ವಿದ್ಯಾಹೂಡಿಕೆ : ಓದುವುದಕ್ಕೂ ಒಂದು ಸಿಪ್‌


Team Udayavani, May 15, 2017, 7:38 PM IST

Vidya-Hudike.jpg

‘ನಾವು ಐದು ವರ್ಷ ಕಾಲೇಜು ಓದೋಕೂಅಷ್ಟು ದುಡ್ಡು ಖರ್ಚು ಮಾಡಲಿಲ್ಲ. ಈ ಮಿಡ್ಲ್ ಸ್ಕೂಲ್‌ ಮಕ್ಕಳಿಗೆ ಒಂದೇ ವರ್ಷಕ್ಕೆ ಅಷ್ಟು ಖರ್ಚಾಗ್ತಿದೆ …’ ಹಾಗಂತ, ತಂದೆ-ತಾಯಿಗಳು ಹೆಚ್ಚುತ್ತಿರುವ ಮಕ್ಕಳ ಶಿಕ್ಷಣದ ಖರ್ಚಿನ ಬಗ್ಗೆ ಬೈದುಕೊಂಡು ಓಡಾಡುತ್ತಲೇ ಇರುತ್ತಾರೆ. ಕೆಲವರು ತಮಗೆ ಓದಿಸುವುದಕ್ಕಾಗುವುದೇ ಇಷ್ಟು ಎಂದು ಸುಮ್ಮನಾದರೆ, ಇನ್ನೂ ಕೆಲವರು ಮಕ್ಕಳು ಚಿಕ್ಕವರಾಗಿರುವಾಗಲೇ ಇಷ್ಟಿಷ್ಟು ಹಣ ಎಂದು ಕೂಡಿಸಿ, ಕೊನೆಗೆ ಅವರಿಗೆ ಇಷ್ಟವಾದುದನ್ನು ಓದಿಸುತ್ತಾರೆ. ಅಂತಹವರಿಗಾಗಿಯೇ ಹಲವು ಫ‌ಂಡ್‌ಗಳು, ಸ್ಕೀಮ್‌ಗಳು ಈಗ ಶುರುವಾಗಿದೆ. ಆ ಫ‌ಂಡ್‌ಗಳೆಲ್ಲಾ ಮೆಚ್ಯೂರ್‌ ಆಗಿ, ಕೈ ಸೇರುವ ಹೊತ್ತಿಗೆ, ವಿದ್ಯಾಭ್ಯಾಸದ ಖರ್ಚು ಇನ್ನೂ ಎಷ್ಟಾಗಿರುತ್ತದೋ ಗೊತ್ತಿಲ್ಲ. ಆದರೆ, ಈಗಿನಿಂದಲೇ ಅದಕ್ಕೊಂದು ಪ್ಲಾನ್‌ ಮಾಡಿದರೆ, ಮಕ್ಕಳು ಕಾಲೇಜು ಅಥವಾ ಉನ್ನತ ಪದವಿ ಮಾಡುವ ಸಂದರ್ಭದಲ್ಲಿ ತಂದೆ-ತಾಯಿ ಹೆಚ್ಚು ಕಷ್ಟಪಡಬೇಕಿಲ್ಲ ಎಂಬುದು ಸತ್ಯ. ಹಾಗಾದರೆ ಏನು ಮಾಡಬೇಕೆಂಬ ಪ್ರಶ್ನೆ ಬರುವುದು ಸಹಜ. ಓದಿ ನೋಡಿ …

ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಕೋರ್ಸ್‌ ಓದಿಸುವುದಕ್ಕೆ ಕಡಿಮೆಯೆಂದರೂ ಆರು ಲಕ್ಷ ಬೇಕು. ಎಂಬಿಎಗೆ ವರ್ಷಕ್ಕೆ ನಾಲ್ಕು ಲಕ್ಷ, ಎಂಸಿಎಗೆ ವರ್ಷಕ್ಕೆ ಎರಡು ಲಕ್ಷ, ಎಂಟೆಕ್‌ಗೆ ಮೂರು ಲಕ್ಷ, ಇನ್ನು ಮೆಡಿಕಲ್‌ ಗೆ ಏನಿಲ್ಲವೆಂದರೂ 35 ಲಕ್ಷ … ಅದೆಲ್ಲಾ ಬಿಡಿ, ಪ್ರೀನರ್ಸರಿಗೇ ಹೆಚ್ಚಾ ಕಡಿಮೆ ಒಂದು ಲಕ್ಷದವರೆಗೂ ಡೊನೇಷನ್ನು. ಆ ನಂತರ ವರ್ಷಕ್ಕೆ ಏನಿಲ್ಲವೆಂದರೂ ಅರವತ್ತು ಸಾವಿರ … ಇದು ಇವತ್ತಿನ ಶಿಕ್ಷಣದ ಒಟ್ಟಾರೆ ಚಿತ್ರಣ ಎಂದರೆ ತಪ್ಪಿಲ್ಲ. ಒಂದು ಕುಟುಂಬದ ಪ್ರತಿ ವರ್ಷದ ಆದಾಯದಲ್ಲಿ ಕಾಲು ಭಾಗದ ಖರ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ಹೋಗುತ್ತದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ದುಪ್ಪಟ್ಟಾದರೆ ಆಶ್ಚರ್ಯವಿಲ್ಲ. ಏಕೆಂದರೆ, ಭವಿಷ್ಯದಲ್ಲಿ ಶಿಕ್ಷಣ ಹೈಟೆಕ್‌ ಆಗುವುದಷ್ಟೇ ಅಲ್ಲ, ಜಗತ್ತಿನ ಜನಪ್ರಿಯ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿಗೆ ಬಂದು, ಸ್ಪರ್ಧೆ ಹೆಚ್ಚಾಗಿ, ಶಿಕ್ಷಣ ಇನ್ನಷ್ಟು ದುಬಾರಿಯಾದರೆ ಅದರಲ್ಲಿ ಆಶ್ಚರ್ಯವೇ ಇಲ್ಲ.

ಹಾಗಾದರೆ ಉಳಿದಿರುವುದು ಎರಡೇ ದಾರಿ; ಹೆಚ್ಚು ಹೆಚ್ಚು ದುಡ್ಡು ತೆತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು, ಇಲ್ಲವಾದರೆ, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ತಮ್ಮ ಶಕ್ತ್ಯಾನುಸಾರ ಓದಿಸಿ ಸುಮ್ಮನಾಗುವುದು. ಅದೂ ಅಷ್ಟು ಸುಲಭವಲ್ಲ, ನಮ್ಮ ಜೀವನ ಶೈಲಿ ಬದಲಾದಂತೆ, ನಮ್ಮ ಸ್ಟೇಟಸ್‌ ಬದಲಾದಂತೆ, ಅದಕ್ಕೆ ತಕ್ಕ ಹಾಗೆ ಓದಿಸುವುದು ಅನಿವಾರ್ಯ. ಅಷ್ಟೇ ಅಲ್ಲ, ಕಾನ್ವೆಂಟ್‌ಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಆರಂಭದಿಂದ ಓದಿದ ಮಕ್ಕಳಿಗೆ, ಅದಕ್ಕಿಂತ ಕಡಿಮೆ ದರ್ಜೆಯ ಶಿಕ್ಷಣ ಕೊಡಿಸುವುದು ಸಹ ಕಷ್ಟ. ಹಾಗಾಗಿ ಇಷ್ಟವೋ, ಕಷ್ಟವೋ ಮಕ್ಕಳನ್ನು ಒಂದು ದಡ ಸೇರಿಸುವುದು ಮುಖ್ಯವಾಗಿ, ಅದರಿಂದ ತಂದೆ-ತಾಯಿ ಹಗಲು-ರಾತ್ರಿ ಕಷ್ಟಪಡುವಂತಾಗುತ್ತದೆ.

