ಗಬ್ಬೆದ್ದು ನಾರುತ್ತಿದೆ ಪಾಲಿಕೆ ಶೌಚಾಲಯ
Team Udayavani, Apr 6, 2017, 2:55 PM IST
ಹುಬ್ಬಳ್ಳಿ: ಶೌಚಾಲಯ ಗೆಬ್ಬೆದ್ದು ನಾರುತ್ತಿದೆ, ನೀರು ಸೋರುತ್ತಿದೆ. ಕನಿಷ್ಠ ಸ್ವತ್ಛತೆಯ ಕ್ರಮವೂ ಆಗಿಲ್ಲ. ಇದು ಯಾವುದೋ ಬಡಾವಣೆಯ ಸಾರ್ವಜನಿಕ ಶೌಚಾಲಯದ ಸ್ಥಿತಿಯಲ್ಲ. ಸ್ವತ್ಛ ಭಾರತ ಅಭಿಯಾನಕ್ಕೆ ಜೈ ಎಂದ, ಸ್ಮಾರ್ಟ್ ಸಿಟಿಯ ಪಟ್ಟ ಪಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿನ ಶೌಚಾಲಯದ ಕಥೆ- ವ್ಯಥೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಸ್ವತ್ಛ ಭಾರತ ಅಭಿಯಾನ ಮಹತ್ವದ ಸ್ಥಾನ ಪಡೆದಿದೆ. ಇದಕ್ಕೆ ಪೂರಕ ಎನ್ನುವಂತೆ ಮಹಾನಗರ ಬಿಜೆಪಿಯಿಂದ ಪಂಡಿತ ದೀನ್ದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ಅಂಗವಾಗಿ ಅವಳಿನಗರದ ಎಲ್ಲ 67 ವಾರ್ಡ್ಗಳಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆದರೆ, ಬಿಜೆಪಿಯೇ ಆಡಳಿತದಲ್ಲಿರುವ ಮಹಾನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿನ ಶೌಚಾಲಯ ಸ್ವತ್ಛತಾ ಅಭಿಯಾನವನ್ನೇ ಅಣಕಿಸುವ ರೀತಿಯಲ್ಲಿದ್ದರೂ ಪಾಲಿಕೆ ಆಡಳಿತಕ್ಕೆ ಏನೊಂದು ಅನ್ನಿಸದಾಗಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಅವಳಿನಗರ ಸಕಲ ಸಿದ್ಧತೆಯಲ್ಲಿದೆ, ಇನ್ನೊಂದು ಕಡೆ ಸ್ವತ್ಛ ಭಾರತ ಮಿಶನ್ ಮಹಾನಗರಗಳಲ್ಲಿನ ಸ್ವತ್ಛತೆಯ ಸ್ಥಿತಿ ಗತಿ ಕುರಿತು ಸರ್ವೇಕ್ಷಣೆ ನಡೆಸಿ ಕಂಡು ಬಂದ ಅಂಶಗಳ ಆಧಾರದಲ್ಲಿ ರ್ಯಾಂಕಿಂಗ್ ನೀಡುತ್ತದೆ.
ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಸ್ವತ್ಛತೆ ಒತ್ತಟ್ಟಿಗಿರಲಿ, ಸ್ವತಃ ಪಾಲಿಕೆ ಕಚೇರಿಯಲ್ಲಿನ ಸ್ವತ್ಛತೆಯೇ ಅಯೋಮಯ ಸ್ಥಿತಿಯಲ್ಲಿದೆ. ಸ್ವತ್ಛ ಭಾರತ ಅಭಿಯಾನದ ಪ್ರಧಾನಿ ಆಶಯಕ್ಕೆ ನಾವು ಬದ್ಧ ಎನ್ನುವ ಬಿಜೆಪಿಯವರದ್ದೇ ಆಡಳಿತ, ತಮ್ಮದೇನಿದ್ದರೂ ಶಿಸ್ತು-ಸ್ವತ್ಛತೆ ಒತ್ತು ಎನ್ನುವ ಆಯುಕ್ತರಿರುವ ಪಾಲಿಕೆ ಕಚೇರಿಯಲ್ಲೇ ಈ ಸ್ಥಿತಿ ಇದೆ.
