ಜಿ.ಪಂ. ಸಭೆಯಿಂದ ಹೊರಗುಳಿದ ಕಾಂಗ್ರೆಸ್ ಸದಸ್ಯರು
Team Udayavani, Oct 27, 2017, 9:19 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಗುರುವಾರ ಆಯೋಜಿಸಿದ್ದ 9ನೇ ಸಾಮಾನ್ಯ ಸಭೆಯ ಮುಂದುವರಿದ ಸಭೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಗಿದೆ. ಸಭೆಯಿಂದ ಕಾಂಗ್ರೆಸ್ ಸದಸ್ಯರು ಹೊರಗುಳಿದಿರುವುದು ಕೋರಂ ಕೊರತೆಗೆ ಕಾರಣವಾಗಿತ್ತು.
ಅ. 16ರಂದು ನಡೆದ ಸಾಮಾನ್ಯಸಭೆಯಲ್ಲಿ ಪಿಡಿಒ ವರ್ಗಾವಣೆಯಲ್ಲಿ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದರು. ಈ ಕುರಿತ ಚರ್ಚೆ ವೇಳೆ ಮರಳು ಸಾಗಾಟ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಲ್ಲೇಖ ಮಾಡಿರುವುದನ್ನು ಪ್ರತಿಭಟಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಬಳಿಕ ಸಭೆ ಮುಂದೂಡಲಾಗಿದ್ದು, ಮುಂದುವರಿದ ಸಾಮಾನ್ಯ ಸಭೆಯನ್ನು ಅ.26 ರಂದು ಕರೆಯಲಾಗಿತ್ತು.
ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಸಮಯಕ್ಕೆ ಸರಿಯಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರು, ಬಿಜೆಪಿಗೆ ಸೇರಿದ ಸ್ಥಾಯಿಸಮಿತಿ ಅಧ್ಯಕ್ಷರು, ಸಿಇಒ ಹಾಗೂ ಅಧಿಕಾರಿಗಳು ಸಭೆಯಲ್ಲಿ ಅಸೀನರಾಗಿದ್ದರು. ಆದರೆ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ಗೆ ಸೇರಿದ 2 ಸ್ಥಾಯಿಸಮಿತಿ ಅಧ್ಯಕ್ಷರುಗಳು ಸಭೆಗೆ ಆಗಮಿಸಿರಲಿಲ್ಲ.
11.15ರ ವೇಳೆಗೆ ಬಿಜೆಪಿ ಸದಸ್ಯರು ಸಭೆಯ ಕಲಾಪ ಆರಂಭವಾಗದಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಇಒ ಅವರು ಜಿಲ್ಲಾ ಪಂಚಾಯತ್ ನಿಯಮದಂತೆ ಕೋರಂ ಇಲ್ಲದೆ ಸಭೆ ಆರಂಭಿಸಲು ಅವಕಾಶ ಇಲ್ಲ. ನಿಯಮದಂತೆ ಜಿಲ್ಲಾ ಪಂಚಾಯತ್ ಪರಿಷತ್ ಸಭೆಯ ಒಟ್ಟು ಸದಸ್ಯರ ಶೇ.50 ರಷ್ಟು ಮಂದಿ ಹಾಜರಿದ್ದರೆ ಮಾತ್ರ ಕೋರಂ ಆಗುತ್ತದೆ. ಸಭೆಯ ನಿಗದಿಯಾದ ಸಮಯಕ್ಕಿಂತ ಅರ್ಧ ತಾಸುವರೆಗೆ ಕೋರಂಗಾಗಿ ಅಧ್ಯಕ್ಷರು ಕಾಯಬಹುದು. ಆ ಬಳಿಕವೂ ಕೋರಂ ಆಗದಿದ್ದರೆ ಸಭೆಯನ್ನು ಮುಂದೂಡಿ ಮುಂದಿನ ಸಭೆಗೆ ದಿನಾಂಕವನ್ನು ನಿಗದಿಪಡಿಸಬೇಕಾಗುತ್ತದೆ ಎಂದು ವಿವರಿಸಿದರು. ಅರ್ಧ ತಾಸು ಕಾದರೂ ಕಾಂಗ್ರೆಸ್ ಸದಸ್ಯರು ಸಭೆಗೆ ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಯಿತು. ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು.
