ಮಹದೇವಪುರ ಸುತ್ತ ನದಿ ಹರಿದರೂ ಕುಡಿಯಲು ನೀರಿಲ್ಲ
ಬತ್ತಿದ ಕೊಳವೆ ಬಾವಿಗಳು, ಖಾಸಗಿಯವರ ಆಶ್ರಯ, ಗ್ರಾಪಂನಿಂದ ಗ್ರಾಮಕ್ಕೆ ಕಲುಷಿತ ನೀರು ಸರಬರಾಜು
Team Udayavani, May 19, 2019, 3:35 PM IST
ಸೈಕಲ್ಗಳಲ್ಲಿ ನೀರನ್ನು ಹೊತ್ತು ತರುತ್ತಿರುವುದು.
ಮಂಡ್ಯ: ಈ ಗ್ರಾಮದ ಸುತ್ತ ಕಾವೇರಿ ನದಿ ಹರಿದರೂ ನೀರಿಗೆ ಹಾಹಾಕಾರ ತಪ್ಪಿಲ್ಲ. ಊರಿನಲ್ಲಿರುವ ಕೊಳವೆ ಬಾವಿಗಳು ಬತ್ತಿಹೋಗಿವೆ. ಕುಡಿಯುವ ನೀರಿಗೆ ದೂರದ ಖಾಸಗಿ ಕೊಳವೆ ಬಾವಿಗಳನ್ನು ಆಶ್ರಯಿಸುವಂತಾಗಿದೆ. ಒಂದು ಕಿ.ಮೀ. ದೂರದಿಂದ ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ. ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಮಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಸಿನಿಮಾ ಪ್ರಿಯರ ನೆಚ್ಚಿನ ತಾಣವಾದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಜನರ ನೀರಿನ ಬವಣೆಯ ಕತೆ. ಮಹದೇವಪುರ ಗ್ರಾಮಕ್ಕೆ 36.59 ಲಕ್ಷ ರೂ. ವೆಚ್ಚದಲ್ಲಿ ಪ್ರಷರ್ಫಿಲ್ಟರ್ ಅಳವಡಿಸಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಮಂಜೂರಾತಿ ದೊರೆತು ಎರಡು ವರ್ಷವಾಗುತ್ತಾ ಬಂದರೂ ಇದುವರೆಗೂ ಚಾಲನೆ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಯೋಜನೆ ಜಾರಿಗೆ ಕಿಂಚಿತ್ತೂ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಎರಡು ಶುದ್ಧ ನೀರು ಘಟಕ: ಗ್ರಾಮದಲ್ಲಿರುವ 4 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎರಡು ಮಾತ್ರ ಕಾಯರ್ನಿರ್ವಹಿಸುತ್ತಿವೆ. ಒಂದು ದುರಸ್ತಿಯಲ್ಲಿದೆ. ಕಾಯಿನ್ ಹಾಕಿದರೂ ನೀರು ಬಾರದ ಕಾರಣ ಅದನ್ನು ದುರಸ್ತಿ ಮಾಡಿಕೊಡಲಾಗುವುದು ಎಂದು ಹೇಳಿಹೋದ ಅಧಿಕಾರಿಗಳು ಮತ್ತೆ ಇತ್ತ ತಿರುಗಿ ನೋಡುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಮತ್ತೂಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಂತದಲ್ಲಿದೆ.
