![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 30, 2018, 2:58 PM IST
ಹುಣಸೂರು: ದೇಶದಲ್ಲೇ ಪುಂಡಾನೆಗಳ ಹೆಡೆಮುರಿಕಟ್ಟಲು, ಬೀಟ್ ನಡೆಸಲು, ಹುಲಿಗಳ ಕಾರ್ಯಾಚರಣೆಗೆ ಹೆಸರಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ವಾರದ ಹಿಂದಷ್ಟೆ 8 ಆನೆಗಳು ಪಶ್ಚಿಮ ಬಂಗಾಳಕ್ಕೆ ತೆರಳಿದ ಬೆನ್ನಲ್ಲೇ ಉತ್ತರ ಪ್ರದೇಶದ ದುದುವಾ ನ್ಯಾಷನಲ್ ಪಾರ್ಕ್ಗೆ ಎರಡು ಮರಿಯಾನೆಗಳು ಶೀಘ್ರದಲ್ಲೇ ಪ್ರಯಾಣ ಬೆಳೆಸಲಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಶಿಬಿರದ ಆರು ವರ್ಷದ ನಕುಲ (ಗಂಗೆ ಮಗ), 7 ವರ್ಷದ ಕಬಿನಿ( ಸರಳಳ ಮಗಳು) ತೆರಳುತ್ತಿರುವ ಮರಿ ಆನೆಗಳು.ಉತ್ತರ ಪ್ರದೇಶಕ್ಕೆ ತೆರಳುತ್ತಿರುವ ನಕುಲ ಬಳ್ಳೆ ಕ್ಯಾಂಪಿನಲ್ಲಿ 2012 ಜ.28 ರಂದು ಗಂಗೆಗೆ, ಅದೇ ಕ್ಯಾಂಪಿನಲ್ಲಿದ್ದ ಸರಳ ಆನೆಗೆ 2011 ನ.26 ರಂದು ಹುಟ್ಟಿದ ಕಬಿನಿ ಮರಿಯಾನೆಗಳು. ಇವುಗಳನ್ನು ಐದು ವರ್ಷಗಳ ಹಿಂದೆಯೇ ಬಳ್ಳೆ ಶಿಬಿರದಿಂದ ತಾಯೊಂದರೊಂದಿಗೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ ಗೊಳಿಸಲಾಗಿತ್ತು.
ರಾಜ್ಯದ ಆನೆಗಳಿಗೆ ಎಲ್ಲಡೆ ಬೇಡಿಕೆ: ರಾಜ್ಯದ ಸಾಕಾನೆಗಳು ಪುಂಡಾನೆಗಳ ಹೆಡೆಮುರಿಕಟ್ಟುವಲ್ಲಿ, ಹುಲಿ ಕಾರ್ಯಾಚರಣೆಯಲ್ಲಿ ಪ್ರಸಿದ್ಧಿ ಪಡೆದಿವೆ. ದೇಶದ ವಿವಿಧೆಡೆಗಳಲ್ಲಿ ಕಾಡಾನೆಗಳ ಕಾರ್ಯಾಚರಣೆ ಬಳಕೆಯಾಗುತ್ತಿದ್ದವು. ಎಲ್ಲ ರಾಷ್ಟ್ರೀಯ ಉದ್ಯಾನಗಳಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರಕಾಂಡ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ಇದೀಗ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿವೆ.
ಮತ್ತಿಗೋಡು ಶಿಬಿರದಲ್ಲಿ ಹಾಸನ ಜಿಲ್ಲೆಯ ಆಲೂರಿನ ವ್ಯಾಪ್ತಿಯಲ್ಲಿ ಸೆರೆ ಹಿಡಿದ ಪುಂಡಾನೆಗಳು, ದೇವಸ್ಥಾನದ ಆನೆಗಳು ಹಾಗೂ ಕೊಡಗಿನ ಆನೆಗಳಿಗೆ ಆಶ್ರಯ ಕಲ್ಪಿಸಿದ್ದು, ಆನೆಗಳ ಸಂತತಿ ಹೆಚ್ಚಾದಂತೆ ಇಲ್ಲಿ ಆನೆಗಳ ಸಾಕಣೆಗೆ ಅಡಚಣೆಯಾಗುವ ಜೊತೆಗೆ ಇತರೆ ರಾಜ್ಯಗಳ ಬೇಡಿಕೆ ಮೇರೆಗೆ ಸರ್ಕಾರಗಳ ನಡುವೆ ಒಪ್ಪಂದ ಮಾಡಿಕೊಂಡು ಸಾಕಾನೆಗಳನ್ನು ಕಳುಹಿಸಲಾಗುತ್ತಿದೆ.
ಪಶ್ಚಿಮ ಬಂಗಾಳಕ್ಕೂ 8 ಆನೆಗಳ ರವಾನೆ: ಇದೇ ಶಿಬಿರದಿಂದ ವಾರದ ಹಿಂದಷ್ಟೆ ಇದೇ ಶಿಬಿರದಿಂದ ಪಶ್ಚಿಮ ಬಂಗಾಳಕ್ಕೆ ಮತ್ತಿಗೋಡು ಶಿಬಿರದ ನಂಜುಂಡ (23), ಸಾರಥಿ (8) ಮೇರಿ (8),ಧರ್ಮರಾಯ (8), ಶ್ರೀನಿವಾಸ (15) ಹಾಗೂ ದುಬಾರೆ ಆನೆ ಶಿಬಿರದಿಂದ ವಿಠಲ, ಮದಕರಿ, ಮಯೂರ ಸೇರಿದಂತೆ ಒಟ್ಟು 8 ಆನೆಗಳು ತೆರಳಿದ್ದವು.
