇಕೆಂಬ ಬದ್ಧತೆಯ ಮುಖಾಂತರ ಜನರ ಪ್ರೀತಿಗೆ ಪಾತ್ರರಾಗಿದ್ದರು.
ನರೇಂದ್ರ ಮೋದಿ, ಪ್ರಧಾನಿ

ರತನ್‌ ಟಾಟಾ ಅವರ ನಿಧನದಿಂದ ನಾವು ಭಾರತದ ಅಮೂಲ್ಯ ಪುತ್ರನನ್ನು ಕಳೆದುಕೊಂಡಿದ್ದೇವೆ. ಲೋಕೋಪಕಾರಿ ಟಾಟಾ ಸಮಗ್ರತೆ ಮತ್ತು ನೈತಿಕ ನಾಯಕತ್ವಕ್ಕೆ ಸಮಾನಾರ್ಥಕರಾಗಿದ್ದರು. ಕುಟುಂಬಸ್ಥರಿಗೆ, ಪ್ರೀತಿಪಾತ್ರರಿಗೆ ಸಂತಾಪ ಸೂಚಿಸುತ್ತೇನೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ರತನ್‌ ಟಾಟಾ ದೂರದೃಷ್ಟಿಯ ವ್ಯಕ್ತಿ. ಉದ್ಯಮ ಮತ್ತು ಲೋಕೋಪಕಾರ ಎರಡೂ ಕ್ಷೇತ್ರಗಳಲ್ಲೂ ಶಾಶ್ವತ ಛಾಪು ಮೂಡಿಸಿದ್ದರು. ಅವರ ನಿಧನ ಬಹಳ ನೋವು ತಂದಿದೆ.
ರಾಹುಲ್‌ ಗಾಂಧಿ, ಲೋಕಸಭೆ ವಿಪಕ್ಷ ನಾಯಕ

ರತನ್‌ ಟಾಟಾರನ್ನು ಕೊನೆಯ ಬಾರಿ ಗೂಗಲ್‌ನಲ್ಲೇ ಭೇಟಿಯಾಗಿ ವೇಮೋ ಪ್ರಗತಿ ಬಗ್ಗೆ ಚರ್ಚಿಸಿದೆವು. ಭಾರತವನ್ನು ಸುಧಾರಣೆಗೊಳಿಸಲು ಅವರಿಗೆ ಹಪಾಹಪಿ ಇತ್ತು. ಅವರು ಉದ್ಯಮ ಹಾಗೂ ಲೋಕೋಪಕಾರಿ ಪರಂಪರೆಯನ್ನು ಅದ್ಭುತವಾಗಿ ನಿರ್ವಹಿಸಿದರು. ಅವರ ಪ್ರೀತಿಪಾತ್ರರಿಗೆ ಸಂತಾಪಗಳು
ಸುಂದರ್‌ ಪಿಚೈ, ಗೂಗಲ್‌ ಸಿಇಒ

ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ, ಕೋಟ್ಯಂತರ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಯುವಪೀಳಿಗೆಗೆ ಮಾದರಿಯಾಗಿದ್ದ ರತನ್‌ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ. ಹಿರಿಯ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ.
ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ವ್ಯಾವಹಾರಿಕ ಜಾಣ್ಮೆಯನ್ನು ಮೀರಿ ರತನ್‌ ಟಾಟಾರವರು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದ ಒಬ್ಬ ದೇಶಪ್ರೇಮಿ ಹಾಗೂ ಸಾಮಾಜಿಕ ಪ್ರಜ್ಞೆಯುಳ್ಳ ನಾಯಕರಾಗಿದ್ದರು.
ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ರಾಷ್ಟ್ರದ ಅಭಿವೃದ್ಧಿಗಾಗಿ ನಿಸ್ವಾರ್ಥ ಮನೋಭಾವದಿಂದ ಜೀವನವನ್ನು ಮುಡಿಪಾಗಿಟ್ಟು, ಭಾರತೀಯರ ಒಳಿತಿಗಾಗಿ ಶ್ರಮಿಸಿದ್ದರು. ಅವರ ಬದ್ಧತೆ ಮತ್ತು ಉತ್ಸಾಹ ನನ್ನನ್ನು ಚಕಿತಗೊಳಿಸುತ್ತಿತ್ತು.
ಅಮಿತ್‌ ಶಾ, ಕೇಂದ್ರ ಸಚಿವ

ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್‌ ಟಾಟಾ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್‌ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ.
ಸಿದ್ದರಾಮಯ್ಯ, ಸಿಎಂ

