ಬದುಕಿನ ಮಂತ್ರದ ಬೀಜಾಕ್ಷರ


Team Udayavani, Aug 27, 2017, 7:30 AM IST

lead.jpg

ಅಡಿಕೆ ಮರದ ಬುಡದಲ್ಲಿ ಕೂತು ಕಾಳುಮೆಣಸಿನ ಚಿಗುರು ಬಳ್ಳಿಯನ್ನು ಆಧಾರಕ್ಕೆ ಅಂಟಿಸಿ ಕಟ್ಟುವ ರೈತನೊಬ್ಬ ನನಗೆ ಧ್ಯಾನಕ್ಕೆ ಕೂತಂತೆ ಕಾಣುತ್ತಾನೆ. ಅದೇ ಅಡಿಕೆ ಬುಡಕ್ಕೆ ಹೋಗಿ ಅದೇ ರೈತನಿಗೆ ಮೋದಿಯವರ ಜಿ.ಎಸ್‌.ಟಿ. ಎಂದರೇನು ಎಂದು ಕೇಳಿ. ನನಗೆ ಮೆಣಸು ಗೊತ್ತು, ಅಡಿಕೆ ಗೊತ್ತು, ಸೆಗಣಿ ಗೊಬ್ಬರ ಗಂಜಲ ಗೊತ್ತು, ಜಿ.ಎಸ್‌.ಟಿ. ಗೊತ್ತಿಲ್ಲ ಎನ್ನುತ್ತಾನೆ. ಇದೇ ಪ್ರಶ್ನೆಯನ್ನು ಈ ದೇಶದ ರಾಜಕಾರಣಿಗೆ, ಬುದ್ಧಿಜೀವಿಗೆ ಕೇಳಿನೋಡಿ, ಅವರು ಗಂಟೆಗಟ್ಟಳೆ ಮಾತನಾಡುತ್ತಾರೆ. ಇದೇ ಬೇರೆಯವರಿಗೂ ನಮ್ಮ ದೇಶದ ರೈತರಿಗೂ ಇರುವ ಅಂತರ…

ಚಿತ್ರದುರ್ಗದ ಹತ್ತಿರ ಬಿ.ಜಿ. ಕೆರೆ ಎಂಬ ಊರಿದೆ. ಸಂಜೆಯ ಹೊತ್ತು ಭೀಮಗಾತ್ರದ ಹುಣಸೆಮರ ನೋಡಬೇಕೆಂದು ಕಾರು ನಿಲ್ಲಿಸಿ ರಸ್ತೆಯಿಂದ ಬದಿಗೆ ಸರಿದೆ. ಪಕ್ಕದ ಹೊಲದಲ್ಲಿ ಒಬ್ಟಾತ ನೇಗಿಲು ಎಳೆಯುತ್ತಾ ಇನ್ನೊಬ್ಟಾಕೆ ಅದೇ ನೇಗಿಲ ಹಿಡಿ ಹಿಡಿದು ಅದು ಮೂಡಿಸುತ್ತಿದ್ದ ಗೆರೆಯ ಮೇಲೆ ಬೀಜ ಬಿತ್ತುತ್ತಿದ್ದಳು. ರಾಸುಗಳ ಬದಲು ಎರಡಾಳುಗಳು ನೇಗಿಲು ಎಳೆಯುವುದು ಗೊತ್ತು. ಇಲ್ಲಿರುವುದು ಒಬ್ಟಾತ. ಬಡತನ, ಬರಗಾಲದ ಪರಿಣಾಮವಿರಬಹುದು. ಗಟ್ಟಿ ಆಳು, ಸರಾಗವಾಗಿ ಎಳೆಯುತ್ತಲೇ ಇದ್ದರು. ಬಹುಶಃ ಗಂಡನೇ ಇರಬೇಕು. ನೇಗಿಲು ಹಿಡಿದವಳು ಹೆಂಡತಿ. ಯಜಮಾನನಿಗೆ ಒಂದೇ ಕೆಲಸ. ತ್ರಾಸದ ಕೆಲಸ. ನೇಗಿಲು ಎಳೆಯುವುದು. ಹೆಂಡ್ತಿಯದು ಒಂದಲ್ಲ, ಎರಡು, ಮೂರು ಕೆಲಸ. ಅದು ಹೆಂಗಸಿಗೆ ಮಾತ್ರ ಸಾಧ್ಯ.