ಗ್ರಾಮ ಪಂಚಾಯಿತಿಯವರು ಕಾವೇರಿ ನದಿ ಯಿಂದ ಕಲುಷಿತ ನೀರನ್ನು ವಾರಕ್ಕೊಮ್ಮೆ ಶುದ್ಧೀಕರಣ ಮಾಡದೆ ನೇರವಾಗಿ ಪೂರೈಕೆ ಮಾಡುತ್ತಿದ್ದಾರೆ. ಒಳಚರಂಡಿ ನೀರು ಹಾಗೂ ಕೈಗಾರಿಕೆಗಳು ಹೊರಬಿಡುವ ರಾಸಾಯನಿಕ ಮಿಶ್ರಿತ ನೀರು ಕುಡಿಯಲಾಗದೆ ಜನರು ಅದನ್ನು ಬಟ್ಟೆ ಮತ್ತು ಪಾತ್ರೆ ತೊಳೆಯುವುದಕ್ಕೆ ವಿಧಿಯಿಲ್ಲದೆ ಬಳಸುವಂತಹ ದಯನೀಯ ಸ್ಥಿತಿ ಎದುರಾಗಿದೆ.
ಬತ್ತಿಹೋದ ಕೊಳವೆ ಬಾವಿಗಳು: ಮಹದೇವಪುರ ಗ್ರಾಮದ ಸುತ್ತ 50ರಿಂದ 60 ಕೊಳವೆ ಬಾವಿಗಳಿವೆ. ನಾಲೆಗಳಲ್ಲಿ ನೀರು ಹರಿದರಷ್ಟೇ ಕೊಳವೆ ಬಾವಿಗಳು ಮರುಜೀವ ಪಡೆದುಕೊಳ್ಳುತ್ತವೆ. ಇಲ್ಲದಿದ್ದರೆ ಅಂತರ್ಜಲ ಪಾತಾಳ ಸೇರುತ್ತದೆ. ಗ್ರಾಮದ ಸುತ್ತಲೂ ಕಾವೇರಿ ನದಿ ಹರಿಯುತ್ತದೆ. ಮಹದೇವಪುರ ಗ್ರಾಮ ಎತ್ತರದ ಪ್ರದೇಶದಲ್ಲಿರುವುದರಿಂದ ಆ ನೀರು ಊರಿನ ಜನರಿಗೆ ಸಿಗದಂತಾಗಿದೆ. 600 ಅಡಿವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ.
ಖಾಸಗಿ ಕೊಳವೆ ಬಾವಿಗಳ ಆಶ್ರಯ: ಕುಡಿಯುವುದಕ್ಕೆ ಜನರು ಖಾಸಗಿ ಕೊಳವೆ ಬಾವಿಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸುವಂತಾಗಿದೆ. ಮಹಿಳೆಯರು, ಪುರುಷರು, ಮಕ್ಕಳು ಉರಿ ಬಿಸಿಲಿನಲ್ಲಿ ಬಿಂದಿಗೆಗಳನ್ನು ಹಿಡಿದು ತಂದು ನೀರು ತುಂಬಿಸಿಕೊಂಡು ಮನೆಗೆ ತೆರಳಿ ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ನೀರು ಸಂಗ್ರಹಿಸುವುದೇ ದೊಡ್ಡ ಚಿಂತೆಯಾಗಿದೆ. ನಿತ್ಯ ಅರ್ಧ ಕಿ.ಮೀ.ನಿಂದ ಒಂದು ಕಿ.ಮೀ. ದೂರದವರೆಗೆ ಹೋಗಿ ನೀರು ತರುವಂತಾಗಿದೆ. ಪುರುಷರು ಬೈಕ್, ಸೈಕಲ್ಗಳಲ್ಲಿ ಬಿಂದಿಗೆಗಳ ಮೂಲಕ ನೀರನ್ನು ಹೊತ್ತು ತಂದರೆ ಕೆಲವು ಮಹಿಳೆಯರು ಬಿಂದಿಗೆಗಳನ್ನು ಹಿಡಿದು ನಡೆದುಕೊಂಡು ಹೋಗೇ ನೀರನ್ನು ತರುತ್ತಿದ್ದಾರೆ.
ವಿದ್ಯುತ್ ವ್ಯತ್ಯಯದ ಸಂಕಷ್ಟ: ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿರುವ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ವಿದ್ಯುತ್ ಅಡಚಣೆಯಿಂದ ಗಂಟೆಗಟ್ಟಲೆ ಖಾಸಗಿ ಕೊಳವೆಬಾವಿಗಳ ಬಳಿ ಜನರು ನೀರು ಸಂಗ್ರಹಿಸಲು ಕಾದು ಕೂರುವಂತಾಗಿದೆ. ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಅಡಚಣೆ ಉಂಟುಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ.