ಕೂಸು ಹುಟ್ಟುವುದಕ್ಕೆ ಮುನ್ನ ಕುಲಾವಿ ಹೊಲಿಸು
ಹಾಗಾದರೆ, ಇದಕ್ಕೆ ಉಪಾಯವೇನು ಎಂದು ಎಲ್ಲರೂ ತಲೆ ಕೆರೆದುಕೊಳ್ಳುವುದು ಸಹಜ. ಇದಕ್ಕೆ ಒಂದು ಉಪಾಯವೆಂದರೆ, ಕೂಸು ಹುಟ್ಟುವುದಕ್ಕೆ ಮುನ್ನವೇ ಕುಲಾವಿ ಹೊಲಿಸುವುದು. ಅಂದರೆ, ಮಕ್ಕಳು ದೊಡ್ಡವರಾಗಿ ಏನು ಓದುತ್ತಾರೆ ಅಥವಾ ಓದಬಹುದು ಎಂದು ಕಾಯದೆಯೇ, ಈಗಿನಿಂದಲೇ ತಿಂಗಳಿಗಿಷ್ಟೆಂದು ಮಕ್ಕಳ ಹೆಸರಿನಲ್ಲಿ ನಿಯಮಿತವಾಗಿ ಹಣವನ್ನು ಉಳಿಸಿ, ಆ ನಂತರ ಅದು ಮೆಚ್ಯೂರ್‌ ಆದಮೇಲೆ, ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಬಳಸಿಕೊಳ್ಳುವುದು. ಮುಂಚೆಲ್ಲಾ ಮನೆ ಕಟ್ಟುವುದಕ್ಕೆ, ರಿಟೈರ್‌ವೆುಂಟ್‌ ನಂತರಕ್ಕೆಂದು ಪ್ರತಿ ತಿಂಗಳು ಒಂದಿಷ್ಟು ಉಳಿಸಿ, ದೊಡ್ಡ ಮೊತ್ತ ಮಾಡುವ ಪರಿಪಾಠವಿತ್ತಲ್ಲ, ಅದನ್ನು ಈಗ ಮಕ್ಕಳ ವಿದ್ಯಾಭ್ಯಾಸಕ್ಕೂ ಅಳವಡಿಸುವಂತಾಗಿದೆ. ಹಿಂದೆ ಒಬ್ಬ ವ್ಯಕ್ತಿ ರಿಟೈರ್‌ ಆಗುವ ಹಂತಕ್ಕೆ ಬಂದಾಗ ಮಕ್ಕಳು ಬೆಳೆದು ನಿಲ್ಲುತ್ತಿದ್ದರು. ರಿಟೈರ್‌ವೆುಂಟಿನಿಂದ ಬಂದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಲಾಗುತಿತ್ತು. ಇಲ್ಲವಾದರೆ, ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಲಾಗುತಿತ್ತು. ಈಗ ಹಾಗಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಆರಂಭದಿಂದಲೇ ಯೋಚಿಸಿ ಹಣ ಉಳಿಸಲಾಗುತ್ತಿದೆ.

ಉದಾಹರಣೆಗೆ, ಇನ್ನು 20 ವರ್ಷಗಳ ನಂತರ ಇಂಜನಿಯರಿಂಗ್‌ ಕೋರ್ಸು ಓದಿಸುವುದಕ್ಕೆ 30 ಲಕ್ಷ ಬೇಕಾಗುತ್ತದೆ ಎಂದಿಟ್ಟುಕೊಳ್ಳಿ, ಎಂಬಿಎ ಓದುವುದಕ್ಕೆ 20 ಲಕ್ಷ ಬೇಕಾಗುತ್ತದೆ. ಆಗ ಅಷ್ಟೊಂದು ಹಣವನ್ನು ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಸಹಜ. ಅದಕ್ಕೇ ಹೇಳಿದ್ದು, ಮಗು ಹುಟ್ಟಿದಾಗಿನಿಂದಲೇ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಡುವುದು ಅವಶ್ಯಕವೆಂದು. ಮಗು ಹುಟ್ಟಿದಾಗಿನಿಂದ, ಅದಕ್ಕೆ 18 ವರ್ಷ ತುಂಬುವವರೆಗೂ ಪ್ರತಿ ತಿಂಗಳಿಗೆ ನಿಮ್ಮ ಆದಾಯದಲ್ಲಿ ಒಂದು ಭಾಗ ಅಥವಾ ಶಕ್ತ್ಯಾನುಸಾರ ಪ್ರೀಮಿಯಮ್‌ ಕಟ್ಟುತ್ತಾ ಹೋದರೆ, ಮಗು ಬೆಳೆದು 18 ವರ್ಷ ತುಂಬುತ್ತಿದ್ದಂತೆ ಆ ದುಡ್ಡು ನಿಮ್ಮ ಕೈಸೇರುತ್ತದೆ. ಆ ನಂತರ ಮುಂದಿನ ಹೆಜ್ಜೆ ಇಡಬಹುದು.