ದಯವಿಟ್ಟು ಈ ಅಕ್ಷರದ ಹತ್ತಿರ ನಿಂತು ಯೋಚಿಸಿ. ಆಕೆ ಸೆರಗಿನಲ್ಲಿ ಕಟ್ಟಿಕೊಂಡ ಬೀಜವನ್ನು ಸ್ವಲ್ಪ ಸ್ವಲ್ಪವೇ ನೇಗಿಲಿಗೆ ಅಂಟಿಕೊಂಡಿರುವ ಬಿದಿರಿನ ಓಟೆಗೆ ತುಂಬಿಸುತ್ತಿದ್ದಳು. ಅದರ ತುದಿ ನೇಗಿಲು ಸೃಷ್ಟಿಸುವ ನೆಲದ ಗೆರೆಯ ಮೇಲೆ ನಿಂತಿತ್ತು. ಅದೇ ಗೆರೆಯ ಮೇಲೆ ನಾಜೂಕಾಗಿ ಒಂದೊಂದೇ ಬೀಜ ನಿಲ್ಲಬೇಕು. ನೇಗಿಲ ತುದಿ ಈ ಮೊದಲಿನ ಗೆರೆಯ ಮೇಲೆ ಮತ್ತೆ ಹೋಗುವಂತಿಲ್ಲ. ಒತ್ತಿ ಗಟ್ಟಿಯಾಗಿ ಹಿಡಿದರೆ ಅದನ್ನು ಎಳೆಯುವ ಗಂಡನಿಗೆ ಭಾರ, ಶ್ರಮ, ಒತ್ತಡ. ಒತ್ತಿ ಹಿಡಿಯದಿದ್ದರೆ ಆಳವಾದ ಗೆರೆ ಮೂಡದು. ಆಳವಾದ ಗೆರೆ ಮೂಡದಿದ್ದರೆ ಬೀಜ ಆಳದಲ್ಲಿ ಹರವಾದ ಮಣ್ಣಿನಲ್ಲಿ ಊರದು.

