ಪುಟ್ಟ ರಾಜಕುಮಾರ ಮತ್ತು ಪ್ರಾಣಿಗಳು


Team Udayavani, Feb 16, 2017, 3:45 AM IST

lead.jpg

ಒಂದು ರಾಜ್ಯವನ್ನು ಆಳುತ್ತಿದ್ದ ದೊರೆ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ. ಅವರಿಗೆ ಕಷ್ಟ ಬಂದಾಗ ಅದರ ಪರಿಹಾರಕ್ಕೆ ಓಡೋಡಿ ಬರುತ್ತಿದ್ದ. ಅವನ ರಾಜ್ಯದಲ್ಲಿ ತುಂಬ ಮಂದಿ ರೈತರಿದ್ದರು. ಕಬ್ಬು, ಭತ್ತ, ಜೋಳ, ತರಕಾರಿ ಇನ್ನೂ ಏನೆಲ್ಲ ಬೆಳೆಗಳನ್ನು ಬೆಳೆದು ದೇಶವನ್ನು ಸಮೃದ್ಧಿಗೊಳಿಸಿದ್ದರು.

    ಒಂದು ದಿನ ದೊರೆ ಊಟಕ್ಕೆ ಕುಳಿತಾಗ ಅಡುಗೆಯವನು ಚಟ್ನಿ ಮಾತ್ರ ತಂದುಬಡಿಸಿದ. ದೊರೆಗೆ ನಾಲ್ಕಾರು ಬಗೆಯ ತರಕಾರಿಗಳಿಲ್ಲದೆ ಊಟ ಸೇರುತ್ತಿರಲಿಲ್ಲ. ಅವನು ಸಿಟ್ಟಿಗೆದ್ದ. “”ಏನಿದು? ಅರಮನೆಯಲ್ಲಿ ತರಕಾರಿಗಳಿಗೆ ಇಷ್ಟೊಂದು ದಾರಿದ್ರ್ಯ ಬಂತೇ?” ಎಂದು ಕೂಗಾಡಿದ. ಅಡುಗೆಯವನು ದೊರೆಯೆದುರಿಗೆ ಬಂದು ತಲೆ ತಗ್ಗಿಸಿ ಹೇಳಿದ “”ಕ್ಷಮಿಸಬೇಕು ದೊರೆಯೇ. ರೈತರು ತರಕಾರಿ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಚಟ್ನಿ ಮಾತ್ರ ಮಾಡಿದೆ” ಎಂದು ನಿವೇದಿಸಿದ. ದೊರೆಯ ಸಿಟ್ಟು ಹೆಚ್ಚಾಯಿತು. ರೈತರಿಗೆ ಬೇಕಾದಷ್ಟು ಪೋ›ತ್ಸಾಹ ಕೊಟ್ಟರೂ ತರಕಾರಿ ಬೆಳೆಯುತ್ತಿಲ್ಲವೆಂದರೆ ಸೋಮಾರಿತನವಲ್ಲವೆ? ಎಂದು ಯೋಚಿಸಿ ಕಡೆಗೊಮ್ಮೆ ರೈತರನ್ನು ಕರೆದು ವಿಚಾರಿಸಿದ.

        ಮನ್ನಿಸಿ ದೊರೆಗಳೆ ಬೆಳೆಯುವ ರೈತರ
        ಗೋಳನು ಕೇಳುವರಾರಿಲ್ಲ
        ಆನೆಯ ಹಾವಳಿ ಕೋತಿಯ ಕಾಟದಿ
        ಬೆಳೆಗಳು ಸಿಗುವುದೇ ಇಲ್ಲ

    ಎಂದು ರೈತರು ಒಕ್ಕೊರಲಿನಿಂದ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬೆಳೆ ನಾಶವಾಗುತ್ತಿರುವುದನ್ನು ವಿವರಿಸಿದರು. ಗೆಡ್ಡೆ ಗೆಣಸುಗಳಿಗೆ ಹಂದಿಯ ಪೀಡೆ. ಬಾಳೆಗೆ ಆನೆಗಳ ಬಾಧೆ. ತರಕಾರಿಗೆ ಕೋತಿಗಳ ಕಾಟ. ಒಟ್ಟಿನಲ್ಲಿ ಇಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ. ನಾವು ದೇಶ ಬಿಟ್ಟು ಹೋಗುತ್ತೇವೆಂದು ಅವರು ದುಃಖೀಸಿದರು.