ಗಡಿಯಾರವು ತಿರುಗುವುದನ್ನು ಇಂದು ನಿಲ್ಲಿಸಿದೆ. ರತನ್‌ ಟಾಟಾ ಸಮಗ್ರತೆ, ನೈತಿಕ ನಾಯಕತ್ವ ಮತ್ತು ಲೋಕೋಪಕಾರದ ದೀಪವಾಗಿದ್ದರು. ಉದ್ಯಮ ಜಗತ್ತು ಮತ್ತು ಅದರಾಚೆಗೂ ಅವರು ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿದ್ದಾರೆ. ಅವರು ನಮ್ಮ ನೆನಪುಗಳಲ್ಲಿ ಎಂದೆಂದಿಗೂ ಎತ್ತರದ ಸ್ಥಾನದಲ್ಲಿ ಇರುತ್ತಾರೆ.
ಹರ್ಷ ಗೋಯಂಕಾ, ಉದ್ಯಮಿ

ಭಾರತದ ಆರ್ಥಿಕತೆಯು ಐತಿಹಾಸಿಕ ಮುನ್ನಡೆಯ ಹೊಸ್ತಿಲಲ್ಲಿ ನಿಂತಿರುವ ಈ ಸಂದರ್ಭದಲ್ಲಿ ರತನ್‌ ಟಾಟಾರ ಮಾರ್ಗದರ್ಶನ ಅಮೂಲ್ಯವಾಗಿತ್ತು. ವಿದಾಯಗಳು ಮಿ.ಟಿ., ನಿಮ್ಮನ್ನು ಮರೆಯಲಾಗುವುದಿಲ್ಲ. ಏಕೆಂದರೆ ದಂತಕಥೆಗಳಿಗೆ ಸಾವಿಲ್ಲ.
ಆನಂದ್‌ ಮಹೀಂದ್ರಾ, ಖ್ಯಾತ ಉದ್ಯಮಿ

ತಮ್ಮ ಜೀವನ ಮೌಲ್ಯಗಳಿಂದ ಉದ್ಯಮವನ್ನು ಬೆಳೆಸುವ ಜತೆಗೆ ದೇಶವನ್ನು ಬೆಳೆಸಲು ಪ್ರಯತ್ನಿಸಿದ ಅದ್ಭುತ ನಾಯಕನೊಬ್ಬನನ್ನು ಭಾರತ ಇಂದು ಕಳೆದುಕೊಂಡಿದೆ. ಅವರು ಟಾಟಾ ಪರಂಪರೆಯನ್ನು ಬೆಳೆಸುವುದರೊಂದಿಗೆ ಅದನ್ನು ಜಗತ್ತಿಗೆ ಪರಿಚಯಿಸಿದರು.
ದ್ರೌಪದಿ ಮುರ್ಮು, ರಾಷ್ಟ್ರಪತಿ

ಭಾರತಕ್ಕೆ ಇದು ಅತ್ಯಂತ ದುಃಖದ ದಿನ. ನನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಭಾವ ನನಗೆ ಕಾಡುತ್ತಿದೆ. ಅವರೊಂದಿಗೆ ನಾನು ನಡೆಸಿದ ಸಂವಹನಗಳು ನನ್ನಲ್ಲಿ ಸ್ಫೂರ್ತಿ ಮತ್ತು ಶಕ್ತಿ ತುಂಬಿದ್ದವು. ಟಾಟಾರವರು ಭಾರತವನ್ನು ಜಗತ್ತಿಗೆ ತಲುಪಿಸಿದರು. ಮತ್ತು ವಿಶ್ವದ ಅತ್ಯುತ್ತಮ ವಿಚಾರಗಳನ್ನು ಭಾರತಕ್ಕೆ ಪರಿಚಯಿಸಿದರು.
ಮುಕೇಶ್‌ ಅಂಬಾನಿ, ಉದ್ಯಮಿ

ರತನ್‌ ಟಾಟಾ ಅವರು ಭಾರತದ ಉದ್ಯಮ ಕ್ಷೇತ್ರದ ದಿಗ್ಗಜರು. ದೇಶದ ಆರ್ಥಿಕತೆ, ವ್ಯಾಪಾರ ಮತ್ತು ಉದ್ಯಮಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರೀತಿ ಪಾತ್ರರಿಗೆ ಸಂತಾಪ ಸೂಚಿಸುವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ
ರಾಜ್‌ನಾಥ್‌ ಸಿಂಗ್‌, ಕೇಂದ್ರ ಸಚಿವ