ಬೀಜ ಮೇಲೆಯೇ ನಿಂತರೆ ಅದನ್ನು ಹಕ್ಕಿಯೋ ಕೀಟಗಳ್ಳೋ ತಿಂದು ಖಾಲಿಯಾಗುತ್ತದೆ. ಬಿತ್ತಿದ ಬೀಜ ನೆಲಕ್ಕೆ ಸರಿಯಾಗಿ ಕೂರದಿದ್ದರೆ ಮೊಳಕೆಯೊಡೆಯದು. ಮೊಳಕೆಯೊಡೆಯದಿದ್ದರೆ ಮುಂದಿನ ಫ‌ಲ-ಬೆಳೆಯಿಲ್ಲ. ಗಂಡ-ಸಂಸಾರ ಉಳಿಯಬೇಕಾದರೆ ಬೀಜ ಭೂಮಿಯೊಳಕ್ಕೆ ಇಳಿಯಲೇ ಬೇಕು. ಹಾಗಂತ ನೇಗಿಲನ್ನು ಒತ್ತಿದರೆ ಗಂಡ ತತ್ತರಿಸುತ್ತಾನೆ. ಪತ್ನಿಯ ಮನಸ್ಥಿತಿ ಯೋಚಿಸಿ ಒತ್ತುವ-ಒತ್ತದ ತ್ರಿಶಂಕುವಿನ ಮಧ್ಯೆ ಆ ಮನಸ್ಸು ಮತ್ತು ನೇಗಿಲು ಚಲಿಸುತ್ತದೆ. ಹೆಂಡ್ತಿ ಮೇಲಿನ ಪ್ರೀತಿಗಿಂತ ಸಂಸಾರ ಸಾಗಲೇಬೇಕೆಂಬ ಆಸೆ-ಬದ್ಧತೆಯಿಂದ ಗಂಡ ಎಲ್ಲವನ್ನೂ ಸಹಿಸಿಕೊಂಡು ನೇಗಿಲು ಎಳೆಯುತ್ತಾನೆ. ಹಿಂಬದಿಯ ಆಕೆಗೆ ಎರಡೇ ಕೈ ಇರುವುದು. ಒಂದು ನೇಗಿಲ ಹಿಡಿಗೆ. ಇನ್ನೊಂದು ಬೀಜಕ್ಕೆ. ಆದರೂ ಆಕೆ ಆಗಾಗ ಬೀಜ ಕಟ್ಟಿಕೊಂಡ ಸೆರಗಿನಿಂದಲೇ ಮುಖ ಒರೆಸಿಕೊಳ್ಳುತ್ತಾಳೆ. ಹಣೆಯಲ್ಲಿ ಹನಿ ಹನಿ ಬೆವರು ಜಿನುಗುತ್ತದೆ. ಸಂಜೆಯ ತಂಪು ಗಾಳಿಗೆ ಆ ಬೆವರು ಶ್ರಮದಿಂದ ಅಲ್ಲ, ಗಂಡನಿಗೆ ಆಗುವ ನೋವಿಗೆ…

ಒಂದು ಹಿಡಿ ಮಣ್ಣು ಹಿಡಿದು ಹಿಚುಕಿದೆ. ಚೂರೂ ಪಸೆ ಇರಲಿಲ್ಲ. ಬಿತ್ತಿದ ಬೀಜವೂ ಮೊಳಕೆಯೊಡೆಯುತ್ತದೆ ಎಂಬ ಗ್ಯಾರಂಟಿ ನನಗಿರಲಿಲ್ಲ. ನನ್ನ ಆಸೆ ಈಡೇರುವಂತೆ ಕಂಡಿತು. ಅವರೇ ಬಿತ್ತನೆ ನಿಲ್ಲಿಸಿ ನನ್ನ ಕಡೆ ಬಂದರು. ಮಳೆಯಿಲ್ಲ, ಸತತ ಬರದ ಕತೆ, ಬೆಳೆ ಬರಲಿ ಬಿಡಲಿ ಬಿತ್ತಲೇಬೇಕಾದ ಅನಿವಾರ್ಯತೆ, ಮಳೆ ಬಂದೇ ಬರುತ್ತದೆ ಎಂಬ ಆಸೆ, ಭರವಸೆ. ಅದಕ್ಕಾಗಿ ಕಾಯುವ ಸುಖ. ನಾನು ಉದ್ದೇಶಪೂರ್ವಕವಾಗಿ ಲೆಕ್ಕಕ್ಕಿಂತ ಹೆಚ್ಚೇ ಮಾತನಾಡಿದೆ. ಸಂಜೆಯ ತಂಪುಗಾಳಿಗೆ ಹುಣಸೆಯಡಿ ನಿಂತ ಅವರ‌ ಮುಖದ ಬೆವರಹನಿ ಮಾಯವಾಯಿತು.

