ಕೆಎ 62 ಸರಣಿಯ ನೋಂದಣಿ
Team Udayavani, Dec 9, 2017, 12:12 PM IST
ಸುರತ್ಕಲ್ : ಹೊಸಬೆಟ್ಟಿವಿನಲ್ಲಿ ಪೂರ್ಣ ಪ್ರಮಾಣದ ಸುರತ್ಕಲ್ ಸಾರಿಗೆ ಕಚೇರಿ ಅರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಶೀಘ್ರ ಕಾರ್ಯಾರಂಭವಾಗಲಿದೆ. ಈ ಸಂಬಂಧ ಸರಕಾರವು ಅ.25ರಂದು ಆದೇಶ ಹೊರಡಿಸಿದ್ದರೂ, ಸಾರಿಗೆ ಅಯುಕ್ತರ ಆದೇಶ ಇನ್ನೂ ಕೈ ಸೇರದ ಕಾರಣ ವಿಳಂಬವಾಗಿದೆ.
ಹೊಸಬೆಟ್ಟಿನ ಪ್ಲಾಮಾ ಕಟ್ಟಡದಲ್ಲಿ 4670 ಚ.ಅ ವಿಸ್ತೀರ್ಣದ ಬಾಡಿಗೆ ಕಟ್ಟಡವನ್ನು ಮಾಸಿಕ 82,500 ರೂ. ಬಾಡಿಗೆಯಲ್ಲಿ ಪಡೆಯಲು ಸರಕಾರ ಸಮ್ಮತಿ ಸೂಚಿಸಿದೆ.
ಮಂಗಳೂರಿನಿಂದ ಬೇರ್ಪಟ್ಟು ರೂಪುಗೊಳ್ಳಲಿರುವ ಸುರತ್ಕಲ್ ಸಾರಿಗೆ ಕಚೇರಿ ವ್ಯಾಪ್ತಿಗೆ ಕೂಳೂರು, ಮೂಲ್ಕಿ, ಕಿನ್ನಿಗೋಳಿ ಸೇರಲಿವೆ. ಈ ಹಿಂದೆ ಮೂಡಬಿದಿರೆಯನ್ನೂ ಸೇರಿಸಲು ನಿರ್ಧರಿಸಲಾಗಿತ್ತಾದರೂ ಅಲ್ಲಿನ ಶಾಸಕರ ಮನವಿ ಮೇರೆಗೆ ಅದನ್ನು ಕೈ ಬಿಡಲಾಗಿದೆ. ಸುರತ್ಕಲ್ ವ್ಯಾಪ್ತಿಯ ವಾಹನಗಳಿಗೆ ಇನ್ನು ಮುಂದೆ ಕೆಎ 62 ನಂಬರ್ ದೊರಕಲಿದೆ.
ಬೃಹತ್ ವಾಹನಗಳು ಮಂಗಳೂರು ಕಚೇರಿಗೆ ಹೋಗುವ ಆವಶ್ಯಕತೆಯಿಲ್ಲ. ಇದರಿಂದ ನಗರದಲ್ಲಿ ಟ್ರಾಫಿಕ್ ಜಾಂ ಕಡಿಮೆಯಾದೀತು. ಪಣಂಬೂರು, ಸುರತ್ಕಲ್, ಬೈಕಂಪಾಡಿ ಕೈಗಾರಿಕಾ ವಲಯ ಆಗಿರುವುದರಿಂದ ಘನ ವಾಹನಗಳ ಸಂಖ್ಯೆ ಅಧಿಕವಿದೆ. ವಾಹನ ತಪಾಸಣೆಗೆ ಮಂಗಳೂರು ನಗರ ದಾಟಿ ಹೋಗ ಬೇಕಿರುವುದರಿಂದ ಒತ್ತಡವೂ ಅಧಿಕವಾಗುತ್ತದೆ.