ಮಕ್ಕಳಿಗೆ ಹೀಗೆ!
ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಪಾಲನೆ-ಪೋಷಣೆಗೆಂದೇ ಹಲವು ತರಹದ ಫ‌ಂಡ್‌ಗಳು, ಪ್ಲಾನ್‌ಗಳು ಶುರುವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಪ್ರಮುಖವಾಗಿ ಮಗು ಹುಟ್ಟಿದಾಗಿನಿಂದ ಶುರುವಾಗುವ ಆ ಸ್ಕೀಮ್‌ಗಳು, ಆ ಮಕ್ಕಳು ಬೆಳೆದು 18 ವರ್ಷ ತುಂಬುವವರೆಗೂ ಚಾಲ್ತಿಯಲ್ಲಿರುತ್ತವೆ. ಶೇರ್‌ ಮಾರ್ಕೆಟ್‌ ತಿಂಗಳಿಗಿಷ್ಟು ಎಂದು ತುಂಬುತ್ತಾ ಹೋದರೆ, ಕೊನೆಗೆ ಒಂದಿಷ್ಟು ದೊಡ್ಡ ಮೊತ್ತ ಕೈಸೇರುತ್ತದೆ. ಆ ಸಂದರ್ಭದಲ್ಲಿ ಅದು ಸ್ವಲ್ಪ ಕಡಿಮೆ ಎಂದೇ ಎನಿಸಬಹುದು. ಆದರೆ, ಅಷ್ಟಲ್ಲದಿದ್ದರೂ, ಇಷ್ಟಾದರೂ ನಿಮ್ಮ ಕೈಯಲ್ಲಿ ಇರುತ್ತದೆ. ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಎಷ್ಟೋ ಜನ ಮಕ್ಕಳಾಗುವುದಕ್ಕಿಂತ ಮುಂಚಿನಿಂದಲೇ ಮಕ್ಕಳ ಶಿಕ್ಷಣಕ್ಕೆಂದು ತಮ್ಮ ಸಂಬಳದಲ್ಲಿ ಒಂದು ಪಾಲು ಎತ್ತಿಡುವಂತಹ ಸಂಪ್ರದಾಯ ಶುರುವಾಗಿದೆ. ಇದಕ್ಕೆ ಚಿಲ್ಡ್ರನ್ಸ್‌ ಫ‌ಂಡ್‌ನ‌ ಅವಶ್ಯಕತೆ ಇಲ್ಲ. ಮ್ಯೂಚ್ಯುಯಲ್‌ ಫ‌ಂಡ್‌ಗಳಲ್ಲಿ ಅಥವಾ ಆರ್‌ಡಿಗಳಲ್ಲಿ ಹಣ ಹೂಡಿ ಅದನ್ನು ದೀರ್ಘ‌ಕಾಲದವರೆಗೂ ಕಾದಿಟ್ಟರೆ ಅಷ್ಟೇ ಸಾಕು.

