![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 16, 2020, 8:03 AM IST
ಮಲ್ಪೆ: ನಾಡದೋಣಿ ಮೀನುಗಾರರಿಗೆ ಸರಿಯಾದ ಮೀನು ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೆ. 1ರಿಂದ ಸಾಂಪ್ರದಾಯಿಕ ಮೀನು ಗಾರಿಕೆ ಆರಂಭವಾಗಿದೆ. ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಮೀನು ದೊರೆತರೆ ಬಹುತೇಕ ಮೀನುಗಾರರು ಬರಿಗೈಯಲ್ಲಿ ಮರಳುತ್ತಿ ದ್ದಾರೆ. ಇದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಇವರನ್ನು ಕಾಡಿದೆ. ಪಡುಬಿದ್ರಿಯಿಂದ ಕೋಡಿಬೆಂಗ್ರೆಯ ವರೆಗೆ ಸುಮಾರು 26 ಜೋಡಿ ನಾಡದೋಣಿಗಳಿವೆ. ಜತೆಗೆ ಸುಮಾರು 300 ಕಂತುಬಲೆ, 200 ಬೊಳಂಜೀರ್ ಬಲೆ, 150 ಪಟ್ಟೆಬಲೆ ದೋಣಿಗಳಿದ್ದು ಸಾವಿರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನು ಗಾರಿಕೆ ಆಶ್ರಯಿಸಿದ್ದಾರೆ. ಈಗ ಹಲವು ದಿನಗಳಿಂದ ಮೀನುಗಾರಿಕೆ ಇಲ್ಲದೆ ಕಂಗಾಲಾಗಿದ್ದಾರೆ.
ನಾಡದೋಣಿಯಲ್ಲಿ ಒಂದು ಜೋಡು ಎಂದರೆ 2 ದೋಣಿಗಳಿರುತ್ತದೆ. ಇದರಲ್ಲಿ ತಲಾ 15 ಮಂದಿಯಂತೆ 30 ಜನರಿರು ತ್ತಾರೆ. ಒಮ್ಮೆ ಮೀನುಗಾರಿಕೆಗೆ ಹೋದರೆ ಕನಿಷ್ಠ 30ರಿಂದ 35 ಸಾವಿರ ರೂ. ಖರ್ಚಾಗುತ್ತದೆ. ಈಗ ಕೆಲವರಿಗೆ 5 ಸಾವಿರ ರೂ. ಕೂಡ ಆದಾಯ ಸಿಗುತ್ತಿಲ್ಲ. ಬಹುತೇಕ ಮಂದಿಗೆ ಮೀನು ಸಿಗದೇ ನಷ್ಟದಲ್ಲಿ ವಾಪಸಾಗುತ್ತಿದ್ದಾರೆ. ಹಾಗಾಗಿ ಕಳೆದ ಒಂದು ವಾರದಿಂದ ಬಹುತೇಕ ಎಲ್ಲ ದೋಣಿಗಳು ದಡದಲ್ಲಿ ಲಂಗರು ಹಾಕಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ದೇವರ ಮೊರೆ ಹೋಗಿದ್ದಾರೆ.
ಮೀನಿನ ಕೊರತೆ
ಸೆ. 1ರಿಂದ ಮೀನುಗಾರಿಕೆ ಆರಂಭವಾಗಿದ್ದು 4-5 ದಿನ ಮಾತ್ರ ತೆರಳಿದ್ದೇವೆ. ಹಿಂದಿನ ವರ್ಷಗಳಲ್ಲಿ ಈ ವೇಳೆಯಲ್ಲಿ ಬಂಗುಡೆ, ಬೂತಾಯಿ ಮೀನು ರಾಶಿಯಾಗಿ ಸಿಗುತ್ತಿತ್ತು. ಈ ಬಾರಿ ಇದರ ಕೊರತೆ ಇದೆ.
-ಹರೀಶ್ ತಿಂಗಳಾಯ ಪಡುಕರೆ ನಾಡದೋಣಿ ಮೀನುಗಾರ
ವಾತಾವರಣದ ಏರಿಳಿತ ಕಾರಣ
ಮಳೆ ಗಾಳಿಯಿಂದಾಗಿ ಕಳೆದ ಕೆಲವು ದಿನಗಳಿಂದ ಸಮುದ್ರದ ವಾತಾವರಣದಲ್ಲಿ ಏರಿಳಿತ ಕಂಡು ಬರುತ್ತಿದೆ. ಹಾಗಾಗಿ ತೀರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ಸರಿಯಾದ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಸಮುದ್ರ ಅಬ್ಬರ ತಿಳಿಯಾದ ಬಳಿಕ ಸರಿಯಾಗುವ ಸಾಧ್ಯತೆ ಇದೆ. ಆಳಸಮುದ್ರ ಮೀನುಗಾರಿಕೆಗೆ ಈ ಸಮಸ್ಯೆ ಉಂಟಾಗಿಲ್ಲ.
-ಶಿವಕುಮಾರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ
You seem to have an Ad Blocker on.
To continue reading, please turn it off or whitelist Udayavani.