ಬಂಟ್ವಾಳಬೈಪಾಸ್ ಜಂಕ್ಷನ್:ವಿಸ್ತರಣೆಗೊಂಡರೆಅಭಿವೃದ್ಧಿಯದಿಕ್ಕೇಬದಲು
Team Udayavani, Aug 22, 2018, 11:13 AM IST
ಬಂಟ್ಟಾಳ: ಆಳರಸರ ಕಾಲದಲ್ಲೇ ಆಧುನಿಕ ಬಂಟ್ವಾಳ ವ್ಯವಹಾರದ ಕೇಂದ್ರ ಸ್ಥಾನವಾಗಿತ್ತು. ಬಂಟ್ವಾಳ ಪೇಟೆಯ ಜಂಕ್ಷನ್ 4 ದಶಕಗಳ ಹಿಂದೆ ವ್ಯಾವಹಾರಿಕ ಕೇಂದ್ರವಾಗಿತ್ತು. ಈಗ ಕೊಂಚ ಮಸುಕು ಬಡಿದಿದೆ. ಇಲ್ಲಿಗೆ ಬೈಪಾಸ್ ರಸ್ತೆ ನಿರ್ಮಾಣದ ಬಳಿಕ ಪೇಟೆ ವ್ಯವಹಾರ ಕಡಿಮೆಯಾಗಿದ್ದು ನಿಜ.
ಅದು ಕ್ರಮೇಣ ಬಿ.ಸಿ. ರೋಡ್ ನಗರ ಸಹಿತ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆಗೊಂಡಿತು. ಈಗ ಅದೇ ಜಂಕ್ಷನ್ಗೆ ಜೀವ ತುಂಬುವ ಕಾಲ ಬಂದಿದೆ.
ಇಲ್ಲಿ ರಸ್ತೆ ಕನಿಷ್ಠ ಚತುಷ್ಪಥವಾದರೆ ಮೆಲ್ಲಗೆ ಆರ್ಥಿಕ ಚಟುವಟಿಕೆ ಚಿಗುರುತ್ತದೆ. ಬೆಳ್ತಂಗಡಿ, ಧರ್ಮಸ್ಥಳ ಕಡೆಯಿಂದ, ಬಂಟ್ವಾಳ ಪೇಟೆಯಿಂದ, ಬಿ.ಸಿ.ರೋಡ್ ಮಂಗಳೂರು ಕಡೆಯಿಂದ, ಮೂಡಬಿದಿರೆ, ವಾಮದಪದವು, ಪಂಜಿಕಲ್ಲು, ಮೂಲರಪಟ್ಣ ಕಡೆಗಳಿಂದ ಬರುವ ಎಲ್ಲ ವಾಹನಗಳು ಹೀಗೆಯೇ ಹಾದು ಹೋಗುವುದರಿಂದ ಈಗಿನ ಪೇಟೆಯೊಳಗಿನ ವಾಹನ ಒತ್ತಡ ಕೊಂಚ ಕಡಿಮೆ ಮಾಡಬಹುದು.
ವಾಹನಗಳು ಕಡಿಮೆಯೇನಿಲ್ಲ
ಬಂಟ್ವಾಳ ತಾಲೂಕಿನ ರಾಯಿ, ಸರಪಾಡಿ,ಬಡಗಬೆಳ್ಳೂರು, ಬಡಗಕಜೆಕಾರು, ಕಾವಳಮೂಡೂರು, ಅಮಾrಡಿ, ಬಂಟ್ವಾಳ, ಬಿ. ಮೂಡ, ಕಾವಳಪಡೂರು, ಕುಕ್ಕಿಪಾಡಿ, ನಾವೂರು, ಪಂಜಿಕಲ್ಲು, ಸಂಗಬೆಟ್ಟು, ಉಳಿ, ಅಮ್ಮುಂಜೆ, ಅರಳ, ಇರ್ವತ್ತೂರು, ಮಣಿನಾಲ್ಕೂರು ಸಹಿತ ವಿವಿಧ ಗ್ರಾಮಗಳ ಜನರು ಇಲ್ಲಿಂದಲೇ ಹಾದುಹೋಗುತ್ತಾರೆ. ದಿನವೊಂದಕ್ಕೆ ಸುಮಾರು 20 ಸಾವಿರದಷ್ಟು ವಾಹನಗಳು ಓಡಾಡುತ್ತವೆ. ಶಾಲಾ ಕಾಲೇಜುಗಳು, ವಿವಿಧ ಧರ್ಮೀಯರ ಧಾರ್ಮಿಕ ಕೇಂದ್ರಗಳಿಗೆ ತೆರಳುವವರಿಗೆ ಇದೇ ಮುಖ್ಯ ಜಂಕ್ಷನ್.
