ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಮರೆಯಲಾಗದ ಅನುಭವ
Team Udayavani, Feb 17, 2017, 3:45 AM IST
ಜೀವನದಲ್ಲಿ ಸಿಹಿ-ಕಹಿ ಅನುಭವಗಳು ಸರ್ವೇಸಾಮಾನ್ಯ. ಕಹಿ ಅನುಭವಗಳನ್ನು ಮರೆತು, ಸಿಹಿ ಅನುಭವಗಳನ್ನು ಮೆಲುಕು ಹಾಕುತ್ತಾ ಸಾಗುವುದೇ ಜೀವನ. ಅಂತಹ ಸಿಹಿ-ಕಹಿ ಅನುಭವಗಳ ಸಮ್ಮಿಲನವೇ ಎನ್.ಎಸ್.ಎಸ್ನ ವಾರ್ಷಿಕ ವಿಶೇಷ ಶಿಬಿರ. ಪ್ರತಿಫಲ ಬಯಸದೆ ಸೇವೆಯನ್ನು ಮಾಡುತ್ತಾ ಖುಷಿಯಿಂದ ಕಳೆದ ಆ ಆರು ದಿನಗಳ ಪ್ರತಿಯೊಂದು ಕ್ಷಣವು ಅವಿಸ್ಮರಣೀಯ.
ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿದ ಮೇಲೆ ಒಂದು ವರ್ಷವಾದರೂ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಅನುಭವ ಪಡೆಯಬೇಕು. ಇಲ್ಲದಿದ್ದರೆ ಜೀವನದಲ್ಲಿ ಏನೋ ಮಹತ್ವದ್ದನ್ನು ಕಳೆದುಕೊಂಡಂತೆ. ಹಾಗಾಗಿ ಇಂತಹ ಉತ್ತಮ ಅವಕಾಶವನ್ನು ಬಿಡಬಾರದೆಂದು ನಿರ್ಧಾರ ಮಾಡಿ ಆಯ್ಕೆಗಾಗಿ ಅರ್ಜಿ ಹಾಕಿದ್ದು ಆಯ್ತು. ದೇವರ ದಯೆಯಿಂದ ಆಯ್ಕೆಯಾದದ್ದು ಆಯ್ತು. ಆಯ್ಕೆಯಾದ ಮೇಲಿಂದ ಮಾನಸಿಕವಾಗಿ ತಯಾರಾಗಿದ್ದೆ. ಪರೀಕ್ಷೆ ಮುಗಿಸಿ ರಜಾದ ಮಜ ಸವಿದು ಶಿಬಿರಕ್ಕೆ ಹೊರಡಲು ದಿನ ಲೆಕ್ಕ ಹಾಕುತ್ತಾ ಕುಳಿತೆ. ಹೊರಡುವ ದಿನ ಹೇಗೋ ಬಂದೇ ಬಿಟ್ಟಿತು. ಬೆಳಗ್ಗೆ ಬೇಗ ಎದ್ದು, ದೇವರಿಗೆ ನಮಸ್ಕಾರ ಮಾಡಿ, ಬ್ಯಾಗೆಲ್ಲಾ ತುಂಬಿಸಿ ರೆಡಿ ಮಾಡಿ ಮನೆಯವರಿಗೆ ವಿದಾಯ ಹೇಳಿ ಹೊರಟು ಬಿಟ್ಟೆ. ಎಲ್ಲರಿಗಿಂತ ಮೊದಲೇ ಕಾಲೇಜಿಗೆ ಬಂದು ತಲುಪಿದೆ. ಎಲ್ಲರೂ ಬಂದ ಮೇಲೆ ನಮ್ಮ ಭಾರವನ್ನು, ಬ್ಯಾಗಿನ ಭಾರವನ್ನೂ ಹೊತ್ತು ಬಸ್ಸು ಸಾಗಿದ್ದು ನಾವು ಒಂದು ವಾರ ತಂಗಬೇಕಾಗಿದ್ದ ಸುಂದರ ತಾಣ ಕೊಯ್ಯೂರು. ಅಲ್ಲಿಗೆ ತಲುಪುವಷ್ಟೊತ್ತಿಗೆ ಕೆಲವರದ್ದು ಪರಿಚಯವಾಗಿದ್ದು ಬಿಟ್ಟರೆ ಮತ್ತೆಲ್ಲಾ ಅಪರಿಚಿತ ಮುಖ. ಸಂತೋಷದ ವಿಷಯವೆಂದರೆ ಆ ಎಲ್ಲಾ ಅಪರಿಚಿತ ಮುಖಗಳು ಶಿಬಿರ ಮುಗಿದ ಮೇಲೆ ತುಂಬಾ ಆತ್ಮೀಯವಾಗಿದ್ದವು. ಕೊಯ್ಯೂರಿಗೆ ಬಸ್ಸು ಬಂದು ತಲುಪಿದಾಗ ಹೊಸ ಪ್ರಪಂಚಕ್ಕೆ ಬಂದ ಅನುಭವ. ಅಲ್ಲಿಗೆ ತಲುಪಿದ ಮೇಲೆ ನಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ವಾರಕ್ಕೆ ವ್ಯವಸ್ಥೆ ಮಾಡಿಕೊಂಡೆವು. ನಂತರ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡೆವು. ನಂತರ ಶುರುವಾಗಿದ್ದು ಯಾರು ಯಾರು ಯಾವ ತಂಡದಲ್ಲಿದ್ದಾರೆಂಬ ಹುಡುಕಾಟ. ಒಟ್ಟು ಐದು ತಂಡಗಳಿದ್ದವು. ನಾನು ಅನುರೂಪ ತಂಡಕ್ಕೆ ಸೇರಿದ್ದೆ. ನಮ್ಮ ತಂಡದಲ್ಲಿ ಯಾರೊಬ್ಬರ ಪರಿಚಯವೂ ನನಗೆ ಸರಿಯಾಗಿ ಇರಲಿಲ್ಲ. ಆದರೆ ಆಮೇಲೆ ನಮ್ಮ ತಂಡದ ಜೊತೆಗಿನ ಒಡನಾಟ ಈಗಲೂ ಮರೆಯಲು ಅಸಾಧ್ಯ. ಅಂದಿನಿಂದಲೇ ಎಲ್ಲಾ ತಂಡಗಳು ತಮ್ಮ ತಮ್ಮ ಐದು ದಿನಗಳ ಕಾರ್ಯವನ್ನು ಗಮನಿಸಿ ಎಲ್ಲರೂ ಅಂದಿನಿಂದಲೇ ತಯಾರಿ ನಡೆಸಿದವು.
ಮರುದಿನ ಬೆಳಗ್ಗಿನಿಂದಲೇ ನೇಸರ ಗೂಡಿನಿಂದ ಹೊರಬರುವ ಮೊದಲೇ ಸೈರನ್ನ ಕೂಗು ನಮ್ಮ ಕಿವಿ ತಲುಪುತ್ತಿತ್ತು. ನಾವು ಕೋಳಿ ಮರಿ ತಾಯಿಯ ಬೆಚ್ಚಗಿನ ಕಾವಿನಿಂದ ಹೊರ ಬರುವಂತೆ ಕಂಬಳಿಯ ಬೆಚ್ಚಗಿನ ಕಾವಿನಿಂದ ಹೊರಬಂದು ನಮ್ಮ ನಿತ್ಯ ಕರ್ಮ ಮುಗಿಸಿ ಹೊರಬಂದು ಪ್ರಾರ್ಥನಾಲಯದಲ್ಲಿ ಹಾಜರಾಗುತ್ತಿದ್ದೆವು. ಅಲ್ಲಿಂದ ಧ್ವಜಾರೋಹಣ ಮಾಡಲು ತೆರಳುತ್ತಿದ್ದೆವು. ನಾವು ಪ್ರತೀ ದಿನ ಆಹಾರ ಸಂರಕ್ಷಣೆ, ಸ್ವಾಸ್ಥ್ಯ ಜಾಗೃತಿ, ನಾಗರಿಕ ಪ್ರಜ್ಞೆ, ಜಲಸಂರಕ್ಷಣೆ, ಶಕ್ತಿ ಸಂಪನ್ಮೂಲ ಬಳಕೆ ಎಂಬ ಉತ್ತಮ ಧ್ಯೇಯವಾಕ್ಯದೊಂದಿಗೆ ದಿನ ಆರಂಭಿಸುತ್ತಿದ್ದೆವು. ಆಮೇಲೆ ಚನ್ನಣ್ಣ ಎಂಬ ಅಡುಗೆ ಭಟ್ಟರ ಸಿಹಿಯಾದ ಚಹಾ ತಿಂಡಿ ಸವಿದು ಶ್ರಮಯೇವ ಜಯತೆ ಎಂದುಕೊಂಡು ಅಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದೆವು. ಎಲ್ಲಾ ಐದು ತಂಡಗಳು ನೀರು ಸರಬರಾಜು, ಸ್ವತ್ಛತೆ, ಆಹಾರ ಸರಬರಾಜು, ಭಿತ್ತಿಪತ್ರ ರಚನೆ, ಸಾಂಸ್ಕƒತಿಕ ಕಾರ್ಯಕ್ರಮಕ್ಕೆ, ಶ್ರಮದಾನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೆವು. ಬೆವರು ಸುರಿಸಿ ದುಡಿದು ಮಧ್ಯಾಹ್ನದ ಬಿಸಿ ಬಿಸಿಯಾದ ಊಟ ಸವಿಯುತ್ತಿದ್ದಾಗ ನಿಜವಾಗಲೂ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಧನ್ಯತಾ ಭಾವ ಮೂಡುತ್ತಿತ್ತು. ಎನ್.ಎಸ್.