ಕತ್ತಲೆಯ ಮಧ್ಯೆ ಕೇಳಿಬಂತು ಗೆಜ್ಜೆ ಸದ್ದು!
Team Udayavani, Mar 7, 2017, 3:45 AM IST
ನಾನು ಕಾಲೇಜಿಗೆ ಬಂದ ಆರಂಭದ ದಿನಗಳಲ್ಲಿ ಕಾಲೇಜಿನ ಎದುರು ಒಂದು ಹುಡುಗಿಯ ಶ್ರದ್ಧಾಂಜಲಿ ಫೋಟೊ ಹಾಕಿದ್ದು ನೋಡಿದ್ದೆ. ನನ್ನ ಗ್ರಹಚಾರಕ್ಕೆ ಈಗ ಅದೇ ಮತ್ತೆ ನೆನಪಾಗಿ ಕೈಕಾಲೆಲ್ಲ ಅಲುಗಾಡದಂತಾಯಿತು. ನನ್ನ ಹೃದಯದ ಢವಢವ ನನಗೆ ಜೋರಾಗಿ ಕೇಳಿಸುತ್ತಿತ್ತು.
ಅದೇನು ಮಾಡುತ್ತೀರೋ ಗೊತ್ತಿಲ್ಲ, ನಾಳೆ ಬೆಳಗ್ಗೆ ನಿಮ್ಮ ಪತ್ರಿಕೆ ರೆಡಿಯಾಗಬೇಕು ಅಷ್ಟೇ- ಹಾಗಂತ ನಮ್ಮ ಸಿಬಂತಿ ಪದ್ಮನಾಭ ಸರ್ ಹುಕುಂ ಮಾಡಿಬಿಟ್ಟಿದ್ದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಎಲ್ಲಿ, ಶುರುಮಾಡಿ ನೋಡೋಣ ಅಂತ ಡಿಪಾರ್ಟ್ಮೆಂಟಿನಲ್ಲೇ ನಮ್ಮನ್ನು ಕೂರಿಸಿ ತಾವೂ ಮೊಕ್ಕಾಂ ಮಾಡಿದ್ದರು. ಇನ್ನು ಕೆಲಸ ಮಾಡದೆ ಬೇರೆ ದಾರಿ ಇರಲಿಲ್ಲ. ನಾನೂ ನಮ್ಮ ಸೀನಿಯರ್ ಮಜೀದ್, ಮೇಷ್ಟ್ರ ನೇತೃತ್ವದಲ್ಲಿ ಕೆಲಸ ಶುರು ಹಚ್ಚಿಕೊಂಡೆವು. ಸಂಜೆ ಏಳೂವರೆ ಆದರೂ ಕೆಲಸ ಮುಗಿಯುವ ಲಕ್ಷಣ ಇರಲಿಲ್ಲ. ಕಾಲೇಜಿನ ಆವರಣವೆಲ್ಲಾ ಕತ್ತಲು ಕತ್ತಲು. ಡಿಪಾರ್ಟ್ಮೆಂಟಿನ ಬಲ್ಬ್ ಬಿಟ್ಟರೆ ಇನ್ನೆಲ್ಲೂ ಬೆಳಕಿರಲಿಲ್ಲ. ನಮ್ಮೆಲ್ಲ ಏಕಾಗ್ರತೆಗೆ ಭಂಗ ತರುವ ಹಾಗೆ ಕೇಳಿಸತೊಗಿತು ಸಣ್ಣನೆಯ ಘಲ್ಘಲ್ ಗೆಜ್ಜೆ ಸದ್ದು. ನಿಧಾನಕ್ಕೆ ಅದು ಜಾಸ್ತಿಯಾಗುತ್ತಾ ಇತ್ತು. ನಮ್ಮ ಕಾರಿಡಾರಿನ ಇನ್ನೊಂದು ತುದಿಯಿಂದ ಕೇಳಲಾರಂಭಿಸಿದ ಸದ್ದು ಎರಡು ನಿಮಿಷಕ್ಕೆ ಹತ್ತಿರದಿಂದಲೇ ಕೇಳಲಾರಂಭಿಸಿತು.
ನನ್ನ ಹೃದಯದ ತಮಟೆಯ ಸದ್ದೂ ನಿಧಾನಕ್ಕೆ ಏರುತ್ತಾ ಇತ್ತು ಎಂದು ಬೇರೆ ಹೇಳಬೇಕಾಗಿಲ್ಲ ಅಲ್ಲವೇ? ನನ್ನಲ್ಲಿ ಸಣ್ಣನೆಯ ಭಯ ಶುರುವಾಯಿತು. ಮುಖದಲ್ಲಿ ಮಂದಹಾಸ ಮರೆಯಾಗಿ ಬೆವರು ಹರಿಯತೊಡಗಿತು. ಸರ್ ಕಡೆ ನೋಡಿದೆ. ಅವರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ನನಗೆ ಇನ್ನೂ ಭಯವಾಯಿತು. ಗೆಜ್ಜೆಯ ಶಬ್ದ ಈಗ ಜೋರಾಗಿಯೇ ಕೇಳಿಸುತ್ತಿತ್ತು.