ನೀರು ಸಂಗ್ರಹಿಸಿಟ್ಟರೆ ಸಾಂಕ್ರಾಮಿಕ ರೋಗ: ಗ್ರಾಮ ಪಂಚಾಯಿತಿಯವರು ವಾರಕ್ಕೊಮ್ಮೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದನ್ನು ಸಂಗ್ರಹಿಸಿಡುವುದೂ ಅಪಾಯಕಾರಿ. ಏಕೆಂದರೆ, ಕಲುಷಿತ ನೀರು ಸಂಗ್ರಹಿಸಿಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಘಿ ಇನ್ನಿತರ ಮಾರಣಾಂತಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಕಲುಷಿತ ನೀರು ಕುಡಿದು ಜಾಂಡೀಸ್ ಸೇರಿದಂತೆ ವಿವಿಧ ರೋಗಗಳಿಂದ ಜನರು ಈಗಾಗಲೇ ಬಳಲುತ್ತಿ ದ್ದಾರೆ. ಮಹದೇವಪುರ, ಗಾಮನಹಳ್ಳಿ, ಚಿಕ್ಕಅಂಕನಹಳ್ಳಿ ಸೇರಿ 27 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದ್ದರೂ ಅದೂ ಇನ್ನೂ ಆರಂಭ ವಾಗಿಲ್ಲ. ಕುಡಿಯುವ ನೀರಿಗಾಗಿ ಶಾಸಕರ ಅನುದಾನ ದಲ್ಲಿ 3.60 ಲಕ್ಷ ರೂ. ಹಣ ನೀಡಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಯೋಜನೆಯನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ಗ್ರಾಮದ ಜನರ ಆರೋಪವಾಗಿದೆ.
ಹಬ್ಬಕ್ಕೆ ಟ್ಯಾಂಕರ್ ನೀರು: ಊರಿನಲ್ಲಿ ನಡೆದ ಗ್ರಾಮದೇವತೆ ಹಬ್ಬಕ್ಕೆ ನೀರಿಲ್ಲದೆ ಕೊನೆಗೆ ಟ್ಯಾಂಕರ್ ನೀರನ್ನು ತರಿಸಿಕೊಳ್ಳಲಾಯಿತು. ಹಬ್ಬಕ್ಕೆ ನೆಂಟರಿಷ್ಟರು, ಬಂಧುಗಳು ದೂರದ ಊರಿನಿಂದ ಆಗಮಿಸಿದ್ದರು. ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡ ನೀರು ಸಾಲದಿದ್ದರಿಂದ ಗ್ರಾಮದ ಜನರು ಪಂಚಾಯಿತಿಗೆ ಹಿಡಿಶಾಪ ಹಾಕಿದರು. ನೀರಿನ ಬವಣೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಿತ್ಯವೂ ಊರಿನ ಜನರು ಪಂಚಾಯಿತಿಯವರೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಪಂಚಾಯಿತಿಯವರು ಅವರಿಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ.
● ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್. ಅಶ್ವತ್ಥನಾರಾಯಣ
Bharathinagar: ಕಾರು ಡಿಕ್ಕಿ ಹೊಡೆದು ಅಜ್ಜಿ, ಮೊಮ್ಮಗ ಸ್ಥಳದಲ್ಲೇ ಮೃತ್ಯು
Nagamangala ಗಲಭೆಗೆ ಕೇರಳ ಲಿಂಕ್: ಮಾಹಿತಿ ಸಂಗ್ರಹಕ್ಕೆ ಮುಂದಾದ ಪೊಲೀಸರು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Nagamangala Case: “ಟಾರ್ಗೆಟ್ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.