ಕಾಸರಗೋಡಿನ ಸಾಹಿತ್ಯ ಲೋಕ – 210: ದಿ| ಪಿ.ಎಸ್. ವೆಂಕಟ್ರಾಮ ದೈತೋಟ
Team Udayavani, Jul 31, 2017, 6:35 AM IST
ಭಾರತ ದೇಶದಲ್ಲಿ ಆಯುರ್ವೇದ ಪದ್ಧತಿಗೆ ಉದಾತ್ತವಾದ ಕೊಡುಗೆಯು ಕೇರಳದ್ದಾಗಿದೆ. ವೈದ್ಯವೃತ್ತಿಯಲ್ಲಿ ಜನೋಪಕಾರಿಯ ಆಯುರ್ವೇದ ವೈದ್ಯರಾಗಿ, ತಜ್ಞರಾಗಿ ಪ್ರವೃತ್ತಿಯಲ್ಲಿ ಆಯುರ್ವೇದ ಸಾಹಿತ್ಯ ಹಾಗೂ ಸಂಸ್ಕೃತಿಯ ಪೋಷಣೆಯಲ್ಲಿ ಗಣನೀಯ ಸಾಧನೆಗೈದು ಮೂಲಿಕ ವೈದ್ಯ ಚರಿತ್ರೆಯಲ್ಲಿ ಹೊಸ ಪರಂಪರೆ ಸೃಷ್ಟಿಸಿದ್ದು ಪಾಣಾಜೆ ವೈದ್ಯ – ಪಂಡಿತ ಮನೆತನವಾಗಿದೆ.
ಮೂಲತಃ ಕುಂಬಳೆ ಸೀಮೆಯ ಕಿಳಿಂಗಾರು ಪ್ರತಿಷ್ಠಿತ ಹವ್ಯಕ – ವೈದಿಕ ಮನೆತನದವರು ಕಿಳಿಂಗಾರುನಿಂದ ಪಾಣಾಜೆ ಸಮೀಪದ ದೈತೋಟಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಂಡರು. ಈ ಕುಟುಂಬದವರೆಲ್ಲರೂ ಆಯುರ್ವೇದ, ಮೂಲಿಕಾ ವೈದ್ಯ, ಮನೆ ಮದ್ದುಗಳಲ್ಲಿ ಪರಿಣತರು. ಹಾಗೆೆಯೇ ಕೃಷಿ, ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿವೆತ್ತವರಾಗಿದ್ದಾರೆ.
ಬದುಕು ಬಾಲ್ಯ: ಆಯುರ್ವೇದ ಚಿಕಿತ್ಸೆ ಮತ್ತು ಸಾಹಿತ್ಯ ರಚನೆಯಲ್ಲಿ ಪಂಡಿತರೆಂದು ಪ್ರಖ್ಯಾತಿ ಪಡೆದ ದಿ|ಶಂಕರನಾರಾಯಣ ಭಟ್ಟ -ವೆಂಕಟೇಶ್ವರಿ ದಂಪತಿಯರ ಪುತ್ರರಾಗಿ 1940 ಮಾರ್ಚ್ 30 ರಂದು ದಿ| ವೆಂಕಟ್ರಾಮ ದೈತೋಟದವರು ಜನಿಸಿದರು. ಪತ್ರಿಕೋದ್ಯಮಿಗಳೂ ಸಾಹಿತಿಗಳೂ ಆಗಿರುವ ಶಂಕರ ನಾರಾಯಣ ಭಟ್ಟ (ಶಂಪಾ ದೈತೋಟ), ಡಾ|ರಾಮಕೃಷ್ಣ, ನ್ಯಾಯವಾದಿ ಚಂದ್ರಶೇಖರ ದೈತೋಟ, ಪತ್ರಿಕೋದ್ಯಮಿ, ಸಾಹಿತಿ ಈಶ್ವರ ದೈತೋಟ ಸಹೋದರರು. ಡಾ|ಸಾವಿತ್ರಿ, ಡಾ|ವೆಂಕಟೇಶ್ವರಿ, ಶಾರದ ಸಹೋದರಿಯರು.
ದಿ| ವೆಂಕಟ್ರಾಮ ದೈತೋಟ ತಮ್ಮ ಹೈಸ್ಕೂಲು ತನಕದ ವಿದ್ಯಾಭ್ಯಾಸವನ್ನು ಪೆರ್ಲದ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪಡೆದರು. ಪದವಿಪೂರ್ವ ಶಿಕ್ಷಣವನ್ನು ಧಾರವಾಡದಲ್ಲಿ ಮತ್ತು ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮಂಗಳೂರು – ಸುರತ್ಕಲ್ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಳಿಸಿದರು. ಅನಂತರ ಸ್ವಲ್ಪ ಸಮಯ ಮೈಸೂರಿನ ಖಾಸಗಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ದುಡಿದರು. ಉತ್ತಮ ಛಾಯಾಗ್ರಾಹಕ ಹವ್ಯಾಸಿಯೂ ಆಗಿದ್ದರು.