ಕೋರಂಗೆ 26 ಸದಸ್ಯರ ಉಪಸ್ಥಿತಿ ಅವಶ್ಯ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಂದ ಚುನಾಯಿತರಾದ ಒಟ್ಟು 36 ಸದಸ್ಯರಿದ್ದಾರೆ. ಇದಲ್ಲದೆ ಜಿಲ್ಲೆಯ 8 ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು. ಓರ್ವ ಸಂಸತ್ ಸದಸ್ಯರು ಹಾಗೂ 5 ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಪರಿಷತ್ನ ಸಭೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿರುತ್ತಾರೆ. ಹೀಗೆ ಒಟ್ಟು ಪರಿಷತ್ ಸಭೆಯ ಸದಸ್ಯಬಲ 52 ಆಗಿರುತ್ತದೆ. ಜಿ.ಪಂ. ಚುನಾಯಿತ ಸದಸ್ಯರಲ್ಲಿ 21 ಮಂದಿ ಬಿಜೆಪಿ ಹಾಗೂ 15 ಮಂದಿ ಕಾಂಗ್ರೆಸ್ಗೆ ಸೇರಿದ ಸದಸ್ಯರಿದ್ದಾರೆ. ಶಾಸಕರಲ್ಲಿ 7 ಕಾಂಗ್ರೆಸ್ ಹಾಗೂ ಓರ್ವ ಬಿಜೆಪಿ ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷರುಗಳಲ್ಲಿ 3 ಕಾಂಗ್ರೆಸ್ ಹಾಗೂ 2 ಬಿಜೆಪಿ ಹಾಗೂ ವಿಧಾನ ಪರಿಷತ್ಸದಸ್ಯರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ತಲಾ ಓರ್ವ ಸದಸ್ಯರು ಪರಿಷತ್ ಸಭೆಯ ಸದಸ್ಯರಾಗಿರುತ್ತಾರೆ. ಹೀಗೆ ಎಲ್ಲಾ ಸೇರಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 26 ಸದಸ್ಯರನ್ನು ಹೊಂದಿದ್ದು ಸಮಬಲದಲ್ಲಿದೆ. ಸಭೆ ನಡೆಸಬೇಕಾದರೆ ಕೋರಂಗೆ 26 ಸದಸ್ಯರ ಅವಶ್ಯವಿದೆ. ಆದರೆ ಸೋಮವಾರ ಆಯೋಜಿಸಿದ್ದ ಭೆಯಲ್ಲಿ ಬಿಜೆಪಿಯ 22 ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರು ಸೇರಿ ಒಟ್ಟು 23 ಸದಸ್ಯರು ಹಾಜರಿದ್ದು ಕೋರಂಗೆ 3 ಸದಸ್ಯರು ಕೊರತೆ ಉಂಟಾಗಿತ್ತು.
ಸ್ಥಾಯಿಸಮಿತಿ ಅಧ್ಯಕ್ಷರ ಕೊಠಡಿಯಲ್ಲೇ ಉಳಿದ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ಗೆ ಸೇರಿದ ಎಲ್ಲಾ 15 ಮಂದಿ ಸದಸ್ಯರು ಹಾಗೂ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದರು. ಆದರೆ ಅವರು ಜಿಲ್ಲಾ ಪಂಚಾಯತ್ ಸದನಕ್ಕೆ ಆಗಮಿಸದೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗಿರುವ ಸ್ಥಾಯಿಸಮಿತಿ ಕಚೇರಿಯಲ್ಲೇ ಉಳಿದುಕೊಂಡು ಸಭೆ ನಡೆಸಿದರು.
