![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 24, 2019, 3:24 AM IST
ಕೋಲಾರ: ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪಕ್ಷಾತೀತ ಮುಖಂಡರ ಬೆಂಬಲದಿಂದ ಕೆ.ಎಚ್.ಮುನಿಯಪ್ಪ ವಿರೋಧಿ ಅಲೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಸ್ವಪಕ್ಷೀಯರ ವಿರೋಧದ ನಡುವೆ ಅತಿಯಾದ ಆತ್ಮವಿಶ್ವಾಸದಿಂದ ತಮ್ಮ ಎಂಟನೇ ಗೆಲುವಿನ ಪ್ರಯತ್ನದಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ದಿನ ಬಾಕಿ ಇರುವಂತೆ ಎಸ್.ಮುನಿಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಕೆ.ಎಚ್.ಮುನಿಯಪ್ಪ ಅವರಂತಹ ಘಟಾನುಘಟಿ ನಾಯಕರ ವಿರುದ್ಧ ಎಸ್.ಮುನಿಸ್ವಾಮಿ ಬಲಹೀನ ಅಭ್ಯರ್ಥಿ ಎಂದೇ ಭಾವಿಸಲಾಗಿತ್ತು. ಆದರೆ, ಕೆ.ಎಚ್.ಮುನಿಯಪ್ಪ ವಿರೋಧಿ ಬಣದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಚುನಾವಣಾ ಸಾರಥ್ಯ ವಹಿಸಿಕೊಂಡು ಎಸ್.ಮುನಿಸ್ವಾಮಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಲ್ಲೂ ಬಿಜೆಪಿ ಶಾಸಕರಿಲ್ಲದಿದ್ದರೂ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಚುನಾವಣೆ ನೇತೃತ್ವ ವಹಿಸಿಕೊಂಡು ಅನನುಭವಿ ಎಸ್.ಮುನಿಸ್ವಾಮಿ ಅವರನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಸಫಲವಾಗಿದ್ದಾರೆ.
ಕ್ಷೇತ್ರದ ಮತದಾರರಿಗೆ ಹೊಸಬರಾಗಿದ್ದ ಮುನಿಸ್ವಾಮಿ ತಮಗಿದ್ದ ಜಾತಿ ಬಲದಿಂದ ದಲಿತ ಮತದಾರರ ಒಲವು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಪಕ್ಷದ ಬಲ, ನರೇಂದ್ರ ಮೋದಿ ಅಲೆ ಮತ್ತು ಕೆ.ಎಚ್.ಮುನಿಯಪ್ಪ ವಿರೋಧಿ ಅಲೆಯೂ ಎಸ್.ಮುನಿಸ್ವಾಮಿ ಭರ್ಜರಿ ಗೆಲುವಿಗೆ ಕಾರಣವಾಗಿದೆ.
ಎಲ್ಲರೂ ಕೈ ಕೊಟ್ಟರು: ಮುನಿಯಪ್ಪ ಅವರಿಗೆ ಜಿಲ್ಲೆಯ ಎಲ್ಲ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ಮತದಾರರು ಕೈ ಕೊಟ್ಟಿದ್ದಾರೆ. ಸ್ವತಃ ಅವರ ಪುತ್ರಿ ರೂಪಾಕಲಾ ಅವರು ಶಾಸಕರಾಗಿರುವ ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಮಾತ್ರ ಮುನ್ನಡೆ ಕಂಡು ಬಂದಿದೆ. ಇನ್ನು ಕೆಜಿಎಫ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಲೀಡ್ ಬರುತ್ತದೆ ಎಂಬ ಮುನಿಯಪ್ಪ ಅವರ ಕನಸನ್ನು ಮತದಾರ ಸುಳ್ಳು ಮಾಡಿದ್ದಾನೆ.
ಮೋದಿ ಸರಕಾರವನ್ನು ಬಲಪಡಿಸುವ ಉದ್ದೇಶದಿಂದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ತರದ ರೀತಿ ಕಾರ್ಯ ನಿರ್ವಹಿಸುತ್ತೇನೆ.
-ಎಸ್.ಮುನಿಸ್ವಾಮಿ, ವಿಜೇತ ಬಿಜೆಪಿ ಅಭ್ಯರ್ಥಿ
ಜನಾದೇಶಕ್ಕೆ ಗೌರವ ನೀಡುತ್ತೇನೆ. ಆದರೆ, ಇವಿಎಂಗಳ ದೋಷದ ಕುರಿತು ಇರುವ ಆರೋಪಗಳ ಕುರಿತು ಸಮಗ್ರ ತನಿಖೆಗೆ ಚುನಾವಣಾ ಆಯೋಗಕ್ಕೆ ಆಗ್ರಹಿಸುತ್ತೇನೆ.
-ಕೆ.ಎಚ್.ಮುನಿಯಪ್ಪ, ಪರಾಜಿತ ಅಭ್ಯರ್ಥಿ
ಕೋಲಾರ
-ವಿಜೇತರು ಎಸ್.ಮುನಿಸ್ವಾಮಿ (ಬಿಜೆಪಿ)
-ಪಡೆದ ಮತ 7,07,863
-ಎದುರಾಳಿ ಕೆ.ಎಚ್.ಮುನಿಯಪ್ಪ (ಮೈತ್ರಿ ಅಭ್ಯರ್ಥಿ )
-ಪಡೆದ ಮತ 4,98,159
-ಗೆಲುವಿನ ಅಂತರ 2,09,704 ಮತಗಳು
ಗೆಲುವಿಗೆ 3 ಕಾರಣ
-ಕೆ.ಎಚ್.ಮುನಿಯಪ್ಪ ಅವರಿಂದ ದಲಿತ ಮತದಾರರ ಕಡೆಗಣನೆ
-ಬಿಜೆಪಿಯೊಂದಿಗಿನ ನೇರ ಸ್ಪರ್ಧೆಯಿಂದ ಹಿನ್ನಡೆ
-ಮುನಿಯಪ್ಪ ವಿರುದ್ಧ ಭೂ ವಿವಾದದ ಆರೋಪ
ಸೋಲಿಗೆ 3 ಕಾರಣ
-ಮೋದಿ ಪರವಾದ ಅಭಿವೃದ್ಧಿ ಮತ್ತು ಯಡಿಯೂರಪ್ಪರ ರೈತ ಪರವಾದ ನಿಲುವು
-ಜಿಲ್ಲೆಯ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಬೆಂಬಲಿಸಿದ್ದರ ಫಲ
-ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಅಭಿವೃದ್ಧಿರಹಿತ ಆಡಳಿತಕ್ಕೆ ರೋಸಿಹೋದ ಮತದಾರರು
You seem to have an Ad Blocker on.
To continue reading, please turn it off or whitelist Udayavani.