ನೀವೀಗ ಮಲೆನಾಡಿಗೆ ಬನ್ನಿ. ಗದ್ದೆಯಲ್ಲಿ ನೀವು ನಿಲ್ಲಿ. ಉಳುಮೆ ಮಾಡಿ ಅದರ ಮೇಲೆ ಹಲಗೆ ಬಿಟ್ಟು ಸಂಜೆಯ ಹೊತ್ತು ಅದೇ ಕೆಂಪು ನೀರಿಗೆ ಬೀಜ ಹರಹಾಕಿ ನಿಶ್ಚಿಂತೆಯಿಂದ ಕೂರಬೇಕಾದ ರೈತನ ಮರುದಿನದ ಒಂದು ಆಟ ನೋಡಿ. ಗದ್ದೆಯ ಬದುವಿಗೆ ನಾಲ್ಕೈದು ಸುತ್ತು ಬರುವ ಸಾಗುವಳಿದಾರ ಅಲ್ಲಲ್ಲಿ ಕೂತು-ನಿಂತು ಚಿಕ್ಕ ಚಿಕ್ಕ ಕಲ್ಲುಗಳನ್ನು ಅದೇ ಗದ್ದೆಯ ಕೆಂಪು ನೀರಿಗೆ ಬಿಸಾಡುತ್ತಾನೆ. ಕಾರಣ, ಆಗ ಬಿತ್ತನೆ ಮಾಡಿದ ಆ ಗದ್ದೆಯ ನೀರಲ್ಲಿ ರಿಂಗಣ-ಕಂಪಣವೇಳುತ್ತದೆ.

ಕೆಂಪು ನೀರ ನವಿರು ಮಣ್ಣು ಬೀಜದ ಮೇಲೆ ಕೂತು ಅದನ್ನು ಗಟ್ಟಿಗೊಳಿಸಿದೆಯಾ ಅಥವಾ ಕಲ್ಲಿನ ರಿಂಗಣಕ್ಕೆ ಬೀಜ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಾರುತ್ತಿದೆಯೇ ಎಂಬುದೇ ಆ ಪರೀಕ್ಷೆ. ನೀರು ತಿಳಿಯಾದಾಗ ಕೆಸರು ಬೀಜದ ಮೇಲೆ ಕೂರಲೇ ಬೇಕು. ಸ್ಥಿರವಾಗಲೇ ಬೇಕು. ಆಗ ಮಾತ್ರ ಅದು ಸುಸ್ಥಿರವಾಗುತ್ತದೆ. ಕಲ್ಲು ಸೃಷ್ಟಿಸುವ ಕಂಪನದ ಪರೀಕ್ಷೆಯಲ್ಲಿ ಫ‌ಲಿತಾಂಶ ನಿಖರ, ಸ್ಪಷ್ಟವಾಗುತ್ತದೆ.