ಗಬ್ಬೆದ್ದು ನಾರುತ್ತಿದೆ ಶೌಚಾಲಯ: ಮಹಾನಗರ ಪಾಲಿಕೆಯಲ್ಲಿ ಎರಡನೇ ಮಹಡಿಯಲ್ಲಿ ವಿಪಕ್ಷ ನಾಯಕರು ಹಾಗೂ ಜೆಡಿಎಸ್ ನಾಯಕರ ಕಚೇರಿ ಮುಂದಿನಿಂದ ಸಾಗಿದರೆ ಮೇಲ್ಭಾಗದಲ್ಲಿ ಶೌಚಾಲಯ ಇದೆ. ಇಲ್ಲಿನ ಮೂತ್ರಾಲಯ ಹಾಗೂ ಶೌಚಾಲಯಕ್ಕೆ ಹೋದವರು ಕರವಸ್ತ್ರ ಮೂಗಿಗಿಡಿದು ಹೋಗಬೇಕಿದೆ. ಇಲ್ಲಿನ ಮೂತ್ರಾಲಯ, ಶೌಚಾಲಯಗಳನ್ನು ಸ್ವತ್ಛಗೊಳಿಸಿ ಅದೆಷ್ಟು ವರ್ಷಗಳಾಯಿತೋ ಎನ್ನುವ ಸ್ಥಿತಿಯಲ್ಲಿವೆ.
ಕೆಲವೊಂದು ರೋಗ ಹರಡುವ ತಾಣವಾಗಿ ಇದು ರೂಪುಗೊಂಡಿದೆ. ಎಲ್ಲಿ ನೋಡಿದರಲ್ಲಿ ಗುಟಕಾ ಎಂಜಲು ಸಿಂಚನ ಹೇಸಿಗೆ ತರಿಸುವಂತಿದೆ. ಇರುವ ಎರಡು ಶೌಚಾಲಯಗಳಲ್ಲಿ ಒಂದಕ್ಕೆ ಬೀಗ ಜಡಿಯಲಾಗಿದೆ. ಇನ್ನೊಂದು ಕೋಣೆ ತೆರೆದಿದ್ದು, ಬಾಗಿಲು ಭದ್ರಪಡಿಸಿಕೊಳ್ಳುವುದಕ್ಕೂ ವ್ಯವಸ್ಥೆ ಇಲ್ಲದ ಸ್ಥಿತಿಯಲ್ಲಿದೆ. ಬರದ ಹಿನ್ನೆಲೆಯಲ್ಲಿ ನೀರಿನ ಕೊರತೆ ಹೆಚ್ಚುತ್ತಲೇ ಸಾಗುತ್ತಿದೆ. ಕೆಲವೊಂದು ಹಳ್ಳಿಗಳಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ.
ಆದರೆ, ಪಾಲಿಕೆ ಕಚೇರಿಯಲ್ಲಿನ ಶೌಚಾಲಯದಲ್ಲಿ ಮಾತ್ರ ನಿರಂತರವಾಗಿ ನೀರು ಸೋರುವ ಮೂಲಕ ಪೋಲಾಗುತ್ತಿದ್ದರೂ ಯಾರೊಬ್ಬರ ಕನಿಷ್ಠ ಗಮನ ಇಲ್ಲವಾಗಿದೆ. ಅಷ್ಟೇ ಅಲ್ಲ ಇದೇ ಶೌಚಾಲಯ ಕಟ್ಟಡ ಪಕ್ಕದಲ್ಲೇ ಅನುಪಯುಕ್ತ ವಸ್ತುಗಳನ್ನು ಬಿಸಾಡಲಾಗಿದ್ದು, ಸ್ವತ್ಛ ಭಾರತ ಇಲ್ಲಿ ಅರ್ಥ ಕಳೆದುಕೊಂಡಂತೆ ಭಾಸವಾಗುತ್ತಿದೆ. ಸ್ವತ್ಛತೆಯ ಅಧ್ವಾನ ಕೇವಲ ಮಹಾನಗರ ಪಾಲಿಕೆ ಶೌಚಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ.