ಸಿಬಂದಿ ಎರವಲು
ಈ ಕಚೇರಿಗೆ ಸೂಪರ್ವೈಸರ್, ಹಿರಿಯ, ಕಿರಿಯ ಕ್ಲರ್ಕ್, ಹಿರಿಯ ಇನ್ ಸ್ಪೆಕ್ಟರ್, ಎರಡು ಕಿರಿಯ ಇನ್ಸ್ಪೆಕ್ಟರ್ಗಳು ಅವಶ್ಯವಿದ್ದು, ಅವರನ್ನು ಮಂಗಳೂರು ಕಚೇರಿ ಮತ್ತು ಉಡುಪಿಯಿಂದ ಪಡೆಯುವ ಯೋಜನೆ ರೂಪಿಸಲಾಗಿದೆ. ಪೀಠೊಪಕರಣ, ಕಂಪ್ಯೂಟರ್ಗಳು ಬರಬೇಕಿವೆ.
ಮತ್ತೆ ವಿಳಂಬ?
ತೊಕ್ಕೊಟ್ಟು ಸಮೀಪದ ಪಜೀರಿನಲ್ಲಿ ಸುಸಜ್ಜಿತ ವಾಹನ ಕಲಿಕಾ ಪರೀಕ್ಷಾ ಕೇಂದ್ರದ ಶಿಲಾನ್ಯಾಸ ನೆರವೇರಿಸಲು ಸಾರಿಗೆ ಸಚಿವರು ಬರುವ ಸಂದರ್ಭದಲ್ಲಿ ಸುರತ್ಕಲ್ ಕಚೇರಿ ಸಂಬಂಧಿ ಬೆಳವಣಿಗೆಯನ್ನು ಪರಿಶೀಲಿಸಲು ತಯಾರಿ ನಡೆಸಲಾಗಿತ್ತು. ಡಿ. 8ರಂದು ನಡೆಯಬೇಕಿದ್ದ ಶಿಲಾನ್ಯಾಸ ಕಾರ್ಯಕ್ರಮ ಸದ್ಯ ಮುಂದೂಡಲ್ಪಟ್ಟಿದೆ.
ಪೂರ್ಣ ಸಾರಿಗೆ ವಲಯ
ಸುರತ್ಕಲ್ನಲ್ಲಿ ಪೂರ್ಣ ಪ್ರಮಾಣದ ಸಾರಿಗೆ ಕಚೇರಿ ಕಾರ್ಯಾಚರಿಸಲಿದೆಯಾದರೂ ಬಸ್ ಪರ್ಮಿಟ್ ಮಾತ್ರ ಇಲ್ಲಿ ನೀಡಲಾಗುತ್ತಿಲ್ಲ. ಉಳಿದಂತೆ ವಾಹನ ತಪಾಸಣೆ, ಲೈಸೆನ್ಸ್ ನೀಡುವುದು ಮುಂತಾದವು ಇಲ್ಲಿಂದಲೇ ಆಗಲಿದೆ.
ಅನುಮತಿ ಸಿಗಬೇಕಷ್ಟೆ
ಸುರತ್ಕಲ್ ಸಾರಿಗೆ ಕಚೇರಿ ಆರಂಭಕ್ಕೆ ಸಾರಿಗೆ ಆಯುಕ್ತರ ಅನುಮತಿಗಾಗಿ ಕಾಯಲಾಗುತ್ತಿದೆ. ಹೊಸಬೆಟ್ಟಿನಲ್ಲಿ ಬಾಡಿಗೆ ಕಟ್ಟಡವನ್ನು ಪಡೆಯಲು ಅನುಮತಿ ಸಿಕ್ಕಿದೆ. ಇರುವ ಸಿಬಂದಿಯನ್ನು ಬಳಸಿಕೊಂಡು ಕಚೇರಿ ಆರಂಭಿಸಲಾಗುವುದು. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಬಂಟ್ವಾಳದಲ್ಲೂ ಆರ್ಟಿಒ ಕಚೇರಿ ಸ್ಥಾಪನೆಗೆ ವ್ಯವಸ್ಥೆ ರೂಪಿಸಲಾಗುತ್ತಿದೆ.
– ಜಿ.ಎಸ್. ಹೆಗಡೆ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ
Rain: ಎಲ್ಲೋ ಅಲರ್ಟ್; ವಾಯುಭಾರ ಕುಸಿತ, ಕರಾವಳಿಯಲ್ಲಿ ಮುಂದುವರಿದ ಮಳೆ
Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್ರಾಜ್ ಕಾಂಚನ್
Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ
Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.