ಅಧ್ಯಕ್ಷರ ನಡವಳಿಕೆಯಿಂದ ನೋವಾಗಿದೆ : ಕಾಂಗ್ರೆಸ್
ಸಭೆಗೆ ಹಾಜರಾಗುವ ಉದ್ದೇಶದಿಂದಲೇ ಬಂದಿದ್ದೆವು. ಅ.16ರ ಸಾಮಾನ್ಯಸಭೆಯಲ್ಲಿ ಆಗಿರುವ ವಿಚಾರಗಳ ಬಗ್ಗೆ ಜಿ. ಪಂ. ಅಧ್ಯಕ್ಷರು ನಮ್ಮನ್ನು ಕರೆದು ಮಾತನಾಡುವ ಸೌಜನ್ಯವನ್ನೂ ಕೂಡಾ ತೋರ್ಪಡಿಸಲಿಲ್ಲ. ಸಭೆಯೊಳಗೆ ಮತ್ತೆ ವಿಷಯ ಪ್ರಸ್ತಾವವಾಗುವುದನ್ನು ನಾವು ಬಯಸುತ್ತಿಲ್ಲ. ಅವರು ನಮ್ಮನ್ನು ಕರೆದಿದ್ದರೆ ಅವರ ಕೊಠಡಿಗೆ ಹೋಗಿ ಮಾತನಾಡಿ ವಿಷಯವನ್ನು ಸೌಹಾರ್ದಯುತವಾಗಿ ಖಂಡಿತವಾಗಿ ಮುಕ್ತಾಯ ಮಾಡುತ್ತಿದ್ದೆವು. ಅಧ್ಯಕ್ಷರ ನಡವಳಿಕೆ ನಮಗೆ ನೋವು ತಂದಿದೆ ಎಂದು ಜಿ. ಪಂ. ವಿಪಕ್ಷ ನಾಯಕ ಎಂ.ಎಸ್. ಮಹಮ್ಮದ್ ಹಾಗೂ ಹಿರಿಯ ಸದಸ್ಯೆ ಮಮತ ಗಟ್ಟಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಧೋರಣೆ ಸರಿಯಲ್ಲ:
ಜಿಲ್ಲಾ ಪಂಚಾಯತ್ ಅಧ್ಯಕ್ಷರು ಗುರುವಾರ ನಿಗದಿಯಾಗಿದ್ದ ಜಿ.ಪಂ. ಮುಂದುವರಿದ ಸಾಮಾನ್ಯಸಭೆಯಲ್ಲಿ ಪಡಿತರ ಚೀಟಿ, ಹಕ್ಕುಪತ್ರ ಸಮಸ್ಯೆ ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ ಸಭೆಗೆ ಬಾರದೆ ಹೊರಗೆ ಉಳಿದಿರುವ ಕಾಂಗ್ರೆಸ್ ಸದಸ್ಯರ ಧೋರಣೆ ಸರಿಯಲ್ಲ. ನಾನು ಮರಳಿನ ಸಮಸ್ಯೆಯ ಬಗ್ಗೆ ಕಳೆದ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಇದಕ್ಕೆ ಕಾಂಗ್ರೆಸ್ ಸದಸ್ಯರು ನಾನು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಸಭೆ ಮುಂದೂಡಬೇಕಾಯಿತು. ಕಾಂಗ್ರೆಸ್ ಸದಸ್ಯರ ನಡೆವಳಿಕೆಯಿಂದ ನಮಗೂ ನೋವಾಗಿದೆ. ಆದರೆ ಮಾತುಕತೆಗೆ ಸಿದ್ಧ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hangyo Ice Cream: ಬಿಗ್ಬಾಸ್ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್ಕ್ರೀಂ!
Mangaluru: ಸೆನ್ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
Mangaluru: ಸೈಬರ್ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ
Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ
Ibbani Tabbida Ileyali 50 ಸ್ಕ್ರೀನ್ನಿಂದ 200 ಸ್ಕ್ರೀನ್ವರೆಗೆ…
Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?
Hangyo Ice Cream: ಬಿಗ್ಬಾಸ್ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್ಕ್ರೀಂ!
Mangaluru: ಸೆನ್ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.