ನಗರದ ಅನೇಕ ಕಡೆಗಳಲ್ಲೂ ಸ್ವತ್ಛತೆ ಇಲ್ಲದೆ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿರುವುದು ಕಾಣ ಸಿಗುತ್ತದೆ. ಈ ಹಿಂದೆ ಸ್ವತ್ಛ ಭಾರತ ಕುರಿತಾಗಿ ನಡೆಸಿದ ಸಮೀಕ್ಷೆಯಲ್ಲಿ ನಿಗದಿತ ಜನಸಂಖ್ಯೆಯ ಮಹಾನಗರಗಳಲ್ಲಿ ಹುಬ್ಬಳ್ಳಿ- ಧಾರವಾಡ 74ನೇ ಸ್ಥಾನ ಪಡೆದಿತ್ತು. ಪ್ರಸ್ತುತದ ಸ್ವತ್ಛತೆ ಸ್ಥಿತಿ ನೋಡಿದರೆ ಇನ್ನಷ್ಟು ಅಧ್ವಾನ ಎನ್ನುವಂತಿದೆ. ಮಹಾಪೌರರು, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರಾದಿಯಾಗಿ ಅನೇಕ ಅಧಿಕಾರಿಗಳು ಹೋದ ಕಡೆಯಲ್ಲ ಮಹಾನಗರ ಸ್ವತ್ಛತೆ ಕಾಪಾಡಬೇಕು,
ಅವಳಿನಗರದ ಸೌಂದರ್ಯ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕರಿಸಬೇಕು ಎಂದೆಲ್ಲ ಭಾಷಣ ಮಾಡುತ್ತಾರೆ. ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದೇವೆ, ನಗರದ ಸೌಂದರ್ಯ ಕಾಪಾಡಲು ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದೆಲ್ಲಾ ಹೇಳುತ್ತಾರೆ. ಆದರೆ, ಪಾಲಿಕೆಯ ಮುಖ್ಯ ಕಚೇರಿಯಲ್ಲಿಯೇ ಇರುವ ಶೌಚಾಲಯ ಗಬ್ಬೆದ್ದು ನಾರುತ್ತಿದ್ದರೂ ಕನಿಷ್ಠ ಕ್ರಮ ಕೈಗೊಂಡಿಲ್ಲ. ಸ್ವತ್ಛತೆ ಎಂಬುದು ಕೇವಲ ಸಾರ್ವಜನಿಕರಿಗೆ ಬಿಟ್ಟ ವಿಚಾರ, ನಮಗೆ ಅನ್ವಯವಾಗದು ಎಂಬಂತಿದೆ ಪಾಲಿಕೆ ವರ್ತನೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿಪಿವೈ ಎನ್ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ
Pralhad Joshi: ಟಿಕೆಟ್ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ
BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
MUST WATCH
ಹೊಸ ಸೇರ್ಪಡೆ
Guarantee Schemes; ಸಂಪನ್ಮೂಲ ಕುಸಿತ:ಗ್ಯಾರಂಟಿಗೆ ಕತ್ತರಿ?
JK Cabinet Meet: ಕಾಶ್ಮೀರಕ್ಕೆ ರಾಜ್ಯ ಸ್ಥಾನ ಕೊಡಿ: ಸಿಎಂ ಒಮರ್ ಸಂಪುಟ ಸಭೆ ನಿರ್ಣಯ
BPL; ದ.ಕ.- 54 ಸಾವಿರ, ಉಡುಪಿ- 39 ಸಾವಿರ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಸೂಚನೆ
By-election;ವಿಧಾನ ಪರಿಷತ್ ಉಪ ಚುನಾವಣೆ: 392 ಮತಗಟ್ಟೆ ,6,032 ಮತದಾರರು
Konkani Movie; ‘ಅಂತ್ಯಾರಂಭ’ ಚಿತ್ರೀಕರಣ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.