![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 7, 2020, 7:15 AM IST
ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾಹನ ಸಂಚಾರ ಸ್ತಬ್ಧಗೊಂಡಿರುವ ಕಾರಣ ತೈಲ ಬೇಡಿಕೆ ಕಡಿಮೆಯಾಗಿದ್ದು, ಎಂಆರ್ಪಿಎಲ್ನಲ್ಲಿ ಪೆಟ್ರೋಲ್- ಡೀಸೆಲ್ ಉತ್ಪಾದನೆ ಶೇ. 50ರಷ್ಟು ಕಡಿತಗೊಂಡಿದೆ.
ಸಾಮಾನ್ಯವಾಗಿ ಎಂಆರ್ಪಿಎಲ್ನಲ್ಲಿ ಪ್ರತಿದಿನ 2,500 ಟನ್ಎಲ್ಪಿಜಿ,20,000 ಟನ್ ಡೀಸೆಲ್ ಮತ್ತು 2,500 ಟನ್ನಷ್ಟು ಪೆಟ್ರೋಲ್ ಉತ್ಪಾದನೆಯಾಗುತ್ತದೆ. ಸದ್ಯ ಎಲ್ಪಿಜಿ ಉತ್ಪಾದನೆಯನ್ನು ಶೇ. 25ರಷ್ಟು, ಪೆಟ್ರೋಲ್-ಡೀಸೆಲ್ ಉತ್ಪಾದನೆ ಶೇ. 50 ಕಡಿಮೆ ಮಾಡಲಾಗಿದೆ.
ಬಹುತೇಕ ಕಾರ್ಮಿಕರಿಗೆ ರಜೆ
ಉತ್ಪಾದನಾ ಘಟಕಕ್ಕೆ ಅಗತ್ಯವಿರುವ ಕಾರ್ಮಿಕರನ್ನು ತುರ್ತು ನೆಲೆಯಲ್ಲಿ ಕೆಲಸಕ್ಕಾಗಿ ನಿಯೋಜಿಸಲಾಗಿದೆ. ಇತರ ವಲಯದವರಿಗೆ ರಜೆ ನೀಡಲಾಗಿದೆ. ಒಟ್ಟು 6,500 ಕಾರ್ಮಿಕರ ಪೈಕಿ ಈಗ 800 ಕಾರ್ಮಿಕರು ಕರ್ತವ್ಯದಲ್ಲಿದ್ದಾರೆ.
ಎಂಆರ್ಪಿಎಲ್ನ ಉತ್ಪನ್ನಗಳನ್ನು ಇಂಡಿಯನ್ ಆಯಿಲ್, ಎಚ್ಪಿಸಿಎಲ್, ಬಿಪಿಸಿಎಲ್, ಶೆಲ್ ಮುಂತಾದ ಕಂಪೆನಿಗಳ ಮೂಲಕ ರಾಜ್ಯಾದ್ಯಂತ ಪೂರೈಸಲಾಗುತ್ತಿದೆ.
ಶಟ್ಡೌನ್ ಮುಂದೂಡಿಕೆ
ಸಾಮಾನ್ಯವಾಗಿ ವಾರ್ಷಿಕ ನಿರ್ವಹಣೆಗಾಗಿ ಎಪ್ರಿಲ್ನಲ್ಲಿ ಎಂಆರ್ಪಿಎಲ್ ಒಂದು ಘಟಕವನ್ನು ಶಟ್ಡೌನ್ ಮಾಡುತ್ತದೆ. ಆಗ 4,000 ಕಾರ್ಮಿಕರ ಆವಶ್ಯಕತೆಯಿರುತ್ತದೆ. ಎಲ್ಲೆಲ್ಲೋ ನೆಲೆಸಿರುವ ಅವರನ್ನು ಹುಡುಕಿ ಒಗ್ಗೂಡಿಸಿ ಕರೆತರುವುದು ಇಂದಿನ ದಿನಗಳಲ್ಲಿ ಕಷ್ಟದ ಕೆಲಸವಾದ್ದರಿಂದ ವಾರ್ಷಿಕ ಶಟ್ಡೌನ್ ನಿಯಮವನ್ನು ಮುಂದೂ ಡುವ ಯೋಚನೆ ಇದೆ.
ಆಪತ್ಕಾಲಕ್ಕೆ ಭೂಗತ ಕಚ್ಚಾತೈಲ ಸ್ಥಾವರ
ದೇಶದಲ್ಲಿ ಇಂಧನ (ಪೆಟ್ರೋಲಿಯಂ ಉತ್ಪನ್ನಗಳು) ಸುರಕ್ಷೆಗಾಗಿ ಕೇಂದ್ರ ಸರಕಾರವು ಈಗಾಗಲೇ ಮಂಗಳೂರು ಮತ್ತು ಉಡುಪಿಯಲ್ಲಿ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್ನು ನಿರ್ಮಿಸಿದೆ.
