ಕಾಂಗ್ರೆಸ್ಗೆ ಚರ್ಚಿಸಲು ವಿಷಯಗಳೇ ಇಲ್ಲ
Team Udayavani, Apr 13, 2018, 12:08 PM IST
ಬೆಂಗಳೂರು: ಸಂಸತ್ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡದ ಕಾಂಗ್ರೆಸ್ ಧೋರಣೆ ಖಂಡಿಸಿ ಕೇಂದ್ರ ಸಚಿವರು, ಬಿಜೆಪಿ ಸಂಸದರು, ಶಾಸಕರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ ಬಿಜೆಪಿ ಸಂಸದರು, ಶಾಸಕರು, ಮುಖಂಡರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಅಂತಿಮವಾಗಿ ಪ್ರಜಾತಂತ್ರ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಲಜ್ಜೆಗೆಟ್ಟ ಕೆಲಸ ಮಾಡುತ್ತಿದೆ. ಬಿಜೆಪಿ ಚರ್ಚೆಗೆ ಹೆದರಿ ಎಂದೂ ಓಡಿ ಹೋಗಿಲ್ಲ. ಕಳೆದ ನಾಲ್ಕೂವರೆ ವರ್ಷದಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರ ಸಂಪುಟ ಸಚಿವರ ವಿರುದ್ಧ ಸಣ್ಣ ಭ್ರಷ್ಟಾಚಾರದ ಆರೋಪವೂ ಇಲ್ಲ ಎಂದು ಹೇಳಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಲೋಕಸಭೆಯಲ್ಲಿ ಚರ್ಚಿಸಲು ಅವರಿಗೆ ವಿಷಯಗಳಿಲ್ಲ. ಹಾಗಾಗಿ ಕಾಂಗ್ರೆಸ್ ಸಣ್ಣಪುಟ್ಟ ರಾಜಕೀಯ ಪಕ್ಷಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ನ ಕೊನೆಯ ಆಟ. ನಾಟ್ಯ, ನೃತ್ಯ ಗೊತ್ತಿಲ್ಲದವರು ವೇದಿಕೆ, ರಂಗಸ್ಥಳ ಸರಿಯಲ್ಲ ಎನ್ನುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಇದಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್, ಸಂಸತ್ ಕಲಾಪ 23 ದಿನ ನಡೆಯದ ಕಾರಣ ಇಷ್ಟು ದಿನಗಳ ವೇತನ, ಭತ್ಯೆಯನ್ನು ಬಿಜೆಪಿ, ಎನ್ಡಿಎ ಕೂಟದ ಸಂಸದರು ಪಡೆಯದಿರಲು ನಿರ್ಧರಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರು ವೇತನ, ಭತ್ಯೆ ಪಡೆಯುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಚೋಲೆ ಬಟೂರ ಉಪವಾಸ: ಪ್ರಧಾನಿ ಮೋದಿಯವರು ಕಟ್ಟುನಿಟ್ಟಿನ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಆದರೆ ಏ.9ರಂದು ಕಾಂಗ್ರೆಸ್ ನಡೆಸಿದ ಸತ್ಯಾಗ್ರಹದಲ್ಲಿ ರಾಹುಲ್ ಗಾಂಧಿ ಚೋಲೆ ಬಟೂರ (ಉತ್ತರ ಭಾರತ ಖಾದ್ಯ) ಸೇವಿಸಿ ನಂತರ ಉಪವಾಸ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಮುನ್ನ ಮೀನು, ಮಾಂಸ ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಬಾಲಂಗೋಚಿಗಳ ಪಕ್ಷ: ಸಣ್ಣಪುಟ್ಟ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿದ ನಂತರ ಕಾಂಗ್ರೆಸ್ ಮಂಡಿಸಿದೆ. ಹಾಗಾಗಿ ಕಾಂಗ್ರೆಸ್ ಮುಖ್ಯಧಾರೆಯ ಪಕ್ಷವಾಗಿ ಉಳಿಯದೆ ಸಣ್ಣಪುಟ್ಟ ಪಕ್ಷಗಳ ಬಾಲಂಗೋಚಿ ಪಕ್ಷವಾಗಿ ರೂಪುಗೊಂಡಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಕರ್ನಾಟಕ 22ನೇ ಬಿಜೆಪಿ ರಾಜ್ಯವಾಗಲಿದೆ.