ನಾನು ಧೈರ್ಯ ಮಾಡಿ ಹೊರಗಡೆ ನೋಡಿದೆ. ಅಮಾವಾಸ್ಯೆಯ ಕತ್ತಲು. ನಾನು ಮೇಷ್ಟ್ರ ಕಡೆ ತಿರುಗಿ- “ಸಾರ್, ನಿಮಗೆ ಕೇಳಿಸ್ತಿಲ್ವಾ ಗೆಜ್ಜೆ ಸದ್ದು?’ ಅಂತ ಮೆಲ್ಲಗೆ ಉಸುರಿದೆ. ಅವರೋ ಭಾರೀ ಸಾವಧಾನದಿಂದ “ಹೌದು ಕಣಯ್ಯ, ಕೇಳಿಸ್ತಿದೆ. ನಿಮಗಿಂತ ಹಿಂದಿನ ಬ್ಯಾಚಿನಲ್ಲಿ ಒಂದು ಹುಡುಗಿ ಅದೇನೋ ಕಾರಣಕ್ಕೆ ಸೂಸೈಡ್ ಮಾಡ್ಕೊಂಬಿಟ್ಟಿದು. ಅವಳದ್ದೇ ಏನಾದರೂ ಕಿತಾಪತಿ ಇರಬೋದು. ಹೇಳಕ್ಕಾಗಲ್ಲ’ ಅಂತ ನನ್ನಷ್ಟೇ ಗಂಭೀರವಾಗಿ ಹೇಳಿದರು.ಅಲ್ಲಿಗೆ ನನ್ನಲ್ಲಿದ್ದ ಅಲ್ಪಸ್ವಲ್ಪ ಧೈರ್ಯಾನೂ ಮಂಗಮಾಯ ಆಯ್ತು. ನಾನು ಕಾಲೇಜಿಗೆ ಬಂದ ಆರಂಭದ ದಿನಗಳಲ್ಲಿ ಕಾಲೇಜಿನ ಎದುರು ಒಂದು ಹುಡುಗಿಯ ಶ್ರದ್ಧಾಂಜಲಿ ಫೋಟೊ ಹಾಕಿದ್ದು ನೋಡಿದ್ದೆ. ನನ್ನ ಗ್ರಹಚಾರಕ್ಕೆ ಈಗ ಅದೇ ಮತ್ತೆ ನೆನಪಾಗಿ ಕೈಕಾಲೆಲ್ಲ ಅಲುಗಾಡದಂತಾಯಿತು. ನನ್ನ ಹೃದಯದ ಢವಢವ ನನಗೆ ಜೋರಾಗಿ ಕೇಳಿಸುತ್ತಿತ್ತು. ಅದರ ಜೊತೆಗೆ ಗೆಜ್ಜೆಯ ಸದ್ದೂ ಕೂಡ.
ರಾತ್ರಿ 8.30 ಆದರೂ ನಮ್ಮ ಕೆಲಸ ಮುಗಿಯಲಿಲ್ಲ. ಒಬ್ಬನೇ ಹೊರ ಹೋಗೊ ಧೈರ್ಯ ಮಾಡಲಿಲ್ಲ. ಕೊನೆಗೂ ನಮ್ಮ ಪತ್ರಿಕೆ ಕೆಲಸ ಮುಗಿಯಿತು ಅನ್ನಿ. ಡಿಪಾರ್ಟ್ಮೆಂಟಿನಿಂದ ಹೊರಬಂದಾಗ ಎದುರಿನ ನೇರಳೆ ಮರದಲ್ಲಿ ಮತ್ತೆ ಅದೇ ಘಲ್ಘಲ್ ಸದ್ದು. ಇದ್ದ ಧೈರ್ಯವನ್ನೆಲ್ಲ ಒಟ್ಟು ಮಾಡಿ ಐದು ಕ್ಷಣ ಅಲ್ಲೇ ನಿಂತು ಮರವನ್ನು ಗಮನಿಸಿದೆ. ಅದೆಂಥದೋ ಒಂದು ಹಕ್ಕಿ ಘಲ್ಘಲ್ಅಂತ ಸದ್ದು ಮಾಡ್ತಾ ಕೂತಿತ್ತು. “ಅಯ್ಯೋ, ಇಷ್ಟು ಹೊತ್ತೂ ನನ್ನನ್ನು ಹೆದರಿಸಿದ ದೆವ್ವ ಇದೇನಾ?’ ಅಂತ ಜಾnನೋದಯವಾಗಿ ದೊಡ್ಡದೊಂದು ನಿಟ್ಟುಸಿರು ಬಿಟ್ಟೆ. “ನೋಡಿ ಸಾರ್, ಇಲ್ಲಿದೆ ದೆವ್ವ…’ ಅಂತ ನಾನಂದರೆ ಅವರು ಘೊಳ್ಳನೆ ನಕ್ಕರು.
“ಬರೊÅà ಜ್ಯೂಸ್ ಕುಡಿಯೋಣ’ ಅಂತ ಮೇಷ್ಟ್ರು ರಸ್ತೆಯಾಚೆಯ ಅಂಗಡಿ ಹತ್ರ ಕರಕೊಂಡು ಹೋದರು. ದೆವ್ವದ ಬಗ್ಗೆ ಚರ್ಚೆ ಮಾಡುತ್ತಾ ಮೂವರೂ ಜ್ಯೂಸ್ ಕುಡಿದು ನಮ್ಮ ಪೇಪರಿನಲ್ಲಿ ದೆವ್ವದ ನ್ಯೂಸ್ ಮಿಸ್ ಆಯ್ತಲ್ಲ ಅಂತ ಪೇಚಾಡಿದೆವು. ತಣ್ಣನೆ ಜ್ಯೂಸ್ ಗಂಟಲೊಳಗಿಳಿವಾಗ ನನ್ನ ಹೃದಯ ಬಡಿತ ನಿಧಾನಕ್ಕೆ ನಿಯಂತ್ರಣಕ್ಕೆ ಬರುತ್ತಾ, ಬೆವರ ಸೆಲೆ ಹಾಗೇ ಕಮ್ಮಿಯಾಗುತ್ತಿತ್ತು.
– ನಿರಾಂಜು ಕೆ.ಎಚ್., ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.