ಆಧುನಿಕ ಭಾರತದ ಹಾದಿಯನ್ನು ಪುನರ್‌ ವ್ಯಾಖ್ಯಾನಿಸಿದ ದೂರದೃಷ್ಟಿತ್ವದ ವ್ಯಕ್ತಿಯನ್ನು ಭಾರತ ಕಳೆದುಕೊಂಡಿದೆ. ಅವರು ಕೇವಲ ಉದ್ಯಮಿಯಾಗಿರದೇ ಸಮಗ್ರತೆ, ಸಹಾನುಭೂತಿಯ ಮೂಲಕ ಭಾರತದ ಸ್ಫೂರ್ತಿಯನ್ನು ಸಾಕಾರಗೊಳಿಸಿದವರು. ಅವರಂತಹ ದಂತಕತೆಗಳು ಎಂದಿಗೂ ಮರೆಯಾಗುವುದಿಲ್ಲ.
ಗೌತಮ್‌ ಅದಾನಿ, ಉದ್ಯಮಿ , ಅದಾನಿ ಗ್ರೂಪ್‌

ರತನ್‌ ಟಾಟಾ ಕುರಿತ 10 ಸತ್ಯಗಳು

  • ಹೋರಾಟದಿಂದ ಕೂಡಿದ ಬಾಲ್ಯ
    10 ವರ್ಷದವರಿದ್ದಾಗಲೇ ತಂದೆ ತಾಯಿ ಬೇರೆಯಾಗಿದ್ದರು. ಬಳಿಕ ಅವರು ಹಾಗೂ ಸಹೋದರ ಜಿಮ್ಮಿಯನ್ನು ಅಜ್ಜಿ ಹಾಗೂ ರತನ್‌ಜಿ ಟಾಟಾ ಅವರ ಪತ್ನಿ ನವಾಜ್‌ಬಾಯಿ ಟಾಟಾ ಅವರು ದತ್ತು ತೆಗೆದುಕೊಂಡಿದ್ದರು.
  • ಅಪ್ರತಿಮ ವಿದ್ಯಾರ್ಥಿ
    ಕಾರ್ನೆಲ್‌ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್‌ ಪದವಿ, ಬಳಿಕ ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ನಿಂದ ಅಡ್ವಾನ್ಸ್‌ಡ್‌ ಮ್ಯಾನೇಜ್‌ಮೆಂಟ್‌ ಪ್ರೋಗ್ರಾಮ್‌ ಪೂರೈಸಿದರು. ಟಾಟಾ ಸಮೂಹದ ಮುಖ್ಯಸ್ಥರ ಪೈಕಿ ಹೆಚ್ಚು ಓದಿರುವವರು ಇವರೇ.
  • ವಿನಮ್ರ ಹಾಗೂ ಸರಳ ಸ್ವಭಾವ
    ಓದು ಮುಗಿಸುತ್ತಿದ್ದಂತೆ ಐಬಿಎಂ ಸಂಸ್ಥೆ ತಮ್ಮ ಮುಂದಿರಿಸಿದ ದೊಡ್ಡ ಸಂಬಳದ ನೌಕರಿಯನ್ನು ವಿನಯದಿಂದ ತಿರಸ್ಕರಿಸಿ, ಟಾಟಾ ಸ್ಟೀಲ್‌ನ ಮಳಿಗೆಯಲ್ಲಿ ಸಾಮಾನ್ಯ ಕೆಲಸಗಾರನಾಗಿ ಸೇರಿಕೊಂಡು, ವ್ಯವಹಾರ ಕಲಿಕೆ.
  • ಟಾಟಾ ಯಶಸ್ಸಿನ ರೂವಾರಿ
    ಇವರ ಆಡಳಿತದಲ್ಲಾದ ಜಾಗ್ವಾರ್‌, ಲ್ಯಾಂಡ್‌ ರೋವರ್‌, ಕೋರಸ್‌, ಟೆಟಿÉ ರೀತಿಯ ವಿದೇಶಿ ದಿಗ್ಗಜ ಸಂಸ್ಥೆಗಳ ಸ್ವಾಧೀನದಿಂದಾಗಿ ಟಾಟಾ ಸಮೂಹದ ಕೀರ್ತಿ ಜಾಗತಿಕ ಮಟ್ಟದಲ್ಲಿ ಉತ್ತುಂಗ ತಲುಪಿತು.
  • ಕಾರುಗಳ ಅಪ್ರತಿಮ ಪ್ರೇಮಿ