    ದೊರೆ ರೈತರಿಗೆ ಅಭಯ ನೀಡಿದ. ಕಾಡುಪ್ರಾಣಿಗಳ ವಂಶವನ್ನೇ ನಿರ್ಮೂಲನ ಮಾಡಿ ಕೃಷಿಕರಿಗೆ ನೆಮ್ಮದಿ ತಂದುಕೊಡುವುದಾಗಿ ಧೈರ್ಯ ತುಂಬಿದ. ನಂತರ ಬೇಟೆಗಾರರನ್ನು ಕರೆದ.

        ಮಾರಿಬಲೆ ದೊಡ್ಡ ಬಲೆ
        ಈಟಿ ಬಿಲ್ಲು ಬಾಣ ಸಹಿತ
        ಕಾಳು ಬೊಳ್ಳು ನಾಯಿಗಳೊಡನೆ
        ಬನ್ನಿ ಕಾಡಿನತ್ತ

    ಎಂದು ಮೃಗ ಸಂಹಾರಕ್ಕೆ ಸಿದ್ಧಗೊಳ್ಳುವುದಕ್ಕೆ ಆಜಾnಪಿಸಿದ. ಎಲ್ಲರೂ ತಯಾರಿ ಮಾಡುತ್ತಿರುವಾಗ ಪುಟ್ಟ ರಾಜಕುಮಾರ ಘಲ್‌ ಘಲ್‌ ಕಾಲ್ಗೆಜ್ಜೆಯ ನಾದದೊಂದಿಗೆ ಅಪ್ಪನ ಬಳಿಗೆ ಬಂದ. “”ಅಪ್ಪಾಜಿ, ನಮ್ಮ ಮೃಗಾಲಯದಲ್ಲಿ ಹಸಿರಿನ ಗಿಣಿಗಳು ಎರಡು ಮಾತ್ರ ಇವೆ. ಇನ್ನೆರಡು ಗಿಣಿಗಳನ್ನು ತರಿಸಿಕೊಡಿ” ಎಂದು ಕೇಳಿದ. ದೊರೆಗೆ ಗೊತ್ತಿತ್ತು ರಾಜಕುಮಾರನಿಗೆ ಪ್ರಾಣಿಗಳು, ಪಕ್ಷಿಗಳು ಎಂದರೆ ಅತಿಶಯವಾದ ಪ್ರೀತಿ ಇತ್ತು. ದಿನವೂ ಮೃಗಾಲಯಕ್ಕೆ ಹೋಗುತ್ತಿದ್ದ. ಹತ್ತಿರದಿಂದ ಅವುಗಳನ್ನು ನೋಡಿ ಮಾತನಾಡಿಸಿ, ಆಟವಾಡಿ ಬರುತ್ತಿದ್ದ. ಅವುಗಳಿಗೆ ಆಹಾರ ಕೊಟ್ಟಿದ್ದಾರೆಯೇ, ಅವುಗಳ ಆರೋಗ್ಯ ಸರಿಯಾಗಿದೆಯೇ ಎಂಬುದನ್ನೂ ವಿಚಾರಿಸುತ್ತಿದ್ದ.

    ದೊರೆ ಮಗನನ್ನು ಎತ್ತಿಕೊಂಡು ಮುತ್ತಿಟ್ಟ. “”ಮಗೂ, ಬೇಕಾದಷ್ಟು ಗಿಣಿಗಳನ್ನು ತರುತ್ತೇನೆ ಬಿಡು. ನಾನಿವತ್ತು ಬೇಟೆಗೆ ಹೋಗಿ ಲೆಕ್ಕಲ್ಲದಷ್ಟು ಪ್ರಾಣಿಗಳನ್ನು ಕೊಲ್ಲುತ್ತೇನೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಒಂದು ಪ್ರಾಣಿಯೂ ಉಳಿಯಬಾರದು” ಎಂದು ಹೇಳಿದ.