ಬಯಲು ಮತ್ತು ಮಲೆನಾಡಿನ ಈ ಎರಡೂ ಕಥೆಗಳನ್ನು ನಾನು “ಬೀಜಧ್ಯಾನ’ ಎಂದು ಕರೆಯುತ್ತೇನೆೆ. ನೆಲ, ರೈತನನ್ನು ಧ್ಯಾನಕ್ಕೆ ತಳ್ಳುವುದೆಂದರೆ ಇದೇ ಇರಬೇಕು. ರೈತ ಕೃಷಿಗೆ “ಇಳಿದ’ ಎಂಬುದು ಕೂಡಾ ಇದೇ. ಇದೇ ಧ್ಯಾನ ಅವನೊಳಗಡೆ ಮುಗ್ಧತೆ ಮತ್ತು ಮೌನವನ್ನು ಸೃಷ್ಟಿಸುತ್ತದೆ. ಎಷ್ಟೋ ಸಲ ಇದೇ ಮುಗ್ಧತೆ ಮತ್ತು ಮೌನ ಹೊರಜಗತ್ತಿಗೆ ಅಜ್ಞಾನವಾಗಿ ಕಾಣಿಸುತ್ತದೆ. ಅಡಿಕೆ ಮರದ ಬುಡದಲ್ಲಿ ಕೂತು ಕಾಳುಮೆಣಸಿನ ಮೃದು ಚಿಗುರು ಬಳ್ಳಿಯನ್ನು ಆಧಾರಕ್ಕೆ ಅಂಟಿಸಿ ಕಟ್ಟುವ ರೈತನೊಬ್ಬ ನನಗೆ ಧ್ಯಾನಕ್ಕೆ ಕೂತಂತೆ ಕಾಣಿಸುವುದು ಇದೇ ಕಾರಣಕ್ಕೆ. ಅದೇ ಅಡಿಕೆ ಬುಡಕ್ಕೆ ಹೋಗಿ ಅದೇ ರೈತನಿಗೆ ಮೋದಿಯವರ ಜಿ.ಎಸ್‌.ಟಿ. ಅಂದರೇನು ಎಂದು ಕೇಳಿ ನೋಡಿ, ನನಗೆ ಅಡಿಕೆ ಗೊತ್ತು, ನನಗೆ ಮೆಣಸಿನ ಬಗ್ಗೆ ಗೊತ್ತು. ನನಗೆ ಗೊಬ್ಬರ-ಸೆಗಣಿ-ಗಂಜಲ ಗೊತ್ತು, ನನಗೆ ಜಿ.ಎಸ್‌.ಟಿ. ಗೊತ್ತಿಲ್ಲ ಎನ್ನುತ್ತಾನೆ. ಇದೇ ಪ್ರಶ್ನೆಯನ್ನು ಚಕ್ರದ ಮೇಲೆ ಆವೆಮಣ್ಣಿಟ್ಟು ಮಡಿಕೆ ಮಾಡುವ ಕುಂಬಾರನಿಗೆ ಕೇಳಿ, ಅಡಿಕೆ ಮರವೇರಿ ಬೋಡೋì ಬಿಡುವ ದಾಮುವಿಗೆ ಕೇಳಿ ಅವರ್ಯಾರು ರಿಯ್ನಾಕ್ಟ್ ಮಾಡುವುದೇ ಇಲ್ಲ. ಯಾಕೆಂದರೆ ನಮ್ಮ ನೆಲದವರಿಗೆ ತಮ್ಮ ಮಿತಿಯಾಚೆಯ ಸುಳ್ಳುಗಳು, ಸತ್ಯಗಳು ಗೊತ್ತಿರುವುದಿಲ್ಲ. ಇದೆಲ್ಲಾ ಅವರಿಗೆ ಈ ನೆಲ, ಬೀಜ, ಸಾಗುವಳಿಗಳು ಕಲಿಸಿಕೊಟ್ಟ ಧ್ಯಾನದ ಫ‌ಲಶ್ರುತಿಗಳು. ಹಾಗಂತ ಇಂತಹದ್ದೇ ಪ್ರಶ್ನೆಗಳನ್ನು ನಮ್ಮ ದೇಶದ ಬುದ್ಧಿಜೀವಿಗಳಿಗೆ, ರಾಜಕಾರಣಗಳಿಗೆ, ಹೋರಾಟಗಾರರಿಗೆ ಕೇಳಿ ನೋಡಿ. ಆತ ಜಿ.ಎಸ್‌.ಟಿ.ಯ ಬಗ್ಗೆ ಅರ್ಧ ಗಂಟೆ ಮಾತನಾಡುತ್ತಾನೆ. ಸುಳ್ಳುಗಳನ್ನು ಸತ್ಯವೆಂದೂ, ಸತ್ಯವನ್ನು ಸುಳ್ಳು ಎಂದು ನಾಜೂಕಾಗಿ ವಾದಿಸುತ್ತಾನೆ.