ಅನಂತರ 1977ರಲ್ಲಿ ಎಂಜಿನಿಯರ್ ವೃತ್ತಿ ತ್ಯಜಿಸಿ ಅಜ್ಜ ವೈದ್ಯ ಭಟ್ಟರು, ತಂದೆ ಪಂಡಿತ ಶಂಕರನಾರಾಯಣ ಭಟ್ಟರ ವನಸ್ಪತಿಗಳ ಪರಿಚಯ ಹಾಗೂ ಉಪಯುಕ್ತ ರಹಸ್ಯಗಳನ್ನು ಶೋಧ ಮಾಡಿದ ಅನುಭವಗಳನ್ನು ಮನನ ಮಾಡಿಕೊಂಡು ಹಾಗೂ ಉಕ್ಕಿನಡ್ಕ ವಸಿಷ್ಠಾಶ್ರಮದ ನ್ಯಾಯಶಾಸ್ತ್ರವೇತ್ರರಾಗಿದ್ದ ಕೋಣಮ್ಮ ಮಹಾಲಿಂಗ ಭಟ್ ಅವರಿಂದ ಸಂಸ್ಕೃತ, ವೈದಿಕಗಳನ್ನು ಅಭ್ಯಸಿಸಿದರು. ಬಳಿಕ ಸ್ವಗೃಹ ದೈತೋಟದಲ್ಲಿ ಕುಟುಂಬದ ಪರಂಪರಾಗತ ಉಚಿತ ವೈದ್ಯ ಚಿಕಿತ್ಸಾ ಸೇವೆಯನ್ನು ಪತ್ನಿಯೊಂದಿಗೆ ಮುಂದುವರಿಸಿದ್ದರು. ವಿವಿಧ ರೀತಿಯ ಪ್ರಕೃತಿ ಚಿಕಿತ್ಸಾ ಕ್ರಮದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಕರ್ನಾಟಕದಿಂದಲ್ಲದೆ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸಹಿತ ಹಲವು ರಾಜ್ಯಗಳಿಂದ ಅವರ ಬಳಿ ಚಿಕಿತ್ಸೆಗೆ ರೋಗಿಗಳು ಬರುತ್ತಿದ್ದರು. ಔಷಧ ಮತ್ತು ತಯಾರಿ ವಿಧಾನವನ್ನು ಬರೆದುಕೊಟ್ಟು, ಕಡುಪಥ್ಯಗಳನ್ನು ಸೂಚಿಸುವುದು ದಂಪತಿಗಳ ಚಿಕಿತ್ಸಾಕ್ರಮವಾಗಿತ್ತು.
ಸಸ್ಯ ಶಾಸ್ತ್ರೀಯ ವಿಶ್ವಕೋಶ ಎಂದೇ ಗುರುತಿಸಲ್ಪಟ್ಟಿದ್ದ ದಿ|ವೆಂಕಟ್ರಾಮರು ಲಕ್ಷಕ್ಕೆ ಅಧಿಕ ಗಿಡಮೂಲಿಕೆಗಳ ಕುರಿತು ಜ್ಞಾನ ಹೊಂದಿದ್ದರು. ತುಳುವಿನಲ್ಲಿ ದೈತೋಟ (ಔಷಧ ಸಸ್ಯಗಳ ತೋಟ) ಎಂದು ಕರೆಯಲ್ಪಟ್ಟ ಅವರ ಮನೆ ಪರಿಸರ ಔಷಧ ಸಸ್ಯಗಳಿಂದ ತುಂಬಿದೆ. 1996ರಲ್ಲಿ ಪುತ್ತೂರಿನಲ್ಲಿ ಜರಗಿದ ಜಾಗತಿಕ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಒಂದು ಸಾವಿರದ ಎಂಟು ವಿವಿಧ ಮೂಲಿಕಾ ಸಸ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಸಾಹಿತ್ಯ ಸೇವೆ: ದಿ|ವೆಂಕಟ್ರಾಯರು ಆಯುರ್ವೇದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ತರಬೇತಿ ಶಿಬಿರ, ಗಿಡ ಮೂಲಿಕಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ನಾಡಿನಾದ್ಯಂತ ನೂರಾರು ಶಿಬಿರ- ಪ್ರದರ್ಶನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ್ದರು.