ರಾಹುಲ್ ಗಾಂಧಿ ಚುನಾವಣಾ ಭಕ್ತರು. ಚುನಾವಣೆಯಲ್ಲಿ ಓಟಿಗಾಗಿ ಭಕ್ತರಂತೆ ನಾಟಕವಾಡುತ್ತಿದ್ದಾರೆ. ಹವಾಮಾನಕ್ಕೆ ತಕ್ಕಂತೆ ಭಕ್ತರಾಗುತ್ತಾರೆ. ಜನತೆಗೆ ಈ ನಾಟಕ ಅರ್ಥವಾಗಲಿದ್ದು, ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಪಾಲಿಕೆ ಬಿಜೆಪಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.
ಲೋಕಸಭೆಯಲ್ಲೇಕೆ ಪ್ರಸ್ತಾಪಿಸಲಿಲ್ಲ?: ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸುತ್ತಾರೆ. ಈ ಬಗ್ಗೆ ತಾಕತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಅಂಕಿಅಂಶಸಹಿತ ಪ್ರಸ್ತಾಪಿಸಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಬೇಕಿತ್ತು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸದನದೊಳಗೆ ಚರ್ಚಿಸದೆ ಪಲಾಯನ ಮಾಡಿ ಆರೋಪಿಸುವುದು ಸರಿಯಲ್ಲ. 13ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ 78,000 ಕೋಟಿ ರೂ. ಬಿಡುಗಡೆಯಾಗಿದ್ದರೆ, 14ನೇ ಹಣಕಾಸು ಆಯೋಗದಡಿ 2.12 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅಂಕಿಸಂಖ್ಯೆ ನೀಡಿದರು.
ರಾಹುಲ್ ಗಾಂಧಿ ಹೇಳಿದಂತೆ ಕಾಂಗ್ರೆಸ್- ಬಿಜೆಪಿ ನಡುವೆ ಸೈದ್ಧಾಂತಿಕ ಸಂಘರ್ಷವಿದೆ. ಕಾಂಗ್ರೆಸ್ನ ವಂಶಾಡಳಿತಕ್ಕೆ ಪ್ರತಿಯಾಗಿ ಬಿಜೆಪಿ ಪ್ರಜಾಪ್ರಭುತ್ವದ ಸಿದ್ಧಾಂತ ಪ್ರತಿಪಾದಿಸುತ್ತಿದೆ. ಕಾಂಗ್ರೆಸ್ ಧೋರಣೆ ಇದೇರೀತಿ ಮುಂದುವರಿದರೆ ಲೋಕಸಭಾ ಸದಸ್ಯರ ಸ್ಥಾನ 44ರಿಂದ 4ಕ್ಕೆ ಕುಸಿಯಲಿದೆ.
-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ವಂಶಾಡಳಿತ, ಭ್ರಷ್ಟಾಚಾರಕ್ಕಷ್ಟೇ ನಮ್ಮ ವಿರೋಧ. ಕರ್ನಾಟಕದಲ್ಲೂ ಕಾಂಗ್ರೆಸ್ ಅದೇ ಹಾದಿಯಲ್ಲಿದೆ. ಈಗಾಗಲೇ ಕೌಂಟ್ಡೌನ್ ಶುರುವಾಗಿದ್ದು, ಫಲಿತಾಂಶ ಬಂದ ಬಳಿಕ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕಾಯಂ ಮನೆ ಸೇರಲಿದ್ದಾರೆ.
-ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ
Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್: ಕಾಡಾನೆಗಳ ದರ್ಶನ
Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.