ಶೀಘ್ರ ಕನ್ನಡ ಕಸ್ತೂರಿ ತಂತ್ರಾಂಶ ಲೋಕಾರ್ಪಣೆ: ಡಾ| ಬಿಳಿಮಲೆ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶ
Team Udayavani, Oct 23, 2024, 12:54 AM IST
ಬೆಂಗಳೂರು: ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನ ವಾದ ಮಾಡುವ ಸಮರ್ಥ ಕನ್ನಡ ಕಸ್ತೂರಿ ತಂತ್ರಾಂಶವನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಈ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಉದ್ದೇಶಿತ ತಂತ್ರಾಂಶವು ಇಂದಿನ ಖಾಸಗಿ ತಂತ್ರಾಂಶಗಳಿಗಿಂತ ಅತಿ ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಸುಮಾರು 2.3 ಕೋಟಿ ಆಂಗ್ಲ ಮತ್ತು ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಂಡಿದೆ.
ಈ ತಂತ್ರಾಂಶವು ಲೋಕಾರ್ಪಣೆಗೊಂಡಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದ ಬಹುದೊಡ್ಡ ಕೊಡುಗೆ ನೀಡುವುದರ ಜತೆಗೆ ಖಾಸಗಿ ವಲಯದ ತಂತ್ರಾಂಶಕ್ಕೆ ತೀವ್ರ ಪೈಪೋಟಿ ನೀಡಲಿದೆ ಎಂದಿದ್ದಾರೆ.
200ಕ್ಕೂ ಹೆಚ್ಚು ಪದಕೋಶ/ ನಿಘಂಟುಗಳನ್ನು ಬಳಸಿ ಅತ್ಯಾಧುನಿಕ ಪದಕಣಜ ತಂತ್ರಾಂಶವನ್ನು ರಾಜ್ಯ ಸರಕಾರವು ಸಾರ್ವಜನಿಕ ಬಳಕೆಗೆ ನೀಡಿದ್ದು, ಸುಮಾರು 2.20 ಕ್ಷ ಕನ್ನಡ ಪದಗಳು ಹಾಗೂ 1.20 ಲಕ್ಷ ಆಂಗ್ಲ ಮೂಲ ಪದಗಳು ಈ ತಂತ್ರಾಂಶದಲ್ಲಿ ಲಭ್ಯವಿದೆ. ಪದಕಣಜ ಮೊಬೈಲ್ ತಂತ್ರಾಂಶವನ್ನು ಸಹ ಬಳಕೆಗೆ ನೀಡಲಾಗಿದೆ ಎಂದರು.
ಇ-ಕಲಿಕಾ ಕನ್ನಡ ಪೋರ್ಟಲ್
ಜಗತ್ತಿನ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ, ಕನ್ನಡ ಕಲಿಯಲು ಉತ್ಸಾಹ ಇರುವವರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಉದ್ದೇಶದಿಂದ ಸರಕಾರವು ಇ-ಕಲಿಕಾ ಕನ್ನಡ ಪೊರ್ಟಲ್ ರೂಪಿಸಿದ್ದು, ಇದು ಪ್ರಾಧಿಕಾರದ ಆಶಯಕ್ಕೆ ಪೂರಕವಾಗಿದೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯುವಲ್ಲಿ ಇ-ಕಲಿಕಾ ಕನ್ನಡ ಪೋಟರ್ಲ್ ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಡಾ| ಬಿಳಿಮಲೆ ತಿಳಿಸಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಸಂತೋಷ ಹಾನಗಲ್ಲ, ಇ-ಕನ್ನಡ ಯೋಜನೆಯ ಯೋಜನ ನಿರ್ದೇಶಕಿ ನಂದಿನಿ ಪಿ.ಎಂ. ಹಾಗೂ ಅಧಿಕಾರಿ, ಸಿಬಂದಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.