ಉತ್ತರಪ್ರದೇಶದ ದುದುವಾ ಉದ್ಯಾನದಿಂದ ಈಗಾಗಲೇ ಇಬ್ಬರು ಮಾವುತರು ಇಲ್ಲಿಗೆ ಆಗಮಿಸಿದ್ದು, ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಂದ ನಕುಲಮತ್ತು ಕಬಿನಿಯ ಮಾವುತರು ಅಲ್ಲಿಗೆ ತೆರಳಿ ತಿಂಗಳ ಕಾಲ ತರಬೇತಿ ನೀಡಿ ವಾಪಾಸ್ ಆಗಲಿದ್ದಾರೆ. ಶಿಬಿರದ ಆನೆಗಳಿಗೆ ಪಶುವೆದ್ಯ ಡಾ.ಮುಜೀಬ್ ರೆಹಮಾನ್ ಆರೋಗ್ಯ ನೋಡಿಕೊಂಡರೆ, ಡಿಆರ್ಎಫ್ಒ ಜಗದೀಶನಾಯ್ಕ ಹಾಗೂ ಶಿಬಿರದ ಮೇಲ್ವಿಚಾರಕಿ ಶಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.
ಬೇರಾದಂಥ ಬೇಸರ: ಹುಟ್ಟಿದಾಗಿನಿಂದ ನಕುಲ ಮತ್ತು ಕಬಿನಿ ಮರಿಯಾನೆಯನ್ನು ಪ್ರೀತಿಯಿಂದ ಸಾಕಿದ್ದೇವೆ. ನಮ್ಮ ಮಕ್ಕಳು ಸಹ ಇವುಗಳೊಂದಿಗೆ ಆಟವಾಡುತ್ತಿದ್ದರು. ಈ ಶಿಬಿರದ ಇತರೆ ಆನೆಗಳೊಂದಿಗೆ ತುಂಟಾಟವಾಡುತ್ತಿದ್ದವು. ಇದೀಗ ನಮ್ಮನ್ನು ಬಿಟ್ಟು ಹೋಗುತ್ತಿರುವುದು ತುಂಬಾ ಬೇಸರವಾಗುತ್ತಿದೆ. ಆದರೂ ಇಲಾಖೆ ಆದೇಶ ಪಾಲಿಸಲೇಬೇಕು ಎನ್ನುತ್ತಾರೆ ನಕುಲನ ಮಾವುತ ಜೆ.ಕೆ.ರಾಮ ಹಾಗೂ ಕಬಿನಿ ಮಾವುತ ರಾಜು.
ರಾಜ್ಯದಲ್ಲಿ ಅತ್ಯುತ್ತಮ ತರಬೇತಿ: ನಮ್ಮ ರಾಜ್ಯದ ಸಾಕಾನೆಗಳಿಗೆ ಶಿಬಿರಗಳಲ್ಲಿ ನೀಡುವ ತರಬೇತಿಯಿಂದಾಗಿ ಎಂತ ಸಮಯದಲ್ಲೂ ಕಾಡಾನೆಗಳನ್ನು ನಿಯಂತ್ರಿಸುವ ಹಾಗೂ ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೇಶದ ಇತರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಅಷ್ಟಾಗಿ ಇಲ್ಲದ್ದರಿಂದ ನಮ್ಮ ತರಬೇತಿ ಆನೆಗಳಿಗೆ ಬೇಡಿಕೆ ಇದೆ.
ಇವುಗಳ ಮೂಲಕ ಕಾಡಾನೆಗಳು ಸೇರಿದಂತೆ ಇತರೆ ವನ್ಯಜೀವಿಗಳ ನಿಯಂತ್ರಣಕ್ಕೆ ಮತ್ತು ಪೆಟ್ರೋಲಿಂಗ್ಗೆ ಬಳಸಿಕೊಳ್ಳುತ್ತಾರೆ. ಮತ್ತಿಗೋಡು ಶಿಬಿರದಲ್ಲಿ ಇನ್ನು 25 ಆನೆಗಳಿವೆ. ಅಲ್ಲದೇ ಹುಣಸೂರು 2, ಹೆಬ್ಬಳ್ಳದಲ್ಲಿ 5, ಗಣಗೂರು.3. ಮತ್ತಿಗೋಡು.17. ವೀರನಹೊಸಹಳ್ಳಿ 11.ಆನೆಗಳಿವೆ ಎಂದು ಹುಲಿಯೋಜನೆ, ನಾಗರಹೊಳೆ ಇದರ ರವಿಶಂಕರ್ ನಿರ್ದೇಶಕರು ತಿಳಿಸಿದ್ದಾರೆ.
* ಸಂಪತ್ ಕುಮಾರ್ ಹುಣಸೂರು
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.