![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 26, 2020, 7:55 PM IST
ಸೌತಾಂಪ್ಟನ್: ಇಂಗ್ಲೆಂಡಿನ ವೇಗಿ ಜೇಮ್ಸ್ ಆ್ಯಂಡರ್ಸನ್ ಕೋವಿಡ್-19 ಕಾಲದ ದಾಖಲೆಯ ವೀರನಾಗಿ ಹೊರಹೊಮ್ಮಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಉರುಳಿಸಿದ ವಿಶ್ವದ ಪ್ರಥಮ ವೇಗದ ಬೌಲರ್ ಎಂಬುದು ಅವರ ಮಹತ್ಸಾಧನೆ.
ಮಂಗಳವಾರ ಸೌತಾಂಪ್ಟನ್ನಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ನಾಯಕ ಅಜರ್ ಅಲಿ ಅವರನ್ನು ಕೀಪರ್ ರೂಟ್ಗೆ ಕ್ಯಾಚ್ ಕೊಡಿಸುವ ಮೂಲಕ ಆ್ಯಂಡಿ ಹೊಸ ಇತಿಹಾಸ ಬರೆದರು. ಈ ಸಂದರ್ಭದಲ್ಲಿ 700 ವಿಕೆಟ್ಗಳನ್ನು ಬೇಟೆಯಾಡುವ ಆತ್ಮವಿಶ್ವಾಸವನ್ನೂ ಹೊರಗೆಡಹಿದರು.
“600 ವಿಕೆಟ್ಗಳ ಗುರಿ ಈಡೇರಿದೆ. 700 ವಿಕೆಟ್ ಬಗ್ಗೆ ನಾನು ಮತ್ತು ನಾಯಕ ರೂಟ್ ಸುಮ್ಮನೆ ಒಂದು ಚಾಟ್ ಮಾಡಿದ್ದೇವೆ. ಇದು ಸಾಧ್ಯವಾಗದೇಕೆ ಎಂಬುದು ನನ್ನ ಪ್ರಶ್ನೆ. ಫಿಟ್ನೆಸ್ ಕಾಯ್ದುಕೊಳ್ಳಲು ನಾನು ಕಠಿನ ಶ್ರಮ ಹಾಕುತ್ತಿದ್ದೇನೆ. ಬೇಸಗೆಯುದ್ದಕ್ಕೂ ನನ್ನ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಈ ಟೆಸ್ಟ್ನಲ್ಲಿ ಉತ್ತಮ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಎಲ್ಲಿಯ ತನಕ ಈ ಮಟ್ಟವನ್ನು ಕಾಯ್ದುಕೊಳ್ಳುತ್ತೇನೋ ಅಲ್ಲಿಯ ತನಕ ಮುಂದುವರಿಯುತ್ತೇನೆ. ಇಂಗ್ಲೆಂಡ್ ಪರ ನನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದಾಗಿದೆ ಎಂದು ನನಗನಿಸದು. ನಾನು 700 ವಿಕೆಟ್ ಗಡಿ ತಲುಪಬಲ್ಲೆನೇ? ಏಕೆ ಸಾಧ್ಯವಿಲ್ಲ?’ ಎನ್ನುತ್ತಾರೆ 38 ವರ್ಷದ ಜಿಮ್ಮಿ ಆ್ಯಂಡರ್ಸನ್.
“2003ರ ಟೆಸ್ಟ್ ಪದಾರ್ಪಣೆಯ ದಿನಗಳತ್ತ ತಿರುಗಿ ನೋಡಿದಾಗ 600 ವಿಕೆಟ್ಗಳ ಕಲ್ಪನೆಯೇ ನನಗಿರಲಿಲ್ಲ. ನಿಜಕ್ಕೂ ನಾನು ಅದೃಷ್ಟವಂತ. ನನಗೆ ಮತ್ತು ದೇಶದ ಪಾಲಿಗೆ ಇದೊಂದು ಮಹಾನ್ ಗೌರವ’ ಎಂಬುದಾಗಿ ಆ್ಯಂಡಿ ಹೇಳಿದರು. ಬೇಸರವೆಂದರೆ, ಆ್ಯಂಡರ್ಸನ್ ಅವರ ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಸ್ಟೇಡಿಯಂನಲ್ಲಿ ಯಾರೂ ಇಲ್ಲದಿದ್ದುದು!