    05ಕನಸು ಮನಸಲ್ಲೂ ಕಾರುಗಳನ್ನೇ ಧ್ಯಾನಿಸುವ ವ್ಯಕ್ತಿತ್ವ. ಫೆರಾರಿಯಲ್ಲಿ ಲಾಂಗ್‌ ಡ್ರೆçವ್‌ ಅತೀ ಹೆಚ್ಚು ಖುಷಿ ಕೊಡುತ್ತಿದ್ದ ವಿಷಯ. ಒಟ್ಟು 17 ಕಾರುಗಳನ್ನು ಹೊಂದಿದ್ದರು ಟಾಟಾ.
  • ಆದಾಯ, ಮಾರ್ಗದರ್ಶನ, ಸಲಹೆ
    ಇವರ ನೇತೃತ್ವದಲ್ಲಿ ಸಂಸ್ಥೆ ಆದಾಯ 40 ಪಟ್ಟು, ಲಾಭಾಂಶ 50 ಪಟ್ಟು ವೃದ್ಧಿಯಾಯಿತು! ಮಿತ್ಸುಬಿಷಿ, ಬೂಸ್‌ ಅಲ್ಲೆನ್‌, ಹ್ಯಾಮಿಲ್ಟನ್‌, ಎಐಜಿ ಮತ್ತು ಜೆಪಿ ಮಾರ್ಗನ್‌ ಕಂಪನಿಗಳ ಸಲಹಾ ಮಂಡಳಿಗಳಲ್ಲೂ ರತನ್‌ ಇದ್ದರು.
  • ಕೌಶಲಯುತ ಪೈಲಟ್‌
    ರತನ್‌ ಟಾಟಾ ಅವರು ಒಬ್ಬ ಕೌಶಲಯುತ ಪೈಲಟ್‌ ಕೂಡ ಆಗಿದ್ದರು. 2007ರಲ್ಲಿ ಎಫ್-16 ಫಾಲ್ಕನ್‌ ವಿಮಾನದ ಪೈಲಟ್‌ ಆಗಿ ಕಾರ್ಯ
    ನಿರ್ವಹಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು.
  • ನಾಲ್ಕು ಬಾರಿ ವಿವಾಹದ ಸನಿಹ
    ರತನ್‌ ಟಾಟಾ ಅವಿವಾಹಿತರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರು ನಾಲ್ಕು ಬಾರಿ ಹಸೆಮಣೆ ಮೇಲೆ ಕೂರುವ ಹಂತದವರೆಗೂ ಹೋಗಿ ಬಂದಿದ್ದರಂತೆ. ಮದುವೆ ಆಗದಿರಲು ಅದಾವುದೋ ಅಗೋಚರ ಭಯ ಕಾರಣವಂತೆ.
  • ಶ್ರೀಮಂತ ಪರೋಪಕಾರಿ
    ತಮ್ಮ ದುಡಿಮೆಯ ಬಹುಪಾಲನ್ನು ಸಮಾಜಕ್ಕೆ ನೀಡಿರುವ ರತನ್‌ ಅವರು ವಿವಿಧ ಟ್ರಸ್ಟ್‌, ಪ್ರತಿಷ್ಠಾನಗಳಲ್ಲಿ ಹೊಂದಿರುವ ಪಾಲು ಲೆಕ್ಕ ಹಾಕಿದರೆ ಅಂದಾಜು 72 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಾಗುತ್ತದೆ!
  • ನಾಯಿಗಳೆಂದರೆ ಪಂಚಪ್ರಾಣ
    ರತನ್‌ಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಟಿಟೋ, ಮ್ಯಾಕ್ಸಿಮಸ್‌ ಅವರ 2 ಸಾಕು ನಾಯಿಗಳು. ಒಂದು ಬಾರಿ ತಮ್ಮ ಒಂದು ನಾಯಿ ಅನಾರೋಗ್ಯಕ್ಕೆ ತುತ್ತಾಗಿದೆ ಎಂಬ ಕಾರಣಕ್ಕಾಗಿ ಬಕಿಂಗ್‌ಹ್ಯಾಂ ಅರಮನೆಯ ಆಹ್ವಾನವನ್ನೇ ತಿರಸ್ಕರಿಸಿದ್ದರು.