ಎಸ್. ಅಂದರೆ ಕೇವಲ ಶ್ರಮದಾನವಲ್ಲ. ಜೊತೆಗೆ ಜ್ಞಾನವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ ಎಂದು ತಿಳಿಸಿದ್ದು, ಮಧ್ಯಾಹ್ನದ ನಂತರ ನಡೆಯುತ್ತಿದ್ದ ಉತ್ತಮವಾದ ಮಾಹಿತಿ ಕಾರ್ಯಾಗಾರಗಳು. ಅಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ವಿಧಾನ, ಮಾದಕ ವ್ಯಸನ ಮುಕ್ತಿ, ಹದಿಹರೆಯದ ಸಮಸ್ಯೆಗಳು ಮುಂತಾದ ಅನೇಕ ಉತ್ತಮ ಮಾಹಿತಿ ಕಾರ್ಯಾಗಾರ ನೀಡುತ್ತಿದ್ದರು. ಬೆಳಗ್ಗೆಯಿಂದ ದುಡಿದು ದಣಿದ ವಿದ್ಯಾರ್ಥಿಗಳು ಸಂಜೆಗಾಗಿ ಕಾಯುತ್ತಿದ್ದೆವು. ಕಾರಣ ಸಂಜೆಯಾದರೆ ವಿದ್ಯಾರ್ಥಿಗಳೆಲ್ಲ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದೆವು. ಸಾಂಸ್ಕೃತಿಕ ವೈಭವ ಮುಗಿಯುತ್ತಿದ್ದಂತೆ ಎಲ್ಲಾ ಊಟ ಮಾಡಿ ಪ್ರಾರ್ಥನಾಲಯದಲ್ಲಿ ಹಾಜರಾಗುತ್ತಿದ್ದೆವು. ಅಲ್ಲಿ ಆ ದಿನದ ಅವಲೋಕನ ನಡೆಯುತ್ತಿತ್ತು. ಶಿಬಿರಾರ್ಥಿಗಳು ವಿಭಿನ್ನ ರೀತಿಯಲ್ಲಿ ದಿನಚರಿಯನ್ನು ಓದುತ್ತಿದ್ದರು. ಆ ದಿನಚರಿ ಓದುತ್ತಿದ್ದ ಶೈಲಿ ನೆನೆಸಿಕೊಂಡರೆ ಈಗಲೂ ತುಟಿಯಂಚಿನಲ್ಲಿ ನಗು ತರಿಸುತ್ತಿದೆ. ದಿನಚರಿ ಅವಲೋಕನ ಮುಗಿದ ಮೇಲೆ ಮರುದಿನದ ಜವಾಬ್ದಾರಿಗೆ ಗುಂಪಿನೊಂದಿಗೆ ಚರ್ಚಿಸಿ, ತಯಾರಿ ನಡೆಸಿ ನಿದ್ರಾದೇವಿಗೆ ಶರಣಾಗುತ್ತಿದ್ದೆವು. ಅಲ್ಲಿಗೆ ಆ ದಿನದ ಕಾರ್ಯ ಮುಗಿಯುತ್ತಿತ್ತು.
ಒಟ್ಟಾರೆಯಾಗಿ ಶಿಬಿರದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಕೊಯ್ಯೂರಿನ ಪ್ರೌಢಶಾಲೆಯಲ್ಲಿ ಇಂಗುಗುಂಡಿ ಮಾಡಿದ್ದು, ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿದ್ದು, ಮನೆ ಮನೆಗೆ ಭೇಟಿ ನೀಡಿದ್ದು, ಜ್ಞಾನಾಂಜನದಂತಹ ಉತ್ತಮ ಕಾರ್ಯಗಳನ್ನು ಮಾಡಿದ್ದು ನೆನೆಸಿಕೊಂಡರೆ ಏನೋ ಸಾರ್ಥಕ ಭಾವ ಮೂಡುತ್ತದೆ. ಶಿಬಿರ ಕೊನೆಯ ದಿನದ ಬೆಳದಿಂಗಳ ಊಟ, ಶಿಬಿರ ಜ್ಯೋತಿ ನನ್ನ ಜೀವನದ ಮರೆಯಲಾಗದ ದಿನಗಳಲ್ಲಿ ಒಂದು. ಹಲವಾರು ಸಹೋದರ ಸಹೋದರಿಯರನ್ನು, ಒಳ್ಳೆಯ ಸ್ನೇಹಿತರನ್ನು ಕೊಟ್ಟ, ನನ್ನ ಜೀವನದ ಕೊನೆಯವರೆಗೂ ಮರೆಯಲಾಗದ ಅನುಭವವನ್ನು ಕೊಟ್ಟ ಎನ್.ಎಸ್.ಎಸ್.ಗೆ ಎಂದೆಂದಿಗೂ ಚಿರಋಣಿ.
– ಯಕ್ಷಿತಾ
ಪ್ರಥಮ ಬಿ.ಎ.
ಎಸ್.ಡಿ.ಎಂ. ಕಾಲೇಜು, ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.