ಅಡಿಕೆ ಪತ್ರಿಕೆಯಲ್ಲಿ ಮನೆ ಮದ್ದು ಅಂಕಣಗಾರರಾಗಿ ಸಾಹಿತ್ಯಲೋಕಕ್ಕೆ ಪರಿಚಿತರಾಗಿದ್ದರು. ತಮ್ಮ ತೀರ್ಥರೂಪರಾದ ಪಂಡಿತ ಶಂಕರನಾರಾಯಣ ಭಟ್ಟರು ಸ್ಥಾಪಿಸಿದ ಪಾಣಾಜೆ ಆಯುವೇದ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಕೃತಿಗಳನ್ನು ತಮ್ಮ ಸಹೋದರ-ಸಹೋದರಿಯರೊಂದಿಗೆ ಪ್ರಕಾಶಿಸಿದ್ದಾರೆ. ದಿ|ವೆಂಕಟ್ರಾಮರ ಆಯುರ್ವೇದ ವೈದ್ಯಕೀಯ ಸೇವೆಗಾಗಿ ನಾಡಿನ ಅನೇಕ ಸಂಘ ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಗೌರವಿಸಿವೆ. ಉದುಪಿಯ ಶ್ರೀ ಧರ್ಮಸ್ಥಳ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗವು ಅವರಿಗೆ ಜಾನಪದ ವೈದ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
1970ರಲ್ಲಿ ಸಾಗರ ಮುಂಡಿಗೇಸರ ಸೂರ್ಯನಾರಾಯಣ – ನಾಗವೇಣಿ ದಂಪತಿಯರ ಸುಪುತ್ರಿ ಜಯಲಕ್ಷ್ಮೀ ಅವರನ್ನು ದಿ|ವೆಂಕಟ್ರಾಮರು ವಿವಾಹವಾದರು. ಜಯಲಕ್ಷ್ಮೀ ಅವರು ಎಂ.ಎ. ಪದವೀಧರೆ. ಗೃಹ ವೈದ್ಯೆ, ಸ್ತ್ರೀರೋಗ, ಪ್ರಸೂತಿ ತಂತ್ರ, ಪಾರಂಪರಿಕ ಆಹಾರ ಸಲಹೆಗಾರ್ತಿ. ದಿ|ವೆಂಕಟ್ರಾಮರು ರಚಿಸಿದ ಅನ್ನ -ಆರೋಗ್ಯ-ಔಷಧ, ಅಡಿಕೆ ವಲಯದ ಹಸಿ ಮದ್ದುಗಳು ಗ್ರಂಥಗಳಲ್ಲಿ ಜಯಲಕ್ಷ್ಮೀ ಅವರು ಸಹಲೇಖಕಿಯಾಗಿರುತ್ತಾರೆ. ದಿ|ವೆಂಕಟ್ರಾಮರು ಈಗಾಗಲೇ ಈ ಪಂಡಿತ ಮನೆತನದಲ್ಲಿ ಸಂಗ್ರಹಿತ ಮಾಹಿತಿಯನ್ನಾದರಿಸಿಕೊಂಡು ತಮ್ಮ ಕುಟುಂಬದವರೊಂದಿಗೆ ಸಂಗ್ರಹಿಸಿದ ಔಷಧೀಯ ಸಸ್ಯ ಸಂಪತ್ತು ಎಂಬ ಮಹತ್ ಗ್ರಂಥವೊಂದನ್ನು ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರವು ಪ್ರಕಾಶಿಸಿದೆ.
ದಿ| ವೆಂಕಟ್ರಾಮ- ಜಯಲಕ್ಷ್ಮೀ ದಂಪತಿಗೆ ಸಂತಾನಭಾಗ್ಯ ಒದಗಿಬಾರದಿದ್ದರೂ ನಾಡಿನ ಸಾವಿರಾರು ಮುದ್ದುಕಂದಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ಸಂತಾನ ವಾತ್ಸಲ್ಯ ಪಡೆದ ಪುಣ್ಯಜೀವಿಗಳು. ವೆಂಕಟ್ರಾಮರು 2017 ಜುಲೈ 21 ರಂದು ಮುಂಜಾನೆ ಪುತ್ತೂರಿಗೆ ತೆರಳಲು ಸ್ವರ್ಗದ ಪ್ರಯಾಣಿಕರ ತಂಗುದಾಣದಲ್ಲಿ ಕಾಯುತ್ತಿದ್ದ ಸಂದರ್ಭ ಕುಸಿದು ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದರು. ಕಾಸರಗೋಡಿನ ಆಯುರ್ವೇದೀಯ ಪಂಡಿತ ಪರಂಪರೆಯಲ್ಲಿ ಚಿರಸ್ಥಾಯಿಯಾಗಿ ದಿ|ವೆಂಕಟ್ರಾಮ ದೈತೋಟ ಅವರ ಬದುಕಿನ ಸಾಧನೆ ಮುಂಚೂಣಿಯಲ್ಲಿ ನಿಲ್ಲುವಂತಾಗಿದೆ.
– ಕೇಳು ಮಾಸ್ತರ್, ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಬೋಟ್ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್ ಮೃತದೇಹ ಪತ್ತೆ
Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ
Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ
Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಸರಕಾರ
Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ
MUST WATCH
ಹೊಸ ಸೇರ್ಪಡೆ
Explainer: FBI ವಾಂಟೆಡ್ ಲಿಸ್ಟ್ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್ ಯಾದವ್?
Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.