    ಈ ಮಾತು ಕೇಳಿ ರಾಜಕುಮಾರನ ಮುಖ ಮ್ಲಾನಗೊಂಡಿತು. ಕಣ್ಣೀರು ಬಂತು. “”ಅಪ್ಪಾ, ಮೃಗಗಳನ್ನು ನಾಶ ಮಾಡಬೇಡಿ. ಅವು ಮನುಷ್ಯರಿಗೆ ತೊಂದರೆ ಕೊಡುತ್ತಿದ್ದರೆ ಅದಕ್ಕೆ ಪ್ರಬಲವಾದ ಕಾರಣವಿರಬೇಕು. ನನ್ನೊಂದಿಗೆ ಪ್ರಾಣಿಗಳು ಮಾತನಾಡುತ್ತವೆ. ನಾನು ಅವುಗಳಲ್ಲಿ ಇದರ ಕಾರಣ ಕೇಳಿ ಬರುವ ತನಕ ಬೇಟೆಗೆ ಹೋಗಬೇಡಿ” ಎಂದು ಕೋರಿದ. ಮಗನನ್ನು ತುಂಬ ಪ್ರೀತಿಸುತ್ತಿದ್ದ ದೊರೆ, “”ಆಗಲಿ, ಕೇಳಿಕೊಂಡು ಬಾ” ಎಂದು ಹೇಳಿದ.

    ರಾಜಕುಮಾರ ಮೃಗಾಲಯಕ್ಕೆ ಬಂದ. ಎಲ್ಲ ಪ್ರಾಣಿಗಳನ್ನೂ ಬಳಿಗೆ ಕರೆದ. ಆನೆ, ಮೊಲ, ಹಂದಿ, ಕೋತಿ ಎಲ್ಲ ಬಂದವು. ಅವನು ಕೇಳಿದ.

        ಗೆಳೆಯರೆ ಹೇಳಿರಿ ನಿಜವಾಗಿ
        ತಪ್ಪಲ್ಲವೆ ನಿಮ್ಮ ಕಳ್ಳತನ?
        ರೈತರು ಬೆಳೆಗೆ ನುಗ್ಗುತ ನೀವು
        ಫ‌ಸಲನು ಕದಿಯುವುದು ದುಷ್ಟತನ
        ರೈತರಿಗೇಕೆ ತೊಂದರೆ ಕೊಡುವಿರಿ
        ನ್ಯಾಯವೆ ಧರ್ಮವೆ ನಿಜ ಹೇಳಿ
        ಕಾಡಿನ ಮೃಗವು ಊರಿಗೆ ಬಂದರೆ
        ಕೊಲ್ಲದೆ ಬಿಡುವರೆ? ಜನ ಕೆರಳಿ

    ಎಂದು ರಾಜಕುಮಾರ ಹೇಳಿದಾಗ ಪ್ರಾಣಿಗಳು ಮುಖ ಚಿಕ್ಕದು ಮಾಡಿದವು. ಆಗ ಆನೆ ಹೇಳಿತು.
        ಕಾಡು ಎಂದು ನುಡಿವೆಯೇಕೆ
        ಎಲ್ಲಿ ಉಂಟು ಮರಗಳು?
        ಅಲ್ಲಿ ರಸ್ತೆ ಇಲ್ಲಿ ಮನೆ
        ಹಣವ ತರುವ ಬೆಳೆಗಳು

    “”ರಾಜಕುಮಾರ, ಕಾಡು ಎನ್ನುತ್ತೀಯಲ್ಲ? ಎಲ್ಲಿದೆಯಪ್ಪ ದಟ್ಟ ಮರಗಳ ಕಾಡುಗಳು? ಎಲ್ಲವನ್ನೂ ಕಡಿದು ಮನೆಗಳು, ರಸ್ತೆಗಳು, ರಬ್ಬರಿನಂತಹ ಹಣದ ಬೆಳೆಗಳ ತೋಟಗಳು  ತಲೆಯತ್ತಿವೆ. ನಮಗೆ ವಾಸಕ್ಕೆ ಜಾಗ ಅಲ್ಲಿದೆಯೇ, ಕುಡಿಯಲು ನೀರಿದೆಯೇ? ಸಹಜವಾಗಿ ನಮಗೆಲ್ಲ ಹಣ್ಣು, ಸೊಪ್ಪು$, ಬೀಜಗಳಂತಹ ಆಹಾರ ಕೊಡುತ್ತಿದ್ದ ಮರ ಗಿಡಗಳು ಒಂದಾದರೂ ಇದೆಯಾ ಎಂದು ನೀನು ನೋಡಿದ್ದೀಯಾ?” ಆನೆಯ ಪ್ರಶ್ನೆ ಮುಗಿಯುತ್ತಿದ್ದಂತೆಯೇ,

        ಹಾರಿ ಕುಣಿಯಲೊಂದು ಮರ
        ಇರದೆ ನಮಗೆ ಗೋಳು
        ಊರಿಗಿಳಿದು ಬರದೆ ನಾವು
        ಇರುವುದೆಲ್ಲಿ ಹೇಳು?