ಟೆಸ್ಟ್ ಪಂದ್ಯ ಡ್ರಾ
ಸತತ ಮಳೆಯಿಂದಾಗಿ ಇಂಗ್ಲೆಂಡ್-ಪಾಕಿಸ್ಥಾನ ನಡುವಿನ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇಂಗ್ಲೆಂಡ್ ಸರಿಯಾಗಿ 10 ವರ್ಷಗಳ ಬಳಿಕ ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿತು. ರೂಟ್ ಪಡೆಯ ಗೆಲುವಿನ ಅಂತರ 1-0. ಫಾಲೋಆನ್ ಪಡೆದಿದ್ದ ಪಾಕಿಸ್ಥಾನವನ್ನು ಮಳೆಯೇ ಕಾಪಾಡಿತು. ಅಂತಿಮ ದಿನ ಆಟ ಆರಂಭವಾದದ್ದೇ ಟೀ ವಿರಾಮದ ಬಳಿಕ. ಆಗ ಪಾಕ್ 2 ವಿಕೆಟಿಗೆ 100 ರನ್ ಮಾಡಿತ್ತು. ಪಂದ್ಯ ಕೊನೆಗೊಳ್ಳುವಾಗ 4 ವಿಕೆಟಿಗೆ 187 ರನ್ ಗಳಿಸಿತ್ತು. ಬಹುಶಃ 599 ವಿಕೆಟ್ ಹಾರಿಸಿ ಕಾಯುತ್ತ ನಿಂತಿದ್ದ ಆ್ಯಂಡರ್ಸನ್ ದಾಖಲೆಗೋಸ್ಕರವೇ ಕೊನೆಯ ದಿನದಾಟ ನಡೆಯಿತೇನೋ!
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-8 ವಿಕೆಟಿಗೆ 583 ಡಿಕ್ಲೇರ್. ಪಾಕಿಸ್ಥಾನ-273 ಮತ್ತು 4 ವಿಕೆಟಿಗೆ 187 (ಬಾಬರ್ ಔಟಾಗದೆ 63, ಅಬಿದ್ ಅಲಿ 42, ಅಜರ್ ಅಲಿ 31, ಆ್ಯಂಡರ್ಸನ್ 45ಕ್ಕೆ 2). ಪಂದ್ಯಶ್ರೇಷ್ಠ: ಜಾಕ್ ಕ್ರಾಲಿ. ಸರಣಿಶ್ರೇಷ್ಠ: ಜಾಸ್ ಬಟ್ಲರ್.
ಎಕ್ಸ್ಟ್ರಾ ಇನ್ನಿಂಗ್ಸ್
* ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಕಿತ್ತ ಮೊದಲ ವೇಗಿ. ಈ ಸಾಧನೆಗೈದ ಇಂಗ್ಲೆಂಡಿನ ಪ್ರಥಮ ಬೌಲರ್. ಸಮಕಾಲೀನ ಕ್ರಿಕೆಟ್ನಲ್ಲಿ ಇವರ ನಂತರದ ಸ್ಥಾನದಲ್ಲಿರುವ ಬೌಲರ್ ಇಂಗ್ಲೆಂಡಿನವರೇ ಆದ ಸ್ಟುವರ್ಟ್ ಬ್ರಾಡ್ (514 ವಿಕೆಟ್).
* ಆ್ಯಂಡರ್ಸನ್ 29 ಸಲ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತು ಮೆಕ್ಗ್ರಾತ್ ಜತೆ ಜಂಟಿ ದ್ವಿತೀಯ ಸ್ಥಾನಿಯಾದರು. ರಿಚರ್ಡ್ ಹ್ಯಾಡ್ಲಿಗೆ ಅಗ್ರಸ್ಥಾನ (36).
* ನಿರ್ದಿಷ್ಟ ಅಂಗಳವೊಂದರಲ್ಲಿ 100 ವಿಕೆಟ್ ಕಿತ್ತ ಏಕೈಕ ಪೇಸ್ ಬೌಲರ್ ಎಂಬುದು ಆ್ಯಂಡಿ ಪಾಲಿನ ಹೆಗ್ಗಳಿಕೆ. ಅವರು ಲಾರ್ಡ್ಸ್ ಅಂಗಳದಲ್ಲಿ 103 ವಿಕೆಟ್ ಉರುಳಿಸಿದ್ದಾರೆ.