ಪ್ರಮುಖವಾಗಿ ಈ ಕುರಿತು ಮೊದಲೇ ಯೋಚಿಸಿ ಹೆಜ್ಜೆ ಇಡಬೇಕು. ಮಕ್ಕಳು ದೊಡ್ಡವರಾಗುತ್ತಾ ಬಂದ ಮೇಲೆ ಯೋಚಿಸಿದರೆ ಅದರಲ್ಲಿ ಫ‌ಲವಿಲ್ಲ. ಹಾಗೆ ಪ್ರಾರಂಭಿಸಿದರೂ, ನೀವು ಹೂಡುವ ಮತ್ತು ವಾಪಸ್ಸು ಬರುವ ಮೊತ್ತ ಅಷ್ಟೇನೂ ದೊಡ್ಡದಾಗಿರುವುದಿಲ್ಲ. ಹಾಗಾಗಿ ಮದುವೆಯಾಗಿ ಮಕ್ಕಳಾದ ಮೇಲೆ, ಈ ಕುರಿತು ಯೋಚಿಸುವುದಕ್ಕಿಂತ ಹೆಚ್ಚಾಗಿ, ಅದಕ್ಕಿಂತ ಬಹಳ ಮುನ್ನವೇ ಮಕ್ಕಳ ವಿದ್ಯಾಭ್ಯಾಸಕ್ಕಲ್ಲದಿದ್ದರೂ, ಆದಾಯದ ಒಂದು ಪಾಲಿನ್ನು ಧೀರ್ಘ‌ಕಾಲಕ್ಕೆಂದು ಕೂಡಿಟ್ಟುಕೊಂಡರೆ, ಅದನ್ನು ವಿದ್ಯಾಭ್ಯಾಸಕ್ಕಾದರೂ ಬಳಸಬಹುದು ಅಥವಾ ಬೇರೆ ಇನ್ಯಾವ ಕೆಲಸಗಳಿಗಾದರೂ ಬಳಸಿಕೊಳ್ಳಬಹುದು. ಎಲ್ಲಾ ಸರಿ, ಯಾವ ತರಹದ ಫ‌ಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ಯಾವ ತರಹದ ಫ‌ಂಡ್‌ಗಳಿಂದ ಅಧಿಕ ಲಾಭ ಬರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇರತ್ತದೆ. ಪ್ರಮುಖವಾಗಿ 12ರಿಂದ 15 ವಷಗಳ ಸುಧೀರ್ಘ‌ ಬಾಳುವುದಷ್ಟೇ ಅಲ್ಲ, ಒಳ್ಳೆಯ ರಿಟರ್ನ್ಸ್ ಕೊಡುವ ಫ‌ಂಡ್‌ಗಳು ಅಥವಾ ಹೂಡಿಕೆ ಮುಖ್ಯವಾಗುತ್ತದೆ. ಉದಾಹರಣೆಗೆ, ರಿಕರಿಂಗ್‌ ಡೆಪಾಸಿಟ್‌ನಲ್ಲಿ ಇಂತಿಷ್ಟು ಎಂದು ಹೂಡುತ್ತಾ ಹೋದರೆ, ವರ್ಷಕ್ಕೆ ಶೇ 9ರಷ್ಟು ಬಡ್ಡಿ ಬರುತ್ತದೆ. ಆದರೆ, ಮ್ಯೂಚ್ಯುಯಲ್‌ ಫ‌ಂಡ್‌ಗಳಲ್ಲಿ, ಅದರಲ್ಲೂ ಈಕ್ವಿಟಿ ಫ‌ಂಡುಗಳಲ್ಲಿ ಈ ಬಡ್ಡಿ ಇನ್ನಷ್ಟು ಹೆಚ್ಚಿರುತ್ತದೆ. ಹಾಗಾಗಿ ಮ್ಯೂಚ್ಯುಯಲ್‌ ಫ‌ಂಡ್‌ಗಳಲ್ಲಿ ಹಲವರು ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ಗಳ ಮೂಲಕ ಪ್ರತಿ ತಿಂಗಳು ಇಷ್ಟಿಷ್ಟು ಎಂದು ನಿಯಮಿತವಾಗಿ ಹಣ ಹೂಡುವುದು ಸೂಕ್ತ. ಮಕ್ಕಳು ಚಿಕ್ಕವರಿದ್ದಾಗಲೇ ಹೂಡುವುದನ್ನು ಶುರು ಮಾಡಿಕೊಂಡರೆ, ಸಹಜವಾಗಿ ಅವರು ಬೆಳೆದು ದೊಡ್ಡವರಾಗುವಷ್ಟರಲ್ಲಿ ದೊಡ್ಡ ಮೊತ್ತ ಕೈ ಸೇರುತ್ತದಷ್ಟೇ ಅಲ್ಲ, ಮಕ್ಕಳು ಸಣ್ಣ ಪ್ರಾಯದವರಿದ್ದಾಗಲೇ ಈ ಕೆಲಸ ಶುರು ಮಾಡಿದರೆ, ಆಗ ಪ್ರತಿ ತಿಂಗಳು ಪಾವತಿ ಮಾಡುವ ಹಣ ಸಹ ಕಡಿಮೆ ಇರುತ್ತದೆ.