    ಎಂದು ಕೋತಿಗಳು ಕೇಳಿದವು. ರಾಜಕುಮಾರ ತಂದೆಯ ಬಳಿಗೆ ಹೋದ. ಪ್ರಾಣಿಗಳ ಅಹವಾಲನ್ನು ಹೇಳಿದ. ಕಾಡುಗಳು ಅಳಿದ ಮೇಲೆ ಅಲ್ಲಿರುವ ಪ್ರಾಣಿಗಳು ಆಹಾರಕ್ಕಾಗಿ, ನೀರಿಗಾಗಿ ಊರಿಗಿಳಿಯದೆ ಬೇರೆ ಏನು ದಾರಿಯಿದೆ? ಇದಕ್ಕೆ ಬೇಟೆಯೇ ಪರಿಹಾರವಲ್ಲ. ಅರಣ್ಯವನ್ನು ಅತಿಕ್ರಮಿಸಿ ನಾಶ ಮಾಡಲು ಬಿಡಬಾರದು. ಆನೆ, ಮಂಗ ಮೊದಲಾದ ಎಲ್ಲ ಪ್ರಾಣಿಗಳಿಗೂ ನಿರಂತರ ಆಹಾರ ಕೊಡುವ ಸಸ್ಯಗಳನ್ನು ಅಲ್ಲಿ ಅಭಿವೃದ್ಧಿಗೊಳಿಸಿ. ಬೇಟೆಯಾಡಿ ಜೀವರಾಶಿಯ ವಂಶವನ್ನು ಅಳಿಸದಿರಿ ಎಂದು ನಿವೇದಿಸಿದ.  

    ಪುಟ್ಟ ಬಾಯಲ್ಲಿ ದೊಡ್ಡ ಮಾತು ಕೇಳಿ ದೊರೆ ತಲೆದೂಗಿದ. ಬೇಟೆಯ ಯೋಚನೆ ಕೈಬಿಟ್ಟ. ಪ್ರಾಣಿಗಳಿಗಾಗಿ ಕಾಡುಗಳನ್ನು ಅಭಿವೃದ್ಧಿಗೊಳಿಸಿದ. ಹಲಸು, ಮಾವು, ಬಿದಿರು ಮುಂತಾಗಿ ಅವುಗಳಿಗೆ ಆಹಾರ ನೀಡುವ ಮರಗಳನ್ನು ಅಲ್ಲಿ ಹೇರಳವಾಗಿ ಬೆಳೆಸಿದ. ನೀರು ಕುಡಿಯಲು ವ್ಯವಸ್ಥೆ ಮಾಡಿದ. ಅಲ್ಲಿ ಸುಖವಾಗಿದ್ದ ಮೃಗಗಳು ಊರಿನತ್ತ ಬರಲಿಲ್ಲ. ಈ ಬೆಳವಣಿಗೆ ಕಂಡು ರೈತರಿಗೂ ಖುಷಿಯಾಯಿತು. ಅವರು ಬೇಟೆಯ ಯೋಚನೆಯನ್ನೇ ಮನಸ್ಸಿನಿಂದ ತೆಗೆದು ಹಾಕಿದರು. ಮೃಗಶಾಲೆಯ ಪ್ರಾಣಿಗಳು ರಾಜಕುಮಾರನ ಗುಣಗಾನ ಮಾಡಿದವು.

        ಬುದ್ಧಿಯಿರುವ ರಾಜಕುವರ
        ಗೆದ್ದುಕೊಂಡ ಜಾಣ
        ಬುದ್ಧಿವಂತರೆನಿಸಿದವರು ಮಾತ್ರ
        ಮಾಡುವರು ಜೀವಹರಣ
    ಎಂದು ಹಾಡಿದವು.

– ಪ.ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.