ಇಷ್ಟೊಂದು ದೊಡ್ಡ ಬೈಪಾಸ್ ಜಂಕ್ಷನ್ನಲ್ಲಿ ನಿತ್ಯವೂ ವಾಹನ ಸಂಚಾರ ಅಡಚಣೆ ಸಮಸ್ಯೆ ಇದೆ. ಪ್ರತಿ ಬಾರಿಯೂ ರಸ್ತೆಗೆ ತೇಪೆ ಹಾಕಲಾಗಿದೆಯಷ್ಟೇ. ಇಂದಿಗೂ ಎರಡು ಘನ ವಾಹನಗಳ ಸುಗಮ ಸಂಚಾರ ಕಷ್ಟ. ಸಮರ್ಪಕ ಚರಂಡಿ ಇಲ್ಲ. ಪ್ರಯಾಣಿಕರ ಸಂಚಾರಕ್ಕೆ ನಿಲುಗಡೆ ವ್ಯವಸ್ಥೆ ಇಲ್ಲ. ಬಿ.ಸಿ. ರೋಡ್ನಿಂದ ಪುಂಜಾಲಕಟ್ಟೆ ತನಕ ಹೆದ್ದಾರಿ ವಿಸ್ತರಣೆ, ಬಿ.ಸಿ. ರೋಡ್-ಜಕ್ರಿಬೆಟ್ಟು ವಿಸ್ತರಣೆ ರಸ್ತೆ ಕಾಂಕ್ರೀಟಿಗೆ ಕೋಟಿಯಲ್ಲಿ ಅನುದಾನ ಮಂಜೂರಾತಿ ಆಗಿತ್ತಾದರೂ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ.
ಪೊಲೀಸ್ ನಿಯೋಜಿಸಿ
ಬೈಪಾಸ್ ಜಂಕ್ಷನ್ ನಿತ್ಯವೂ ವಾಹನ ದಟ್ಟಣೆಯ ಸ್ಥಳ. ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿದರೆ ಅನುಕೂಲ. ಪ್ರಯಾಣಿಕರ ದಿಕ್ಸೂಚಿ ನಾಮಫಲಕವನ್ನೂ ಅಳವಡಿಸಬೇಕಿದೆ.
ಆಗಬೇಕು
ಇಲ್ಲಿರುವ ಬಸ್ ಶೆಲ್ಟರ್ ಅನ್ನು ಅಭಿವೃದ್ಧಿಪಡಿಸುವುದಲ್ಲದೇ ಮೂಡಬಿದಿರೆಗೆ, ಬೆಳ್ತಂಗಡಿ ಕಡೆಗೆ, ಮಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗೂ ಅನುಕೂಲ ಆಗುವಂತೆ ಉಳಿದೆಡೆಯೂ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಸಾರ್ವಜನಿಕ ಶೌಚಾಲಯ ಕೊರತೆ ನೀಗಬೇಕು. ಕಸ ಸಂಗ್ರಹ ತೊಟ್ಟಿಯನ್ನೂ ಇಡಬೇಕು.
ಇಲಾಖೆಗೆ ಪತ್ರ
ಬೈಪಾಸ್ ಜಂಕ್ಷನ್ ಸಂಚಾರದ ಅಡಚಣೆ ಕುರಿತು ಸಾಕಷ್ಟು ಪತ್ರಗಳನ್ನು ಸಂಬಂಧಪಟ್ಟ ಇಲಾಖೆಗೆ ಮತ್ತು ಪುರಸಭೆಗೆ ಬರೆಯಲಾಗಿದೆ. ಪೊಲೀಸ್ ಇಲಾಖೆ ಸಿಬಂದಿ ನಿಯೋಜಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದೆ.
– ಚಂದ್ರಶೇಖರ್
ಎಸ್ಐ, ಬಂಟ್ವಾಳ ನಗರ ಠಾಣೆ
ಮಂಜೂರು
ಬೈಪಾಸ್ ಜಂಕ್ಷನ್ ಹೆದ್ದಾರಿ ವಿಸ್ತರಣೆಗೆ ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಮಂಜೂರಾತಿ ಆಗಿದೆ. ಪುರಸಭಾ ಚುನಾವಣೆ ಮುಗಿದ ಬಳಿಕ ಕ್ರಮ ಜರಗಿಸಲಾಗುವುದು. ಜಂಕ್ಷನ್ ವಿಸ್ತರಣೆಯ ಬಗ್ಗೆ ಜಮೀನು ಪರಭಾರೆ ಸಂಗತಿ ನ್ಯಾಯಾಲಯದಲ್ಲಿ ಇರುವುದರಿಂದ ಎಲ್ಲವನ್ನು ನಿಯಮಿತವಾಗಿ ಮಾಡಬೇಕು. ಪುರಸಭೆಯಲ್ಲಿ ಹೊಸ ಆಡಳಿತ ಬಂದಾಗ ವೇಗ ಪಡೆದುಕೊಳ್ಳಬಹುದು.
– ರೇಖಾ ಜೆ. ಶೆಟ್ಟಿ
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
ರಾಜಾ ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.