ಉದಾಹರಣೆಗೆ, 20 ವರ್ಷಗಳ ನಂತರ ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕಾಗಿ 20ರಿಂದ 25 ಲಕ್ಷ ಬೇಕು ಅಂತಾದರೆ, ಮಗು ಹುಟ್ಟಿದ ವರ್ಷದಿಂದ ಪ್ರತಿ ತಿಂಗಳು ಸುಮಾರು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅದು ಮೆಚ್ಯುರಿಟಿ ಹಂತ ತಲುಪುವಷ್ಟರಲ್ಲಿ ನಿಮ್ಮ ಹಣವೇ 24 ಲಕ್ಷದಷ್ಟಾಗಿರುತ್ತದೆ. ಇನ್ನು ಅದಕ್ಕೆ ಬಡ್ಡಿ ಎಲ್ಲವೂ ಸೇರಿ 28 ಲಕ್ಷದಷ್ಟಾದರೂ ಆಗುತ್ತದೆ. ಅದೇ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಪ್ರತಿ ತಿಂಗಳು ಹೂಡುವ ಹಣವೂ ಜಾಸ್ತಿಯಾಗುತ್ತದೆ. ಮಗುವಿಗೆ 10 ವರ್ಷ ತುಂಬಿದ ನಂತರ ನೀವು ಹೂಡಿಕೆ ಮಾಡಬೇಕೆಂದುಕೊಂಡರೆ, ಆಗ ನಿಮ್ಮ ಬಳಿ ಇರುವುದು 10 ವರ್ಷಗಳಷ್ಟೇ. ನಿಮಗೆ 20 ಲಕ್ಷದ ಮೇಲೆ ದುಡ್ಡು ಬರಬೇಕೆಂದಿಟ್ಟುಕೊಂಡರೆ, ನೀವು ತಿಂಗಳಿಗೆ 20 ಸಾವಿರದಷ್ಟು ಪ್ರೀಮಿಯಂ ಪ್ರತಿ ತಿಂಗಳು ತುಂಬಬೇಕಾಗುತ್ತದೆ. ಹಾಗಾಗಿ ಮಗು ಚಿಕ್ಕದಾಗಿಂದಲೇ ಹೂಡಿಕೆ ಮಾಡುವುದು ಒಳ್ಳೆಯ ಉಪಾಯ.

ಹಾಗಾಗಿ, ಮಕ್ಕಳು ದೊಡ್ಡವರಾಗಲೀ, ಅವರೇನು ಓದಬೇಕು ಎಂಬುದನ್ನು ಅವರೇ ತೀರ್ಮಾನಿಸಿಲಿ… ಎಂಬ ವಿಷಯಗಳಿಗೆ ಕಾಯುವುದು ಬಿಟ್ಟು, ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ಅವರ ವಿದ್ಯಾಭ್ಯಾಸದ ಕಡೆಗೆ ಒಂದು ಕಣ್ಣಿರಲಿ. ಅವರು ಚಿಕ್ಕವರಿರುವಾಗಲೇ ಇಷ್ಟಿಷ್ಟು ಎಂದು ಹಣ ಉಳಿಸಿ, ಅವರ ವಿದ್ಯಾಭ್ಯಾಸಕ್ಕೆ ಈಗಿನಿಂದಲೇ ನಿಮ್ಮ ಕಾಣಿಕೆ ಇರಲಿ.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.