ರತನ್‌ ಟಾಟಾ ನಡೆದು ಬಂದ ಹಾದಿ

  • 1961- ಜಮ್ಶೆಡ್‌ಪುರದ ಟಾಟಾ ಸ್ಟೀಲ್‌ ಅಂಗಡಿಯಲ್ಲಿ ಸಾಮಾನ್ಯ ಕೆಲಸಗಾರರನಾಗಿ ವೃತ್ತಿ ಜೀವನ ಆರಂಭ
  • 1971- ನ್ಯಾಷನಲ್‌ ರೇಡಿಯೋ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ (ನೆಲ್ಕೊ) ನಿರ್ದೇಶಕರಾಗಿ ಸ್ವತಂತ್ರ ಜವಾಬ್ದಾರಿ
  • 1977- ಅದಾಗಲೇ ಅವನತಿಯತ್ತ ಸಾಗಿದ್ದ ಟಾಟಾ ಮಿಲ್ಸ್‌ ಜವಾಬ್ದಾರಿ. 2002ರಲ್ಲಿ ಮಿಲ್‌ಗ‌ಳಿಗೆ ಬೀಗ
  • 1981- ಟಾಟಾ ಇಂಡಸ್ಟ್ರೀಸ್‌ ಮತ್ತು ಸಮೂಹದ ಇತರ ಹೋಲ್ಡಿಂಗ್‌ ಕಂಪೆನಿಗಳ ಮುಖ್ಯಸ್ಥರಾಗಿ ಆಯ್ಕೆ
  • 1991- ಟಾಟಾ ಸನ್ಸ್‌ (ಟಾಟಾ ಸಮೂಹ) ಸಾಮ್ರಾಜ್ಯದ ಮುಖ್ಯಸ್ಥರಾಗಿ ಅಧಿಕಾರಕ್ಕೆ ಬಂದ ರತನ್‌ ಟಾಟಾ
  • 1996- ಟಾಟಾ ಟೆಲಿಸರ್ವಿಸಸ್‌ (ಟಿಟಿಎಸ್‌ಎಲ್‌) ಉಗಮ. ಟೆಲಿಕಾಂ ಕ್ಷೇತ್ರದಲ್ಲಿ ಹೆಜ್ಜೆ ಇರಿಸಿದ ಟಾಟಾ ಸಮೂಹ
  • 1997- ಸ್ಥಳೀಯ ಮಟ್ಟದ ವಿಮಾನಯಾನ ಸೇವೆ ಆರಂಭಿಸುವ ರತನ್‌ ಟಾಟಾ ಪ್ರಸ್ತಾವ ನಿರಾಕರಿಸಿದ ಸರಕಾರ
  • 1998- ಟಾಟಾ ಮೋಟರ್ನ ಮೊಟ್ಟ ಮೊದಲ ಪ್ಯಾಸೆಂಜರ್‌ ಕಾರು ಟಾಟಾ ಇಂಡಿಕಾ (ಆಗ ನಂ.1) ಮಾರುಕಟ್ಟೆಗೆ
  • 2008- ಜಗತ್ತಿನ ಅತೀ ಕಡಿಮೆ ಬೆಲೆಯ ಮತ್ತು ರತನ್‌ ಟಾಟಾ ಅವರ ಕನಸಿನ ಟಾಟಾ ನ್ಯಾನೊ ಕಾರು ಮಾರುಕಟ್ಟೆಗೆ
  • 2012- 75ನೇ ವಯಸ್ಸಿನಲ್ಲಿ ಸಮೂಹದ ಮುಖ್ಯಸ್ಥರ ಹುದ್ದೆಯಿಂದ ಕೆಳಗಿಳಿದ ರತನ್‌ ಟಾಟಾ

ಟಾಪ್ ನ್ಯೂಸ್

1-dsdsadasd

Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

1-reee

Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

1-reess

NDA ಮೈತ್ರಿಕೂಟಕ್ಕೆ ನೀಡಿದ ಬೆಂಬಲ ಹಿಂಪಡೆಯಿರಿ: ನಿತೀಶ್ ಗೆ ಅಖಿಲೇಶ್ ಒತ್ತಾಯ

16-mysore

Mysore: ನಾಳೆ ಅರಮನೆ ನಗರಿಯಲ್ಲಿ ಐತಿಹಾಸಿಕ ಜಂಬೂಸವಾರಿ

15-pg

Bengaluru: ಮಾರ್ಗಸೂಚಿ ಪಾಲಿಸದ ಪಿಜಿಗಳಿಗೆ ಪಾಲಿಕೆ ಬೀಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

001

Mysore Dasara: ಕಾಣ ಬನ್ನಿ … ಬೆಳಕಿನರಮನೆ

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

17(1)

Uchila ದಸರಾ: ಪಾರ್ಕಿಂಗ್‌, ಟ್ರಾಫಿಕ್‌ ವ್ಯವಸ್ಥೆ ಸಿದ್ಧತೆ ಪೂರ್ಣ

1-dsdsadasd

Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

1-reee

Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.