ಪಕ್ಕಾ ಈ ನೆಲದವರಾದ ಸೆಂಚುರಿ ಗೌಡ, ಗಡ್ಡಪ್ಪ ಇವರೆಲ್ಲಾ ಭಾಗಿಯಾದ ಮೊದಲ ಚಲನಚಿತ್ರಗಳನ್ನು ನೋಡಿ. ಅಲ್ಲಿ ಅವರು ನಟಿಸಲೇ ಇಲ್ಲ. ಕೇವಲ ಭಾಗಿಯಾದದ್ದಷ್ಟೇ. ಎರಡು-ಮೂರನೆಯ ಚಿತ್ರಗಳಲ್ಲಿ ಅವರು ನಿಜವಾಗಿಯೂ ನಟಿಸಲಾಂಭಿಸಿದರು. ಅಥವಾ ನಿರ್ದೇಶಕರೇ ಅವರನ್ನು ಹಾಗೆ ಮಾಡಿದರು. ಇದೇ ನಮ್ಮ ರೈತಾಪಿಗಳ, ನೆಲದವರ ಸತ್ಯ-ಮಿಥ್ಯೆಗಳು.

ನೆಲದ ಸತ್ಯಗಳೇ ರೈತರ ಸತ್ಯವಾದಾಗ ನಮಗೆ ಕೃಷಿರಂಗ ಮೋಸ, ವಂಚನೆಯ ಕ್ಷೇತ್ರವಾಗಿ ಕಾಣಿಸುವುದೇ ಇಲ್ಲ. ಜನಪ್ರಿಯ ಸಿನೆಮಾ ನಟನೊಬ್ಬ ಕೋಟಿಗಟ್ಟಲೆ ಖರ್ಚು ಮಾಡಿ ಕೆರೆಗಳು ಹೂಳು ತೆಗೆಯಬೇಕೆಂದು ಹೊರಡುವುದು; ದಕ್ಷಿಣ ಭಾರತದ ಬಹುಭಾಷಾ ನಟರೊಬ್ಬರು ಕೃಷಿ-ಹಸಿರು ಬಗ್ಗೆ ಅಂಕಣ ಬರೆಯಲು ಆರಂಭಿಸುವುದು, ಎಂ.ಪಿ.ಯಾಗಿದ್ದುಕೊಂಡೇ ನಾಗರಿಕ ಜಗತ್ತಿನಿಂದ ಬಹುದೂರ ಐದೆಕ್ರೆ ಜಾಗ ಖರೀದಿಸಿ ಹಸಿರು ಹಚ್ಚುವುದು, ಕಾಳಿನದಿಯ ಪಕ್ಕದಲ್ಲೇ ಕೃಷಿಭೂಮಿ ಖರೀದಿಸಿ ಅಲ್ಲೊಂದು ಸುಂದರ ಮನೆಕಟ್ಟಿ ಅದಕ್ಕೆ “ಕುಟೀರ’ ಎಂದು ಹೆಸರಿಟ್ಟು ಮುಂಬಯಿಯಿಂದ ವಾರಕ್ಕೊಮ್ಮೆ ಅಲ್ಲಿಗೆ ಬಂದು ಹೋಗುವ ಮಾರುವಾಡಿ ಉದ್ಯಮಿ- ಇವರೆಲ್ಲಾ ನೆಲವನ್ನು ತಬ್ಬಿಕೊಂಡದ್ದು ಭಾಗಶಃ ಇಂತಹದ್ದೇ ಬೇರು ಸತ್ಯಗಳಿಗೇ.