ಪೆಟ್ರೋಲಿಯಂ ಸಚಿವಾಲಯ ಅಧೀನದ ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್ಪಿಆರ್ಎಲ್) ವತಿಯಿಂದ ಗವಿ(ಕ್ಯಾವರ್ನ್)ಯಂತಹ ರಚನೆಯಲ್ಲಿ ದೇಶದ ಮೂರು ಕಡೆಗಳಲ್ಲಿ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ. ಉಡುಪಿ ಸಮೀಪದ ಪಾದೂರು ಸ್ಥಾವರದಲ್ಲಿ 2.5 ಮಿಲಿಯ ಮೆ.ಟನ್ (1,693 ಕೋ.ರೂ ವೆಚ್ಚ), ಮಂಗಳೂರಿನ ಪೆರ್ಮುದೆ ಸ್ಥಾವರದಲ್ಲಿ 1.5 ಮಿಲಿಯ ಮೆ.ಟನ್ (1,227 ಕೋ.ರೂ.), ವಿಶಾಖಪಟ್ಟಣದಲ್ಲಿ 1.3 ಮಿಲಿಯ ಮೆ.ಟನ್ (1,178 ಕೋ.ರೂ) ಸೇರಿದಂತೆ ಸುಮಾರು 5.3 ಮಿಲಿಯ ಮೆಟ್ರಿಕ್ ಟನ್ ತೈಲ ಸಂಗ್ರಹ ಇದೆ. ಆಪತ್ಕಾಲದಲ್ಲಿ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ, ಡಾಮರು ಸಹಿತ ವಿವಿಧ ದ್ರವರೂಪದ ವಸ್ತುಗಳನ್ನು ಅಲ್ಲಿಂದ ಪಡೆಯಬಹುದು.
ಪೂರೈಕೆ ಪ್ರಮಾಣ
ಕರ್ನಾಟಕದ ಏಕೈಕ ಕಚ್ಚಾತೈಲ ಸಂಸ್ಕರಣಾಗಾರವಾಗಿರುವ ಎಂಆರ್ಪಿಎಲ್ ಸಂಸ್ಥೆಯು ಲಾಕ್ಡೌನ್ ಆರಂಭವಾದಂದಿನಿಂದ ಇಲ್ಲಿವರೆಗೆ ಒಂದು ದಶಲಕ್ಷ ಸಿಲಿಂಡರ್ಗಳಾಗುವಷ್ಟು ಅಡುಗೆ ಅನಿಲ ಮತ್ತು 30 ದಶಲಕ್ಷ ಲೀಟರ್ಗಳಷ್ಟು ಡೀಸೆಲನ್ನು ಪೂರೈಸುವ ಮೂಲಕ ರಾಜ್ಯ ಮತ್ತು ದಕ್ಷಿಣದ ಹಲವು ಭಾಗಗಳಲ್ಲಿ ಅಡುಗೆ ಅನಿಲ, ಡೀಸೆಲ್ ಕೊರತೆಯಾಗದಂತೆ ನೋಡಿಕೊಂಡಿದೆ.
ಪ್ರಸ್ತುತ ಬೇಡಿಕೆ ಕಡಿಮೆ ಇರುವ ಕಾರಣ ಎಂಆರ್ಪಿಎಲ್ನಲ್ಲಿ ಪೆಟ್ರೋಲ್- ಡೀಸೆಲ್ ಉತ್ಪಾದನೆಯನ್ನು ಶೇ. 50ರಷ್ಟು, ಅನಿಲ ಉತ್ಪಾದನೆಯನ್ನು ಶೇ. 25ರಷ್ಟು ಕಡಿಮೆ ಮಾಡಲಾಗಿದೆ. ತುರ್ತು ಕಾರ್ಯದ ಕಾರ್ಮಿಕರು ಮಾತ್ರ ಸದ್ಯ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
– ರುಡಾಲ್ಫ್ ನೊರೊನ್ಹ, ಜನರಲ್ ಮ್ಯಾನೇಜರ್, ಕಾರ್ಪೊರೇಟ್ ಕಮ್ಯುನಿಕೇಶನ್, ಎಂಆರ್ಪಿಎಲ್-ಮಂಗಳೂರು
You seem to have an Ad Blocker on.
To continue reading, please turn it off or whitelist Udayavani.