* ಆ್ಯಂಡರ್ಸನ್ ಭಾರತದ ವಿರುದ್ಧ ಸರ್ವಾಧಿಕ 110 ವಿಕೆಟ್ ಉರುಳಿಸಿದ್ದಾರೆ. ಭಾರತದೆದುರು ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆಯೂ ಇವರದ್ದಾಗಿದೆ.
* ಪಂದ್ಯಗಳ ಲೆಕ್ಕಾಚಾರದಲ್ಲಿ ಆ್ಯಂಡರ್ಸನ್ ಅತೀ ನಿಧಾನ ಗತಿಯಲ್ಲಿ 600 ವಿಕೆಟ್ ಬೇಟೆಯಾಡಿದ್ದಾರೆ (156 ಟೆಸ್ಟ್). ಎಸೆತಗಳ ಲೆಕ್ಕಾಚಾರದಲ್ಲಿ 2ನೇ ಅತೀ ವೇಗದ ಸಾಧನೆ (33,717 ಎಸೆತ). ಮುರಳೀಧರನ್ 600 ವಿಕೆಟ್ಗಳಿಗೆ 3,711 ಎಸೆತವಿಕ್ಕಿದ್ದು ದಾಖಲೆ.
* ಆ್ಯಂಡರ್ಸನ್ ಅವರ 165 ವಿಕೆಟ್ಗಳು ಕೀಪರ್ ಕ್ಯಾಚ್ ಮೂಲಕ ಬಂದಿರುವುದು ಟೆಸ್ಟ್ ಇತಿಹಾಸದಲ್ಲೊಂದು ದಾಖಲೆ.
* ಆ್ಯಂಡರ್ಸನ್ ತವರಿನ ಇಂಗ್ಲೆಂಡ್ ಅಂಗಳಗಳಲ್ಲಿ ಅತ್ಯಧಿಕ 384 ವಿಕೆಟ್ ಉರುಳಿಸಿದ್ದು, ಇದು ಪೇಸ್ ಬೌಲರ್ ಒಬ್ಬನ ಅತ್ಯುತ್ತಮ ಸಾಧನೆಯಾಗಿದೆ. ಮುರಳೀಧರನ್ ಲಂಕಾ ನೆಲದಲ್ಲಿ 493 ವಿಕೆಟ್ ಕೆಡವಿದ್ದು ದಾಖಲೆ.
* ಇಂಗ್ಲೆಂಡ್ 2010ರ ಬಳಿಕ ಪಾಕಿಸ್ಥಾನ ವಿರುದ್ಧ ಟೆಸ್ಟ್ ಸರಣಿ ಜಯಿಸಿತು. ಅಂದಿನ ತವರಿನ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತ್ತು.
* ಪಾಕಿಸ್ಥಾನ ಕಳೆದ 58 ವರ್ಷಗಳಲ್ಲಿ 2ನೇ ಸಲ ಫಾಲೋಆನ್ ಬಳಿಕವೂ ಪಂದ್ಯವೊಂದನ್ನು ಉಳಿಸಿಕೊಂಡಿತು. ಆಸ್ಟ್ರೇಲಿಯ ಎದುರಿನ 1994ರ ರಾವಲ್ಪಿಂಡಿ ಟೆಸ್ಟ್ ಪಂದ್ಯದ ವೇಳೆಯೂ ಪಾಕ್ ಸೋಲಿನಿಂದ ಪಾರಾಗಿತ್ತು.
* ಅಜರ್ ಅಲಿ ಈ ಪಂದ್ಯದಲ್ಲಿ 172 ರನ್ ಬಾರಿಸಿದರು. ಇದು ಇಂಗ್ಲೆಂಡ್ ನೆಲದಲ್ಲಿ ಪಾಕ್ ಕಪ್ತಾನನೊಬ್ಬನ 2ನೇ ಅತ್ಯುತ್ತಮ ಸಾಧನೆ. 1976ರ ಲಾರ್ಡ್ಸ್ ಟೆಸ್ಟ್ನಲ್ಲಿ ಹನೀಫ್ ಮೊಹಮ್ಮದ್ ಮೊದಲ ಇನ್ನಿಂಗ್ಸ್ನಲ್ಲಿ 187 ರನ್ ಬಾರಿಸಿದ್ದು ದಾಖಲೆ. ದ್ವಿತೀಯ ಸರದಿಯಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.