“ಮಾತನಾಡುವುದೇ ನಿಜವಾದ ಭಾರತ, ವಾಚಾಳಿತನವೇ ಅಸ್ತಿತ್ವ’ ಎನ್ನುವ ಜನರಿಗೆ ರೈತರ ಮೌನದ ಮೇಲೆಯೇ ಗುಮಾನಿ. ದೇರ್ಲದ ಒಂದು ಮೂಲೆಯಲ್ಲಿ ನಾನು ನನ್ನಷ್ಟಕ್ಕೇ ಬದುಕುವವ. ಪಾಠ ಮತ್ತು ಕೃಷಿ ಇತ್ತೀಚೆಗೆ ನನ್ನೊಳಗಡೆ ಸಂತಸ ತುಂಬಿದೆ. ಮನೆಗೆ ಬಂದು ನನ್ನ ದುಡಿಮೆಯ ಕಾರಣ ಊರೊಳಗೆ ಏಕಾಂಗಿಯಾಗಿಯೇ ಉಳಿಯುತ್ತೇನೆ. ಆ ಅನಿವಾರ್ಯ ಮೌನವೇ ಕೆಲವರ ಪಾಲಿಗೆ ಅಪಾಯವಾಗಿ ಕಾಣಿಸುತ್ತದೆ. “ಬಹಳ ಸಮಯದಿಂದ ಸುಮ್ಮಗಿದ್ದಾನೆ, ಏನೋ ಇರಬೇಕು’ ಎಂಬ ಗುಮಾನಿಯೂ ಕೆಲವರದು.

ಅನೇಕರಿಗೆ ಕೃಷಿ ಅಸುರಕ್ಷತೆಯ ಭಾವನೆ ಮೂಡಿಸುವುದು ಇದೇ ಕಾರಣಕ್ಕೆ. ಕೃಷಿಯಿಂದಲೇ ಸ್ವಾವಲಂಬಿಯಾಗಿ ಅಂಗಡಿಯೋ, ಉದ್ಯಮವೋ ಆರಂಭಿಸಿದವರು ಕಡಿಮೆಯಿಲ್ಲ. ಹಳ್ಳಿಯಲ್ಲೇ ಕೃಷಿ ಮಾಡುತ್ತ ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ನಂಥ ಸ್ಥಳೀಯ ಆಡಳಿತಾಂಗಗಳಲ್ಲಿ ಪಾಲು ಪಡೆದವರಿದ್ದಾರೆ. ಇಂಥವರನ್ನೇ ಊರಿನ ಯಾವುದಾದರೂ ಕಾರ್ಯಕ್ರಮಗಳಿಗೆ ಕರೆಯಿರಿ. ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರಿನ ಮುಂದೆ “ಪ್ರಗತಿಪರ ಕೃಷಿಕರು’ ಎಂದು ನಮೂದಿಸಿದರೆ ಅವರಿಗೆ ಸಿಟ್ಟು ಬರುತ್ತದೆ. ಅಂಥವರು ಎಲೆಕ್ಷನ್‌ ಗೆದ್ದಿರುವುದೇ, ಅಂಗಡಿ ತೆರೆದಿರುವುದೇ, ಉದ್ಯಮ ಆರಂಭಿಸಿರುವುದೇ ಕೃಷಿ ಲಾಭದಿಂದ. ಅಂಥವರಿಗೆ ತಮ್ಮ ಹೆಸರಿನ ಮುಂದೆ ಮಾಜಿ ಪಂಚಾಯತ್‌ ಸದಸ್ಯ ಎಂದು ನಮೂದಿಸಿದರೂ ಸಾಕು, ಪರಮ ಸುಖ. ಕೃಷಿಕ ಎಂಬುದು ಮಾತ್ರ ಬೇಡವೇ ಬೇಡ. ಕೀಳರಿಮೆಯ ಪರಿಣಾಮವೋ ಏನೋ ಈ ಹೊಸ ಸುಖ ರೈತಾಪಿಗಳನ್ನು ನಿಧಾನವಾಗಿ ಹಳ್ಳಿ ಬೇರುಗಳನ್ನು ಕಳಚುವಂತೆ ಮಾಡುತ್ತಿದೆ. ಸುಖ ಎಂಬುದು ನಗರದಲ್ಲಿ , ದುಡ್ಡಿನಲ್ಲಿ ಮಾತ್ರ ಎಂಬಂತೆ ಬದಲಾಯಿಸುತ್ತಿದೆ.

– ನರೇಂದ್ರ ರೈ ದೇರ್ಲ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.